‘ವಿನಾಶಕಾರಿ ಕೃತ್ಯಗಳನ್ನು ರೈತಚಳವಳಿ ಎಂದೂ ಪಾಲಿಸಿಲ್ಲ’ ಬಾಗಲಕೋಟೆಯ ಸೈದಾಪುರದಲ್ಲಿ ಹಲವಾರು ಕಬ್ಬು ತುಂಬಿದ ಟ್ರಾಕ್ಟರುಗಳು ಸುಟ್ಟು ಭಸ್ಮವಾಗಿರುವುದು ವಿಷಾದನೀಯ. ಇದಕ್ಕೆ ಯಾರೇ ಪ್ರೇರಣೆ ನೀಡಿದ್ದರೂ ಈ ಕೃತ್ಯವನ್ನು ನಾವು ಖಂಡಿಸುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷರಾದ ಹೆಚ್.ಆರ್. ಬಸವರಾಜಪ್ಪ, ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಚುಕ್ಕಿನಂಜುಂಡಸ್ವಾಮಿ, ನೂರ್ ಶ್ರೀಧರ್, ಡಿ.ಹೆಚ್, ಪೂಜಾರ್ ಸೇರಿದಂತೆ ಹಲವು ರೈತ ನಾಯಕರು, ರೈತಪರ ಹೋರಾಟಗಾರರು ಹೇಳಿದ್ದಾರೆ.
ಕಬ್ಬಿನ ಟ್ರಾಕ್ಟರುಗಳಿಗೆ ಬೆಂಕಿ ಹೊತ್ತಿರುವ ದುರ್ಘಟನೆ ಕುರಿತು ರೈತ ಹಾಗೂ ರೈತಪರ ಸಂಘಟನೆಗಳು ತುರ್ತು ಹೇಳಿಕೆ ಬಿಡುಗಡೆ ಮಾಡಿದ್ದು, ಕರ್ನಾಟಕದ ರೈತ ಚಳವಳಿ ಇತಿಹಾಸದುದ್ದಕ್ಕೂ ಶಾಂತಿಯುತವಾಗಿ ನಡೆದು ಬಂದಿದೆ. ರೈತರದು ಸದಾ ಜೀವಪರ ನಿಲುವು, ವಿನಾಶಕಾರಿ ಕೃತ್ಯಗಳನ್ನು ರೈತ ಚಳವಳಿ ಎಂದೂ ಪಾಲಿಸಿಲ್ಲ, ಸಮ್ಮತಿಸಿಲ್ಲ.
ಆದರೆ ಈ ಘಟನೆಗೆ ಇತ್ತೀಚಿಗೆ ನಡೆದ ರೈತ ಚಳವಳಿ ಸರಿಯಾದ ರೀತಿಯಲ್ಲಿ ಸಮಾರೋಪಗೊಳ್ಳದೇ ಹೋದದ್ದು ಮುಖ್ಯ ಕಾರಣವಾಗಿದೆ. ಇದಕ್ಕೆ ಕೇಂದ್ರ ಸರ್ಕಾರ, ರಾಜ್ಯಸರ್ಕಾರ, ಕಾರ್ಖಾನೆ ಮಾಲೀಕರು ಹಾಗೂ ಜಿಲ್ಲಾಡಳಿತ ಪ್ರಮುಖ ಹೊಣೆಯನ್ನು ಹೊತ್ತುಕೊಳ್ಳಲೇಬೇಕಿದೆ.
ಅವೈಜ್ಞಾನಿಕ ಎಫ್ ಆರ್ ಪಿ ಯನ್ನು ನಿಗದಿಮಾಡುವ ಮೂಲಕ ಕೇಂದ್ರ ಸರ್ಕಾರ ಸಮಸ್ಯೆಯ ಮೂಲವಾಗಿ ಕೆಲಸ ಮಾಡಿದೆ.
ಸೂಕ್ತ ಬೆಲೆ ಸಿಗದೆ ರೈತರ ಆಕ್ರೋಶ ಸ್ಪೋಟ ಗೊಂಡಾಗ ರಾಜ್ಯಸರ್ಕಾರ ಕೂಡಲೇ ಅದನ್ನು ಬಗೆಹರಿಸುವ ಬಿಗಿ ನಿಲುವು ತೆಗೆದುಕೊಳ್ಳಲು ಮುಂದಾಗಲಿಲ್ಲ. ಕೊನೆಗೆ ಪರಿಸ್ಥಿತಿ ಕೈಮೀರಿದಾಗ ಕಾರ್ಖಾನೆ ಮಾಲೀಕರ ಸಭೆ ಕರೆಯಿತು. ಆ ಸಭೆಯಲ್ಲಿ ಕೋಟ್ಯಾಂತರ ಲಾಭ ಮಾಡುತ್ತಿರುವ ಕಾರ್ಖಾನೆ ಮಾಲೀಕರು ರೈತರಿಗೆ ಪ್ರತಿಟನ್ನಿಗೆ ನೂರುರೂ ಹೆಚ್ಚಿಸಲು ತಯಾರಿರಲಿಲ್ಲ.
