Homeಮುಖಪುಟಕುವೆಂಪುರವರ ವಿಚಾರ ಕ್ರಾಂತಿಗೆ ಆಹ್ವಾನದ ಮರು ಓದು - ಧನಂಜಯ್ ಎನ್

ಕುವೆಂಪುರವರ ವಿಚಾರ ಕ್ರಾಂತಿಗೆ ಆಹ್ವಾನದ ಮರು ಓದು – ಧನಂಜಯ್ ಎನ್

ಕುವೆಂಪುರಂಥ ಚಿಂತಕರು ಎಲ್ಲಾ ಸಾಧ್ಯತೆಗಳನ್ನು ಮುಂಚಿತವಾಗಿಯೇ ಗ್ರಹಿಸಿ ಸೂಕ್ಷ್ಮಮತಿಗಳಾಗಿ ರಾಜಕೀಯ ಕ್ರಾಂತಿಯ ಕಡೆಗೆ ಮುಖ ಮಾಡದಲೇ, ವಿಚಾರ ಕ್ರಾಂತಿಗೆ ಆಹ್ವಾನ ನೀಡಿದ್ದನ್ನ ನಾವೆಲ್ಲರೂ ಅಷ್ಟೇ ಸೂಕ್ಷ್ಮತೆಯಿಂದ ಅರಿತುಕೊಳ್ಳಬೇಕು.

- Advertisement -
- Advertisement -

ಶಬ್ದಗಳೆಲ್ಲಾ ತಮ್ಮ ಅರ್ಥಗಳನ್ನು ಕಳೆದುಕೊಳ್ಳುತ್ತಿವೆ; ಅದರಿಂದ ಸತ್ಯವಾದುದನ್ನು ಹೇಳುವುದಕ್ಕೆ ಸಾಧ್ಯವಾಗದಂತೆ ಭಾಷೆ ಬೆಳೆಯುತ್ತಿದೆ’

ಜಾರ್ಜ್ ಆರ್ವೆಲ್ ತನ್ನ “ಪಾಲಿಟಿಕ್ಸ್ ಅಂಡ್ ದಿ ಇಂಗ್ಲಿಷ್ ಲಾಂಗ್ವೇಜ್” ಅನ್ನೋ ಲೇಖನದಲ್ಲಿ ಈ ಮಾತನ್ನ ಬರೆದ ಕಾಲಕ್ಕೂ ಈಗಿನ ಕಾಲಕ್ಕೂ ಅಂತಹ ವ್ಯತ್ಯಾಸವೇನೂ ಕಾಣಿಸುತ್ತಿಲ್ಲ.

ಹಿರಿಯ ಚಿಂತಕರು ತಮ್ಮ ಅನುಭವಗಳ ಜತೆಗೆ ಯುವಕರೊಂದಿಗೆ ಸಂವಾದ ಚರ್ಚೆಗಳನ್ನು ಸರಿಯಾದ ರೀತಿಯಲ್ಲಿ ನಡೆಸುತ್ತಿಲ್ಲ ಅಥವಾ ಹೊಸ ಚಿಂತನೆಯ ತರಂಗಗಳನ್ನು ನಮ್ಮ ಸುತ್ತ ಹುಟ್ಟುಹಾಕಲು ಸಾಧ್ಯವಾಗುತ್ತಿಲ್ಲ ಎನ್ನುವ ಅಂಶ, ಈಗಿನ ದುರಿತ ರಾಜಕೀಯ ವ್ಯವಸ್ಥೆಯಲ್ಲಿ ಅದರಲ್ಲೂ ಮೌಢ್ಯ ತುಂಬಿದ ಆಲೋಚನೆಗಳ ನಡುವೆ ನಮ್ಮ ಗಮನಕ್ಕೆ ಬರುತ್ತಿದೆ ಎಂದರೆ, ಬಹುಶಃ ಇದು ಬದಲಾವಣೆಯನ್ನು ಬಯಸುತ್ತಿರುವ ಕಾಲ ಅನಿಸುತ್ತದೆ.

ಕಳೆದುಹೋಗುತ್ತಿರುವ ಕೊಂಡಿಗಳ ಜೊತೆಗೆ ಮುಂದಿನ ಪೀಳಿಗೆಯ ಜತೆ ನಂಟು ಬೆಳೆಸಿಕೊಡಬೇಕಾದ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರಗಳು, ಜವಾಬ್ದಾರಿಗಳನ್ನು ಮರೆತು ಕಾಲಹರಣ ಮಾಡುತ್ತಿರುವುದರಿಂದಲೇ ಬೌದ್ಧಿಕತೆ ಕಡೆಗೆ ತುಡಿಯಬೇಕಾದ ನಮ್ಮಗಳ ಬುದ್ಧಿ ಅಗತ್ಯವಾದ ಸಂವಹನ ಭಾಷೆಯನ್ನು ಕಳೆದುಕೊಂಡು ದಿಕ್ಕು ಕಾಣದ ಅನಾಥನಂತೆ ಇಂದು ಬೀದಿಬೀದಿ ಅಲೆಯುತ್ತಿದೆ.

