ರಸ್ತೆ, ಉದ್ಯಾನವನ, ಆಟದ ಮೈದಾನ ಸೇರಿ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ 10ಕ್ಕಿಂತ ಹೆಚ್ಚು ಜನರು ಗುಂಪು ಸೇರಿದರೆ ಅದನ್ನು ಅಕ್ರಮ ಕೂಟವೆಂದು ಪರಿಗಣಿಸುವ ಸಂಬಂಧ ಹೊರಡಿಸಲಾಗಿದ್ದ ಆದೇಶಕ್ಕೆ ನೀಡಿರುವ ಮಧ್ಯಂತರ ತಡೆಯಾಜ್ಞೆ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಕುರಿತ ಆದೇಶವನ್ನು ಧಾರವಾಡದ ಹೈಕೋರ್ಟ್ ಪೀಠ ಮಂಗಳವಾರ (ನ.4) ಕಾಯ್ದಿರಿಸಿದೆ.
ಸರ್ಕಾರದ ಆದೇಶಕ್ಕೆ ಅಕ್ಟೋಬರ್ 28ರಂದು ತಡೆ ನೀಡಿದ್ದ ಏಕಸದಸ್ಯ ಪೀಠದ ನ್ಯಾಯಾಧೀಶರು, ಆದೇಶ ಮೇಲ್ನೋಟಕ್ಕೆ ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ್ದರು.
ಇಂದು ನ್ಯಾಯಮೂರ್ತಿಗಳಾದ ಎಸ್.ಜಿ ಪಂಡಿತ್ ಮತ್ತು ಗೀತಾ ಕೆ.ಬಿ ಅವರ ದ್ವಿಸದಸ್ಯ ಪೀಠದ ಮುಂದೆ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಸರ್ಕಾರಿ ಆಸ್ತಿಯ ಮೇಲೆ ಅತಿಕ್ರಮಣ ಮಾಡಿದರೆ ಅದು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಅಡಿಯಲ್ಲಿ ಅಪರಾಧವಾಗುತ್ತದೆ ಎಂದು ಮಾತ್ರ ಸರ್ಕಾರದ ಆದೇಶ ಹೇಳುತ್ತದೆ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, 10ಕ್ಕಿಂತ ಹೆಚ್ಚು ಜನರು ಒಟ್ಟಿಗೆ ಸೇರುವುದು ಅಪರಾಧವೇ? ಒಂದು ವೇಳೆ ಜನರು ಒಟ್ಟಿಗೆ ನಡೆಯಲು ಬಯಸಿದರೆ ಅದರಲ್ಲಿ ತಪ್ಪೇನು? ನೀವು ಈ ಬಗ್ಗೆ ಏಕಸದಸ್ಯ ಪೀಠದ ಮುಂದೆ ಹೋಗಿ ಸ್ಪಷ್ಟ ತೀರ್ಪು ಕೇಳದಂತೆ ನಿಮ್ಮನ್ನು ತಡೆಯುತ್ತಿರುವುದು ಏನು? ಎಂದು ಕೇಳಿದೆ.
ಇದಕ್ಕೆ ಉತ್ತರಿಸಿದ ಅಡ್ವೊಕೇಟ್ ಜನರಲ್, ನಾವು ಮೆರವಣಿಗೆ, ರ್ಯಾಲಿಗಳ ಬಗ್ಗೆ ಮಾತ್ರ ಹೇಳುತ್ತಿದ್ದೇವೆ. ಅದನ್ನು ಪಾರ್ಕ್ನಲ್ಲಿ ಜನರು ಒಟ್ಟಿಗೆ ನಡೆಯುವುದು ಎಂದು ತಿಳಿಯಬಾರದು. ಅರ್ಜಿದಾರರು ಪಾರ್ಕ್ನಲ್ಲಿ ಧರ್ಮ ಪ್ರಚಾರ ಮಾಡಲು ಬಯಸುತ್ತಾರೆ, ಅದಕ್ಕೆ ಅನುಮತಿ ಇಲ್ಲ. ಮೊದಲು ಅವರು ಏನು ಮಾಡಲು ಬಯಸುತ್ತಾರೆ ನೋಡಿ, ನಂತರ ಸರ್ಕಾರದ ಆದೇಶ ಪರಿಶೀಲಿಸಿ ಎಂದು ಹೇಳಿದ್ದಾರೆ.
ಅರ್ಜಿದಾರರು ಹಾಲ್ಗಳನ್ನು ಬಾಡಿಗೆಗೆ ತೆಗೆದುಕೊಂಡು ಸಿಂಪೋಸಿಯಂಗಳನ್ನು ನಡೆಸಬಹುದು ಎಂದು ಇದೇ ವೇಳೆ ಅಡ್ವೊಕೇಟ್ ಜನರಲ್ ತಿಳಿಸಿದ್ದಾರೆ.