ಇವರ ಲೋಭಕೋರತನ, ಮೊಂಡು ನಿಲುವು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿತು. ಕೊನೆಗೆ ರಾಜ್ಯ ಸರ್ಕಾರ ತಾನೂ 50 ರೂ ಸೇರಿಸಿ 3300 ರೂ ಕೊಡುವ ತೀರ್ಮಾನ ತೆಗೆದುಕೊಂಡಿತಾದರೂ ರಿಕವರಿಯನ್ನು10.25 ಬದಲು11.25 ಕ್ಕೆನಿಗದಿಮಾಡಿದ್ದು, ಕೊಟ್ಟಂತೆ ಕಂಡರೂ ಏನೂ ಕೊಡಲಿಲ್ಲ, ಎಂಬ ಭಾವ ರೈತರಲ್ಲಿ ಉಳಿಯಲು ಕಾರಣವಾಯಿತು.
ಈ ಕಾರಣಕ್ಕಾಗಿಯೇ ಬಾಗಲಕೋಟೆಯಲ್ಲಿ ಹೋರಾಟ ನಿಲ್ಲದೆ ಮುಂದುವರಿಯಿತು. ರೈತರನ್ನುಕರೆದು, ವಿಶ್ವಾಸಕ್ಕೆ ತೆಗೆದುಕೊಂಡು, ತನ್ನಿಂದ ಆಗಿರುವ ಅಚಾತುರ್ಯವನ್ನು ಸರಿಪಡಿಸಿಕೊಂಡು ರಿಕವರಿಯನ್ನು 10.25 ಗೆ ತರುವ ಬದಲು, ಜಿಲ್ಲಾಸಚಿವರು “ಹೋರಾಟ ಮುಗಿದಿದೆ, ಕಬ್ಬುಸಾಗಿಸಿ” ಎಂಬ ಸಂದೇಶವನ್ನು ಕಾರ್ಖಾನೆ ಮಾಲೀಕರಿಗೆ ಕೊಟ್ಟರು.
ರೈತರ ಪ್ರತಿರೋಧವನ್ನು ಲೆಕ್ಕಿಸದೆ ಜಿಲ್ಲಾಡಳಿತ ಮತ್ತು ಕಾರ್ಖಾನೆ ಮಾಲೀಕರು ಸೇರಿ ಪೋಲೀಸ್ ಬಲದ ಬೆಂಬಲದಲ್ಲಿ ಕಬ್ಬು ಸಾಗಿಸಲು ಹೊರಟಿದ್ದು, ರೈತರ ಆಕ್ರೋಶಕ್ಕೂ, ಈ ದುರ್ಘಟನೆಗೂ ಕಾರಣವಾಗಿದೆ. ಹಾಗಾಗಿ ಸರ್ಕಾರಗಳು ಹಾಗೂ ಜಿಲ್ಲಾಡಳಿತ ಈ ದುರ್ಘಟನೆಯ ಹೊಣೆಯನ್ನು ಹೊತ್ತುಕೊಳ್ಳಬೇಕಿದೆ. ರೈತರನ್ನು ಕಾಡುವ ಬದಲು ನಷ್ಟಕ್ಕೊಳಗಾಗಿರುವ ರೈತರಿಗೆ ಕೂಡಲೇ ನಷ್ಟ ಪರಿಹಾರ ಕಟ್ಟಿಕೊಟ್ಟು, ರೈತರ ಸಭೆಯನ್ನು ಕರೆದು ಮೂಲ ಸಮಸ್ಯೆಯನ್ನು ನ್ಯಾಯಸಮ್ಮತವಾಗಿ ಬಗೆಹರಿಸುವ ಅಗತ್ಯವಿದೆ.
