Homeಅಂಕಣಗಳುಕಳೆದುಹೋದ ದಿನಗಳುಕಳೆದು ಹೋದ ದಿನಗಳು ಭಾಗ 2, ಅಧ್ಯಾಯ -1: ನಿಮಗೂ, ನನಗೂ ಸಂಬಳ ಕೊಡುವುದು ಈ...

ಕಳೆದು ಹೋದ ದಿನಗಳು ಭಾಗ 2, ಅಧ್ಯಾಯ -1: ನಿಮಗೂ, ನನಗೂ ಸಂಬಳ ಕೊಡುವುದು ಈ ಕಾಫಿ ಗಿಡ ಎನ್ನುತ್ತಿದ್ದ ರವೀಂದ್ರನಾಥರು

ಮ್ಯಾನೇಜ್‌ಮೆಂಟಿನ ವಿಚಾರ ಬಂದಾಗ ಅವರು ಯಾವಾಗಲೂ, ಯೋಜನೆ (Planning) ಆಯವ್ಯಯ (Budget) ಮತ್ತು ಐದು Mಗಳು ಬಹಳ ಮುಖ್ಯ ಎಂದು ವಿವರಿಸುವರು.

- Advertisement -
- Advertisement -

ಗಣಪಯ್ಯನವರ ನಂತರ ಹಾರ್ಲೆ ಗುಂಪಿನ ಎಲ್ಲ ವ್ಯವಹಾರಗಳನ್ನು ಸಹಜವಾಗಿಯೇ ರವೀಂದ್ರನಾಥರು ವಹಿಸಿಕೊಂಡರು. ಮೊದಲು ಹಾರ್ಲೆ ಗುಂಪಿನಲ್ಲಿದ್ದ ಬಾವಲಿಮೂಲೆ ಎಸ್ಟೇಟ್ ಗಣಪಯ್ಯನವರ ಕಾಲದಲ್ಲೇ ಮಾರಾಟವಾಗಿ ಹೋಗಿತ್ತು. ಆದರೆ ನಂತರದ ವರ್ಷಗಳಲ್ಲಿ ದೇವಾಲಕೆರೆಯ ಬೈರಳ್ಳಿ ಗ್ರಾಮದ ಆಶೀರ್ವಾದ್ ಎಸ್ಟೇಟ್ ಹಾಗೂ ಸಕಲೇಶಪುರದ ಪಕ್ಕದ ದೊಡ್ಡನಾಗರ ಎಸ್ಟೇಟ್ ಹಾರ್ಲೆ ಮ್ಯಾನೇಜ್ ಮೆಂಟಿಗೆ ಒಳಪಟ್ಟಿದ್ದವು. ಈ ಎರಡೂ ತೋಟಗಳ ಮಾಲಿಕರು ಉದ್ಯಮಿಗಳಾಗಿದ್ದು ಬೆಂಗಳೂರಿನಲ್ಲಿ ಇರುತ್ತಿದ್ದರು.

ಹಾರ್ಲೆ ಎಸ್ಟೇಟಿನಲ್ಲಿದ್ದ ಮಿಡ್ಲ್‌ಟನ್ ಕಟ್ಟಿಸಿದ ಬಂಗಲೆ ಶಿಥಿಲವಾಗಿದ್ದು ಗಣಪಯ್ಯನವರು ಇದ್ದಾಗಲೇ ಹಳೆಯ ಬಂಗಲೆಯ ಪಕ್ಕದಲ್ಲೇ ಹೊಸ ಮನೆಯೊಂದನ್ನು ಕಟ್ಟಿದ್ದರು. ಆದರೆ ಅವರು ಮಾತ್ರ ಹಳೆ ಮನೆಯಲ್ಲೇ ವಾಸವಿದ್ದರು. ಹೊಸ ಮನೆ ಅತಿಥಿಗೃಹದಂತೆ ಇತ್ತು. ರವೀಂದ್ರನಾಥರು ಹಾರ್ಲೆಯ ಹೊಸಮನೆಗೆ ವಾಸಕ್ಕೆ ಬಂದಿದ್ದರೂ, ಅವರ ತಾಯಿ ದೇವಮ್ಮನವರು ಕೊನೆಯವರೆಗೂ ಹಳೆಯ ಮನೆಯಲ್ಲೇ ಇದ್ದರು.

