Homeನ್ಯಾಯ ಪಥ’ಅವ ನಮ್ಮವ, ಅವ ನಮ್ಮವ’ ಎಂದ ಕ್ರಾಂತಿಕಾರಿ ಬಸವಣ್ಣನ ಚಿಂತನೆಗಳು ಇಂದಿನ ವಿಷಮತೆಗೆ ಲಸಿಕೆ..: ಜಿ.ಬಿ...

’ಅವ ನಮ್ಮವ, ಅವ ನಮ್ಮವ’ ಎಂದ ಕ್ರಾಂತಿಕಾರಿ ಬಸವಣ್ಣನ ಚಿಂತನೆಗಳು ಇಂದಿನ ವಿಷಮತೆಗೆ ಲಸಿಕೆ..: ಜಿ.ಬಿ ಪಾಟೀಲ್

"ಪ್ರೀತಿಸುವ ಶರಣರ ಮಕ್ಕಳಿಗೆ ಜಾತಿಯ ಸೋಂಕೇಕೆ" ಎಂದ, ದೇವರ ಹೆಸರಿನಲ್ಲಿ ಶೋಷಣೆಗೊಳ್ಳುತ್ತಿದ್ದ ಸಮಾಜಕ್ಕೆ ಹೊಸದಾರಿ ತೋರಿಸಿದ ಬಸವಣ್ಣನವರ ಕುರಿತು ಜಿ.ಬಿ ಪಾಟೀಲ್‌ರವರ ಲೇಖನ...

- Advertisement -
- Advertisement -

’ಅವರವರ ಭಾವಕ್ಕೆ ಅವರವರ ಭಕುತಿಗೆ’ ಎನ್ನುವಂತೆ ಬಸವಣ್ಣನವರು ಕಳೆದ ಎಂಟನೂರ ಐವತ್ತು ವರ್ಷಗಳಲ್ಲಿ ಅನೇಕ ರೂಪ ತಾಳಿದ್ದಾರೆ.

ಬಸವಣ್ಣನವರನ್ನು ಲಕ್ಷ ಲಕ್ಷ ಪುಟಗಳಲ್ಲಿ ವರ್ಣಿಸಿದ್ದರೂ ಪ್ರತಿಯೊಬ್ಬ ಲೇಖಕರಿಗೂ ಅವರು ವಿಭಿನ್ನವಾಗಿ ಕಾಣುತ್ತಾರೆ. ಪುರಾಣಕಾರರಿಗೆ ದೈವಾಂಶಸಂಭೂತನೆಂದು ಕಂಡರೆ ಸಮಾಜವಾದಿಗಳಿಗೆ ಮಾರ್ಕ್ಸವಾದಿಯಂತೆ ಕಾಣುವರು. ಮಂಟೇಸ್ವಾಮಿಯಂತಹ ಜಾನಪದ ಶರಣರಿಗೆ ಅಲ್ಲಮ ಪ್ರಭುವಿನ ಶಿಷ್ಯನಾಗಿ ಕಂಡರೆ, ಸ್ವತಃ ಅಲ್ಲಮಪ್ರಭುವಿಗೆ ಅವರು ಒಬ್ಬ ಸ್ವಯಂಭು ಜ್ಞಾನಿಯಾಗಿ ಕಾಣುತ್ತಾರೆ. (ಲಿಂಗ ಜಂಗಮಪ್ರಸಾದದ ಮಹಾತ್ಮೆಗೆ ಬಸವಣ್ಣನೆ ಆದಿಯಾದನೆಂಬುದನರಿಯ ಸ್ವಯಂಭು ಜ್ಞಾನಿ). ಅನಕೃ, ತರಾಸು, ಬಸವರಾಜ ಕಟ್ಟಿಮನಿ, ಬಿ. ಪುಟ್ಟಸ್ವಾಮಯ್ಯನವರಂತಹ ಕಾದಂಬರಿಕಾರರಿಗೆ ಗಾಂಧೀವಾದಿಯಾಗಿ ಕಂಡರೆ, ಲಂಕೇಶ, ಗಿರೀಶ ಕಾರ್ನಾಡ, ಕಂಬಾರರಂತಹ ನಾಟಕಕಾರರಿಗೆ ಬಸವಣ್ಣ ಒಬ್ಬ ನಿಲುಕಲಾರದ ಸಂಕೀರ್ಣ ವ್ಯಕ್ತಿಯಾಗಿ ಕಾಣುವರು. ಡಾ. ಕಲಬುರ್ಗಿಯವರಿಗೆ ಸಮಾಜ ಸುಧಾರಕರಾಗಿ ಕಂಡರೆ, ಡಾ.ಚಿದಾನಂದ ಮೂರ್ತಿಯವರಿಗೆ ಹಿಂದೂ ಧರ್ಮದ ಸುಧಾರಣವಾದಿಯಾಗಿ ಕಾಣುವರು. ಆಂಗ್ಲ ಬರಹಗಾರರಿಗೆ ಇವರು ಲಿಂಗಾಯತ ಧರ್ಮ ಸ್ಥಾಪಕನಾಗಿ, ವಿಶ್ವಗುರುವಾಗಿ ಕಾಣುತ್ತಾರೆ. ಬಹುಪಾಲು ಬರಹಗಾರರು, ಚರಿತ್ರೆಕಾರರು ನಿಸ್ಸಂಶಯವಾಗಿ ಬಸವಣ್ಣ ಒಬ್ಬ ಧಾರ್ಮಿಕ ಪುರುಷ, ಲಿಂಗಾಯತ ಧರ್ಮ ಸ್ಥಾಪಕ ಎಂದು ಅಭಿಪ್ರಾಯ ಪಡುತ್ತಾರೆ.