ನಾಳೆ 30 ಸಂಘಟನೆಗಳು ಬಂದು ಪಾರ್ಕ್ನಲ್ಲಿ ಕುಳಿತುಕೊಂಡರೆ ಅದಕ್ಕೆ ಅನುಮತಿ ಇದೆಯೇ? ನಾವು ಅರ್ಜಿದಾರರು ಮಾಡುತ್ತಿರುವ ಕೆಲಸವನ್ನು ಅಥವಾ ಕಾರ್ಯಕ್ರಮವನ್ನು ವಿರೋಧಿಸುತ್ತಿಲ್ಲ. ಆದರೆ, ಅವರು ಅದನ್ನು ಸಾರ್ವಜನಿಕ ಪಾರ್ಕ್ಗಳಲ್ಲಿ ಮಾಡಬಾರದು. ಕಬ್ಬನ್ ಪಾರ್ಕ್ನಲ್ಲಿಯೂ ನಾವು ನಿರ್ಬಂಧಗಳನ್ನು ಹೇರಿದ್ದೇವೆ ಎಂದು ವಿವರಿಸಿದ್ದಾರೆ.
ನ್ಯಾಯಾಲಯ ಪ್ರತಿಭಟನೆಯನ್ನು ಬೆಂಗಳೂರಿನ ಫ್ರೀಡಂ ಪಾರ್ಕ್ಗೆ ಸೀಮಿತಗೊಳಿಸಿದೆ. ಕಂಠೀರವ ಕ್ರೀಡಾಂಗಣವನ್ನು ಕ್ರೀಡಾ ಚಟುವಟಿಕೆಗಳಿಗೆ ಮಾತ್ರ ಬಳಸಬೇಕೆಂದು ನಿರ್ದೇಶಿಸಿದೆ. ಅರ್ಜಿ ಸಲ್ಲಿಸಿದರೆ ನಾವು ಪರಿಗಣಿಸಿ ಅನುಮತಿ ನೀಡುತ್ತೇವೆ. ಈ ಆದೇಶವು ಸಕಾರಾತ್ಮಕ ಅರ್ಥದಲ್ಲಿ ಹೊರಡಿಸಲಾಗಿದೆ. ಇದರಿಂದ ಸರ್ಕಾರಿ ಆಸ್ತಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ರಕ್ಷಣೆಯಾಗುತ್ತದೆ. ನಾಗರಿಕರ ಯಾವುದೇ ಹಕ್ಕುಗಳಿಗೆ ಧಕ್ಕೆಯಾಗುವುದಿಲ್ಲ. ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ಅರ್ಜಿದಾರರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಅಡ್ವೊಕೇಟ್ ಜನರಲ್ ಹೇಳಿದ್ದಾರೆ.
ಸರ್ಕಾರದ ಆದೇಶವು ಸಭೆ ಸೇರುವುದನ್ನು ನಿಷೇಧಿಸುತ್ತಿಲ್ಲ. ಆದರೆ, ಸಭೆ ಸೇರಲು ಬಯಸುವ ವ್ಯಕ್ತಿಗಳು ಅನುಮತಿ ಪಡೆಯಬೇಕೆಂದು ಹೇಳುತ್ತಿದೆ ಎಂದು ಅಡ್ವೊಕೇಟ್ ಜನರಲ್ ಸ್ಪಷ್ಟಪಡಿಸಿದ್ದಾರೆ.
ಅರ್ಜಿದಾರರ (ಏಕ ಸದಸ್ಯ ಪೀಠದ ಮುಂದೆ ಅರ್ಜಿ ಸಲ್ಲಿಸಿರುವ ಪುನಶ್ಚೇತನ ಸೇವಾ ಸಂಸ್ಥೆ) ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ಸರ್ಕಾರ ಏಕ ಸದಸ್ಯ ಪೀಠದ ಮುಂದೆ ಹೋಗಿ ಸ್ಪಷ್ಟೀಕರಣ ಪಡೆಯಲು ಆಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಮಧ್ಯಂತರ ಆದೇಶ ಹೊರಡಿಸಿದಾಗ ರಿಟ್ ಮೇಲ್ಮನವಿ ಸಲ್ಲಿಸುವುದು ಸಮರ್ಥನೀಯವಲ್ಲ ಎಂದು ಹೇಳಿದ್ದಾರೆ.
ಶಾಂತಿಯುತವಾಗಿ ಸಭೆ ಸೇರುವ ಹಕ್ಕನ್ನು 19 (ಬಿ) ವಿಧಿಯ ಅಡಿಯಲ್ಲಿ ನೀಡಲಾಗಿದೆ. ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದಂತೆ ಸಮಸ್ಯೆಯಿದ್ದರೆ ಮಾತ್ರ ಸರ್ಕಾರ ಮಧ್ಯಪ್ರವೇಶಿಸಬಹುದು ಎಂದು ಹಾರನಹಳ್ಳಿ ವಾದಿಸಿದ್ದಾರೆ.