ಎಸ್ಟೇಟ್ ಆಫೀಸ್ ನಲ್ಲಿ ರವೀಂದ್ರನಾಥ್

ಆಗ ಹಾರ್ಲೆ ಗುಂಪಿನ ಎಲ್ಲ ಹಣಕಾಸು ವ್ಯವಹಾರವೂ ಮೈಸೂರು ಬ್ಯಾಂಕಿನಲ್ಲೇ ನಡೆಯುತ್ತಿತ್ತು. ಬ್ಯಾಂಕಿನ ಸಿಬ್ಬಂದಿಯೇ ಕೆಲವು ಸಲ “ಹಾರ್ಲೆ ವ್ಯವಹಾರಕ್ಕೇ ಒಂದು ಬ್ರಾಂಚ್ ಬೇಕು” ಎಂದು ಹೇಳುವಷ್ಟು ಅಲ್ಲಿ ಹಾರ್ಲೆ ಸಮೂಹದ ಹಣಕಾಸು ವ್ಯವಹಾರವಿತ್ತು. ಈ ಮಾತನ್ನು ಕೇಳಿದ ಗಣಪಯ್ಯ ಬ್ಯಾಂಕಿನ ಅಧಿಕಾರಿಗಳಲ್ಲಿ ಹಾಗಾದರೆ ನಮ್ಮಲ್ಲೇ ಒಂದು ಶಾಖೆ ಮಾಡಿ ಎಂದರು.

ಆಗ ಇದ್ದ ಬ್ಯಾಂಕ್ ಮ್ಯಾನೇಜರ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಒಂದು ಶಾಖೆ ಹಾರ್ಲೆಯಲ್ಲೇ ಪ್ರಾರಂಭಿಸಿದರೆ ಒಳ್ಳೆಯದೆಂದು ಯೋಚಿಸಿ ಗಣಪಯ್ಯನವರಲ್ಲಿ, ನೀವೊಂದು ಕಟ್ಟಡವನ್ನು ಕಟ್ಟಿಸಿ ಕೊಟ್ಟರೆ ಹಾರ್ಲೆಯಲ್ಲೇ ಬ್ಯಾಂಕಿನ ಶಾಖೆ ಪ್ರಾರಂಭಿಸುತ್ತೇವೆ ಎಂದರು. ಅದರಂತೆ ಗಣಪಯ್ಯನವರು ಹಾರ್ಲೆ ಬಂಗಲೆ ಗೇಟಿನ ಪಕ್ಕದಲ್ಲೇ ಬ್ಯಾಂಕಿನ ಶಾಖೆಯ ಅಗತ್ಯಗಳಿಗೆ ಅನುಕೂಲವಿರುವಂತಹ ಒಂದು ಕಟ್ಟಡವನ್ನು ಕಟ್ಟಿಸಿದರು. ಮೊದಲಿನ ಯೋಜನೆಯಂತೆ ಅಲ್ಲಿ ಬ್ಯಾಂಕಿನ ಶಾಖೆ ಪ್ರಾರಂಭವಾಗಬೇಕಿತ್ತು. ಅಲ್ಲಿ ಶಾಖೆ ತೆರೆದಿದ್ದರೆ ಹಾರ್ಲೆ ಎಸ್ಟೇಟಿನ ವ್ಯವಹಾರ ಮಾತ್ರವಲ್ಲದೆ ಸುತ್ತಲಿನ, ಕುಂಬರಡಿ, ನಡಹಳ್ಳಿ, ಮಲ್ಲೇಗದ್ದೆ ಸೇರಿದಂತೆ ಹಲವು ಗ್ರಾಮಗಳ ಜನರಿಗೆ ಅನುಕೂಲವಾಗುತ್ತಿತ್ತು. ಕಟ್ಟಡ ಪೂರ್ತಿಯಾಗುವುದರೊಳಗೆ ಸಕಲೇಶಪುರದ ಶಾಖೆಯ ಮ್ಯಾನೇಜರ್ ಅವರು ವರ್ಗವಾಗಿ ಹೊಸಬರು ಬಂದಿದ್ದರಿಂದ ಆ ಯೋಜನೆ ಮುಂದಕ್ಕೆ ಹೋಯಿತು. ಹೊಸ ಮ್ಯಾನೇಜರ್ ಕಾರಣಾಂತರದಿಂದ ಅದೇ ಶಾಖೆಯನ್ನು ಹಾರ್ಲೆಯ ಬದಲಿಗೆ ಕಾಡುಮನೆ ಟೀ ಎಸ್ಟೇಟಿನಲ್ಲಿ ಪ್ರಾರಂಭಿಸಿದರು. ಹಾರ್ಲೆಯ ಕಟ್ಟಡ ಹಾಗೇ ಉಳಿಯಿತು.

