ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಕರ್ನಾಟಕದಲ್ಲಿಯೇ ಮೊದಲು ಜಾರಿಗೊಳಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ನಿನ್ನೆ ಘೋಷಿಸಿದ್ದಾರೆ. ಆದರೆ ಅದೇ ದಿನ ಸಾವಿರಾರು ವಿದ್ಯಾರ್ಥಿಗಳು NEP ಜಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಟ್ವಿಟ್ಟರ್ನಲ್ಲಿ #RejectNEP2020 ಟ್ರೆಂಡ್ ಆಗಿದೆ.
ಸದ್ಯದಲ್ಲೇ ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಕ್ಯಾಬಿನೆಟ್ನಲ್ಲಿ ಅನುಮೋದನೆ ಪಡೆದಿದೆ. ಅದರಲ್ಲೂ ಕರ್ನಾಟಕ ಸರ್ಕಾರ ತಾನೇ ಮೊದಲು ಹೊಸ ಶಿಕ್ಷಣ ನೀತಿ ಜಾರಿಗೆ ತರುವುದಾಗಿ ಘೋಷಿಸಿದೆ. ಆದರೆ ಹೊಸ ಶಿಕ್ಷಣ ನೀತಿಯ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಹೊಸ ಶಿಕ್ಷಣ ನೀತಿಯು ರಾಷ್ಟ್ರೀಕರಣವಲ್ಲ ಅದು ವ್ಯಾಪಾರೀಕರಣ ಎಂದು ಆರೋಪಿಸಿರುವ ಅವರು, ಉಚಿತ, ಸಮಾನ, ಗುಣಮಟ್ಟದ ಶಿಕ್ಷಣಕ್ಕಾಗಿ ಆಗ್ರಹಿಸಿದ್ದಾರೆ.
ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ, ಸಂವಿಧಾನಕ್ಕೆ ವಿರುದ್ಧವಾಗಿ, ಶೈಕ್ಷಣಿಕ ವಲಯದ ಸರ್ವಾಧಿಕಾರಗಳನ್ನು ಕೇಂದ್ರ ಸರ್ಕಾರದ ಕೈಯಲ್ಲಿ ಇಟ್ಟ ಶಿಕ್ಷಣ ನೀತಿ ಇದಾಗಿದೆ. ವೈವಿದ್ಯತೆಯಲ್ಲಿ ಏಕತೆಯೆಂಬ ಅಂಶವನ್ನು ಕೈಬಿಟ್ಟು ಹಿಂದಿ ಹೇರಿಕೆ ಮತ್ತು ಸಂಸ್ಕೃತ ಹೇರಿಕೆಗೆ ಅವಕಾಶ ನೀಡಿದ ಶಿಕ್ಷಣ ನೀತಿ ಇದಾಗಿದೆ ಎಂದು ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.
#RejectNEP2020 pic.twitter.com/xPsOcgehD0
— KVS (@kvs_karnataka) August 24, 2020
ಮೇಲ್ಜಾತಿಯ, ಪುರುಷ ಪ್ರಧಾನವಾದ ಪುರುತನ ಸಿದ್ದಾಂತವನ್ನು ಗುರುಕುಲಗಳ ಹೆಸರಿನಲ್ಲಿ ಪದೇ ಪದೇ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ರಾಷ್ಟ್ರೀಯ ಸಂಶೋಧನಾ ಫೌಂಡೇಷನ್ ಹೆಸರಿನಲ್ಲಿ ದೇಶದ್ಯಾಂತ ನಡೆಯುವ ಸಂಶೋಧನೆಗಳನ್ನು ನಿಯಂತ್ರಿಸುವ ದುರುದ್ಧೇಶ ಹೊಂದಿದೆ ಎಂದು ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.
ಶಿಕ್ಷಣದ ಖಾಸಗೀಕರಣ ಕೇಸರೀಕರಣ ಕೇಂದ್ರೀಕರಣ ಹಾಗೂ ವ್ಯಾಪಾರೀಕರಣ ಹೆಚ್ಚು ಮಾಡುವ NEP2020 ಗೆ ಧಿಕ್ಕಾರ.#RejectNEP2020#SFIKarnataka
— SFI Karnataka (@SfiKarnataka) August 24, 2020
ವಿಶ್ವವಿದ್ಯಾಲಯಲಯಗಳಿಗೆ ಸ್ವಾತಂತ್ರ್ಯ ಇರಬೇಕೆಂದು ಹೇಳುತ್ತಲೇ ಹೊರಗಿನ ಖಾಸಗಿಯವರ ಹಿಡಿತಕ್ಕೆ ನೀಡುವ ಗೊಂದಲಕಾರಿ ಅಂಶಗಳನ್ನು ಒಳಗೊಂಡಿರುವ ಶಿಕ್ಷಣ ನೀತಿ ನಿಷ್ಪ್ರಯೋಜಕ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳ ಆಗಲಿದೆ ಎಂದು ತೋರಿಸುತ್ತೆ ಮತ್ತೆ ಶಿಕ್ಷಣದ ವ್ಯಾಪಾರವನ್ನು ಬೆಂಬಲಿಸುವ ಅಂಶಗಳನ್ನೇ ತುರುಕಲಾಗಿದೆ ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆ ತನ್ನ ಟ್ವೀಟ್ನಲ್ಲಿ ತಿಳಿಸಿದೆ.