ಈ ಬಾರಿಯ ಚಳವಳಿ ಐಕ್ಯನಾಯಕತ್ವದಲ್ಲಿ ನಡೆಯದೆ ಹಲವಾರು ಕೇಂದ್ರಗಳಾಗಿ ನಡೆದದ್ದೂ ಸಹ ಈ ಗೊಂದಲಕ್ಕೆಇಂಬುಕೊಟ್ಟಿದೆ. ರೈತ ಚಳವಳಿಯ ಭಾಗವಾಗಿ ನಾವೂ ಆತ್ಮಾವಲೋಕನ ಮಾಡಿಕೊಳ್ಳುವ ವಿಚಾರಗಳು ಇವೆ ಎಂದಿದ್ದಾರೆ.
ರಾಜ್ಯ ಸರ್ಕಾರಕ್ಕೆ ನಮ್ಮ ಹಕ್ಕೊತ್ತಾಯಗಳು:
- ಕಬ್ಬಿನ ಪ್ರತಿ ಟನ್ನಿಗೆ, 10.25 ರಿಕವರಿ ಮಾನದಂಡದ ಮೇಲೆ, ಕನಿಷ್ಟ 3300 ಬೆಲೆ ನಿಗದಿ ಮಾಡಬೇಕು.
- ನಷ್ಟಕ್ಕೊಳಗಾಗಿರುವ ರೈತರಿಗೆ ಕಾರ್ಖಾನೆಗಳು ಹಾಗೂ ಸರ್ಕಾರ ಸೇರಿ ಸುಟ್ಟು ಹೋಗಿರುವ ಟ್ರಾಕ್ಟರ್ ಗಳಿಗೂ ಸೇರಿದಂತೆ
ನಷ್ಟ ಪರಿಹಾರ ಕಟ್ಟಿಕೊಡಬೇಕು.
3.ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಯನ್ನು ಬಗೆ ಹರಿಸಲು ಕೂಡಲೇ ಮುಖ್ಯಮಂತ್ರಿಗಳು ಸಭೆ ಕರೆಯಬೇಕು.
- ರಿಕವರಿ ಟೆಸ್ಟಿನಲ್ಲಿ, ತೂಕದಲ್ಲಿ, ಪಾವತಿಯಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.
- ಎಫ್ ಆರ್ ಪಿ ದರದಲ್ಲಿ, ಎಥೆನಾಲ್ ಪ್ರಮಾಣದಲ್ಲಿ ಕರ್ನಾಟಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿ ಪಡಿಸಲು ಹಾಗೂ ರಿಕವರಿಯನ್ನು ಈಗಿರುವ 10.25 ಬದಲು ಮೊದಲಿನಂತೆ 9.25 ಗೆ ಇಳಿಸಬೇಕುಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ರಾಜ್ಯಸರ್ಕಾರ ಮುಂದೊಡಗು ತೆಗೆದು ಕೊಳ್ಳಬೇಕು.
ಹೆಚ್. ಆರ್. ಬಸವರಾಜಪ್ಪ [ಅಧ್ಯಕ್ಷರು, ಕರ್ನಾಟಕರಾಜ್ಯರೈತಸಂಘಹಾಗೂಹಸಿರುಸೇನೆ]
ಬಡಗಲಪುರನಾಗೇಂದ್ರ [ಅಧ್ಯಕ್ಷರು, ಕರ್ನಾಟಕರಾಜ್ಯರೈತಸಂಘ]
ಚುಕ್ಕಿನಂಜುಂಡಸ್ವಾಮಿ [ರಾಜ್ಯಅಧ್ಯಕ್ಷೀಯಮಂಡಳಿಸದಸ್ಯರು, ಕರ್ನಾಟಕರಾಜ್ಯರೈತಸಂಘ (ಸಾಮೂಹಿಕನಾಯಕತ್ವ)]
ಸಿದ್ಗೌಡಮೋದಗಿ [ಅಧ್ಯಕ್ಷರು, ಭಾರತೀಯಕೃಷಿಕಸಮಾಜ [ಸಂಯುಕ್ತ]]
ನೂರ್ ಶ್ರೀಧರ್, [ಅಧ್ಯಕ್ಷರು, ಕರ್ನಾಟಕಜನಶಕ್ತಿ]
ಡಿ.ಹೆಚ್. ಪೂಜಾರ್ [ಅಧ್ಯಕ್ಷರು, AIUKS]
ಭಗವಾನ್ ರೆಡ್ಡಿ, [ರಾಜ್ಯಕಾರ್ಯದರ್ಶಿ, AIKKMS]
ಸಿರಿಮನೆನಾಗರಾಜ್ [ಉಪಾಧ್ಯಕ್ಷರು, ಭೂಮಿಮತ್ತುವಸತಿಹಕ್ಕುವಂಚಿತರಹೋರಾಟಸಮಿತಿ]