ಕಾಡುಮನೆ ಟೀ ಎಸ್ಟೇಟ್

ರವೀಂದ್ರನಾಥರು ಹಾರ್ಲೆ ತೋಟಗಳ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ, ಆಡಳಿತದಲ್ಲಿ ಆಧುನಿಕತೆಯನ್ನೂ ಜೊತೆಗೆ ಇನ್ನೂ ಹೆಚ್ಚು ಪಾರದರ್ಶಕತೆಯನ್ನೂ ತರಲು ಪ್ರಯತ್ನಿಸಿದರು. ಮುಖ್ಯವಾಗಿ ಎಲ್ಲ ಕೆಲಸಗಾರರಲ್ಲೂ ವಿಶ್ವಾಸವನ್ನು ಹೆಚ್ಚಿಸುವ ಮತ್ತು ಅವರು ಯಾವಾಗ ಕೇಳಿದರೂ ಅವರಿಗೆ ಸಂಬಂಧಪಟ್ಟ ಎಲ್ಲ ಲೆಕ್ಕ ಪತ್ರಗಳ ವಿವರವೂ ಸಂಪೂರ್ಣವಾಗಿ ಮತ್ತು ಸುಲಭವಾಗಿ ಸಿಗುವಂತೆ ಮಾಡಿದರು.

ಮೈಸೂರು ಬ್ಯಾಂಕ್ ಶಾಖೆಗಾಗಿ ಗಣಪಯ್ಯ ಕಟ್ಟಿಸಿದ ಕಟ್ಟಡ

ಬ್ಯಾಂಕಿಗೆಂದು ಕಟ್ಟಿದ್ದ ಕಟ್ಟಡದ ಮಹಡಿಯಲ್ಲಿ ಹಾರ್ಲೆ ಎಸ್ಟೇಟ್ ಮ್ಯಾನೇಜ್‌ಮೆಂಟ್‌ನ ಕಛೇರಿ ಪ್ರಾರಂಭವಾಯಿತು. ಎಲ್ಲ ನೌಕರರಿಗೂ ಅಲ್ಲೇ ಕುಳಿತು ಕೆಲಸಮಾಡಲು ಲೆಕ್ಕ ಪತ್ರ ವ್ಯವಹಾರಗಳನ್ನು ಇಡಲು ವಿಶಾಲವಾದ ವ್ಯವಸ್ಥೆ ಇತ್ತು.

