ಜನವರಿ 26ರ ಗಣರಾಜ್ಯೋತ್ಸವ ದಿನದಂದು ರೈತರು ಕೆಂಪುಕೋಟೆಯಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಿದ ಸಂದರ್ಭಧಲ್ಲಿ ಗಲಭೆಗೆ ಕಾರಣರಾದವರ ವಿರುದ್ಧ ದೆಹಲಿ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಾದ ಮಾಹಿತಿ ತಿಳಿಯುತ್ತಿದ್ದಂತೆಯೇ ಟ್ರ್ಯಾಕ್ಟರ್ ಪರೇಡ್ ನಡೆಯುವ ವೇಳೆ ಕೆಂಪುಕೋಟೆಯಲ್ಲಿ ಕಾಣಿಸಿಕೊಂಡಿದ್ದ ನಟ ದೀಪ್ ಸಿಧು ತಲೆಮರೆಸಿಕೊಂಡಿದ್ದಾರೆ ಎಂದು ದಿವೈರ್.ಇನ್ ವರದಿ ಮಾಡಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ದಿವೈರ್.ಇನ್ ವರದಿ ಮಾಡಿದ್ದು ಭಾರತೀಯ ದಂಡ ಸಂಹಿತೆ ಸೆಕ್ಷನ್ 124ಎ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ. ಮತ್ತು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಗಲಭೆ ಪ್ರಕರಣದಲ್ಲಿ ನಟ ದೀಪು ಸಿಧು ಮತ್ತು ಗ್ಯಾಂಗ್ ಸ್ಟಾರ್ ಲಖ ಸಿಧಾನ ಭಾಗಿಯಾಗಿದ್ದಾರೆಂಬುದನ್ನು FIRನಲ್ಲಿ ಉಲ್ಲೇಖಿಸಲಾಗಿದೆ. ಹಲವು ರೈತ ಸಂಘಟನೆಗಳು ಸಿಧು ಮತ್ತು ಸಿಧಾನ ಇಡೀ ರ್ಯಾಲಿಯನ್ನು ದಿಕ್ಕುತಪ್ಪಿಸಿದರು. ಟ್ರ್ಯಾಕ್ಟರ್ ಪರೇಡ್ ಅನ್ನು ಹೈಜಾಕ್ ಮಾಡಿದ್ದರು. ಗಲಭೆಗೆ ಸಿಧು ಪ್ರಚೋದಿಸಿದ್ದರು ಎಂದು ಆರೋಪಿಸಿದ್ದವು. ರೈತ ಸಂಘಟನೆಗಳ ಒತ್ತಡಕ್ಕೆ ಮಣಿದಿರುವ ಪೊಲೀಸರು ಎಫ್ಐಆರ್ ನಲ್ಲಿ ಸಿಧು ಮತ್ತು ಸಿಧಾನ ಹೆಸರನ್ನು ಉಲ್ಲೇಖಿಸಿದ್ದಾರೆ.
FIRನಲ್ಲಿ ಸಾರ್ವಜನಿಕ ಸ್ವತ್ತು ಹಾನಿ ತಡೆ ಕಾಯ್ದೆ, ಪುರಾತನ ಸ್ಮಾರಕ ಮತ್ತು ಭಾರತೀಯ ಪುರಾತತ್ವ ಸ್ಥಳ ಸಂರಕ್ಷಣಾ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆಯು ಸೇರಿದಂತೆ ಹಲವು ಕಾನೂನುಗಳಡಿ ಪ್ರಕರಣ ದಾಖಲಿಸಲಾಗಿದೆ. ಹತ್ಯಾಯತ್ನ, ರಾಬರಿ, ಡಕಾಯಿತಿ, ಸಾರ್ವಜನಿಕ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ ಕಲಂಗಳನ್ನು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಈ ನಡುವೆ ಸಿಂಘು ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆಂದು ಎಎನ್ಐ ವರದಿ ಮಾಡಿದೆ. ರೈತರ ಪ್ರತಿಭಟನೆ ತೆರವುಗೊಳಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಸ್ಥಳೀಯರು ಬಿಜೆಪಿ ಬೆಂಬಲಿಗರು ಮತ್ತು ಆರ್.ಎಸ್.ಎಸ್. ಹಿನ್ನೆಲೆಯುಳ್ಳವರು ಎಂದು ವರದಿ ಹೇಳಿದೆ.
ಭಾರತೀಯ ಪುರಾತತ್ವ ಇಲಾಖೆ ಜನವರಿ 31ರವರೆಗೆ ಕೆಂಪುಕೋಟೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಆದರೆ ಕೆಂಪುಕೋಟೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಿರುವ ಬಗ್ಗೆ ಯಾವುದೇ ಕಾರಣ ನೀಡಿಲ್ಲ ಎಂದು ವರದಿ ತಿಳಿಸಿದೆ.
ಮಹಾರಾಷ್ಟ್ರ ಮೂಲದ 55 ವರ್ಷದ ರೈತರೊಬ್ಬರು ಹರಿಯಣಾ-ರಾಜಸ್ಥಾನ ಗಡಿಯಲ್ಲಿ ಮೃತಪಟ್ಟಿದ್ದಾರೆ. ಶೀತದ ಕಾರಣದಿಂದ ಈ ಸಾವು ಉಂಟಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.
ಇದನ್ನೂ ಓದಿ: ಟ್ರಾಕ್ಟರ್ ರ್ಯಾಲಿಯ ಅಹಿತಕರ ಘಟನೆಯಲ್ಲಿ ಕೇಜ್ರಿವಾಲ್ ಕೈವಾಡ: BJP ಸಂಸದ ಗೌತಮ್ ಗಂಭೀರ್ ಆರೋಪ