Homeಕರೋನಾ ತಲ್ಲಣಈಗ ಸರ್ಕಾರವೇನು ಮಾಡಬೇಕು?: ಅಭಿಜಿತ್ ಬ್ಯಾನರ್ಜಿ, ಎಸ್ತರ್ ಡಫ್ಲೊ ಸಲಹೆಗಳು

ಈಗ ಸರ್ಕಾರವೇನು ಮಾಡಬೇಕು?: ಅಭಿಜಿತ್ ಬ್ಯಾನರ್ಜಿ, ಎಸ್ತರ್ ಡಫ್ಲೊ ಸಲಹೆಗಳು

- Advertisement -
- Advertisement -

ಈ ಕೊರೋನ ಭಾರತವನ್ನು ಯಾಕೆ ಇಷ್ಟು ದೀಢೀರನೆ ಇಷ್ಟೊಂದು ಭೀಕರವಾಗಿ ಆವರಿಸಿಕೊಂಡು ಬಿಟ್ಟಿತು ಅನ್ನುವುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದಕ್ಕೆ ಸ್ವಲ್ಪ ಸಮಯ ಹಿಡಿಯಬಹುದು. ಆದರೆ ಒಂದಂಶ ಮಾತ್ರ ನಿಜ. ಭಾರತದ ಈ ಸಮಸ್ಯೆ ಇಂದು ವಿಶ್ವದ ಸಮಸ್ಯೆಯಾಗಿದೆ.

ವೈರಾಣು ಮೊದಲು ಪ್ರವೇಶಿಸಿದಾಗ ಭಾರತ ತೀರಾ ದಿಢೀರನೆ ಎಲ್ಲವನ್ನೂ ಮುಚ್ಚಿ ಲಾಕ್‌ಡೌನ್ ಮಾಡಿತು. ಆದರೆ, ಅಷ್ಟೇ ಬೇಗ ಮತ್ತೆ ಅದನ್ನು ತೆರವುಗೊಳಿಸಿತು. ಮಾರ್ಚ್ 2020ರಲ್ಲಿ ಕೊರೋನ ಪ್ರಕರಣಗಳು ಅಷ್ಟೊಂದು ಇಲ್ಲದಿದ್ದಾಗ, ಕೇವಲ ನಾಲ್ಕು ಗಂಟೆಯ ಸೂಚನೆ ನೀಡಿ ಲಾಕ್‌ಡೌನ್ ಘೋಷಿಸಿಬಿಟ್ಟಿತು. ಲಕ್ಷಗಟ್ಟಲೆ ಜನ ತಿನ್ನಲು ಆಹಾರವಿಲ್ಲದೆ, ಇರಲು ನೆಲೆಯಿಲ್ಲದೆ ತತ್ತರಿಸಿಹೋದರು. ಅವರಲ್ಲಿ ಬಹುತೇಕ ಜನ ವಲಸೆ ಕಾರ್ಮಿಕರು. ಆ ಸಂದರ್ಭದಲ್ಲಿ ಆರ್ಥಿಕ ವಿಪತ್ತು ಎದುರಾದಾಗ, ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವ ಮೊದಲೇ ಲಾಕ್‌ಡೌನ್ ತೆರವುಗೊಳಿಸಿದರು.

ಈಗ ಭಾರತದಲ್ಲಿ ಏನಾಗುತ್ತಿದೆಯೋ ಅದೇ ಅಮೇರಿಕೆಯಲ್ಲಿ ಕೊರೊನಾ ವೈರಾಣು ತೀವ್ರವಾಗಿದ್ದಾಗ ಆಗಿದ್ದು. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಸಾವುಗಳು ಹೆಚ್ಚಾಗತೊಡಗಿದಾಗ, ರಾಜ್ಯಗಳು ಸುಮ್ಮನೆ ಕಣ್ಣಮುಚ್ಚಿಕೊಂಡು, ಪಿಡುಗು ತನ್ನಷ್ಟಕ್ಕೆ ಮಾಯವಾಗಿ ಬಿಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದವು. ಭಾರತದ ಮೊದಲ ಕೊರೋನಾ ಅಲೆ ಕಮ್ಮಿಯಾಯಿತು. ಅದಕ್ಕೆ ಕಾರಣವೇನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಭಾರತದಲ್ಲಿನ ರಾಜ್ಯಗಳಿಗೆ ಸಂಪನ್ಮೂಲಗಳ ಕೊರತೆಯಿದೆ. ಹಾಗಾಗಿ ರಾಜ್ಯಗಳ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಲಾಕ್‌ಡೌನ್ ಅಂದರೆ ತುಂಬಾ ಹಣ ಖರ್ಚು ಮಾಡಬೇಕಾಗುತ್ತದೆ. ಅದರಲ್ಲೂ ಬಡವರಿಗೆ ಆಗುವ ಅಪಾರ ಯಾತನೆಯನ್ನು ಕಡಮೆ ಮಾಡಬೇಕು ಅಂದುಕೊಂಡರಂತೂ ಖರ್ಚು ಹೆಚ್ಚೇ ಆಗುತ್ತದೆ. ಜೊತೆಗೆ ಕೇಂದ್ರ ಸರ್ಕಾರ ಆ ಖರ್ಚಿನ ಜವಾಬ್ದಾರಿಯನ್ನು ಹೊರುತ್ತಿಲ್ಲ. (ಭಾರತಕ್ಕೆ ಹೋಲಿಸಿದರೆ ಕಳೆದ ವರ್ಷ ಅಮೇರಿಕೆಯಲ್ಲಿ ಟ್ರಂಪ್ ಆಡಳಿತ ಹೆಚ್ಚು ಉದಾರಿಯಾಗಿತ್ತು.)