1988ರ ವೇಳೆಗೆ ಹಾರ್ಲೆ ಎಸ್ಟೇಟಿಗೆ ಲೆಕ್ಕ ಪತ್ರಗಳ ವ್ಯವಸ್ಥೆಗೆಂದು ಕಂಪ್ಯೂಟರ್ ಬಂತು. ಇಂದಿನ ಕಂಪ್ಯೂಟರ್ ಗಳಿಗೆ ಹೋಲಿಸಿದರೆ ಅದು ಗಾತ್ರದಲ್ಲಿ ದೊಡ್ಡದು, ಆದರೆ ಕಾರ್ಯಕ್ಷಮತೆ ಬಹಳ ಕಡಿಮೆಯೆಂದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆಗ ಲೋಟಸ್ 123ಯಲ್ಲಿ ಎಸ್ಟೇಟಿನ ಎಲ್ಲ ಲೆಕ್ಕ ಪತ್ರಗಳನ್ನು ಅಳವಡಿಸಲಾಯಿತು. ತೋಟದಲ್ಲಿ ಯಾರಿಗೂ ಕಂಪ್ಯೂಟರಿನ ಯಾವ ಜ್ಞಾನವೂ ಇರಲಿಲ್ಲ. ಬೆಂಗಳೂರಿನಿಂದ ಕೆಲವರು ಬಂದು ನೌಕರರಿಗೆ ಮುಖ್ಯವಾಗಿ ಕಛೇರಿ ನಿರ್ವಹಣೆ ಮಾಡುತ್ತಿದ್ದ ಕಮಲಾ ಭಟ್ ಅವರಿಗೆ ಕಂಪ್ಯೂಟರ್ ಬಳಕೆಯನ್ನು ಹೇಳಿಕೊಡುತ್ತಿದ್ದರು. ಪ್ರಾರಂಭದಲ್ಲಿ ಅವರಿಗೂ ಬಹಳ ಕಷ್ಟವಾಗುತ್ತಿತ್ತು. ನಂತರ ಅಭ್ಯಾಸವಾಯಿತು.

ರವೀಂದ್ರನಾಥರೇ ಮೊದಲು ಎಲ್ಲವನ್ನೂ ಅಭ್ಯಾಸ ಮಾಡಿದರು. ಪುಸ್ತಕಗಳನ್ನಿಟ್ಟುಕೊಂಡು ಗಂಟೆಗಟ್ಟಲೆ ಕುಳಿತು ತಾವೇ ಅರ್ಥಮಾಡಿಕೊಂಡು ತೋಟದ ಲೆಕ್ಕ ಪತ್ರಗಳಿಗೆ ಬೇಕಾದ ರೀತಿಯಲ್ಲಿ ಎಲ್ಲವನ್ನೂ ರೂಪಿಸಿ ನಂತರ ಬೇರೆಯವರಿಗೆ ಹೇಳಿಕೊಡುತ್ತಾ ಬಂದರು. ಕೆಲವು ಸಮಯ ಕಳೆಯುವಷ್ಟರಲ್ಲಿ ಹಾರ್ಲೆ ಗುಂಪಿನ ಎಲ್ಲ ಲೆಕ್ಕಪತ್ರಗಳೂ ಕಂಪ್ಯೂಟರ್‌ನಲ್ಲಿ ನಡೆಯಲಾರಂಭಿಸಿದವು.

ಆಗಲೇ ತೋಟಕ್ಕೆ ಡಿಷ್ ಆಂಟೆನಾ ಬಂತು. ಆಗ ಸುಮಾರು ಹದಿನಾರು ಅಡಿ ಅಗಲದ ದೊಡ್ಡ ಡಿಷ್. ಆಗ ನಾಲ್ಕೈದು ಚಾನಲ್‌ಗಳು ಮಾತ್ರ ದೊರೆಯುತ್ತಿದ್ದವು. ಬಂಗಲೆಯ ಪಕ್ಕದ ವಿಶಾಲವಾದ ಸ್ಥಳದಲ್ಲಿ ಒಂದು ಟಿವಿಯನ್ನೂ ತಂದು ಸ್ಥಾಪಿಸಿದರು. ಅದು ತೋಟದ ಎಲ್ಲ ಕಾರ್ಮಿಕರ ವೀಕ್ಷಣೆಗೆ. ಪ್ರತಿದಿನ ಸಂಜೆ ಅಲ್ಲಿ ಜನರು ಕಿಕ್ಕಿರಿದು ಸೇರುತ್ತಿದ್ದರು. ಕ್ರಿಕೆಟ್ ಪಂದ್ಯಗಳಿದ್ದಾಗ ಕೆಲವು ಸಲ ರವೀಂದ್ರನಾಥರೂ ಬಂದು ಹುಡುಗರೊಡನೆ ಅಲ್ಲೇ ಕ್ರಿಕೆಟ್ ಪಂದ್ಯ ನೋಡುತ್ತ ಕೂರುವರು.

