ಇತ್ತೀಚಿಗೆ ಕೇಂದ್ರ ಸರ್ಕಾರದ ಕೆಲವು ಮಂತ್ರಿಗಳು ಮತ್ತು ಸರ್ಕಾರದ ಸಂಸ್ಥೆಗಳ ಕೆಲವು ಅಧಿಕಾರಿಗಳ ತಂಡವೊಂದು ಹಲವು ಬಾರಿ ಭೇಟಿಯಾಗಿ, ಮಾಧ್ಯಮಗಳಲ್ಲಿ ಸರ್ಕಾರದ ಪರವಾದ ನರೆಟಿವ್ ತಳ್ಳಲು ಮಾಡಬೇಕಾದ ಕೆಲಸ ಮತ್ತು ಅನುಸರಿಸಬೇಕಾದ ತಂತ್ರಗಳನ್ನು ಚರ್ಚಿಸಿ ಅದನ್ನು ದಾಖಲಿಸಿದ ಟೂಲ್ಕಿಟ್ ಒಂದು ಸೋರಿಕೆಯಾಗಿ ಕಾರವಾನ್, ದ ವೈರ್ ಸೇರಿದಂತೆ ಹಲವು ಮಾಧ್ಯಮಗಳು ಸುದ್ದಿ ಮಾಡಿದವು. ಸರ್ಕಾರದ ನೀತಿ ಮತ್ತು ಕಾರ್ಯಕ್ರಮಗಳನ್ನು ಜನರಿಗೆ ಪ್ರಚಾರ ಮಾಡುವುದಷ್ಟೇ ಅದರ ಉದ್ದೇಶವಾಗಿದ್ದರೆ ಅಥವಾ ಅದೇ ದಾಖಲೆಯಲ್ಲಿ ಒಂದು ಕಡೆ ಕೇಂದ್ರ ಸಚಿವರೊಬ್ಬರು ಹೇಳುವಂತೆ “ದಾಖಲೆಗಳಿಲ್ಲದೆ ಸರ್ಕಾರದ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿರುವ ಜನರ ವಿರುದ್ಧ ಮತ್ತು ನಕಲಿ ಸುದ್ದಿಗಳನ್ನು ಹರಡುತ್ತಿರುವವರ ವಿರುದ್ಧ ನಾವು ತಂತ್ರಗಳನ್ನು ರೂಪಿಸಿಕೊಳ್ಳಬೇಕು” ಎನ್ನುವದಷ್ಟೇ ಆಗಿದ್ದರೆ ಇದು ಸಮಸ್ಯಾತ್ಮಕವಾಗಿರಬೇಕಿರಲಿಲ್ಲ. ಆದರೆ ಈ ದಾಖಲೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸರ್ಕಾರದ ತಪ್ಪುಗಳನ್ನು ಜನಕ್ಕೆ ತಿಳಿಸುವ, ರಚನಾತ್ಮಕವಲ್ಲದ ಸರ್ಕಾರದ ಕಾರ್ಯಕ್ರಮಗಳನ್ನು ಟೀಕಿಸುವ ಮಾಧ್ಯಮಗಳನ್ನು ಹೇಗೆ ಮಟ್ಟ ಹಾಕಬೇಕು ಎನ್ನುವುದೂ ಚರ್ಚೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವುದು ಆತಂಕಕ್ಕೆ ಎಡೆಮಾಡುತ್ತದಷ್ಟೇ ಅಲ್ಲದೆ, ಈ ಸಭೆಗಳಲ್ಲಿ ಕೆಲವು ಪ್ರತಿಷ್ಠಿತ ಪತ್ರಿಕೆಗಳ ಪತ್ರಕರ್ತರೂ ಭಾಗಿಯಾಗಿರುವುದು, ಭಾರತದ ಮಾಧ್ಯಮ ಸ್ವಾತಂತ್ರ್ಯ ಕುಸಿಯುತ್ತಿದೆ ಎಂಬ ಆರೋಪಕ್ಕೆ ಪುಷ್ಠಿ ನೀಡಿದಂತಾಗಿದೆ.