ಸ್ವಾಭಾವಿಕವಾಗಿಯೇ ರಾಜ್ಯ ಸರ್ಕಾರಗಳು ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ ಸಾಧ್ಯವಾದಷ್ಟು ಮುಂದೂಡುತ್ತಾ ಬಂದವು. ಈ ಮಧ್ಯೆ ಪಿಡುಗು ದೇಶವಿಡೀ ವ್ಯಾಪಿಸಿಕೊಂಡಿತು. ವೈರಾಣುವಿನಲ್ಲಿ ಹಲವು ಬದಲಾವಣೆಗಳೂ ಕಾಣಿಸಿಕೊಂಡವು. ಕೇಂದ್ರ ಸರ್ಕಾರ ಯಾವುದೇ ಜವಾಬ್ದಾರಿಯನ್ನೂ ತೆಗೆದುಕೊಳ್ಳದೇ ಹೋಗಿರುವುದರಿಂದ ಹೊಸ ವೈರಾಣು ಹೇಗೆ ನಡೆದುಕೊಳ್ಳುತ್ತಿದೆ ಅನ್ನುವುದನ್ನು ಅರ್ಥಮಾಡಿಕೊಳ್ಳಲು ಯಾರೂ ಪ್ರಯತ್ನಿಸುತ್ತಿಲ್ಲ. “ತುಂಬಾ ತಡ ಹಾಗೂ ತುಂಬಾ ಕಡಿಮೆ” ಅನ್ನುವುದು ಪ್ರಸ್ತುತ ಪಿಡುಗಿನ ಕಥೆಯಾಗಿಬಿಟ್ಟಿದೆ.

ಸರ್ಕಾರ ಈಗ ಕ್ರಮತೆಗೆದುಕೊಳ್ಳಲು ಪ್ರಾರಂಭಿಸುತ್ತಿದೆ. ಆದರೆ ಒಂದು ರಾಷ್ಟ್ರೀಯ ಕಾರ್ಯತಂತ್ರವನ್ನು ರೂಪಿಸಲು ಇನ್ನೂ ಹಿಂಜರಿಯುತ್ತಿರುವಂತೆ ತೋರುತ್ತಿದೆ.
ಭಾರತಕ್ಕೆ ಇಂದು ಕೇಂದ್ರ ಸಂಯೋಜಿತ ಲಾಕ್‌ಡೌನಿನ ಅವಶ್ಯಕತೆಯಿದೆ. ಸೋಂಕು ಈಗಾಗಲೇ ಹೆಚ್ಚಿರುವ ಪ್ರದೇಶಗಳಿಗೆ (ಸೋಂಕು ಸಧ್ಯಕ್ಕೆ ಇನ್ನೂ ದೇಶದ ಶೇಕಡ 25ರಷ್ಟು ಜಿಲ್ಲೆಗಳಲ್ಲಿ ಮಾತ್ರ ಕೇಂದ್ರೀಕೃತವಾಗಿದೆ) ಮೊದಲು ಗಮನಕೊಡಬೇಕು. ನಂತರದಲ್ಲಿ ನಿಧಾನವಾಗಿ ಅವಶ್ಯಕತೆಯಿರುವ ಕಡೆಗಳಲೆಲ್ಲಾ ಕ್ರಮತೆಗೆದುಕೊಳ್ಳುತ್ತಾ ಹೋಗಬೇಕು.

