ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವಾದ ”ಮಕ್ಕಳ್ ನೀದಿ ಮಯ್ಯಂ” ಉತ್ತಮ ಜನರೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂದು ಪಕ್ಷದ ಮುಖಂಡರಾಗಿರುವ ನಟ ಕಮಲ್ ಹಾಸನ್ ಹೇಳಿದ್ದು, ಮುಂಬರುವ ಚುನಾವಣೆಯಲ್ಲಿ ನಟ ರಜನಿಕಾಂತ್ ಬೆಂಬಲವನ್ನು ಕೇಳುತ್ತೇನೆ ಎಂದು ಹೇಳಿದ್ದಾರೆ.
ಪಕ್ಷದ ರಾಜಕೀಯ ಕಾರ್ಯತಂತ್ರ ಏನು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ನಮ್ಮದು ನಿಂದನೆ ಮಾಡುವ ರಾಜಕೀಯವಲ್ಲ, ದಾರಿತೋರುವ ರಾಜಕೀಯವಾಗಿರುತ್ತದೆ. ಕಳೆದ ಕೆಲವು ತಿಂಗಳುಗಳಲ್ಲಿ ಒಂದು ಲಕ್ಷ ಜನರು ’ಮಕ್ಕಳ್ ನೀದಿ ಮಯ್ಯಂ’ ಸೇರಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿದೆ” ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಇದನ್ನೂ ಓದಿ: ಜನರನ್ನು ಭಾವನಾತ್ಮಕವಾಗಿ ಮರಳು ಮಾಡುವುದನ್ನು ನಿಲ್ಲಿಸಿ : ಕಮಲ್ ಹಾಸನ್
ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ವಿವಿಧ ಪಕ್ಷಗಳಲ್ಲಿ ಅನೇಕ ಒಳ್ಳೆಯ ಜನರು ಮನನೊಂದಿರುತ್ತಾರೆ. ಅವರು ನಮ್ಮೊಂದಿಗೆ ಬರಬೇಕು. ನಾವು ಒಳ್ಳೆಯವರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ” ಎಂದರು.
ರಾಜಕೀಯದ ಬಗ್ಗೆ ರಜನಿಕಾಂತ್ ಜೊತೆ ಚರ್ಚಿಸಿದ್ದಾಗಿ ಹೇಳಿದ ಕಮಲ್, “ನಟ ರಜನಿಕಾಂತ್ ತನ್ನ ಆರೋಗ್ಯದ ಕಡೆ ಪ್ರಾಮುಖ್ಯತೆ ನೀಡುವಂತೆ ಸ್ನೇಹಿತನಾಗಿ ಸಲಹೆ ನೀಡಿದ್ದೇನೆ. ರಾಜಕೀಯಕ್ಕೆ ಬರುವ ಬಗ್ಗೆ ಅವರು ನಿರ್ಧರಿಸುತ್ತಾರೆ. ವಿಧಾನಸಭಾ ಚುನಾವಣೆಯಲ್ಲಿ ರಜಿನಿಕಾಂತ್ ಅವರ ಬೆಂಬಲವನ್ನು ಕೇಳುತ್ತೇನೆ” ಎಂದು ಹೇಳಿದ್ದಾರೆ.
MNM PARTY PRESIDENT MR KAMAL HAASAN LIVE PRESS MEET https://t.co/uGTK2d6gwc
— Makkal Needhi Maiam | மக்கள் நீதி மய்யம் (@maiamofficial) November 5, 2020
ತಮಿಳುನಾಡು ಚುನಾವಣೆಯಲ್ಲಿ 3 ನೇ ತಂಡವನ್ನು ರಚಿಸಲಾಗಿದೆ ಎಂದು ನಾನು ಹೇಳುತ್ತೇನೆ. ಚುನಾವಣಾ ಆಯೋಗವು ನವೆಂಬರ್ನಲ್ಲಿ ನಮಗೆ ಅವಕಾಶ ನೀಡಿದೆ. ಆದ್ದರಿಂದ, ಮೈತ್ರಿಯ ಬಗ್ಗೆ ಮಾತನಾಡುವ ಕ್ಷಣ ಇದಲ್ಲ ಎಂದು ಕಮಲ್ ಹೇಳಿದ್ದಾರೆ.