ಬಸವಣ್ಣನವರೊಬ್ಬ ಕ್ರಾಂತಿಕಾರಿ, ಸಮಾಜವಾದಿ, ದಾರ್ಶನಿಕ, ವಿಶ್ವಗುರುವಾಗಿ ಕಾಣುವರು. ವಿಶೇಷವಾಗಿ ಸಮ ಸಮಾಜದ ನಿರ್ಮಾಣಕ್ಕಾಗಿ ದೇವರನ್ನು, ಧರ್ಮವನ್ನು ಬಳಸಿಕೊಂಡ ಮಾನವತಾವಾದಿಯಾಗಿ ಕಾಣುತ್ತಾರೆ. ಅಂದಿನ ಸಮಾಜವನ್ನು ಗಮನಿಸಿದರೆ, ಶೋಷಣೆ ಮಾಡಲು ಇಂದಿನಂತೆ ಅನೇಕ ಮಾರ್ಗಗಳಿರಲಿಲ್ಲ. ವ್ಯಾಪಾರ ವಹಿವಾಟು ವಸ್ತುಗಳ ವಿನಿಮಯ ಪದ್ಧತಿಯಿಂದ (Barter System) ಪೂರೈಸುತಿತ್ತು. ಆಳುವವರಿಗೆ ಕರ (Tax) ವಸ್ತುಗಳ ರೂಪದಲ್ಲಿ ಸಂದಾಯವಾಗುತ್ತಿತ್ತು. ಆಡಳಿತಗಾರರಿಗೆ ಭೂಮಿಯನ್ನು ಹಂಚಿಕೆ ಮಾಡಿ ಅವರ ಸೇವೆಯನ್ನು ಪಡೆಯಲಾಗುತ್ತಿತ್ತು. ದೇಶ ಕಾಯುವ ಸೈನಿಕನನ್ನು ಯುದ್ಧದ ಸಮಯದಲ್ಲಿ ಮಾತ್ರ ಕರೆಯಲಾಗುತ್ತಿತ್ತು. ಇಂತಹ ಸಮಾಜದಲ್ಲಿ ಶೋಷಣೆಗೆ ಅವಕಾಶ ಇರಲಿಲ್ಲ. ಆದರೆ ಶೋಷಣೆ ಇರಲಿಲ್ಲವೆಂದಲ್ಲ, ಒಂದು ಕ್ಷೇತ್ರದಲ್ಲಿ ಮಾತ್ರ ಬೃಹತ್ತಾಗಿತ್ತು. ಅದಾಗುತ್ತಿದ್ದುದು ದೇವರ ಹೆಸರಿನಲ್ಲಿ ಮತ್ತು ದೇವರ ದಲ್ಲಾಳಿಗಳಿಂದ. ದೇವರು, ಧರ್ಮ ಎಂದು ಸಮಾಜವನ್ನು ವಿಂಗಡಿಸಿ ಒಂದು ವರ್ಗಮಾತ್ರ ಅದರ ಲಾಭ ಪಡೆಯುತ್ತಿತ್ತು. ಸರ್ವವ್ಯಾಪಿಯಾದ ದೇವರನ್ನು ನಾಲ್ಕು ಗೋಡೆಗಳಲ್ಲಿ ಬಂಧಿಸಿ, ಅವನಿಗೊಂದು ರೂಪಕೊಟ್ಟು ಶೋಷಣೆಯ ಮೂರ್ತಿಯನ್ನಾಗಿ ಮಾಡಿತ್ತು ಈ ವರ್ಗ. ಅಸಂಖ್ಯಾತ ದೇವರುಗಳನ್ನು ಮರದಿಂದ, ಕಲ್ಲಿನಿಂದ ರೂಪಿಸಿ, ಅವುಗಳ ಪೂಜೆಯ ಹಕ್ಕನ್ನು ಈ ವರ್ಗ ಮಾತ್ರ ಪಡೆದು ಆಳುವ ರಾಜನ ಸಹಿತವಾಗಿ ಬಹುಜನರನ್ನು ಕತ್ತಲಲ್ಲಿರಿಸಿತ್ತು.