ಇನ್ನು ನಿನ್ನೆಯಿಂದ ಸಾಮಾಜಿಕ ಜಾಲತಾಣ ಟ್ವಿಟ್ಟರ್ನಲ್ಲಿ #RejectNEP2020 ಎಂಬುದು ಟ್ರೇಂಡಿಂಗ್ನಲ್ಲಿದೆ. ಡಾ. ಬಿ.ಆರ್.ಅಂಬೇಡ್ಕರ್, ಮಹಾತ್ಮಾ ಜ್ಯೋತಿಬಾಪುಲೆ ಅವರ ನುಡಿಗಳನ್ನು ಆಧರಿಸಿ ಸಾವಿರಾರು ಮಂದಿ ಟ್ವೀಟ್ ಮಾಡಿದ್ದಾರೆ. ಚಿಂತಕರು, ಚಲನಚಿತ್ರ ನಟ, ನಟಿಯರು, ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಹೊಸ ಶಿಕ್ಷಣ ನೀತಿಯ ವಿರುದ್ಧ ದನಿ ಎತ್ತಿದ್ದಾರೆ.
ದುಡ್ಡಿದವರಿಗೆ ಮಾತ್ರ ಶಿಕ್ಷಣ ಎಂಬುದನ್ನು ಪರೋಕ್ಷವಾಗಿ ಬೆಂಬಲಿಸುವ ಹಣವಂತರಿಗೆ ಅನುಕೂಲವಾದ ಶಿಕ್ಷಣ ನೀತಿ ನಮಗೆ ಬೇಡ. ಉಚಿತ ಶಿಕ್ಷಣದ ಬಗ್ಗೆ ಉಸಿರೆತ್ತದ ರಾಷ್ಟ್ರೀಯ ಶಿಕ್ಷಣ ಕಾಯ್ದೆ 2020ನ್ನು ತಿರಸ್ಕರಿಸೋಣ ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸಂಚಾಲಕರಾದ ಸರೋವರ್ ಬೆಂಕಿಕೆರೆ ತಿಳಿಸಿದ್ದಾರೆ.
ಶಿಕ್ಷಣದ ಕೇಂದ್ರಿಕರಣ, ಖಾಸಗೀಕರಣ ಮತ್ತು ಶಿಕ್ಷಣವನ್ನು ಕೇಸರೀಕರಣ ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ಕರ್ನಾಟಕದಲ್ಲಿ ಮೊದಲು ಜಾರಿಗೆ ತರುತ್ತೇವೆ ಎನ್ನುವುದಕ್ಕೆ ಮುಖ್ಯ ಕಾರಣ ನಮ್ಮ ಬೆಂಗಳೂರು ಬಹುದೊಡ್ಡ ಶಿಕ್ಷಣ ಕೇಂದ್ರವಾಗಿರುವುದು. ವಿದೇಶಿ ಮತ್ತು ಅಂತಾರಾಜ್ಯ ವಿದ್ಯಾರ್ಥಿಗಳಿಗಾಗಿ ಈ ನೀತಿ ಜಾರಿ ಮಾಡಲಾಗಿದೆ. ಶಿಕ್ಷಣದ ವ್ಯಾಪಾರೀಕರಣ ದೊಡ್ಡಮಟ್ಟದಲ್ಲಿದೆ. ಹಾಗಾಗಿ ನಾವು ಇದಕ್ಕೆ ಅವಕಾಶ ನೀಡುವುದಿಲ್ಲ. ತಕ್ಕ ಪ್ರತಿರೋಧ ನೀಡಿ ಹೋರಾಟ ಮಾಡುತ್ತೇವೆ ಎಂದು ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸದೇವರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಇಷ್ಟೊಂದು ವಿರೋಧದ ನಡುವೆಯೂ ಕರ್ನಾಟಕದಲ್ಲಿ ನಾವೇ ಮೊದಲು NEP ಜಾರಿಗೆ ತರುತ್ತೇವೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿಕೊಂಡಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಆಡಳಿತಾತ್ಮಕ ಸುಧಾರಣೆಗಳನ್ನು ತರಲು ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಉನ್ನತ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಈಗಾಗಲೇ ಹಲವು ಸಭೆಗಳನ್ನು ನಡೆಸಿದ್ದು, ಅದರ ಅಂತಿಮ ಸಲಹೆಗಳ ನಂತರ ಹೊಸ ನೀತಿಯನ್ನು ಅಳವಡಿಸಲಾಗುತ್ತದೆ. ಈ ಮೂಲಕ ದೇಶದಲ್ಲೇ ಎನ್ಇಪಿ 2020 ಅಳವಡಿಸಿಕೊಂಡ ಮೊದಲ ರಾಜ್ಯ ಕರ್ನಾಟಕವಾಗಲಿದೆ ಎಂದು ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ನೂತನ ಶಿಕ್ಷಣ ನೀತಿಗೆ ಭಾರೀ ವಿರೋಧ : TNRejectsNEP ಹ್ಯಾಷ್ಟ್ಯಾಗ್ ಟ್ರೆಂಡ್