ಕ್ಷೇತ್ರ ಸಂಶೋಧನೆ ಆಧರಿಸಿ ”ಮಕ್ಕಳ್ ನೀದಿ ಮಯ್ಯಂ” ತಮಿಳುನಾಡಿನ ಮೂರನೇ ಅತಿದೊಡ್ಡ ಪಕ್ಷವಾಗಿದೆ. ನಾವು 100 ರಿಂದ 160 ಕ್ಷೇತ್ರದಗಳಲ್ಲಿ ಪ್ರಭಾವ ಬೀರಲಿದ್ದೇವೆ. ರಾಜಕೀಯದಲ್ಲಿ ನಮ್ಮ ನೀತಿ ”ಪ್ರಾಮಾಣಿಕತೆ” ಆಗಿದೆ. ನಾವು ಪ್ರಾಮಾಣಿಕರೆಂದು ಹೇಳಿಕೊಳ್ಳುವ ಜನರನ್ನು ಭೇಟಿಯಾಗುತ್ತೇವೆ. ಅದನ್ನು ಇತರರು ಹೇಳಬಹುದೇ ಎಂದು ಕಮಲ್ ಹಾಸನ್ ಪ್ರಶ್ನಿಸಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಾನು ಖಂಡಿತವಾಗಿ ಸ್ಪರ್ಧಿಸಲಿದ್ದು, ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದು ನಾಮಪತ್ರಕ್ಕೆ ಸಹಿ ಹಾಕಿದಾಗ ನಿಮಗೆ ತಿಳಿಯುತ್ತದೆ. ವಿಧಾನಸಭೆಯಲ್ಲಿ ಖಂಡಿತವಾಗಿ ”ಮಕ್ಕಳ್ ನೀದಿ ಮಯ್ಯಂ” ಪಕ್ಷದ ಧ್ವನಿ ಕೇಳಿಸಲಾಗುವುದು ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಮನುಸ್ಮೃತಿ ಚಲಾವಣೆಯಲ್ಲಿಲ್ಲದ ಪುಸ್ತಕ
ಮನುಸ್ಮೃತಿ ಎಂಬುದು ಚಲಾವಣೆಯಲ್ಲಿಲ್ಲದ ಪುಸ್ತಕವಾಗಿದ್ದು, ಅದರ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ. ಆದರೆ ಯಾರಾದರೂ ಭಾರತೀಯ ಸಂವಿಧಾನದ ಬಗ್ಗೆ ಮಾತನಾಡಿದರೆ, ಪ್ರಶ್ನಿಸಿದರೆ ನಾನು ಪ್ರತಿಕ್ರಿಯಿಸುತ್ತೇನೆ. ಸಂಸ್ಕೃತಿಯಲ್ಲಿ ಹಲವು ವಿಷಯಗಳಿವೆ, ಸತಿಸಹಗಮನ ಪದ್ದತಿ ಕೂಡಾ ಸಂಸ್ಕೃತಿಯಾಗಿತ್ತು, ಸಂಸ್ಕೃತಿಯ ಹೆಸರಿನಲ್ಲಿ ಅದನ್ನು ಅನುಸರಿಸಬಾರದು. ಕಾಲ ಮತ್ತು ಅಗತ್ಯಗಳಿಗೆ ನಾವು ಹೊಂದಿಕೊಳ್ಳಬೇಕು ಎಂದು ಕಮಲ್ ಹಾಸನ್ ಹೇಳಿದರು.
ಬಿಜೆಪಿಯು ನಡೆಸಲು ಉದ್ದೇಶಿಸಿದ ”ವೆಟ್ರಿವೇಲ್ ತೀರ್ಥಯಾತ್ರೆ” ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಕಮಲ್ ಹಾಸನ್, ತೀರ್ಥಯಾತ್ರೆಗೆ ಹೋಗದಿರುವುದೇ ಉತ್ತಮ, ಅದರ ಬದಲಿಗೆ ಉದ್ಯೋಗವನ್ನು ಕೊಡಿಸುವುದೇ ನನ್ನ ಆದ್ಯತೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವೆಟ್ರಿವೇಲ್ ಯಾತ್ರೆ ನಡೆಸಲು ಬಿಜೆಪಿ ಕೋರಿದ್ದ ಅನುಮತಿ ತಿರಸ್ಕರಿಸಿದ ತಮಿಳುನಾಡು ಸರ್ಕಾರ!