ದೇವರ ಹೆಸರಿನಲ್ಲಿ ಶೋಷಣೆಗೊಳ್ಳುತ್ತಿದ್ದ ಸಮಾಜಕ್ಕೆ ಬಸವಣ್ಣ ಹೊಸದಾರಿ ತೋರಿಸಿದ. ಗುಡಿಯಲ್ಲಿದ್ದ ದೇವರನ್ನು ಕಿತ್ತು ತಂದು ಸಾಮಾನ್ಯರ ಕೈಗಿತ್ತ. ಬೃಹದಾಕಾರದ ಕಲ್ಲಿನ ದೇವರನ್ನು ಅಂಗೈಯಲ್ಲಿಟ್ಟು ಇಷ್ಟ ಲಿಂಗದಲ್ಲಿ ಕಾಣಿರೆಂದ. ಇಷ್ಟ ಲಿಂಗ ಹೊಂದಿದ ದೇಹವೆ ದೇವಾಲಯವೆಂದ. ಸ್ಥಾವರವಾಗಿದ್ದ ದೇವಾಲಯಗಳನ್ನು ಚಲಿಸುವ (ಜಂಗಮ) ದೇವಾಲಯಗಳನ್ನಾಗಿ ಮಾಡಿದ. ಇದು ಹನ್ನೆರಡನೆಯ ಶತಮಾನದಲ್ಲಾದ ಕ್ರಾಂತಿ. ಹುಟ್ಟಿನಿಂದಲೆ ಕ್ರಾಂತಿಕಾರಿಯಾಗಿದ್ದ ಬಸವಣ್ಣನ ಚರಿತ್ರೆಯನ್ನು ಹೇಳುವುದೆಂದರೆ ಸಮುದ್ರಮಂಥನ ಮಾಡಿದಂತೆ.