ಸರ್ಕಾರ ತುಂಬಾ ನಿಧಾನವಾಗಿ ಕಾರ್ಯಪ್ರವೃತ್ತವಾಗಿದೆ. ಮತ್ತೆ ಲಾಕ್‌ಡೌನ್ ಜಾರಿಗೊಳಿಸಿದರೆ ಆರ್ಥಿಕತೆಗೆ ಏನಾಗಬಹುದು ಅದರಲ್ಲೂ ವಿಶೇಷವಾಗಿ ಬಡವರಿಗೆ ಏನಾಗಬಹುದು ಅನ್ನುವ ಆತಂಕ ಈ ನಿಧಾನಕ್ಕೆ ಒಂದು ಕಾರಣವಿರುಬಹುದು. ಲಾಕ್‌ಡೌನ್ ಘೋಷಿಸಿದ ಪ್ರದೇಶಗಳಲ್ಲಿ ಸಂಕಷ್ಟದಲ್ಲಿರುವವರಿಗೆ ಜೀವನಕ್ಕೆ ಬೇಕಾದ ಹಣವನ್ನು ಸರ್ಕಾರ ನೇರವಾಗಿ ಅವರ ಖಾತೆಗೆ ವರ್ಗಾಯಿಸಲಾಗುತ್ತದೆ ಎನ್ನುವ ಭರವಸೆ ನೀಡಬೇಕು. ಸರ್ಕಾರದ ಯಾವುದೇ ಗುರುತು ಚೀಟಿ ಇದ್ದವರಿಗೂ ಈ ಸೌಲಭ್ಯ ಸಿಗಬೇಕು. ಈ ಭರವಸೆಯೊಂದಿಗೆ ಲಾಕ್‌ಡೌನ್ ಪ್ರಕ್ರಿಯೆಯನ್ನು ತ್ವರಿತಗೊಳಿಸಬಹುದು. ಜೊತೆಗೆ ಈಗ ಜಿಲ್ಲೆಗಳ ನಡುವಿನ ಸಂಚಾರದ ಮೇಲೆ ಮಿತಿಯನ್ನು ಹೇರಬೇಕು.

ಲಸಿಕೆಯ ವಿಷಯದಲ್ಲೂ ಇದನ್ನೇ ಮಾಡಬೇಕು. ಕೇಂದ್ರ ಸರ್ಕಾರದ ಪ್ರಕಾರ ಯಾರೂ ಬೇಕಾದರೂ ಲಸಿಕೆ ಹಾಕಿಸಿಕೊಳ್ಳಬಹುದು (ನಿಮಗೆ ಲಸಿಕೆ ಸಿಕ್ಕರೆ). ಆದರೆ ಅದರ ಹಣವನ್ನು ಆಯಾ ವ್ಯಕ್ತಿಗಳು ಅಥವಾ ರಾಜ್ಯ ಸರ್ಕಾರ ಭರಿಸಬೇಕು. ಇದರ ಪರಿಣಾಮ ಆಂದರೆ ಯಾರಿಗೆ ಹಣ ತೆರಲು ಸಾಧ್ಯವೋ ಅವರಿಗೆ ಲಸಿಕೆ ಸಿಗುತ್ತದೆ. ಕೆಲವು ರಾಜ್ಯಗಳಲ್ಲಿ ಸರ್ಕಾರವೇ ಉಳಿದವರ ಲಸಿಕೆಯ ಖರ್ಚನ್ನು ಭರಿಸಬಹುದು. ಆದರೆ ಉಳಿದ ಕಡೆ ಜನ ತಮ್ಮ ಪಾಡನ್ನು ತಾವೇ ನೋಡಿಕೊಳ್ಳಬೇಕಾಗುತ್ತದೆ. ಲಸಿಕೆಗಳು ಉಚಿತವಾಗಿ ಪ್ರತಿಯೊಬ್ಬರಿಗೂ ಸಿಗುವಂತೆ ಮಾಡಬೇಕು. ಮತ್ತು ಅದನ್ನು ಆಗುಮಾಡುವುದಕ್ಕೆ ಬೇಕಾದ ಆಡಳಿತಾತ್ಮಕ ವ್ಯವಸ್ಥೆಯನ್ನು ಮತ್ತು ಮಾನವ ಸಂಪನ್ಮೂಲವನ್ನು ಮೀಸಲಿಡಬೇಕು. ಆಗ ಆತಂಕದಲ್ಲಿರುವ ದೇಶಕ್ಕೆ ಭರವಸೆ ನೀಡಿದಂತಾಗುತ್ತದೆ. ಮತ್ತು ಜಗತ್ತನ್ನು ರಕ್ಷಿಸುವುದಕ್ಕೂ ಸಾಧ್ಯವಾಗುತ್ತದೆ.