ಈಗ ನಮ್ಮ ಎದುರಿಗೆ ಕಾಣಿಸುತ್ತಿರುವ ಒಂದಷ್ಟು ಹಿರಿಯರು ಕೊಂಚಮಟ್ಟಿಗಿನ ವಿವೇಕವುಳ್ಳವರು ಎಂದು ಅವರ ಜತೆಗಿನ ಒಡನಾಟದಿಂದ ನಮಗೇನಾದರೂ ಅನ್ನಿಸಿದರೆ ಅದಕ್ಕೆ ಕಾರಣ ಅವರ ಕಾಲದ ಚಿಂತಕರು ಅವರೊಡನೆ ಬಿಟ್ಟುಹೋಗಿರುವ ಬೌದ್ಧಿಕ ಚಿಂತನೆಯೇ ಅಡಿಪಾಯ.

1974ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಹತ್ತನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಕುವೆಂಪುರವರು ಮಾಡಿದ ಭಾಷಣ ಇಂಥದ್ದೊಂದು ಆಲೋಚನೆಯನ್ನ ಹುಟ್ಟಿಸುತ್ತದೆ.

ಅಂದು ಸಮಾಜಕ್ಕೆ ಒದಗಿದ್ದ ದುಃಸ್ಥಿತಿಗೆ ಕನ್ನಡಿ ಹಿಡಿಯುತ್ತಾ ವಿದ್ಯಾರ್ಥಿ ಜೀವನದಿಂದ ಉತ್ತೀರ್ಣರಾಗಿ ಮತ್ತೊಂದು ಜವಾಬ್ದಾರಿಯುತ ಕಾಯಕಕ್ಕೆ ಹೆಜ್ಜೆ ಇಡುತ್ತಿದ್ದ ಯುವಕರನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ವಾಸ್ತವದಲ್ಲಿ ನಮ್ಮೆದುರಿಗಿದ್ದ ಸಮಸ್ಯೆಗಳನ್ನು ಮುಂದಿಡುತ್ತ ನಿಮಗೆಲ್ಲಾ ಎಂತಹ ಹೋರಾಟ ಕಾದಿದೆಯೋ ಎಂಬ ಎಚ್ಚರಿಕೆಯನ್ನೂ ನೀಡುತ್ತಾರೆ.

ರಾಜಕೀಯವಾಗಿ ಒಬ್ಬ ಬರಹಗಾರನ ಜವಾಬ್ದಾರಿ ಎಷ್ಟಿದೆ ಎಂಬುದನ್ನ ಮರೆತು ಕವಿತೆ ಕಥೆಗಳ ಸುತ್ತ ಗಿರಕಿ ಹೊಡೆಯುತ್ತಾ ಹಂದಿಗಳು ಮರಿಹಾಕುವಂತೆ ತಮ್ಮ ಮುಂಬರುವ ಎಲ್ಲಾ ಸಂಕಲನಗಳ ಮುಖಪುಟದಲ್ಲಿ, ಇಂಥಾ ಪ್ರಶಸ್ತಿ ಪುರಸ್ಕೃತ ಎಂದು ಅಚ್ಚು ಹಾಕಿಸಿ ಸಂಭ್ರಮಿಸುವುದನ್ನೇ ಸಾಹಿತ್ಯ ಬೆಳವಣಿಗೆ ಎಂದು ತಿಳಿದ ನಮ್ಮ ಕಾಲದ ಚಿಂತಕರ ಮುಂದೆ ಕುವೆಂಪುರವರ ಭಾಷಣ ಈಗಲೂ ಅತ್ಯಂತ ಪರಿಣಾಮಕಾರಿಯಾಗಿಯೂ, ಜೀವಂತವಾಗಿಯೂ ಕಾಣಿಸುತ್ತಿದೆ.

ನನ್ನ ಉಪದೇಶದಿಂದ ಮಹತ್ಸಾಧನೆಯಾಗಿಬಿಡುತ್ತದೆ ಎಂಬ ನಂಬಿಕೆಯೇನೂ ನನಗಿಲ್ಲ ಎಂದು ಹೇಳುತ್ತಲೇ ಮಾತು ಶುರುಮಾಡುವ ಅವರು, ಆ ಹಿಂದೆ ನಡೆದಂಥ ಅಂಥವೇ ಒಂದಷ್ಟು ಘಟಿಕೋತ್ಸವ ಭಾಷಣಗಳು ಯುವಕರಲ್ಲಿ ಮಹಾನ್ ಬದಲಾವಣೆ ಏನೂ ತಂದಿರಲಿಲ್ಲ ಎಂಬುದನ್ನು ಅಷ್ಟೇ ಅಸಹಾಯಕತೆಯಿಂದ ಒಪ್ಪಿಕೊಂಡಿದ್ದರು.