ಬಸವಣ್ಣನ ಅನೇಕ ರೂಪಗಳಲ್ಲಿ ’ಕ್ರಾಂತಿಕಾರಿ ಬಸವಣ್ಣ’ನ ರೂಪ ಬಲು ಅಪರೂಪ. ಜಡ್ಡುಗಟ್ಟಿದ ಸಮಾಜದ ಬ್ರಾಹ್ಮಣ ಕುಟುಂಬದಲ್ಲಿ ಜನ್ಮ ತಳೆದ ಶಿಶು. ಮನೆಯಲ್ಲಿ ಶೈವ ಪರಿಸರ. ಎಲ್ಲವನ್ನು ಆಲೋಚಿಸುವ, ಪರಿಷ್ಕರಿಸುವ, ಚಿಕ್ಸಿತ್ಸಕ ಬುದ್ಧಿಯ ಮಗು ಸಂಗನಬಸವ. ಬಾಲ ಸಂಗಣ್ಣನ ಚಿಕಿತ್ಸಿಕ ಪ್ರಶ್ನೆಗಳಿಗೆ ತನಗೆ ತಿಳಿದಂತೆ ಉತ್ತರಿಸುತ್ತಿದ್ದವಳು ತಾಯಿಯಂತಿದ್ದ ಅಕ್ಕ ನಾಗಮ್ಮ. ಅವಳೇ ಆಗಿರಲೂಬಹುದು ಅವನ ಮೊದಲ ಗುರು. ಬಾಲ್ಯದಲ್ಲಿಯೆ ತಂದೆ ತಾಯಿ ಕಳೆದುಕೊಂಡು ಬೆಳೆದದ್ದು ಸಂಬಂಧಿಗಳ ಕೈಯಲ್ಲಿ. ತನ್ನ ಸುತ್ತಮುತ್ತ ನಡೆಯುವ ಅನಾಚಾರಗಳನ್ನು ನೋಡುತ್ತಿದ್ದ ಸಂಗನಬಸವನಿಗೆ ಬ್ರಾಹ್ಮಣರ ದ್ವಿಮುಖ ನೀತಿ ವಿಚಿತ್ರವೆನಿಸಿತು. “ಏನಯ್ಯಾ, ವಿಪ್ರರು ನುಡಿದಂತೆ ನಡೆಯರು, ಇದೆಂತಯ್ಯಾ? ತಮಗೊಂದು ಬಟ್ಟೆ, ಶಾಸ್ತ್ರಕ್ಕೊಂದು ಬಟ್ಟೆ” ಎಂದು ಹಾರುವರ ದ್ವಿಮುಖ ನೀತಿಯನ್ನು ಖಂಡಿಸಲಾರಂಭಿಸಿದ.