ಅಷ್ಟೇ ಅಲ್ಲ ಭಾರತದಲ್ಲಿ ಹೆಚ್ಚುತ್ತಿರುವ ದುರಂತಕ್ಕೆ ಜಗತ್ತು ತುಂಬಾ ನಿಧಾನವಾಗಿ ಪ್ರತಿಕ್ರಿಯಿಸುತ್ತಿದೆ. ಲಸಿಕೆಗಳನ್ನು ಹಾಗೂ ತುರ್ತು ನೆರವನ್ನು ನೀಡುವುದಾಗಿ ಬೈಡೆನ್ ಆಡಳಿತ ಏಪ್ರಿಲ್ ಕೊನೆಯಲ್ಲಿ ಘೋಷಿಸಿತು. ಆ ವೇಳೆಗೆ ಪ್ರತಿದಿನದ ಸೋಂಕಿತರ ಸಂಖ್ಯೆ ಮೂರು ಲಕ್ಷ ದಾಟಿ ಒಂದು ವಾರ ಕಳೆದಿತ್ತು. ಸಮಸ್ಯೆ ಎಷ್ಟು ಅಗಾಧವಾಗಿದೆ ಅಂದರೆ ಹೊರಗಡೆಯ ನೆರವಿನಿಂದ ಮಾಡಬಹುದಾದದ್ದು ಸಾಪೇಕ್ಷವಾಗಿ ತುಂಬಾ ಕಡಿಮೆ. ಅಂದ ಮಾತ್ರಕ್ಕೆ ಅಮೆರಿಕೆ ಹಾಗೂ ಯುರೋಪ್ ಕಳುಹಿಸುತ್ತಿರುವ ಲಸಿಕೆಗಳು, ಆಮ್ಲಜನಕ, ಹಾಗೂ ಹಣ ನಿಲ್ಲಬಾರದು. ಹಾಗೆಯೇ ಲಸಿಕೆಗಳನ್ನು ತಯಾರಿಸಲು ಬೇಕಾದ ಸಾಮಗ್ರಿಗಳ ರಫ್ತಿನ ಮೇಲಿರುವ ನಿರ್ಬಂಧವೂ ತೆರವಾಗಬೇಕು. ಪ್ರತಿಯೊಂದು ಜೀವವೂ ಮುಖ್ಯ.

ಆದರೆ ಜಗತ್ತು ಭಾರತದ ಆಚೆಗೆ ನೋಡಬೇಕು. ಸಕಾಲದಲ್ಲಿ ಕ್ರಮ ತೆಗೆದುಕೊಳ್ಳಬೇಕು. ಮತ್ತೊಮ್ಮೆ ಆ ನಿಟ್ಟಿನಲ್ಲಿ ತಪ್ಪಾಗಬಾರದು. ಮೊದಲ ಅಲೆ ಬಂದಾಗ ವೈರಾಣು ಅಷ್ಟೊಂದು ಬೇಗ ಹರಡುತ್ತದೆ ಅನ್ನುವುದನ್ನು ನಾವು ಅರ್ಥಮಾಡಿಕೊಂಡಿರಲಿಲ್ಲ. ಅದನ್ನು ಈಗ ಮರೆಯಬಾರದು. ಅಮೆರಿಕೆ ಹಾಗೂ ಐರೋಪ್ಯ ದೇಶಗಳಲ್ಲಿ ಲಸಿಕೆಯ ಪ್ರಚಾರದಲ್ಲಿ ಒಳ್ಳೆಯ ಪ್ರಗತಿಯಾಗುತ್ತಿದೆ. ಆದರೆ ಉಳಿದ ದೇಶಗಳು ಅದರಿಂದ ತಮಗೆ ರಕ್ಷಣೆ ದೊರಕಿಬಿಡುತ್ತದೆ ಎನ್ನುವ ಸುಳ್ಳು ಭ್ರಮೆಯಲ್ಲಿ ನಿದ್ದೆ ಹೋಗಬಾರದು.