ರವೀಂದ್ರನಾಥರ ಭೇಟಿಯಾದಾಗಲೆಲ್ಲ ಹೊಸ ವಿಚಾರಗಳು ಚರ್ಚೆಗೆ ಬರುವುವು. ಅದು ವೇದ ಉಪನಿಷತ್ ಇರಲಿ, ಆಧುನಿಕ ವಿಜ್ಞಾನವಾಗಿರಲಿ, ಸಾಮಾಜಿಕ ವಿಷಯವಾಗಿರಲಿ ತಾಳ್ಮೆಯಿಂದ ತಿಳಿಸುವರು. ತಮಗೆ ತಿಳಿಯದ್ದನ್ನು ಯಾರು ಹೇಳಿದರೂ ಕೇಳಿಸಿಕೊಳ್ಳುವರು.

ಪರಸ್ಪರ ಮಾತುಕತೆಯಲ್ಲಿ ಅವರು ಅತ್ಯುತ್ತಮ ಬೋಧಕರು.

ಈ ಮುಂದಿನ ವಿಚಾರಗಳು ಅರ್ಥಶಾಸ್ತ್ರದ, ಅಥವಾ ಬಿಸಿನೆಸ್ ಮ್ಯಾನೇಜ್ಮೆಂಟಿನ ವಿದ್ಯಾರ್ಥಿಗಳಿಗೆ ತಿಳಿದ ವಿಷಯಗಳೇ ಆಗಿವೆ. ಆದರೆ ಇಂತಹ ವಿಚಾರಗಳೂ ಎಲ್ಲರಿಗೂ ತಿಳಿದಿರಬೇಕು ಆಗ ಕೃಷಿಯಾಗಲೀ, ಉದ್ಯಮವಾಗಲೀ ಎಲ್ಲವೂ ಸುಗಮವಾಗಿ ನಡೆಯಲು ಸಹಕಾರಿಯಾಗುತ್ತದೆ ಎಂದು ಹೇಳುವರು. ಇಂತಹ ವಿಷಯಗಳನ್ನು ತೋಟದ ನೌಕರರಿಗೂ ವಿವರಿಸುವರು.

ಮ್ಯಾನೇಜ್‌ಮೆಂಟಿನ ವಿಚಾರ ಬಂದಾಗ ಅವರು ಯಾವಾಗಲೂ, ಯೋಜನೆ (Planning) ಆಯವ್ಯಯ (Budget) ಮತ್ತು ಐದು Mಗಳು ಬಹಳ ಮುಖ್ಯ ಎಂದು ವಿವರಿಸುವರು.

ಒಂದು ತೋಟ ಮಾಡುವುದಿರಬಹುದು, ಇತರೆ ಯಾವುದೇ ಇರಬಹುದು. ಮೊದಲು ಯೋಜನೆ ಸರಿಯಾಗಿ ಮಾಡಬೇಕು, ನಂತರ ಆಯವ್ಯಯವನ್ನು ರೂಪಿಸಬೇಕು. ಇದರಿಂದ ನಮ್ಮ ಹಣಕಾಸಿನ ಅಗತ್ಯ ಮತ್ತು ನಮ್ಮ ಸಾಮರ್ಥ್ಯ ಅರಿವಾಗುತ್ತದೆ.