ತನ್ನ ಎಂಟನೆಯ ವರ್ಷದಲ್ಲಿ ನಡೆಯುವ ಉಪನಯನದ ಅಗತ್ಯತೆಯನ್ನು ಪ್ರಶ್ನೆ ಮಾಡಿದ ಬಾಲ ಕ್ರಾಂತಿಕಾರಿ. ತನಗಿಂತ ಮುಂಚೆ ಹುಟ್ಟಿದ ಅಕ್ಕನಿಗೇಕಿಲ್ಲ ಉಪನಯನ ಎಂದು ಪ್ರಶ್ನಿಸಿದ: “ಒಲ್ಲೆನಯ್ಯಾ, ಒಲ್ಲೆನಯ್ಯಾ ನಿಮ್ಮವರಲ್ಲದವರ, ಒಲ್ಲೆನಯ್ಯಾ, ಒಲ್ಲೆನಯ್ಯಾ ಜಗವೆಲ್ಲರಿಯಲು” ಎಂದು ಮನೆಬಿಟ್ಟ ಕೂಡಲ ಸಂಗಮವನ್ನರಸುತ್ತ ಹೊರಟ. ಪುರದ ಯಜಮಾನನಾಗುವ ಅವಕಾಶವನ್ನು ಬದಿಗೊತ್ತಿ ಹೆಚ್ಚಿನ ವ್ಯಾಸಂಗಕ್ಕೆ ದೂರಿನೂರಾದ ಕಪ್ಪಡಿ ಸಂಗಮಕ್ಕೆ ಕಾಲ್ನಡಿಗೆಯಲ್ಲಿ ಸಾಗಿದ ಈ ಕ್ರಾಂತಿಕಾರಿ. “ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಸ್ಥಾವರ ದೈವಕ್ಕೆರಗಲಾರದು” ಎಂಬ ಆಲೋಚನೆಗಳು ದಟ್ಟವಾದವು ಬಸವನ ಮನದಲ್ಲಿ. ಆಗ ಸಿಕ್ಕಿತೊಂದು ತಿರುವು ಬಸವಣ್ಣನ ಜೀವನದಲ್ಲಿ. ರಾಜ ಬಿಜ್ಜಳನ ಆಶ್ರಯದಲ್ಲಿದ್ದ ಸೋದರ ಮಾವ ಬಲದೇವರಸನ ಮಗಳ ಮದುವೆಯ ಪ್ರಸ್ತಾಪ. ’ಕಾಯಕವೇ ಕೈಲಾಸ’ ಎಂಬ ಬಸವಣ್ಣನಿಗೆ ಆಕರ್ಷಕವಾಗಿ ಕಂಡಿತು ರಾಜಧಾನಿಯಲ್ಲಿನ ಕಾಯಕದ ಆಹ್ವಾನ. ಕಾಯಕ ಹಾಗು ಅರ್ಧಾಂಗಿಯಾಗಬೇಕಾದ ನೀಲಗಂಗಳನ್ನು ಒಪ್ಪಿ ಸ್ವೀಕರಿಸಿದ. ಮದುವೆಯ ನಂತರ ಮಂಗಳವೆಡೆಗೆ ಪ್ರಯಾಣ. ಅಲ್ಲಿತ್ತು ಕಲಚುರಿ ವಂಶದ ಬಿಜ್ಜಳನ ರಾಜ್ಯ. ಮಾವ ಬಲದೇವರಸ ಆ ರಾಜ್ಯದ ಮಂತ್ರಿ. ಮಾವ ಅರಿತಿದ್ದ ಅಳಿಯನ ಜ್ಞಾನ. ಭಂಡಾರ ಕಾಯಕದ ಹೊರೆ ಬಸವಣ್ಣನವರ ಮೇಲೆ ಅವರಿಂದ ಅರಸಿ ಬಂತು, ’ಪರಸ್ತ್ರೀ ಪರಧನವೆಂಬ ಜೂಬಿಗಂಜುವೆ’ ಎನ್ನುವ ಬಸವಣ್ಣ ಅಲ್ಲಿ ನಡೆಯುತ್ತಿದ್ದ ಮೋಸದ ಲೆಕ್ಕ ಬಯಲಿಗೆಳೆದು, ರಾಜ ಬಿಜ್ಜಳನ ಕಣ್ಣಿಗೆ ಬಿದ್ದ. ರಾಜ್ಯದ ಬೊಕ್ಕಸವನ್ನು ಪ್ರಜೆಗಳಿಗೆ ಹೊರೆಯಾಗದಂತೆ ಹೆಚ್ಚಿಸಿದ ಸುಪ್ತ ಕ್ರಾಂತಿಕಾರಿ ಆರ್ಥಿಕ ತಜ್ಞ. ಓದು, ಬರಹ, ಧಾರ್ಮಿಕ, ಆರ್ಥಿಕ, ಸಾಮಾಜಿಕ ಅಲ್ಲದೆ ರಾಜನೀತಿ, ಅಲಿಪ್ತ ನೀತಿ, ನ್ಯಾಯನೀತಿ ಎಲ್ಲವೂ ಅಂದು ಬ್ರಾಹ್ಮಣರ ಸೊತ್ತಾಗಿತ್ತು ಮತ್ತ ಅದರ ಬಗ್ಗೆ ಅನ್ಯರು ಆಲೋಚನೆ ಮಾಡುವದು ಸಹ ಅಪರಾಧವಾಗಿತ್ತು.
ಧರ್ಮಸ್ಯ ಬ್ರಾಹ್ಮಣೋ ಮೂಲಂ..

ಬ್ರಾಹ್ಮಣಃ ಸಂಭವೇನೈವ ದೇವಾನಾಮಪಿ ದೈವತಂ
ಪ್ರಮಾಣಂ ಚೈವ ಲೋಕಸ್ಯ ಬ್ರಹ್ಮಾತ್ರೈವ ಹಿ ಕಾರಣಂ
“ಬ್ರಾಹ್ಮಣನೇ ಧರ್ಮದ ಮೂಲ. ತನ್ನ ಹುಟ್ಟಿನಿಂದ ಅವನು ದೇವತೆಗಳಿಗೂ ದೇವರಾಗಿದ್ದಾನೆ. ಅವನ ಮಾತು ಜನರಿಗೆ ಪ್ರಮಾಣೀಭೂತವಾತವಾದುದು” (ಛಾಂದಗ್ಯೋಪನಿಷತ್ – ಅನುವಾದ ಪ್ರೊ ಕೆ.ಎಸ್.ಭಗವಾನ್). ಇಂತಹ ಕಾಲದಲ್ಲಿ ಬ್ರಾಹ್ಮಣ್ಯದ ಪ್ರಾಬಲ್ಯವನ್ನು ಮಧ್ಯಕಾಲದ ಇತಿಹಾಸದಲ್ಲಿ ಮೊದಲ ಬಾರಿ ಪ್ರಶ್ನಿಸಿದ ಕ್ರಾಂತಿಕಾರಿ ಬಸವಣ್ಣ. ತಮಗೆ ವಹಿಸಿದ ಕಾಯಕದಲ್ಲಿ ನಿಷ್ಠಾತರಾಗಿದ್ದ ಬಸವಣ್ಣ ಅಭಿವೃದ್ಧಿಯ ಮೆಟ್ಟಿಲುಗಳನ್ನು ಏರುತ್ತ ಹೋದರು. ಆರ್ಥಿಕ ಮಂತ್ರಿಯಾದರು, ನಂತರ ಆ ದೇಶದ ಮಹಾಮಂತ್ರಿಯಾದರು.