ಅಂದಿನ ದಿನಕ್ಕೆ, ಆ ಅಸಹಾಯಕತೆ ಅನ್ನುವ ಪದ ಪರಿಣಾಮಕಾರಿಯಾದ ಕೆಲಸಗಳು ಆಗುತ್ತಿಲ್ಲವಲ್ಲ ಎನ್ನುವ ನೋವಿನಿಂದ ಬಂದಿದ್ದಾದರೆ, ಇಂದಿನ ದಿನಕ್ಕೆ ಪ್ರಭುತ್ವದ ವಿರುದ್ಧ ಕನಿಷ್ಠ ಮಟ್ಟದ ಪ್ರತಿರೋಧವೂ ಹುಟ್ಟುತ್ತಿಲ್ಲವಲ್ಲ ಎನ್ನುವ ಆತಂಕವನ್ನು ಸೂಚಿಸುತ್ತಿರುವ ಅರ್ಥ ಹುಟ್ಟುತ್ತದೆ.

ಕುವೆಂಪು ಅವರ ಮಾತುಗಳನ್ನ ಕೇಳಿದರೆ, ಸ್ವಾತಂತ್ರ ಬಂದ ಹೊಸತರಲ್ಲಿ ಗಾಂಧಿಯ ತತ್ವಗಳನ್ನೆಲ್ಲಾ ಗಾಳಿಗೆ ತೂರಿ ನಮ್ಮನ್ನು ಆಳಿದ ಅಂದಿನ ಸರಕಾರ ತೆಗೆದುಕೊಂಡ ನಿರ್ಧಾರಗಳು ಇಂದಿಗೂ ಸರಿಪಡಿಸಲಾಗದ ಅಸಮಾನತೆಯನ್ನು ಸೃಷ್ಟಿಸುತ್ತದೆ ಎಂದು ಬಹುಶಃ ಯಾರೂ ಯೋಚಿಸಿರಲಿಲ್ಲ.

ಬಡವ ಮತ್ತು ಶ್ರೀಮಂತರ ನಡುವೆ ಈಗಿರುವ ಕಂದಕ ಇಷ್ಟು ಆಳವಾಗಿ ಒಡಕುಗಳನ್ನು ಸೃಷ್ಟಿಸಿಕೊಂಡಿದೆ ಎಂದರೆ, ಅಂದು ಪಾಶ್ಚಾತ್ಯ ದೇಶಗಳ ಅನುಕರಣೆ ಮಾಡಿದ ನಮ್ಮ ಹಿರಿಯರ ಆತುರದ ನಿರ್ಧಾರಗಳೇ ಕಾರಣವಾ?

ಹಸಿವನ್ನೇ ಬಂಡವಾಳ ಮಾಡಿಕೊಂಡು ಗೆಲುವಿನ ತಂತ್ರ ಹೆಣೆಯುವ ರಾಜಕಾರಣಿಗಳು ಹೊಸತೊಂದು ಗುಲಾಮಗಿರಿಯನ್ನೇ ಸೃಷ್ಟಿಸಿಬಿಟ್ಟಿದ್ದಾರೆ.

ಸ್ವಾತಂತ್ರ ಗಳಿಸಿಕೊಳ್ಳುವುದಕ್ಕೂ ಮುಂಚೆ, ಜಾತಿ ಅಸ್ಪೃಶ್ಯತೆಗಳಿಂದ ನರಳಿ ರೋಗ ಹೆಚ್ಚಿಸಿಕೊಂಡಿದ್ದ ನಮ್ಮ ಭಾರತ, ಸ್ವಾತಂತ್ರ‍್ಯಾನಂತರ ಆ ಅಸ್ಪೃಶ್ಯತೆಯ ಜತೆಗೆ ರಾಜಕೀಯ ಗುಲಾಮಿತನವನ್ನೂ ಸಹಿಸಿಕೊಂಡು ಮುನ್ನಡೆಯಬೇಕಾಯಿತು.

ಹಾಗೆ ನೋಡಿದರೆ, ಅಸ್ಪೃಶ್ಯತೆಯ ಹೋರಾಟದ ಹಿನ್ನೆಲೆಯಿಂದ ಬಂದ ನಾವು ಹೊಸ ಆಲೋಚನೆಗಳ ಕಿಚ್ಚು ಹತ್ತಿಸಿಕೊಂಡು ಉರಿದು ಹೊಸ ಬೆಳಕಲ್ಲಿ ಅಸ್ಪೃಶ್ಯತೆಗಳನ್ನು ಗುಲಾಮಗಿರಿಯನ್ನು ಸುಟ್ಟು ಬೂದಿ ಮಾಡಿ ಹೊಸ ಜೀವನಕ್ಕೆ ಹಾತೊರೆಯಬೇಕಾಗಿತ್ತು.