ಈ ಟೂಲ್ಕಿಟ್ನ ಕೆಲವು ಸಂಗತಿಗಳನ್ನು ಚರ್ಚಿಸುವುದಕ್ಕೂ ಮೊದಲು ಒಂದು ವಿಷಯ. ಫ್ರೀಡಂ ಹೌಸ್ ಎಂಬ ಒಂದು ಸಂಸ್ಥೆ ಪ್ರತಿ ವರ್ಷ ವಿಶ್ವದೆಲ್ಲೆಡೆ ಹಲವು ದೇಶಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಅವಲೋಕಿಸಿ, ಆ ದೇಶದ ಪ್ರಜಾಪ್ರಭುತ್ವದ ಸ್ಟೇಟಸ್ ಎತ್ತ ಸಾಗಿದೆ, ಆ ದೇಶದಲ್ಲಿ ಮುಕ್ತತೆಯ-ಸ್ವಾತಂತ್ರ್ಯದ ವಾತಾವರಣ ಎಷ್ಟಿದೆ ಎಂಬುದನ್ನು ಅಂಕಿಅಂಶಗಳ ಮೂಲಕ ವರದಿ ಬಿಡುಗಡೆ ಮಾಡಿ, ಕ್ರಮಾಂಕ ನೀಡುತ್ತದೆ. ಆ ವರದಿಯಲ್ಲಿ ಭಾರತವನ್ನು ಮುಕ್ತ ದರ್ಜೆಯಿಂದ (ಫ್ರೀ ಸ್ಟೇಟಸ್), ಭಾಗಶಃ ಮುಕ್ತ ದರ್ಜೆಗೆ (ಪಾರ್ಟ್ಲಿ ಫ್ರೀ ಸ್ಟೇಟಸ್) ಇಳಿಸಿದೆ. ಕೋವಿಡ್ ಸಮಯದ ಲಾಕ್ಡೌನ್ನಿಂದ ಉಂಟಾದ ವಲಸೆ, ಎಗ್ಗಿಲ್ಲದೆ ಮುಂದುವರೆಯುತ್ತಿರುವ ಹಿಂದೂ ರಾಷ್ಟ್ರೀಯವಾದ, ವೈರಸ್ ಹಬ್ಬಲು ಮುಸ್ಲಿಮರು ಕಾರಣ ಎಂದು ಮಾಡಿದ ಸುಳ್ಳು ಪ್ರಚಾರ ಇಂತಹ ಕಾರಣಗಳನ್ನೆಲ್ಲಾ ಪಟ್ಟಿ ಮಾಡಿ, ಪ್ರಜಾಪ್ರಭುತ್ವದಿಂದ ಸರ್ವಾಧಿಕಾರದತ್ತ ಭಾರತ ಜಾರುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದೆ.
ಮೇಲಿನ ವರದಿಗೂ, ಮಾಧ್ಯಮಗಳನ್ನು ಪ್ರಭಾವಿಸುವ ಟೂಲ್ಕಿಟ್ ಚರ್ಚೆಯಾದ ಸಮಯಕ್ಕೂ ಸಂಬಂಧ ಇದೆ. ಈ ಟೂಲ್ಕಿಟ್ ಚರ್ಚೆ ಆಗಿರುವುದು 2020ರ ಮಧ್ಯ ಭಾಗದಲ್ಲಿಯೇ. ಫ್ರೀಡಂ ಹೌಸ್ ಅವಲೋಕಿಸಿರುವುದು ಕೂಡ 2020ರ ಭಾರತದ ಪರಿಸ್ಥಿತಿಯನ್ನೇ. 14.06.20ರಿಂದ 09.07.20ರ ನಡುವೆ ನಡೆಯುವ ಆರು ಸಭೆಗಳಲ್ಲಿ ಭಾಗವಹಿಸಿರುವ ’ಸಚಿವರ ಗುಂಪು’ ಮುಖ್ತಾರ್ ಅಬ್ಬಾಸ್ ನಖ್ವಿ, ರವಿಶಂಕರ್ ಪ್ರಸಾದ್, ಸ್ಮೃತಿ ಇರಾನಿ, ಪ್ರಕಾಶ್ ಜಾವಡೇರ್, ಎಸ್ ಜೈಶಂಕರ್ ಕ್ಯಾಬಿನೆಟ್ ದರ್ಜೆಯ ಸಚಿವರಾದರೆ, ಕಿರೆನ್ ರಿಜೆಜು, ಹರ್ದೀಪ್ ಸಿಂಗ್ ಪೂರಿ, ಅನುರಾಗ್ ಠಾಕೂರ್, ಬಾಬುಲಾಲ್ ಸುಪ್ರಿಯೋ ರಾಜ್ಯ ದರ್ಜೆ ಸಚಿವರು.