ಭಾರತದಲ್ಲಿ ಮೊದಲಿಗೆ ಕಾಣಿಸಿಕೊಂಡು ಬಿ.1.617 ಮಾದರಿ, ಈಗ ದೇಶದ ಸರಹದ್ದನ್ನು ದಾಟಿ ಹರಡುತ್ತಿದೆ. ಭಾರತದಲ್ಲಿ ಲಸಿಕೆ ತೆಗೆದುಕೊಂಡ ಕೆಲವರೂ ಸೋಂಕಿಗೆ ತುತ್ತಾದಂತೆ ಕಾಣುತ್ತಿದೆ. ಪಶ್ಚಿಮದಲ್ಲಿ ಸಿಗುವ “ಉತ್ತಮ” ಲಸಿಕೆಗಳು ನಮ್ಮ ಜೀವವನ್ನು ರಕ್ಷಿಸಿಬಿಡುತ್ತದೆ ಎಂದು ಭಾವಿಸುವುದು ಮೂರ್ಖತನವಾಗುತ್ತದೆ. ಮುಖಂಡರುಗಳು ಹಾಗೂ ವಿಜ್ಞಾನಿಗಳು ವಿಭಿನ್ನ ವೈರಾಣುಗಳನ್ನು ಎದುರಿಸಲು ಏನು ಮಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಬೂಸ್ಟರ್ ಡೋಸ್, ಹೊಸ ವ್ಯಾಕ್ಸಿನ್, ಮಾಸ್ಕ್‌ ಗಳು, ಅನ್‌ಲಾಕ್ ಪ್ರಕ್ರಿಯೆಯನ್ನು ನಿಧಾನಗೊಳಿಸುವುದು ಇತ್ಯಾದಿ ನಿಟ್ಟಿನಲ್ಲಿ ಯೋಚಿಸಬೇಕು.

ವೈರಾಣು ಆಫ್ರಿಕಾ ಮೂಲಕ ಹರಡುವ ಸಾಧ್ಯತೆಯಿದೆ. ಈ ಬಗ್ಗೆ ಎಚ್ಚರಿಕೆ ಬೇಕು. ಅಲ್ಲಿ ಲಸಿಕೆಗಳ ಕಾರ್ಯಕ್ರಮ ಇನ್ನೂ ಸರಿಯಾಗಿ ಪ್ರಾರಂಭವೇ ಆಗಿಲ್ಲ. ಭಾರತದ ಸಧ್ಯದ ಪರಿಸ್ಥಿತಿಯಿಂದ ಅವರ ಕಷ್ಟ ಮತ್ತಷ್ಟು ಬಿಗಡಾಯಿಸಿದೆ. ಭಾರತ ತನ್ನನ್ನು ನೆಚ್ಚಿಕೊಂಡು ಬಹತೇಕ ದೇಶಗಳಿಗೆ ಲಸಿಕೆಗಳನ್ನು ರಫ್ತು ಮಾಡುವುದನ್ನು ನಿಲ್ಲಿಸಿಬಿಟ್ಟಿದೆ.

ಇದು ಆಮ್ಲಜನಕ ಪೂರೈಕೆ ಹಾಗೂ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ತೀವ್ರವಾಗಿರುವ ದೇಶಗಳಲ್ಲಿ ದುರಂತವನ್ನು ಸೃಷ್ಟಿಸುತ್ತದೆ. ಅಮೇರಿಕಾ ಹಾಗೂ ಐರೋಪ್ಯ ದೇಶಗಳು ಅವಶ್ಯಕತೆ ಬಂದಾಗ ತ್ವರಿತವಾಗಿ ಕ್ರಮತೆಗೆದುಕೊಳ್ಳಲು ಸಿದ್ಧರಿರಬೇಕು. ಅಂದರೆ ಲಸಿಕೆಗಳನ್ನು ಆದಷ್ಟು ಬೇಗ ತಯಾರಿಸಿ ಸಾಗಿಸಲು ತಯಾರಿರಬೇಕು. ಅದಕ್ಕಿಂತ ಮುಖ್ಯವಾಗಿ ಜಾಗತಿಕ ಮಟ್ಟದಲ್ಲಿ ನಿಗಾ ಹಾಗು ಪರೀಕ್ಷೆಗೆ ಕ್ರಮ ತೆಗೆದುಕೊಳ್ಳಬೇಕು. ಸಮಯಕ್ಕೆ ಆಮ್ಲಜನಕ ಮತ್ತು ಸಾಮಗ್ರಿಗಳನ್ನು ರವಾನಿಸಲು ತಯಾರಿರಬೇಕು. ಲಾಕ್‌ಡೌನಿನಲ್ಲಿ ಸಂಕಟದಲ್ಲಿರುವ ಜನರಿಗೆ ಹಣಕಾಸಿನ ನೆರವನ್ನು ನೀಡಬೇಕು.

ಅನುವಾದ: ಟಿ ಎಸ್ ವೇಣುಗೋಪಾಲ್ ಹಾಗೂ ಶೈಲಜ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....