ಅಧಿಕಾರಶಾಹಿ ಪುರೋಹಿತಶಾಹಿಗಳ ಸುಳಿಗೆ ಸಿಕ್ಕು ಅವುಗಳನ್ನೇ ಹೆಚ್ಚಿನ ಮಟ್ಟಿಗೆ ಆರಾಧಿಸಿಕೊಂಡು, ಗುಲಾಮಗಿರಿಯನ್ನು ತಿರಸ್ಕರಿಸಿಯೂ ಒಪ್ಪಿಕೊಂಡಂತೆ ಈ ಬದುಕನ್ನ ಅತ್ಯಂತ ಸುಲಭವಾಗಿ ಸ್ವೀಕರಿಸಬಾರದಾಗಿತ್ತು.

ಆ ಸ್ವೀಕಾರದ ಫಲವೇ ಅಂದಿನಕಾಲದ ರಾಜಕೀಯಕ್ಕೆ ಹೋಲಿಸಿದರೆ, ಅದಕ್ಕಿಂತಲೂ ನೂರರಷ್ಟು ಹೆಚ್ಚು ವಿಷ ತುಂಬಿಕೊಂಡ ಈಗಿನ ಸಂಘ ಪರಿವಾರದ ಸರಕಾರವನ್ನ ಎರಡನೇ ಬಾರಿಗೆ ಆರಿಸಿ ನಮ್ಮಗಳ ಮೌಢ್ಯತೆಯನ್ನು, ಗುಲಾಮಗಿರಿಯನ್ನು ನೂರಕ್ಕೆ ನೂರರಷ್ಟು ಹೆಚ್ಚಿಸಿಕೊಂಡು ತಲೆ ತಗ್ಗಿಸಿ ಬಾಳುತ್ತಿದ್ದೇವೆ ಅನ್ನಿಸುತ್ತಿದೆ.

ಹೌದು, ಏಕೆ ಹೀಗಾಯಿತು? ಸಮಾಜವಾದವೇ ನಮ್ಮ ಗುರಿ ಎಂದು ಘೋಷಿಸಿಕೊಂಡಿದ್ದೆವು, ಪ್ರಜಾಸತ್ತೆಯೆ ನಮ್ಮ ವಿಧಾನಮಾರ್ಗ ಎಂದು ಸಾರಿಸಾರಿ ಪ್ರತಿಜ್ಞೆ ಮಾಡಿಕೊಂಡಿದ್ದೆವು.

ಆದರೂ ಹೀಗೆಲ್ಲಾ ಆಯಿತು.

ಉಗ್ರ ಕ್ರಾಂತಿಯಿಂದ ನೀವು ಚುನಾವಣೆಯನ್ನ ಸಾತ್ವಿಕ ಮಾರ್ಗಕ್ಕೆ ತಿರುಗಿಸದಿದ್ದರೆ ಸ್ವಾರ್ಥಿಗಳೂ ಸಮಯಸಾಧಕರೂ ಗೂಂಡಾಗಳು ಖದೀಮರೂ ನಮ್ಮನ್ನು ಆಳುತ್ತಾರೆ ಎಂದು ಕುವೆಂಪುರಂಥ ಚಿಂತಕರು ಎಚ್ಚರಿಸಿದ್ದರೂ ಸಹ, ಸದೃಢವಾದ ಬೆಳವಣಿಗೆಯನ್ನು ಗಳಿಸಿಕೊಳ್ಳಬೇಕಾದ ನಾವು, ಈಗಲೂ ನಿಂಬೆಹಣ್ಣಿನ ಪವಾಡಗಳ ಹಿಂದೆ ಬಿದ್ದ ದಡ್ಡ ಶಿಖಾಮಣಿಗಳನ್ನು ಜಾತಿ ಆಧಾರದ ಮೇಲೆ ಆರಿಸಿ ಕಳಿಸುತ್ತಿದ್ದೇವೆ, ಸಂವಿಧಾನ ಹೇಳಿರುವ ಮೂಲಕರ್ತವ್ಯಗಳನ್ನು ಲೆಕ್ಕಿಸದ ಅಪ್ರಾಜ್ಞರನ್ನು ಒಂದು ರಾಜ್ಯದ ಮುಖ್ಯಮಂತ್ರಿ ಸ್ಥಾನ ಕೊಟ್ಟು ಕೂರಿಸಿದ್ದೇವೆ, ಭಯೋತ್ಪಾದನೆ ಆರೋಪ ಹೊತ್ತಿರುವವರನ್ನು ಸಂಸದರನ್ನಾಗಿ ಮಾಡಿದ್ದೇವೆ.