ನಂತರದ್ದೇ ಐದು Mಗಳು ಅವು ಯಾವುವೆಂದರೆ Money, Material, Machinery, Minute and Man.

ಇವುಗಳಲ್ಲಿ ಮೊದಲ ನಾಲ್ಕು Money, ಹಣಕಾಸು, Material, ಬೇಕಾಗುವ ವಸ್ತುಗಳು, Machinery-ಯಂತ್ರ ಮತ್ತು ಉಪಕರಣಗಳು ಮತ್ತು Minute – ನಿಮಿಷ, ಅಂದರೆ ಯಾವ ಸಮಯದಲ್ಲಿ? ಎಂದು. ಇವು ನಾಲ್ಕು  ಬಜೆಟ್‌ನಲ್ಲಿ ನಮಗೆ ತಿಳಿಯುತ್ತದೆ. ಮತ್ತು ಅದಕ್ಕೆ ತಕ್ಕಂತೆ ಯೋಜನೆ ರೂಪಿಸಬೇಕಾಗುತ್ತದೆ.

ಆದರೆ ನಂತರದ್ದು Man ಇದು ಮಾನವ ಸಂಪನ್ಮೂಲ, ಅಂದರೆ ಆಡಳಿತಗಾರರರು, ಕೆಲಸಗಾರರು ಮಾತ್ರವಲ್ಲ ಸುತ್ತಲಿನ ಸಮಾಜ ಕೂಡಾ ಆಗಿದೆ. ಇದು ಬಹಳ ಮುಖ್ಯವಾದ ಮತ್ತು ಅಷ್ಟೇ ಸಂಕೀರ್ಣವಾದ ವಿಚಾರ, ನೀನು ಈ ಮಾನವ ಸಂಪನ್ಮೂಲವನ್ನು ಗಳಿಸುವುದು ಮತ್ತು ನಿರ್ವಹಿಸುವುದು ಕಲಿತರೆ ಮಾತ್ರ ಯಾವುದೇ ಕೆಲಸದಲ್ಲಿ ಯಶಸ್ಸು ಕಾಣಲು ಸಾಧ್ಯ. ಇದೊಂದು ಕಲೆಯೂ ಹೌದು  ಮಾನವತೆಯೂ ಹೌದು ಎನ್ನುವರು.

ಇದಕ್ಕೆ ಬೇಕಾದಂತೆ ಕಂಪ್ಯೂಟರಿನಲ್ಲಿ ಹಲವು ಪ್ರೋಗ್ರಾಂಗಳನ್ನೂ ಅವರೇ ರೂಪಿಸಿದರು. ನಂತರದ ದಿನಗಳಲ್ಲಿ ನನ್ನ ಎಲ್ಲ ಕೆಲಸಗಳಲ್ಲಿಯೂ ಈ ಪಾಠಗಳು ನೆರವಿಗೆ ಬಂದವು.

