ತನ್ನ ಮಗಳನ್ನು ಪ್ರೀತಿಸಿದ್ದ ಭೋವಿ ಜನಾಂಗದ ಯುವಕನನ್ನು ಮದುವೆಯ ಮಾತುಕತೆಗೆಂದು ಕರೆದ ಯುವತಿಯ ತಂದೆ, ಇತರರೊಂದಿಗೆ ಸೇರಿ ಯುವಕನನ್ನು ಕೊಲೆ ಮಾಡಿದ ಘಟನೆ ರಾಮನಗರ ಜಿಲ್ಲೆಯ ಕನಕೇನಹಳ್ಳಿಯಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು ನೆಲಮಂಗಲ ತಾಲ್ಲೂಕಿನ ಬಸವೇನಹಳ್ಳಿ ಗ್ರಾಮದ ಲಕ್ಷ್ಮೀಪತಿ (25) ಎಂದು ಗುರುತಿಸಲಾಗಿದೆ. ಕೊಲೆಯಾದ ಯುವಕ ಹಾಗೂ ಮುಸ್ಲಿಂ ಯುವತಿ ಮೂರು ವರ್ಷದಿಂದ ಪರಸ್ಫರ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಇದನ್ನು ಸಹಿಸದ ಯುವತಿಯ ತಂದೆ ನಿಜಾಮುದ್ದೀನ್ ಹಾಗೂ ಇತರರು ಸೇರಿ ಯುವಕನನ್ನು ಕೊಲೆ ಮಾಡಿದ್ದಾರೆ.
ಇದನ್ನೂ ಓದಿ: ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಈ ಸಂಬಂಧ ನಿಜಾಮುದ್ದೀನ್ ಮತ್ತು ಸಿಕಂದರ್ ಎಂಬುವರನ್ನು ಪೊಲೀಸರು ಬಂಧಿಸಿದ್ದು, ಇಬ್ರತ್ ಹಾಗೂ ಆಟೋ ಮೊಹಮ್ಮದ್ ಎಂಬ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿಯೂ ಕಳೆದ ವರ್ಷವೇ ಗ್ರಾಮ ತೊರೆದು ಹೋಗಿತ್ತಾದರೂ, ರಾಜಿ ಬಳಿಕ ಮರಳಿ ಕರೆತರಲಾಗಿತ್ತು. ಮದುವೆ ಮಾತುಕತೆಗೆ ಬರುವಂತೆ ಯುವತಿಯ ತಂದೆ ನಿಜಾಮುದ್ದೀನ್ ಕೊಲೆಯಾದ ಲಕ್ಷ್ಮೀಪತಿ ಹಾಗೂ ಆತನ ಸಹೋದರ ನಟರಾಜ್ನನ್ನು ಮನೆಗೆ ಕರೆದಿದ್ದರು. ಅಲ್ಲಿ ಅವರಿಗೆ ಮದ್ಯಪಾನ ಮಾಡಿಸಿ ಕುತ್ತಿಗೆಗೆ ಬೆಲ್ಟ್ ಬಿಗಿದು ಲಕ್ಷ್ಮೀಪತಿಯನ್ನು ಹತ್ಯೆ ಮಾಡಿದ್ದಾರೆ. ನಂತರ ಮನೆಗೆ ಮರಳಿದ ನಟರಾಜ್ ತಮ್ಮ ಸಂಬಂಧಿಕರಿಗೆ ಈ ವಿಷಯ ತಿಳಿಸಿದ್ದಾರೆ.
ಮಗಳ ಪ್ರೀತಿ ಸಹಿಸದೇ ತಾನೇ ಯುವಕನ ಹತ್ಯೆ ಮಾಡಿದ್ದಾಗಿ ಆಕೆಯ ತಂದೆ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಿದ್ದೇವೆ ಎಂದು ರಾಮನಗರ ಎಸ್ಪಿ ಎಸ್. ಗಿರೀಶ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಹಿಂದೂಗಳ ಕಣ್ಣಿಗೆ ದಲಿತರು ಮನುಷ್ಯರಂತೆ ಕಾಣುವುದೆಂದು? – ಡಿ.ಉಮಾಪತಿ
ವಿಡಿಯೋ ನೋಡಿ: ರಾಮ ರಾಜ್ಯ ಎಂದರೆ ದಲಿತ, ಮಹಿಳೆ, ಅಲ್ಪ ಸಂಖ್ಯಾತರ ಮೇಲೆ ಅತ್ಯಾಚಾರ, ದಾಳಿ ಮಾಡುವಂತದ್ದೇ ?