ಶೇನ್ ವಾರ್ನ್ ಕ್ರಿಕೆಟ್ ಜಗತ್ತು ಕಂಡ ಪ್ರತಿಭಾವಂತ ಲೆಗ್ಸ್ಪಿನ್ ಬೌಲರ್. ಒಂದು ಕಾಲದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿದ್ದವರು ಶೇನ್ ವಾರ್ನ್. ಎದುರಾಳಿ ತಂಡ ಯಾವುದೇ ಇರಲಿ ಗೆಲುವು ಮಾತ್ರ ಆಸ್ಟ್ರೇಲಿಯಾ ತಂಡದ್ದೆ ಎನ್ನುವ ಅಭಿಪ್ರಾಯವನ್ನು ಸಾರ್ವತ್ರಿಕ ಮಾಡಿದ್ದರಲ್ಲಿ ವಾರ್ನ್ ಪಾಲು ದೊಡ್ಡದಿದೆ. ಕ್ರಿಕೆಟ್ ಆಡುವ ಪಶ್ಚಿಮದ ದೇಶಗಳಲ್ಲಿ ಹೆಸರಾಂತ ವೇಗದ ಬೌಲರ್ಗಳು ಮುನ್ನೆಲೆಗೆ ಬಂದರು. ವಾಲ್ಷ್, ಅಂಬ್ರೋಸ್, ಮೆಕ್ಗ್ರಾತ್, ಬ್ರೆಟ್ಲೀ, ಶಾನ್ ಪೊಲಾಕ್, ಮಖಾಯಾ ಎಂಟಿನಿ, ಶೇನ್ಬಾಂಡ್, ಡರೆಲ್ ಟಫಿ, ಹೀತ್ ಸ್ಟ್ರೀಕ್, ಓಲಾಂಗ, ಡೇಲ್ಸ್ಟೇನ್ ಹೀಗೆ ಈ ಯಾದಿ ಸಾಗುತ್ತದೆ.
ಸ್ಪಿನ್ ಬೌಲಿಂಗ್ನಲ್ಲಿ ವಾರ್ನ್ ಪಡೆದಷ್ಟು ಪ್ರಸಿದ್ಧಿಯನ್ನು ಪಶ್ಚಿಮದ ದೇಶದ ಯಾವ ಸ್ಪಿನ್ನರ್ ಕೂಡ ಇದುವರೆಗೂ ಪಡೆಯಲು ಸಾಧ್ಯವಾಗಿಲ್ಲ. ಇಂಗ್ಲೆಂಡಿನ ಮೈಕ್ ಗ್ಯಾಟಿಂಗ್ಗೆ ವಾರ್ನ್ ಹಾಕಿದ ಒಂದು ಎಸೆತ ಶತಮಾನದ ಎಸೆತ ಎನಿಸಿಕೊಂಡಿದೆ. ಬಹುಶಃ ಅವತ್ತು ಗ್ಯಾಟಿಂಗ್ ಅಷ್ಟೆ ಅಲ್ಲ ದೇವರೆ ಕ್ರಿಸ್ನಲ್ಲಿ ಇದ್ದಿದ್ದರೂ ವಾರ್ನ್ನ ಆ ಎಸೆತದಿಂದ ಬೌಲ್ಡ್ ಆಗುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ.
