ಮಹತ್ವದ ಬೆಳವಣಿಗೆಯೊಂದರಲ್ಲಿ ತಮಿಳುನಾಡು ಸರ್ಕಾರವು ‘ನೂತನ ಮುಖ್ಯಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಗೆ’ ಜಗತ್ಪ್ರಸಿದ್ದ ಅರ್ಥಶಾಸ್ತ್ರಜ್ಞರನ್ನು ನೇಮಿಸಿಕೊಂಡು ಗಮನ ಸೆಳೆದಿದೆ.
ಸಮಿತಿಯಲ್ಲಿ ಆರ್ಬಿಐನ್ ಮಾಜಿ ಗರ್ವನರ್ ರಘುರಾಮ್ ರಾಜನ್, ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞೆ ಎಸ್ತರ್ ಡುಫ್ಲೊ, ಕೇಂದ್ರ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್, ಅಭಿವೃದ್ಧಿ ಅರ್ಥಶಾಸ್ತ್ರಜ್ಞ ಜೀನ್ ಡ್ರೆಜ್ ಮತ್ತು ಮಾಜಿ ಕೇಂದ್ರ ಹಣಕಾಸು ಕಾರ್ಯದರ್ಶಿ ಎಸ್ ನಾರಾಯಣ್ ಸೇರಿದ್ದಾರೆ.
ಇಂದು ತಮಿಳುನಾಡು ರಾಜ್ಯಪಾಲರಾದ ಭನ್ವಾರಿಲಾಲ್ ಪುರೋಹಿತ್ ಸಮಿತಿಯನ್ನು ಘೋಷಿಸಿ “ಈ ಮಂಡಳಿಯ ಶಿಫಾರಸುಗಳನ್ನು ಆಧರಿಸಿ, ಸರ್ಕಾರವು ರಾಜ್ಯದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ಆರ್ಥಿಕ ಬೆಳವಣಿಗೆಯ ಅನುಕೂಲಗಳು ಸಮಾಜದ ಎಲ್ಲಾ ವಿಭಾಗಗಳನ್ನು ತಲುಪುವಂತೆ ನೋಡಿಕೊಳ್ಳುತ್ತದೆ” ಎಂದು ತಿಳಿಸಿದ್ದಾರೆ.
ರಾಜ್ಯ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ರಾಜ್ಯಕ್ಕೆ ತ್ವರಿತ ಮತ್ತು ಒಳಗೊಳ್ಳುವ ಆರ್ಥಿಕ ಬೆಳವಣಿಗೆಯ ಹಾದಿಯನ್ನು ರೂಪಿಸುವ ನಿಟ್ಟಿನಲ್ಲಿ ಈ ಮಂಡಳಿ ಕಾರ್ಯನಿರ್ವಹಿಸಲಿದೆ. ಹಣಕಾಸು ನೀತಿಗಳು ಜಿಲ್ಲೆಗಳ ಕೈಗಾರಿಕಾ ನೆಲೆಯನ್ನು ವೈವಿಧ್ಯಗೊಳಿಸುವುದು ಮತ್ತು ತಾಂತ್ರಿಕ ಉನ್ನತೀಕರಣವನ್ನು ಖಾತರಿಪಡಿಸಲು ಇದು ಶ್ರಮಿಸುತ್ತದೆ” ಎಂದು ತಿಳಿಸಿದ್ದಾರೆ.
ಎಂಎಸ್ಎಂಇಗಳನ್ನು ಪುನರುಜ್ಜೀವನಗೊಳಿಸುವ ಯೋಜನೆಗಳನ್ನು ರೂಪಿಸಲು ಕೈಗಾರಿಕೋದ್ಯಮಿಗಳು, ಬ್ಯಾಂಕಿಂಗ್ ಮತ್ತು ಹಣಕಾಸು ತಜ್ಞರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ ತಜ್ಞರ ಸಮಿತಿಯನ್ನು ರಚಿಸಲಾಗುವುದು. ಆರ್ಥಿಕ ಸಲಹಾ ಸಮಿತಿ ಮತ್ತು ಇತರ ಗುಂಪುಗಳು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಅಧ್ಯಯನ ಮಾಡುತ್ತವೆ ಮತ್ತು ರಾಜ್ಯದ ಆರ್ಥಿಕತೆಯನ್ನು ಸದೃಢವಾಗಿಸಲು ಬದಲಾವಣೆಗಳನ್ನು ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಅಲ್ಲದೆ ತಮಿಳುನಾಡು ಸರ್ಕಾರವು ಕೃಷಿ ಮತ್ತು ತಮಿಳು ಮಾಧ್ಯಮದ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕಾಗಿ ಪ್ರತ್ಯೇಕ ಬಜೆಟ್ ಅನ್ನು ಮೀಸಲಿಡುತ್ತದೆ ಎಂದು ಅವರು ಘೋಷಿಸಿದ್ದಾರೆ.