ಒಂದು ಕಡೆ ಸ್ಮೃತಿ ಇರಾನಿಯವರು “ನಾವು ಋಣಾತ್ಮಕ ಮತ್ತು ಧನಾತ್ಮಕ ಪ್ರಭಾವಿಗಳನ್ನು ಗುರುತಿಸಬೇಕು” ಅಂದರೆ, ಮತ್ತೊಂದು ಕಡೆ ಅನುರಾಗ್ ಠಾಕೂರ್ ಅವರು ನಾವು ಇತರ ದೇಶದ ಬಲಪಂಥೀಯ ರಾಜಕೀಯ ಪಕ್ಷಗಳೊಂದಿಗೆ ಜೊತೆಗೂಡಿ ಒಂದು ಸಾಮಾನ್ಯ ನೆಲೆ ಕಂಡುಕೊಳ್ಳಬೇಕು ಎನ್ನುತ್ತಾರೆ. ರವಿಶಂಕರ್ ಪ್ರಸಾದ್ ಅವರು, ತಮ್ಮ ಪಕ್ಷದ ಉನ್ನತ ಸಮಿತಿಯ ಮಾಧ್ಯಮ ಹಸ್ತಕ್ಷೇಪ ದೊಡ್ಡದಾಗಿ ಬೆಳೆಯುತ್ತಿಲ್ಲ ಎನ್ನುತ್ತಾರೆ ಮತ್ತು ಸರ್ಕಾರದ ಪರವಾಗಿ ಬರೆಯಬಲ್ಲ ಅಕಾಡೆಮಿಕ್ಗಳು, ವಿಶ್ವವಿದ್ಯಾಲಯದ ಕುಲಪತಿಗಳು, ಮಾಜಿ ಐಎಫ್ಎಸ್ ಅಧಿಕಾರಿಗಳನ್ನು ಗುರುತಿಸಬೇಕೆಂದು ಕೂಡ ಸಲಹೆ ನೀಡುತ್ತಾರೆ.
ಮುಂದುವರೆದು, ಇದು ಕೇವಲ ಸಚಿವರ ಗುಂಪಿನ ಚರ್ಚೆ ಮಾತ್ರ ಆಗಿರದೆ, ಆರ್ಎಸ್ಎಸ್ನ ಗುರುಮೂರ್ತಿ, ಪ್ರಸಾರ ಭಾರತಿ ಅಧ್ಯಕ್ಷ ಸೂರ್ಯ ಪ್ರಕಾಶ್ ಮುಂತಾದವರು ಸೇರಿದಂತೆ, ದ ಹಿಂದೂ, ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯಂತಹ ಪತ್ರಕರ್ತರೂ ಕೆಲವು ಸಭೆಗಳಲ್ಲಿ ಭಾಗಿಯಾಗಿರುವುದನ್ನು ದಾಖಲಿಸಲಾಗಿದೆ. ಗುರುಮೂರ್ತಿ ಒಂದು ಕಡೆ ಮಾತನಾಡುತ್ತಾ, ರಿಪಬ್ಲಿಕ್ ಟಿವಿ ವಾಹಿನಿ ಸರ್ಕಾರದ ಬಗ್ಗೆ ಪ್ರಚಾರ ಮಾಡುತ್ತಿದ್ದರೂ, ಅದನ್ನು ಹೊಗಳುಭಟ್ಟ ಎಂದು ಜನರು ಗುರುತಿಸಿದ್ದಾರೆ. ನಮ್ಮ ನರೆಟಿವ್ಗಾಗಿ ಪೋಖ್ರಾನ್ ಬೇಕಾಗಿದೆ ಎನ್ನುತ್ತಾರೆ.