ವಾರ್ನ್ ಚೆಂಡು ಕೈಗೆ ಬಂದ ಕೆಲವೆ ಸೆಕೆಂಡ್ಗಳಲ್ಲಿ ಬ್ಯಾಟ್ಸ್ಮೆನ್ ಫೇಸ್ರೀಡ್ ಮಾಡಿಬಿಡುತ್ತಿದ್ದ. ಬ್ಯಾಟ್ಸ್ಮೆನ್ ಮೈಮರೆಯುವ ಸೆಮಿಸೆಕೆಂಡ್ ಸಾಕಿತ್ತು ವಾರ್ನ್ಗೆ, ಅಷ್ಟರಲ್ಲಿ ಆ ಬ್ಯಾಟ್ಸ್ಮೆನ್ ವಾರ್ನ್ನ ಸ್ಪಿನ್ ಬಲೆಗೆ ಬಿದ್ದಿರುತ್ತಿದ್ದ. ವಾರ್ನ್ನ ಈ ಸೈಕಲಾಜಿಕಲ್ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದ್ದು ಸಚಿನ್ ತೆಂಡೂಲ್ಕರ್. ಶಾರ್ಜಾದಲ್ಲಿ ವಾರ್ನ್ ಎಸೆತಗಳಿಗೆ ಸಚಿನ್ ಹೊಡೆದ ಸಿಕ್ಸರ್ಗಳು ನನ್ನನ್ನು ನಿದ್ದೆಯಲ್ಲೂ ಬೆಚ್ಚಿಬೀಳಿಸುತ್ತಿದ್ದವು ಎಂದು ವಾರ್ನ್ ಹೇಳಿಕೊಂಡಿದ್ದ.
ಶೇನ್ ವಾರ್ನ್ ಪ್ರತಿಭಾವಂತ ಎನ್ನುವುದರಲ್ಲಿ ಅನುಮಾನವಿಲ್ಲ, ಆದರೆ ಶೇನ್ ವಾರ್ನ್ನ ಸಮಕಾಲೀನ ಕ್ರಿಕೆಟಿಗನಾಗಿದ್ದ ಶ್ರೀಲಂಕಾದ ಮುತ್ತಯ್ಯ ಮುರುಳೀಧರನ್ನಿಂದ ವಾರ್ನ್ಗೆ ತೀವ್ರವಾದ ಪೈಪೋಟಿ ಇತ್ತು. ಆದರೆ ಮುರುಳೀಧರನ್ ಬೌಲಿಂಗ್ ಶೈಲಿಯ ಬಗ್ಗೆ ಇದ್ದ ಆರೋಪಗಳು ಕೂಡ ಪರೋಕ್ಷವಾಗಿ ವಾರ್ನ್ ಖ್ಯಾತಿಯನ್ನು ಹೆಚ್ಚಿಸಲು ಸಹಕಾರಿಯಾಯಿತು.
ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಸೇರಿ ಸಾವಿರ ವಿಕೆಟ್ಗಳನ್ನು ಪಡೆದ ಖ್ಯಾತಿ ವಾರ್ನ್ನದು. ಆತ ಮಹಾನ್ ಕ್ರಿಕೆಟಿಗ ಎಂದು ಹೇಳಲು ನಾನು ಸ್ವಲ್ಪವೂ ಯೋಚಿಸುವುದಿಲ್ಲ ಎನ್ನುವ ಸುನಿಲ್ ಗಾವಸ್ಕರ್ ಮಾತಿಗೆ ಮಹತ್ವವಿದೆ. 2000ನೇ ಇಸವಿಯಲ್ಲಿ ಕ್ರಿಕೆಟ್ ಪರಿಣಿತರ ಸಮಿತಿಗೆ ಶತಮಾನದ ಐದು ಜನ ಕ್ರಿಕೆಟರ್ಗಳಲ್ಲಿ ಒಬ್ಬರಾಗಿ ಆಯ್ಕೆಯಾದದ್ದು ವಾರ್ನ್ ಹೆಗ್ಗಳಿಕೆ. ವಿಶೇಷವೇನೆಂದರೆ ಆ ಸಮಯದಲ್ಲಿ ವಾರ್ನ್ ಇನ್ನೂ ಆಸ್ಟ್ರೇಲಿಯಾ ಪರವಾಗಿ ಕ್ರಿಕೆಟ್ ಆಡುತ್ತಿದ್ದರು. ಇದೂವರೆಗೂ ಆ ಗೌರವ ಸಿಕ್ಕ ಏಕೈಕ ಬೌಲರ್ ವಾರ್ನ್. ಸುನಾಮಿಯಿಂದ ನಿರಾಶ್ರಿತರಾದವರಿಗೆ ಸಹಾಯ ಮಾಡಲು ಮೆಲ್ಬರ್ನ್ನಲ್ಲಿ ಒಂದು ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗಿತ್ತು, ಆ ತಂಡದಲ್ಲಿ ಶೇನ್ ವಾರ್ನ್ ಇದ್ದರು. ಇಷ್ಟೇ ಅಲ್ಲದೆ ಸುನಾಮಿಯ ದುಷ್ಪರಿಣಾಮಕ್ಕೆ ಒಳಗಾದ ಜನರಿಗೆ ಸಹಾಯ ಮಾಡಲು ತಮ್ಮ ದೀರ್ಘಾವಧಿಯ ಪ್ರತಿಸ್ಪರ್ಧಿ ಮುತ್ತಯ್ಯ ಮುರುಳೀಧರನ್ ಜೊತೆ ವಾರ್ನ್ ಕೈಜೋಡಿಸಿದರು. ಸುನಾಮಿ ದುರಂತದಿಂದ ಹಾನಿಗೊಳಗಾದ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವನ್ನು ಸುಸ್ಥಿತಿಗೆ ತರಲು ವಾರ್ನ್ ಚಾರಿಟೇಬಲ್ ಟ್ರಸ್ಟ್ನಿಂದ ವಾರ್ನ್ ಸಹಾಯ ಮಾಡಿದ್ದರು.
ಕ್ರಿಕೆಟ್ ಮೈದಾನದ ಆಚೆಯ ಅತ್ಯಂತ ವರ್ಣರಂಜಿತ ವ್ಯಕ್ತಿತ್ವ ಶೇನ್ ವಾರ್ನ್ದು. ಯೌವ್ವನಿಗನಾಗಿ ಕಾಣಬೇಕೆಂಬ ಹಂಬಲ ವಾರ್ನ್ಗೆ ಬಹಳ ಇತ್ತು. ಕೂದಲಿನ ಬಣ್ಣದ ಕುರಿತು ಅವರಿಗೆ ಅಪಾರ ಕಾಳಜಿ. ಜೀವನವನ್ನು ಮೋಜಿನಿಂದ ಕಳೆಯಬೇಕು ಎನ್ನುವ ವಿಷಯದಲ್ಲಿ ವಾರ್ನ್ಗೆ ಯಾವುದೇ ಅನುಮಾನವಿರಲಿಲ್ಲ. ಹಣ, ಖ್ಯಾತಿ ಎಲ್ಲವು ಆತನನ್ನು ಹುಡುಕಿ ಬಂದಿತ್ತು. ಆಧುನಿಕ ಜಗತ್ತಿನ ಐಷಾರಾಮಿ ಬದುಕು ವಾರ್ನ್ ಜೀವನಶೈಲಿಯೆ ಆಗಿಹೋಗಿತ್ತು. ಬದುಕಿರುವಷ್ಟು ದಿನ ಜೀವನವನ್ನು ಸುಖಸಂತೋಷದಿಂದ ಕಳೆಯಬೇಕು ಎನ್ನುವ ವರ್ತಮಾನದ ಜಗತ್ತಿನ ಪ್ರತಿರೂಪವಾಗಿ ವಾರ್ನ್ ನಮಗೆ ಕಾಣುತ್ತಾನೆ. ಆತ ಅನೇಕ ಟಿ.ವಿ. ಷೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ. ಇದೆಲ್ಲವು ಆತ ಇನ್ನಷ್ಟು ಜನಪ್ರಿಯನಾಗಲು ಬಳಸುತ್ತಿದ್ದ ಮಾರ್ಗವಾಗಿತ್ತು.