ಈ ಆರ್ಥಿಕ ಸಲಹಾ ಮಂಡಳಿಯ ಸದಸ್ಯರು ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದು, ಅಪಾರ ಅನುಭವವುಳ್ಳವರಾಗಿದ್ದಾರೆ. ಕೆಲವರು ಕೇಂದ್ರ ಸರ್ಕಾರದ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮೋದಿ ಸರ್ಕಾರದ ನೀತಿಗಳನ್ನು ಖಂಡಿಸಿ ಹೊರಬಂದಿದ್ದಾರೆ. ಅಂತವರನ್ನು ತಮಿಳುನಾಡು ಸರ್ಕಾರ ತಮ್ಮ ಸಲಹಾ ಸಮಿತಿಗೆ ನೇಮಿಸಿಕೊಂಡು ದೇಶದ ಗಮನ ಸೆಳೆದಿದೆ.
2003-2006 ರವರೆಗೆ ಐಎಂಎಫ್ನ ಮುಖ್ಯ ಹಣಕಾಸು ತಜ್ಞರು ಮತ್ತು ಸಂಶೋಧನಾ ನಿರ್ದೇಶಕರಾಗಿದ್ದ ರಘುರಾಂ ರಾಜನ್ರವರು 2007-2008ರ ಸಮಯದಲ್ಲಿ ಜಾಗತಿಕ ಆರ್ಥಿಕ ಕುಸಿತದ ಕುರಿತು ಎಚ್ಚರಿಕೆ ನೀಡಿದ ಮೊದಲಿಗರಾಗಿದ್ದರು.
ಎಸ್ತರ್ ಡುಫ್ಲೊರವರು ಜಾಗತಿಕ ಬಡತನವನ್ನು ಹೋಗಲಾಡಿಸುವ ಪ್ರಾಯೋಗಿಕ ವಿಧಾನಕ್ಕಾಗಿ 2019ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದ ಅರ್ಥಶಾಸ್ತ್ರಜ್ಞೆಯಾಗಿದ್ದಾರೆ.
2014 ರಿಂದ 2018ರವರೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದ ಅರವಿಂದ್ ಸುಬ್ರಮಣಿಯನ್ಯವರು ಸರ್ಕಾರದ ನೀತಿಗಳನ್ನು ಟೀಕಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಹೊರಬಂದಿದ್ದರು.
ಇಂತಹ ಅನುಭವಿಗಳನ್ನು ನೇಮಿಸಿಕೊಂಡು ರಾಜ್ಯದ ಆರ್ಥಿಕತೆಯನ್ನು ರೂಪಿಸಲು ತಮಿಳುನಾಡು ಸರ್ಕಾರ ಹೊರಟಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಇದನ್ನೂ ಓದಿ: ಈಗ ಸರ್ಕಾರವೇನು ಮಾಡಬೇಕು?: ಅಭಿಜಿತ್ ಬ್ಯಾನರ್ಜಿ, ಎಸ್ತರ್ ಡಫ್ಲೊ ಸಲಹೆಗಳು



ತಮಿಳುನಾಡಿನ ಸ್ಟಾಲಿನ (ಪ್ರಪಂಚದ ಖ್ಯಾತ ಅರ್ಥ ಶಾಸ್ತ್ರಜ್ಞರನ್ನು ಒಳಗೊಂಡ ಸಲಹಾ ಮಂಡಳಿಯ ನೇಮಕಾತಿ )ಹಾಗು ಕೇರಳದ ವಿಜಯನ್ ರವರು (ನವ್ಯ ಹಾಗೂ ವಿನೂತನ ಮಂತ್ರಿ ಮಂಡಲ ), ರಾಜ್ಯಗಳ ಆಡಳಿತದಲ್ಲಿ ಹೊಸ ಅಧ್ಯಯವನ್ನೇ ಬರೆಯುತ್ತಿದ್ದಾರೆ.
ಅವರ ಯಶಸ್ಸಿನಲ್ಲೇ ದೇಶದ ಯಶಸ್ಸಿದೆ
??????????????