ರೈತರ ಗಣರಾಜ್ಯೋತ್ಸವ ಆಚರಣೆಯಲ್ಲಿ ಕೆಂಪುಕೋಟೆ ಬಳಿ ನಡೆದ ಅಹಿತಕರ ಘಟನೆಗೆ ಕಾರಣರಾದವರೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೈಜೋಡಿಸಿದ್ದಾರೆ ಎಂದು ಬಿಜೆಪಿ ಸಂಸದ ಮಾಜಿ ಕ್ರಿಕೆಟಿಗ ಗೌತಮ್ ಗಂಬೀರ್ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ರೈತರು ಕಳೆದ ಎರಡು ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ಶಾಂತಿಯುತವಾಗಿ ಹೋರಾಟ ನಡೆಸಿದ್ದಾರೆ. ಆದರೆ, ಜನವರಿ 26 ರಂದು ಆಯೋಜಿಸಿದ್ದ ಟ್ರಾಕ್ಟರ್ ರ್ಯಾಲಿ ವೇಳೆ ಕೆಂಪುಕೋಟೆಯ ಬಳಿ ಅಹಿತಕರ ಘಟನೆ ನಡೆದಿತ್ತು.
ಈ ಘಟನೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿರಿರುವ ಗೌತಮ್ ಗಂಭೀರ್, “ರೈತ ಹೋರಾಟಕ್ಕೆ ಪಂಜಾಬ್ ರಾಜ್ಯದಲ್ಲಿ ಬಹುದೊಡ್ಡ ಬೆಂಬಲ ಇದೆ. ಹೀಗಾಗಿ ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷವನ್ನು ಬೆಳೆಸುವ ಸಲುವಾಗಿ, ಅರವಿಂದ ಕೇಜ್ರಿವಾಲ್ ಈ ಅಹಿತಕರ ಘಟನೆಯಲ್ಲಿ ಪಾಲ್ಗೊಂಡವರ ಜೊತೆ ಕೈಜೋಡಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ರೈತ ಚಳುವಳಿಯನ್ನು ಕೆಣಕುವ ಸಂಚು ಈಗ ಬಹಿರಂಗವಾಗಿದೆ – ರೈತ ಒಕ್ಕೂಟ
ಪಂಜಾಬ್ ರಾಜ್ಯದಲ್ಲಿ ಎಎಪಿ ಎರಡನೇ ಅತಿದೊಡ್ಡ ಪಕ್ಷವಾಗಿದ್ದು, ಪ್ರಮುಖ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ.
ಗುರುವಾರ ದೆಹಲಿಯಲ್ಲಿ ನಡೆದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ, “ಜನವರಿ 26 ರಂದು ನಡೆದದ್ದು ದುರದೃಷ್ಟಕರ. ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಆದರೆ ಆ ಘಟನೆಯಿಂದ ಪ್ರತಿಭಟನೆ ಕೊನೆಗೊಳ್ಳುವುದಿಲ್ಲ. ಆತಂಕಗಳು ಇನ್ನೂ ಅಸ್ತಿತ್ವದಲ್ಲಿವೆ, ಆದ್ದರಿಂದ ನಾವೆಲ್ಲರೂ ರೈತರನ್ನು ಶಾಂತಿಯುತವಾಗಿ ಬೆಂಬಲಿಸಬೇಕು” ಎಂದು ಕರೆ ನೀಡಿದ್ದರು.
ಇದನ್ನೂ ಓದಿ: ರೈತ ಹೋರಾಟ: ಪಾರ್ಲಿಮೆಂಟ್ ಚಲೋ ಮೂಂದೂಡಿಕೆ – ಜ.30ಕ್ಕೆ ಉಪವಾಸ ಸತ್ಯಾಗ್ರಹ
ದೆಹಲಿ ರೈತರ ಟ್ರ್ಯಾಕ್ಟರ್ ರ್ಯಾಲಿಯಲ್ಲಿನ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಯೋಗೇಂದ್ರ ಯಾದವ್ ಸೇರಿದಂತೆ ಸುಮಾರು 20 ರೈತ ಮುಖಂಡರಿಗೆ ದೆಹಲಿ ಪೊಲೀಸ್ ನೋಟಿಸ್ ನೀಡಿದೆ.
ಈ ಕುರಿತು ಎಎನ್ಐ ಟ್ವೀಟ್ ಮಾಡಿದ್ದು, “ಯೋಗೇಂದ್ರ ಯಾದವ್, ಬಲ್ದೇವ್ ಸಂಗ್ ಸಿರ್ಸಾ, ಬಲ್ಬೀರ್ ಎಸ್ ರಾಜೇವಾಲ್ ಸೇರಿದಂತೆ 20 ರೈತ ಮುಖಂಡರಿಗೆ ದೆಹಲಿ ಪೊಲೀಸರು ನೋಟಿಸ್ ನೀಡಿದ್ದಾರೆ. ಪೊಲೀಸರೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ 3 ದಿನಗಳೊಳಗೆ ಪ್ರತಿಕ್ರಿಯಿಸುವಂತೆ ನೋಟಿಸ್ ನೀಡಲಾಗಿದೆ” ಎಂದು ವರದಿಯಾಗಿದೆ.
ಇದನ್ನೂ ಓದಿ: ಸರ್ಕಾರ ಮತ್ತು ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿ ಸೇರಿ ಪಿತೂರಿ ನಡೆಸಿವೆ: ರೈತ ಒಕ್ಕೂಟ