ಅಭಯಹಸ್ತ ನೀಡಬೇಕಾದ ಸರ್ಕಾರದ ಕಡತಗಳನ್ನೇ ಯಾರೋ ಕದ್ದೊಯ್ದರು ಎಂದರೆ ಅಮಾಯಕರಾಗಿ ಅದನ್ನು ಅನುಮೋದಿಸಿದ್ದೇವೆ, ಜೈಲಿಗೆ ಹೋಗಿ ಬಂದ ಸಮಾಜಘಾತುಕರಿಗೆ ಈ ದೇಶದ ಅತ್ಯುನ್ನತ ಮಂತ್ರಿ ಸ್ಥಾನ ಕೊಟ್ಟು ಗೌರವಿಸಿದ್ದೇವೆ, ಉನ್ನತ ಗೌರವ ಹೊಂದಿದ್ದ ನ್ಯಾಯಾಲಯಗಳ ತೀರ್ಪಿನಲ್ಲಿ ದೋಷ ಕಂಡಾಗಲೂ ಶಿರಸಾವಹಿಸಿ ಅದನ್ನು ಒಪ್ಪಿಕೊಂಡಿದ್ದೇವೆ.

ಮೀಸಲಾತಿಯನ್ನು ವಿರೋಧಿಸಿಕೊಂಡು ಇಲ್ಲಿ ಎಲ್ಲವೂ ಸರಿ ಇದೆ ಎಂದು ಹೇಳುವಾಗ, ಅಲ್ಲಿ ಇಡೀ ದೇಶದ ಒಟ್ಟು ಆದಾಯದ ಮೂಲ ಕೆಲವೇ ಕೆಲವರ ಜೇಬಿನಲ್ಲಿ ತುಂಬಿದೆ ಎನ್ನುವ ಕಹಿ ಸತ್ಯವನ್ನ ಹೆಮ್ಮೆಯಿಂದ ಹೇಳಿಕೊಂಡು ತಿರುಗುತ್ತಿದ್ದೇವೆ.

“ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ

ಬಡತನವ ಬುಡಮಟ್ಟ ಕೀಳಬನ್ನಿ”

ಎಂಬಂತಹ ಕರೆಗಳಿಗೆ ಚೆಂದನೆ ಫ್ರೇಮು ಹಾಕಿಸಿ ಸೋಶಿಯಲ್ ಮೀಡಿಯಾಗಳಲ್ಲಿ ಬಿಟ್ಟಿಯಾಗಿ ಹಂಚಿ ಆ ಸಾಲುಗಳಲ್ಲಿ ಅಡಗಿರುವ ಸೌಂದರ್ಯದ ಗುಣಗಾನ ಮಾಡುತ್ತಿದ್ದೇವೆಯೇ ಹೊರತು, ಕನಿಷ್ಠ ಆ ಕರೆಗೆ ಶೇಕಡಾ ಒಂದರಷ್ಟು ಬೆಲೆಯನ್ನೂ ನಾವು ಕೊಡಲಿಲ್ಲ.

ಬಹುಶಃ “ಚಿಂತಕರಿರಲಿ ಸಮಾಜದ ತುಂಬಾ” ಎಂದು ಹೇಳುವ ಕಾಲ ಈಗ ಬಂದಂತಿದೆ.

ಆ ಚಿಂತಕರ ವಿಚಾರವಾಗಿ ಹೇಳುವುದಾದರೆ…

ನಮ್ಮಲ್ಲಿ ಎರಡು ರೀತಿಯ ಚಿಂತಕರು ಕಾಣಿಸುತ್ತಿದ್ದಾರೆ.

ಮೊದಲ ರೀತಿಯ ಚಿಂತಕರು ಇತಿಹಾಸ ವರ್ತಮಾನ ಭವಿಷ್ಯ ಎಲ್ಲವುಗಳ ಶೋಧನೆಗಿಳಿದು ರಾಜಕೀಯವಾಗಿಯೂ ವೈಜ್ಞಾನಿಕವಾಗಿಯೂ ಹಲವು ವಿಚಾರಗಳನ್ನ ಅರಿತವರು ಅಥವಾ ಹಾಗೆ ಅರಿತಿದ್ದೇವೆ ಎಂದು ನಂಬಿಕೊಂಡವರು.

ಈ ಚಿಂತಕರಿಗೆ ತಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವ ಯಾವುದೇ ಮನಸ್ಸಿಲ್ಲ. ಯಾವುದಾದರೊಂದು ಪತ್ರಿಕೆ, ವೇದಿಕೆ ಅಥವಾ ನಾಲ್ಕು ಜನ ಸೇರಿದ ಜಾಗದಲ್ಲಿ ಇವರ ಬೌದ್ಧಿಕ ಅಹಂಕಾರದ ಪ್ರದರ್ಶನಕ್ಕೆ ಅವಕಾಶ ಸಿಕ್ಕರೆ ಸಾಕು, ಅವರೊಳಗಿನ ಚಿಂತಕ ಅಷ್ಟಕ್ಕೇ ಸಮಾಧಾನಿಸಿಕೊಂಡು ತನ್ನ ಕ್ರಾಂತಿ ಇಲ್ಲಿಗೆ ಮುಗಿಯಿತೆಂದು ನಿರ್ಧರಿಸಿಬಿಡುತ್ತಾನೆ.