ನೆಡಲು ಸಿದ್ಧವಾದ ಗಿಡಗಳು

ರವೀಂದ್ರನಾಥರು ತೋಟ ಕಾರ್ಮಿಕರ ಜೊತೆ ಮೊದಲಿನಿಂದಲೂ ಹೆಚ್ಚು ಒಡನಾಟ ಇದ್ದವರೇ. ಈಗ ಅದು ಇನ್ನೂ ಹೆಚ್ಚಾಯಿತು. ಪ್ರತಿದಿನ ಸಂಜೆ ಕೆಲಸದ ನಂತರ ಬಂಗಲೆಯ ಎದುರಿನ ಕಾಫಿ ಕಣದಲ್ಲೇ ಯವಕರೊಂದಿಗೆ ಸೇರಿ ಅವರೂ ವಾಲಿಬಾಲ್ ಆಡುವರು, ಇತರ ಆಟೋಟಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವರು. ಹಿಂದಿನಿಂದಲೂ ನಡೆದು ಬಂದಿದ್ದ ಗಣಪತಿ ಉತ್ಸವ, ದೀಪಾವಳಿ ಮಾತ್ರವಲ್ಲ ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ,  ಗಣರಾಜ್ಯದಿನಗಳ ಆಚರಣೆಗಳೂ ಇನ್ನಷ್ಟು ವಿಜೃಂಬಣೆಯಿಂದ ಆಗತೊಡಗಿದವು. ಈ ಉತ್ಸವಗಳಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಟೋಟಗಳ ಸ್ಪರ್ಧೆ ಅವುಗಳಿಗೆ ಬಹುಮಾನ ಇದ್ದೇ ಇರುತ್ತಿತ್ತು. ಇವೆಲ್ಲದರ ಜೊತೆಯಲ್ಲಿ ವರ್ಷದಲ್ಲಿ ಅತಿ ಹೆಚ್ಚು ದಿನ ಕೆಲಸಮಾಡಿದ ಕೆಲಸಗಾರರಿಗೂ ಬಹುಮಾನ ನೀಡುವುದನ್ನು ಪ್ರಾರಂಭಿಸಿದರು. ಈ ಬಹುಮಾನಗಳಂತೂ ಹೆಚ್ಚಾಗಿ ಮಹಿಳೆಯರ ಪಾಲಾಗುತ್ತಿತ್ತು.

ಕೆಲಸದ ವೇಳೆ ತೋಟಕ್ಕೆ ಹೋದಾಗಲೂ ಕೆಲಸಗಾರರ ಜೊತೆ ಮಾತಾಡುತ್ತ,

“ನಿಮಗೆ ಸಂಬಳ ಕೊಡುವವರು ಯಾರು?” ಎಂದು ಕೇಳುತ್ತಿದ್ದರು.

ಆಗ ಕೆಲಸಗಾರರು ಸಹಜವಾಗಿಯೇ “ನೀವು” ಎನ್ನುತ್ತಿದ್ದರು.

ಆಗ ರವೀಂದ್ರನಾಥರು “ನಾನಲ್ಲ ನಾನು ಬ್ಯಾಂಕಿನಿಂದ ನೋಟು ತಂದು ನಿಮಗೆ ಕೊಡುತ್ತಿದ್ದೇನೆ ಅಷ್ಟೆ, ನಿಮಗೆ ಸಂಬಳ ಕೊಡುವುದು ಈ ಕಾಫಿ ಗಿಡ, ನಿಮಗೂ- ನನಗೂ ಇಲ್ಲಿರುವ ಎಲ್ಲರಿಗೂ ಅಷ್ಟೇ ಇದೇ ಸಂಬಳ ಕೊಡುವುದು” ಎನ್ನುವರು. ಆ ಮಾತನ್ನು ಆಗ ಬಹಳ ಜನರು ಹಗುರವಾಗಿ ಮತ್ತು ಏನೋ ಹೇಳುತ್ತಿದ್ದಾರೆ ಎನ್ನುವ ಭಾವನೆಯಲ್ಲಿ ತೆಗೆದುಕೊಂಡವರಿದ್ದರು. ಆದರೆ ನಮ್ಮ ಮಾತುಗಳು ಪ್ರಾಮಾಣಿಕತೆಯಿಂದ ಕೂಡಿದ್ದಲ್ಲಿ ಜನ ನಿಧಾನವಾಗಿ ಅದನ್ನು ಸ್ವೀಕರಿಸಬಲ್ಲರು ಎಂಬುದು ನಂತರದ ವರ್ಷಗಳಲ್ಲಿ ಅನುಭವಕ್ಕೆ ಬಂತು. ಅದನ್ನು ಮುಂದೆ ಬರೆಯುತ್ತೇನೆ.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದುಹೋದ ದಿನಗಳು 33 – ಬರವಣಿಗೆಯ ಹಿನ್ನೆಲೆ : ಪ್ರಸಾದ್ ರಕ್ಷಿದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...