ಅಂದರೆ ಮೀಡಿಯಾ ನಿಯಂತ್ರಣದ ಈ ಯೋಜನೆಯ ಹೆಸರನ್ನು ’ಪೋಖ್ರಾನ್ ಎಫೆಕ್ಟ್’ ಎಂದು ಕರೆದಿರುವುದು ಇಲ್ಲಿ ಮುಖ್ಯ. ಇಂದಿರಾಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರುಗಳು ಪ್ರಧಾನಮಂತ್ರಿಯಾಗಿದ್ದಾಗ ಪೋಖ್ರಾನ್ನಲ್ಲಿ ನಡೆಸಿದ್ದ ಅಣು ಪರೀಕ್ಷೆ ಅಂದಿನ ಸರ್ಕಾರಗಳಿಗೆ ಭಾರಿ ಜನಪ್ರಿಯತೆ ತಂದುಕೊಟ್ಟಿತ್ತು. ಈಗ ಅದೇ ಹೆಸರಿನಲ್ಲಿ ಮಾಧ್ಯಮಗಳ ಮೂಲಕ ಜನಪ್ರಿಯತೆಯನ್ನು ಕಂಡುಕೊಳ್ಳಲು ಈ ಸರ್ಕಾರ ತಂತ್ರ ರಚಿಸುತ್ತಿದೆ.
ಇವೆಲ್ಲ ತಂತ್ರಗಾರಿಕೆಯ ನಡುವೆಯೂ, ರಿಪಬ್ಲಿಕ್ ಟಿವಿ ಢೋಲು ಹೊಡೆಯುತ್ತಿರುವುದು ಅಷ್ಟು ಮುಖ್ಯವಲ್ಲ ಅನ್ನುವ ಅಭಿಪ್ರಾಯವಾಗಲೀ, ಖಾಸಗಿ ಸಂಸ್ಥೆಯೊಂದರ ಪ್ರತಿನಿಧಿ ಕಾಂಚನ ಗುಪ್ತ ಅನ್ನುವವರು ’ಗೂಗಲ್ ಸಂಸ್ಥೆ ವೈರ್, ಸ್ಕ್ರಾಲ್, ಪ್ರಿಂಟ್, ಹಿಂದೂ ಮಾಧ್ಯಮ ಸಂಸ್ಥೆಗಳ ಸುದ್ದಿಗಳನ್ನು ಪ್ರಚಾರ ಮಾಡುತ್ತದೆ, ಇದಕ್ಕೆ ಕಡಿವಾಣ ಹಾಕಬೇಕು’ ಅನ್ನುವ ಮಾತಾಗಲೀ, ಚುನಾವಣಾ ಸಮಯದಲ್ಲಿ ಪಕ್ಷ ಮಾಧ್ಯಮಗಳನ್ನು ಬಹಳ ಚೆನ್ನಾಗಿ ನಿರ್ವಹಿಸುತ್ತದೆ, ಬೇರೆ ಸಮಯದಲ್ಲಿ ಇದು ಏಕೆ ಸಾಧ್ಯವಿಲ್ಲ ಎಂದು ಅಶೋಕ ಟಂಡನ್ ಕೇಳಿಕೊಳ್ಳುವ ಪ್ರಶ್ನೆಯಾಗಲೀ, ಸಚಿವರು ಮತ್ತು ಅಧಿಕಾರಿಗಳು ಬರೆಯುವ ಓಪ್-ಎಡ್ಗಳನ್ನು (ಅಭಿಪ್ರಾಯ ಸೂಚಿಸುವ ಸಂಪಾದಕೀಯ ಲೇಖನಗಳು) ನಿಲ್ಲಿಸಿ, ಅವು ಸಾಂಕ್ರಾಮಿಕವಾಗಿವೆ ಮತ್ತು ಅವನ್ನು ಜನ ಪ್ರಪೋಗಾಂಡ ಎನ್ನುತ್ತಿದ್ದಾರೆ, ಅವುಗಳಿಂದ ಹೆಚ್ಚು ಉಪಯೋಗವಿಲ್ಲ ಎನ್ನುವ ಅಶೋಕ್ ಮಲಿಕ್ ಅವರ ಮಾತುಗಳಾಗಲೀ ಬೇರೆಯದೇ ಕಥೆಯನ್ನು ಹೇಳುತ್ತಿವೆ. ತಾವು ಹತ್ತಾರು ವರ್ಷ ನಡೆಸಿಕೊಂಡು ಬಂದಿರುವ ಪ್ರಪೋಗಾಂಡದ ವಿರುದ್ಧ ಬೆರಳೆಣಿಕೆಯ ಮಾಧ್ಯಮಗಳಾದರೂ ಸತ್ಯದ ಕಥೆಗಳನ್ನು ಹೇಳುತ್ತಿರುವುದರ ಬಗ್ಗೆ ಸರ್ಕಾರ ಆಂತಕಿತಗೊಂಡಿರುವುದಂತೂ ಸ್ಪಷ್ಟವಾಗಿ ಗೋಚರಿಸುತ್ತದೆ.