ಒಂದು ಗುಂಪು ಆಟದ ಮೈದಾನದಲ್ಲಿ ಕ್ರಿಕೆಟ್ ಆಡಲು ಬಯಸಿದರೆ ಅವರು ಪ್ರತಿದಿನ ಸರ್ಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ. ಸರ್ಕಾರದ ಆದೇಶದದಲ್ಲಿ ಏನು ಸಕಾರಾತ್ಮಕವಾಗಿದೆ ಎಂದು ನನಗೆ ಗೊತ್ತಿಲ್ಲ. ಇದಕ್ಕಿಂತ ಸ್ಪಷ್ಟವಾಗಿ ಅನಿಯಂತ್ರಿತ ಆದೇಶ ಇನ್ನೊಂದಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
10 ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪು ಸೇರುವುದು ಕಾನೂನುಬಾಹಿರ ಎಂದು ರಾಜ್ಯ ಹೇಳುತ್ತಿದೆ. ಆದರೆ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವುದನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮಾತ್ರ ಪತ್ತೆ ಹಚ್ಚಿ ಅಗತ್ಯ ಆದೇಶ ಹೊರಡಿಸಬಹುದು ಎಂದು ಹಾರನಹಳ್ಳಿ ವಾದ ಮಂಡಿಸಿದ್ದಾರೆ.
ರಸ್ತೆಗಳು ಸ್ಥಳೀಯ ಸಂಸ್ಥೆಗಳ ಅಧೀನದಲ್ಲಿವೆ. ಅದನ್ನು ನಿಯಂತ್ರಿಸುವುದು ಅವರ ಕೆಲಸ. ಈ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಪಾತ್ರವಿಲ್ಲ. ಅವರು ಹಾಗೆ ಮಾಡಲು ಬಯಸಿದರೆ ಶಾಸನಾತ್ಮಕ ಅಧಿಕಾರ ಬಳಸಿ ಆದೇಶವನ್ನು ಹೊರಡಿಸಲಿ. ಪ್ರಕರಣ ಈಗ ನವೆಂಬರ್ 17ಕ್ಕೆ ಏಕ ಸದಸ್ಯ ಪೀಠದ ಮುಂದೆ ಪಟ್ಟಿ ಮಾಡಲಾಗಿದೆ ಎಂದು ಹಾರನಹಳ್ಳಿ ಹೇಳಿದ್ದಾರೆ. ಈ ಹಂತದಲ್ಲಿ ವಿಭಾಗೀಯ ಪೀಠವು ವಾದಗಳನ್ನು ಪರಿಗಣಿಸುವುದಾಗಿ ತಿಳಿಸಿದೆ.
ಈ ನಡುವೆ, ಉದ್ಯಾನವನಗಳು ಮತ್ತು ಆಟದ ಮೈದಾನಗಳಲ್ಲಿ ಜನರಿಗೆ ಆಟವಾಡಲು ಅವಕಾಶವಿದೆ. ಆದರೆ, ಅರ್ಜಿದಾರರು ವಿಚಾರ ಸಂಕಿರಣ, ಮಾತುಕತೆ ಮತ್ತು ಭಾಷಣವನ್ನು ನಡೆಸಲು ಬಯಸುತ್ತಿದ್ದಾರೆ ಎಂದು ಎಜಿ ಹೇಳಿದ್ದಾರೆ. ಮಧ್ಯಂತರ ಆದೇಶವು ಅಂತಿಮ ಆದೇಶದ ಸ್ವರೂಪದಲ್ಲಿದೆ ಎಂದಿದ್ದಾರೆ.
ಆಗ “ಸಾಮಾನ್ಯವಾಗಿ ಮೇಲ್ಮನವಿ ವಿಚಾರಣೆಗೆ ಅರ್ಹವಲ್ಲ ಎಂದು ನಾವು ಹೇಳಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರು ಯಾವುದೇ ಮಾತುಕತೆ ಇತ್ಯಾದಿಗಳನ್ನು ನಡೆಸಲು ಬಯಸಿದರೆ, ಅವರು ಅರ್ಜಿಯನ್ನು ಸಲ್ಲಿಸಲಿ. ಅದು ತಿರಸ್ಕೃತವಾದರೆ ಅವರು ನ್ಯಾಯಾಲಯದ ಮೊರೆ ಹೋಗಬಹುದು ಎಂದ ಎಜಿ, ಈಗ ಕ್ರಮ ಕೈಗೊಳ್ಳಲು ಯಾವುದೇ ಕಾರಣವಿಲ್ಲ ಎಂದಿದ್ದಾರೆ. ವಾದ-ಪ್ರತಿವಾದ ಆಲಿಸಿದ ನ್ಯಾಯಾಲು ನಂತರ ತನ್ನ ತೀರ್ಪನ್ನು ಕಾಯ್ದಿರಿಸಿದೆ.
Courtesy: livelaw.in


