ಸೈನಿಕರೊಂದಿಗೆ ದೀಪಾವಳಿ ಆಚರಿಸಲು ರಾಜಸ್ಥಾನದ ಜೈಸಲ್ಮೇರ್ಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ “ಗಡಿಯಲ್ಲಿ ನಮ್ಮನ್ನು ಕೆಣಕಲು ಯಾರಾದರೂ ಯತ್ನಿಸಿದರೆ, ಅದಕ್ಕೆ ತಕ್ಕ ಪ್ರತ್ಯುತ್ತರ ದೊರಕುತ್ತದೆ” ಎಂದು ಹೇಳಿದ್ದಾರೆ. ನಿನ್ನೆಯಷ್ಟೇ ಉತ್ತರ ಜಮ್ಮು ಕಾಶ್ಮೀರದ ಹಲವಾರು ಪ್ರದೇಶಗಳಲ್ಲಿ ಪಾಕಿಸ್ತಾನ ಸೈನ್ಯವು ಕದನ ವಿರಾಮ ಉಲ್ಲಂಘನೆ ಮಾಡಿದ್ದರಿಂದ ಐದು ಸೈನಿಕರು ಸೇರಿದಂತೆ ಹನ್ನೊಂದು ಜನರು ಸಾವನ್ನಪ್ಪಿದ ನಂತರ ಇದೆ ಮೊದಲ ಬಾರಿಗೆ ಹೇಳಿಕೆ ನೀಡಿದ್ದಾರೆ.
“ದೀಪಾವಳಿ ಹಬ್ಬವನ್ನು ನಾವು ನಮ್ಮ ಕುಟುಂಬ ಹಾಗೂ ನಮ್ಮವರೊಂದಿಗೆ ಆಚರಿಸುತ್ತೇವೆ. ಆದುದರಿಂದ ಪ್ರತಿ ವರ್ಷ ನಾನು ನಿಮ್ಮೆಲ್ಲರ ಜತೆ ಆಚರಿಸುತ್ತೇನೆ ಯಾಕೆಂದರೆ ನೀವೆಲ್ಲಾ ನನ್ನ ಸ್ವಂತ ಕುಟುಂಬ. ಇಂದು ನಾನು ನಿಮಗಾಗಿ ಸಿಹಿ ತಿಂಡಿ ತಂದಿದ್ದೇನೆ. ಈ ಸಿಹಿ ತಿಂಡಿ ಕೇವಲ ನನ್ನಿಂದಲ್ಲ, 130 ಕೋಟಿ ಭಾರತೀಯರಿಂದ” ಎಂದು ಹೇಳಿದ್ದಾರೆ.
ಪ್ರಧಾನಿ ನಿನ್ನೆ ಟ್ವೀಟ್ ಮಾಡಿ ಗಡಿಯಲ್ಲಿ ನಮ್ಮನ್ನು ರಕ್ಷಿಸುವವ ಸೈನಿಕರಿಗಾಗಿ ಹಣತೆಯನ್ನು ಬೆಳಗಿಸುವಂತೆ ಭಾರತೀಯರಲ್ಲಿ ಕೇಳಿಕೊಂಡಿದ್ದರು.
ಇದನ್ನೂ ಓದಿ: ಪಾಕಿಸ್ತಾನದ ISI ಗೆ ಫೈಟರ್ ಜೆಟ್ಗಳ ರಹಸ್ಯ ಮಾಹಿತಿ ನೀಡುತ್ತಿದ್ದ ಏಜೆಂಟ್ ಬಂಧನ
ಈ ವರ್ಷ ಪ್ರಧಾನಿಯು ಸೈನಿಕರೊಂದಿಗೆ ನಡೆಸುವ ಎರಡನೇ ಸಂವಹನ ಇದಾಗಿದ್ದು, ಕಳೆದ ಜೂನ್ 14 ರಂದು ಗಾಲ್ವನ್ ಕಣಿವೆಯಲ್ಲಿ ನಡೆದ ಹಿಂಸಾಚಾರದಿಂದಾಗಿ ಭಾರತೀಯ ಸೈನ್ಯದ 20 ಸೈನಿಕರು ಸಾವನ್ನಪ್ಪಿದ ನಂತರ ಜುಲೈನಲ್ಲಿ ಲಡಾಖ್ನಲ್ಲಿ ಸೈನಿಕರನ್ನು ಭೇಟಿಯಾಗಿದ್ದರು. ಆದರೆ ಅಲ್ಲಿ ಚೀನಾದ ಹೆಸರನ್ನು ಸಹ ಉಲ್ಲೇಖಿಸದೆ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದ್ದರು.
ಇದು ಸೈನಿಕರೊಂದಿಗೆ ಪ್ರಧಾನ ಮಂತ್ರಿ ಆಚರಿಸುತ್ತಿರುವ ಏಳನೇ ದೀಪಾವಳಿಯಾಗಲಿದೆ; 2014 ರಲ್ಲಿ ಅವರ ಮೊದಲ ದೀಪಾವಳಿ ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ನಲ್ಲಿ ಆಚರಿಸಿದ್ದರು. ಕಳೆದ ವರ್ಷ ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಗೆ ದೀಪಾವಳಿ ಆಚರಿಸಲು ತೆರಳಿದ್ದರು.
ಪ್ರಧಾನಿ ಮೋದಿ ಸೈನಿಕರ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿರುವುದರ ಹೊರತಾಗಿಯೂ, ಪಾಕಿಸ್ತಾನದ ಕಡೆಯಿಂದ ಈ ವರ್ಷ 4 ಸಾವಿರಕ್ಕೂ ಹೆಚ್ಚು ದಾಳಿ ನಡೆದಿದೆ. ಇದರಿಂದಾಗಿ ಸುಮಾರು 40 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು 100 ಹೆಚ್ಚು ಜನರು ಗಾಯಗೊಂಡಿದ್ದಾರೆ. 2019 ರಲ್ಲಿ 3 ಸಾವಿರಕ್ಕು ಹೆಚ್ಚು ಬಾರಿ ಹಾಗೂ 2018 ರಲ್ಲಿ 1600 ಕ್ಕೂ ಹೆಚ್ಚು ಬಾರಿ ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಭಾರತ-ಚೀನಾ ಗಡಿ ಉದ್ವಿಗ್ನತೆ: ಮತ್ತೆ ಲಡಾಖ್ ಗಡಿ ಅತಿಕ್ರಮಿಸಿದ ಚೀನಾ ಪಡೆಗಳು