ಇನ್ನು ಎರಡನೇ ರೀತಿಯ ಚಿಂತಕರು ಮೊದಲ ರೀತಿಯ ಚಿಂತಕರು ಕಟ್ಟಿಕೊಂಡ ಎಲ್ಲಾ ಗೋಡೆಗಳನ್ನು ಒಡೆದುಕೊಂಡು ಒಂದು ಹೆಜ್ಜೆ ಮುಂದಿಡುತ್ತಾರಾದರೂ, ಎದುರಾಳಿ ಶಕ್ತಿಗಳ ದಾಳಿಗೆ ತುತ್ತಾಗಿ ಜೈಲು, ಅವಮಾನ, ಶಕ್ತಿ ಕುಂದಿಸಿಕೊಳ್ಳುವ ಪ್ರಯೋಗಗಳಿಗೆ ಸಿಲುಕಿ ಅಸಹಾಯಕತೆಯಿಂದ ಒಂದು ಕಡೆ ಕೂತುಬಿಡುತ್ತಾರೆ.

ವಿಶ್ವಮಾನವ ಸಂದೇಶ ಸಾರಿದಂಥ ಕುವೆಂಪುರವರು ನೀಡಿದ ವಿಚಾರಕ್ರಾಂತಿಯ ಆಹ್ವಾನವನ್ನ, ನಮ್ಮ ಈ ಕಾಲದ ಯುವಕರು ಈ ಎಲ್ಲಾ ತಡೆಗಳನ್ನು ಬೇಧಿಸಿಕೊಂಡು ಸ್ವೀಕರಿಸಬೇಕಿದೆ.

1974ರ ಆಹ್ವಾನ 2020ರಲ್ಲಿ ನಮ್ಮೆಲ್ಲರನ್ನು ತಲುಪುವ ವೇಳೆಗೆ ಆಹ್ವಾನ ಕೊಟ್ಟ ಚಿಂತಕರೇ, ಒಂದು ಮೇಲ್ಜಾತಿ ಸೂಚಕವಾಗಿ ನಮಗೆ ಕಾಣಿಸುತ್ತಿದ್ದಾರೆ ಎಂದರೆ, “Politics is the first resort of a scoundrel” ಎಂಬ ಹರಿತವಾದ ಮಾತು ಅದೆಷ್ಟು ಸತ್ಯ ಅನ್ನಿಸುತ್ತದೆ ಅಲ್ಲವೇ… ?

ಹೌದು ಅಜ್ಞಾನಜನ್ಯವಾದ ಮತಭಾವನೆ ನಮ್ಮೆಲ್ಲರನ್ನೂ ಆಕ್ರಮಿಸಿ, ವರ್ಣಜಾತಿ ಪಂಥ ಕೋಮು ಪಂಗಡಗಳೆಂಬ ನೂರಾರು ಭೇಧಭಾವನೆಗಳ ಬಿರುಕು ಒಡಕುಗಳಿಗೆ ಸಿಲುಕಿಸಿ ಛಿದ್ರಛಿದ್ರವಾಗುವಂತೆ ಮಾಡಿದೆ.

ಈ ಭೇದಭಾವಗಳೂ ಛಿದ್ರಗಳೂ ಎಲ್ಲಿಯವರೆಗೆ ಇರುತ್ತವೆಯೋ ಅಲ್ಲಿಯವರೆಗೆ ಯಾವ ವಿಚಾರಧಾರೆಗಳೂ, ಯಾವ ವಿಶ್ವಮಾನವ ಕುವೆಂಪುಗಳೂ ನಮ್ಮನ್ನು ಪ್ರಭಾವಿಸುವುದಿಲ್ಲ.

ಮಾರ್ಗದರ್ಶಕ ಮಂತ್ರದೀಪವಾಗಿ ನಮಗೆ ದಾರಿತೋರಿಸುವುದಿಲ್ಲ.

ಅವಶ್ಯವಾಗಿ ಬೇಕಾಗಿರುವ ಶಿಕ್ಷಣ ಸ್ವರೂಪ, ದೇಶಭಾಷಾ ಶಿಕ್ಷಣ ಮಾಧ್ಯಮ, ಅಧಿಕಾರ ಮತ್ತು ಆಡಳಿತದ ವಿಕೇಂದ್ರೀಕರಣ, ನಿರುದ್ಯೋಗ, ಬೆಲೆಏರಿಕೆ ಇತ್ಯಾದಿ ಬಿಸಿಬಿಸಿ ಯಾವ ಸಮಸ್ಯೆಗಳೂ ನಮ್ಮಲ್ಲಿ ಆಗುವ ಚರ್ಚೆಗಳನ್ನು ಮುಟ್ಟುವುದಿಲ್ಲ.