ಬಹುಶಃ ತನ್ನ ವರ್ಣರಂಜಿತ ಬದುಕಿನ ಕಾರಣಕ್ಕಾಗಿ ಅನೇಕ ವಿವಾದಗಳಿಗೂ ಕೂಡ ವಾರ್ನ್ ಒಳಗಾಗಬೇಕಾಯಿತು. ವಾರ್ನ್ ಕ್ರಿಕೆಟ್ ಆಡುವ ಕಾಲದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕನಾಗಿದ್ದ ಸ್ಟೀವ್ ವಾನನ್ನು ಅತ್ಯಂತ ಸ್ವಾರ್ಥಿ ಕ್ರಿಕೆಟಿಗ ಎಂದು ವಾರ್ನ್ ದೂಷಿಸಿದ. 1999ರ ವೆಸ್ಟ್ ಇಂಡಿಸ್ ಪ್ರವಾಸಕ್ಕೆ ತನ್ನನ್ನು ಕೈ ಬಿಡುವುದಕ್ಕೆ ಸ್ಟೀವ್ ವಾ ಕಾರಣವೆಂದು ವಾರ್ನ್ನ ವಾದವಾಗಿತ್ತು. ಬ್ರಿಟಿಷ್ ನರ್ಸ್ ಒಬ್ಬರಿಗೆ ಅಶ್ಲೀಲ ಸಂದೇಶಗಳನ್ನು ಕಳಿಸಿದ ವಿವಾದವೂ ಕೂಡ ವಾರ್ನ್ ಮೇಲೆ ಬಂದಿತು. ಉದ್ದೀಪನ ಮದ್ದು ಸೇವನೆ ಮಾಡಿದ ಆರೋಪಕ್ಕೂ ವಾರ್ನ್ ಒಳಗಾದರು. ವೈವಾಹಿಕ ಜೀವನದಲ್ಲಿಯೂ ಹಲವು ಏರುಪೇರುಗಳನ್ನು ಕಂಡವರು ಅವರು.
ಇವುಗಳೆಲ್ಲದರ ಆಚೆ ವಾರ್ನ್ ಬೌಲಿಂಗ್ ಒಂದು ದೃಶ್ಯ ಕಾವ್ಯ. ನಾಲಿಗೆಯನ್ನು ತುಟಿಯಂಚಿಗೆ ಚಾಚಿ ಆತ ಹಾಕುತ್ತಿದ್ದ ಎಸೆತ ಇತ್ತಲ್ಲ ಅದು ಬ್ಯಾಟ್ಸ್ಮೆನ್ನನ್ನು ವಂಚಿಸುತ್ತಿದ್ದ ಪರಿ ಇತ್ತಲ್ಲ ಅದು ವರ್ಣನಾತೀತ. ಇನ್ನು ಬಹಳಷ್ಟು ಬದುಕಬೇಕಿದ್ದ ವಾರ್ನ್ ತನ್ನ 52 ವಯಸ್ಸಿನಲ್ಲಿ ಥೈಲ್ಯಾಂಡ್ನಲ್ಲಿ ನಿಧನ ಹೊಂದಿದ. ಆತ ಥೈಲ್ಯಾಂಡ್ನಲ್ಲಿ ತನ್ನ ಅಂತಿಮ ಕ್ಷಣಗಳನ್ನು ಕಳೆದಿದ್ದು ಒಂದು ರೀತಿಯ ಸೋಜಿಗವೆ. ವಿದಾಯ ವಾರ್ನ್.
ಡಾ. ನವೀನ್ ಮಂಡಗದ್ದೆ
ಉಪನ್ಯಾಸಕರು, ಕನ್ನಡಭಾರತಿ ಕುವೆಂಪು ವಿಶ್ವವಿದ್ಯಾಲಯ.
ಇದನ್ನೂ ಓದಿ: ಉದ್ಯಮವಾಗಿ ರೂಪುಗೊಳ್ಳುತ್ತಿರುವ ಕ್ರಿಕೆಟ್ ಮೈದಾನಗಳು