ಅದೇ ಟೂಲ್ಕಿಟ್ನಲ್ಲಿ, ಪತ್ರಕರ್ತರನ್ನು ಹಸಿರು (ತಂತಿಯ ಮೇಲೆ ಕುಂತವರು), ಕಪ್ಪು (ವಿರುದ್ಧ ಇರುವವರು), ಬಿಳಿ (ಪರವಾಗಿರುವವರು) ಬಣ್ಣಗಳಿಂದ ಗುರುತಿಸಿ, ಸರ್ಕಾರದ ಪರವಾಗಿ ಇರುವವರನ್ನು ಹೆಚ್ಚು ಪ್ರಮೋಟ್ ಮಾಡಬೇಕು ಎಂದು ಸಲಹೆ ನೀಡುವ ಮಾಜಿ ಪತ್ರಕರ್ತ ನಿತಿನ್ ಗೋಖಲೆ ಅವರ ಮಾತುಗಳು ಇಂದಿನ ಪತ್ರಿಕೋದ್ಯಮದ ಸ್ಥಿತಿಯನ್ನು ನೆನಪಿಸಿದರೂ, ಸರ್ಕಾರ ಇಂತಹ ಸಚಿವರ ಗುಂಪೊಂದನ್ನು ರಚಿಸಿ ಇಷ್ಟು ಗಂಭೀರವಾಗಿ ಆರು ಸುತ್ತಿನ ಚರ್ಚೆ ನಡೆಸಿರುವುದು ಮತ್ತು ನಕಲಿ ಸುದ್ದಿಗಳನ್ನು ಪತ್ತೆಹಚ್ಚಿ ಓದುಗರಿಗೆ ನಿಜ ತಿಳಿಸುವ ತಾಣಗಳಾದ ಆಲ್ಟ್ ನ್ಯೂಸ್ನಂತಹ ಮಾಧ್ಯಮಗಳ ಬಗ್ಗೆ ಆತಂಕಿತಗೊಂಡಿರುವುದು, ಇವೆಲ್ಲವೂ ಎಲ್ಲೋ ಮೂಲೆಯಲ್ಲಿ ಚಿಗುರುತ್ತಿರುವ ಭರವಸೆಯನ್ನು ನೆನಪಿಸುತ್ತದೆ.
ಕಳೆ ತೆಗೆಯುವ ನೆಪದಲ್ಲಿ ತೆನೆಯನ್ನೆ ಚಿವುಟುಹಾಕಲು ಹೊರಟಿರುವ ಸರ್ಕಾರದ ಹುನ್ನಾರವನ್ನು ತಡೆಯಲು ಇರುವುದು ಒಂದೇ ದಾರಿ: ಉತ್ತಮ ಪತ್ರಿಕೋದ್ಯಮವನ್ನು ಉಳಿಸುವುದು ಮತ್ತು ಬೆಳೆಸುವುದು ಮತ್ತು ಹೆಚ್ಚೆಚ್ಚು ನೆಲದ ಬಾಷೆಗಳಲ್ಲಿ ಪ್ರಭುತ್ವದ ಸುಳ್ಳು ನರೆಟಿವ್ಗಳಿಗೆ ಸೋಲುಣಿಸುವುದು.
ಟೂಲ್ಕಿಟ್ನ ವರದಿಯನ್ನು ಇಲ್ಲಿ ಓದಿ..
..