ಇಂತಹ ಪರಿಸ್ಥಿತಿಯ ಆಸ್ತಿಗೆ ಇವತ್ತು ನಾವುಗಳೆಲ್ಲಾ ಹಕ್ಕುದಾರರು.

ಇದೆಲ್ಲವನ್ನೂ ವಿಮರ್ಶಿಸಿ ನೋಡುವುದಾದರೆ ಈ ಹೊತ್ತಿಗೆ ಸಮುದಾಯಿಕವಾಗಿ ನಮಗೆ ಬೇಕಾಗಿರುವುದು ಪ್ರಭುತ್ವವನ್ನು ವಿರೋಧಿಸುವಂತಹ ಚಿಂತಕರ ಸಮೂಹ.

ವಚನಕಾರರಿಂದ ಹಿಡಿದು ಬಸವಣ್ಣ, ಗಾಂಧಿ, ಟ್ಯಾಗೋರ್ , ಕುವೆಂಪುರನ್ನು ಒಳಗೊಂಡು ಪ್ರಭುತ್ವವನ್ನು ಪ್ರಶ್ನಿಸುವಂಥಹ ಚಿಂತಕರು ಸಾಲುಗಟ್ಟಿ ನಿಲ್ಲುತ್ತಾರೆ.

ಇಲ್ಲಿ ಒಂದು ಪ್ರಮುಖ ಅಂಶವನ್ನು ಗಮನಿಸಿ ನೋಡುವುದಾದರೆ ಈ ಸಾಲಿನಲ್ಲಿ ಯಾರೂ ಕೂಡಾ ರಾಜಕೀಯ ಕ್ರಾಂತಿಗೆ ಆಹ್ವಾನ ನೀಡದೆ ವಿಚಾರ ಕ್ರಾಂತಿಗೆ ಆಹ್ವಾನ ನೀಡಿರುವುದು.

ರಾಜಕೀಯ ಕ್ರಾಂತಿಗಳು ರಾತ್ರೋರಾತ್ರಿ ವ್ಯವಸ್ಥೆಗಳನ್ನು ಬದಲಿಸುವಂಥ ಅಪಾಯಗಳನ್ನು ಮುಂದಿಡುತ್ತವೆ, ಮತ್ತು ಸರ್ವಾಧಿಕಾರಿಗಳನ್ನು ಸೃಷ್ಟಿಸುತ್ತವೆ.

ಈ ರೀತಿಯ ರಾಜಕೀಯ ಕ್ರಾಂತಿಗಳನ್ನು ಹಲವಾರು ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಕಾಣಬಹುದು.

ಕುವೆಂಪುರಂಥ ಚಿಂತಕರು ಈ ಎಲ್ಲಾ ಸಾಧ್ಯತೆಗಳನ್ನು ಮುಂಚಿತವಾಗಿಯೇ ಗ್ರಹಿಸಿ ಸೂಕ್ಷ್ಮಮತಿಗಳಾಗಿ ರಾಜಕೀಯ ಕ್ರಾಂತಿಯ ಕಡೆಗೆ ಮುಖ ಮಾಡದಲೇ, ವಿಚಾರ ಕ್ರಾಂತಿಗೆ ಆಹ್ವಾನ ನೀಡಿದ್ದನ್ನ ನಾವೆಲ್ಲರೂ ಅಷ್ಟೇ ಸೂಕ್ಷ್ಮತೆಯಿಂದ ಅರಿತುಕೊಳ್ಳಬೇಕು.

ಹಾಗೆ ನೋಡಿದರೆ ಸಮೂಹ ಕೇಂದ್ರೀತ ವ್ಯವಸ್ಥೆಗಳು ಈ ಮುಂಚಿನಿಂದಲೂ ವ್ಯಕ್ತಿ ಕೇಂದ್ರಿತ ಸಂವಿಧಾನವನ್ನು ಆಕ್ರಮಿಸಿ ಅದನ್ನು ಕೊಂದು ತನ್ನ ಪ್ರಭುತ್ವ ಸಾಧಿಸಲು ಪ್ರಯತ್ನಿಸುತ್ತಲೇ ಇವೆ.

ಕಳೆದ 20, 30 ವರ್ಷಗಳಿಂದ ಈ ಪ್ರಯತ್ನಗಳು ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿವೆ.

ಅಂಬೇಡ್ಕರರು ರಚಿಸಿದ ನಮ್ಮ ಸಂವಿಧಾನ, ವ್ಯಕ್ತಿ ಕೇಂದ್ರೀತವಾದದ್ದು.

ಗಾಂಧಿಯ ಆದರ್ಶಗಳು ವ್ಯಕ್ತಿ ಕೇಂದ್ರಿತವಾಗಿ ಮೂಡಿದ್ದಂತವು.

ಕುವೆಂಪು ನೀಡಿದ ವಿಚಾರಕ್ರಾಂತಿಯು ವ್ಯಕ್ತಿ ಕೇಂದ್ರಿತವಾಗಿ ರೂಪುಗೊಂಡಿದ್ದು.

ಇಲ್ಲಿ ನಮಗೆಲ್ಲಾ ಬೇಕಿರುವುದು, ಗಾಂಧಿ ಮತ್ತು ಕುವೆಂಪುರ ವ್ಯಕ್ತಿ ಕೇಂದ್ರಿತ ಕ್ರಾಂತಿ ಮತ್ತು ಅಂಬೇಡ್ಕರರ ಪ್ರತಿಪಾದಿಸಿದ ಸಂವಿಧಾನಿಕ ನೈತಿಕತೆಯೇ ಹೊರತು ರಾಜಕೀಯ ಕ್ರಾಂತಿಯಲ್ಲ.

ಒಕ್ಕೂಟ ರಾಷ್ಟ್ರದ ಕಲ್ಪನೆಯಲ್ಲಿ ವ್ಯಕ್ತಿ ಬದಲಾಗುವುದೇ ಅತೀದೊಡ್ಡ ಕ್ರಾಂತಿ ಎಂಬ ಮಾತು ಅಷ್ಟು ಸುಲಭಕ್ಕೆ ಸುಳ್ಳಾಗುವುದೂ ಇಲ್ಲ. ವ್ಯಕ್ತಿ ಮುನ್ನೆಲೆಗೆ ಬರುವುದೇ ನಮ್ಮ ಬೆಳವಣಿಗೆಯ ಮೂಲ.

” ಓ ನನ್ನ ಚೇತನ,

ಆಗು ನೀ ಅನಿಕೇತನ”

ಎನ್ನುವ ಕುವೆಂಪುರವರ ಸಾಲಿನಲ್ಲಿ ಧಾರ್ಮಿಕ , ಭಾಷಾ ಮತ್ತು ಪ್ರಾದೇಶಿಕ ಅಥವಾ ಜಾತಿ ಪಂಗಡಗಳ ಬೇಧ ಭಾವಗಳಿಂದ ಅತೀತವಾಗಿ ಭಾರತದ ಎಲ್ಲಾ ಜನತೆಯಲ್ಲಿ ಸಾಮರಸ್ಯವನ್ನು ಮತ್ತು ಸಮಾನ ಬ್ರಾತೃತ್ವದ ಭಾವನೆಯನ್ನು ಬೆಳೆಸುವ ಸಂವಿಧಾನದ ಮೂಲಕರ್ತವ್ಯಗಳ ಒಳನೋಟವಿದೆ.

“ನೂರು ಮತದ ಹೊಟ್ಟ ತೂರಿ,

ಎಲ್ಲ ತತ್ವದೆಲ್ಲೆ ಮೀರಿ,

ನಿರ್ದಿಗಂತವಾಗಿ ಏರಿ, ”

ಎನ್ನುವ ಸಾಲುಗಳು ನಮ್ಮ ಸಾರ್ವಭೌಮತ್ವವನ್ನೂ ಐಕ್ಯತೆಯನ್ನು ಅಖಂಡತೆಯನ್ನೂ ಎತ್ತಿ ಹಿಡಿದಿವೆ.

“ವಿಚಾರ ಕ್ರಾಂತಿಗೆ ಆಹ್ವಾನ” ಎನ್ನುವ ಒಂದು ಚಿಂತನೆಯ ಭಾಷಣ ಇಷ್ಟು ವರ್ಷಗಳು ಕಳೆದಮೇಲೂ ನಮ್ಮನ್ನು ತಲುಪಲು ಹರಸಾಹಸ ಪಡುತ್ತಿದೆ ಎಂದಮೇಲೆ, ಅದರ ಪ್ರಭಾವ ಸಮಾಜದ ಮೇಲೆ ಬೀರುವುದಕ್ಕೆ ಇನ್ನೆಷ್ಟು ಕಾಲ ಹಿಡಿದೀತು ಎಂಬುದೇ ಈ ಹೊತ್ತಿನ ತಲ್ಲಣ.

(ಲೇಖಕರು ಯುವ ಬರಹಗಾರರು ಮತ್ತು ಸಾಮಾಜಿಕ ಕಾರ್ಯಕರ್ತರು. ಅಭಿಪ್ರಾಯಗಳು ವಯಕ್ತಿಕವಾದವುಗಳು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...