ಇದನ್ನೂ ಓದಿ: ಮತ್ತೆ ಹುಟ್ಟಿಬಾ ಅಣ್ಣ ಬಸವಣ್ಣ …….


ವೃತ್ತಿ ಜಾತಿಯಾಗಿ, ಜಾತಿಯು ಧರ್ಮವಾಗಿದ್ದ ಕಾಲವದು. ಡಾ. ಎಂ. ಎಂ. ಕಲಬುರ್ಗಿ ಸುಂದರವಾಗಿ ಹೇಳಿದ್ದಾರೆ “ನಾನು ನನಗಾಗಿ ಎನ್ನುವನು ವ್ಯಕ್ತಿ, ನಾನು ಸಮಾಜಕ್ಕಾಗಿ ಎನ್ನುವನು ಸದಸ್ಯ. ಆದುದರಿಂದ ಲಿಂಗಾಯತದಲ್ಲಿ ನಾನು ನನ್ನ ಉದ್ಧಾರಕ್ಕಾಗಿ ಎನ್ನುವ ವ್ಯಕ್ತಿ ಅಥವಾ ಭಕ್ತರಿಲ್ಲ. ನಾನು ಸಮಾಜದ ಉದ್ಧಾರಕ್ಕಾಗಿ ಎನ್ನುವ ಶರಣರಿದ್ದಾರೆ. ಭಕ್ತನಾಗುವದಕ್ಕಿಂತ ಶರಣನಾಗುವದು ಮುಖ್ಯವೆಂದು ಶರಣರ ಅಭಿಮತ”. ಬಸವಣ್ಣನವರಿಗೆ ಉಳಿದ ಮಹಾಪುರುಷರಂತೆ ತಮ್ಮ ಆತ್ಮೋದ್ಧಾರ ಮಾಡಿಕೊಳ್ಳುವದು ಮುಖ್ಯವಾಗಿರಲಿಲ್ಲ. ಸಮಾಜದ ಸರ್ವತೋಮುಖ ಅಭಿವೃದ್ಧಿ ಅವರ ಗುರಿಯಾಗಿತ್ತು.

ಸಮಾಜೋ- ಧಾರ್ಮಿಕ ತತ್ವದಿಂದ ಭಾರತದ ಉದ್ದಲಗಳಲಿದ್ದ ಕ್ರಾಂತಿಕಾರಿ ಶರಣರ ಸಾಮೀಪ್ಯ ಪಡೆದು, ಅವರನ್ನು ಅನುಭವ ಮಂಟಪದಲ್ಲಿ ಸಂಗಮ ಮಾಡಿದ ಬಹುದೊಡ್ಡ ಕ್ರಾಂತಿಕಾರಿ ಬಸವಣ್ಣ. ವರ್ಣ, ವರ್ಗದ ಜಡ ನೀತಿಯನ್ನು ಸಮಾಜದಿಂದ ತೊಲಗಿಸಲು ನಿರ್ಧರಿಸಿದ ಜಗತ್ತಿನ ಮೊದಲ ಕ್ರಾಂತಿಕಾರಿ.

“ಅಣ್ಣ, ತಮ್ಮ, ಹೆತ್ತಯ್ಯ ಗೋತ್ರವಾದಡೇನು? ಲಿಂಗಸಾಹಿತ್ಯರಲ್ಲದವರ ಎನ್ನವರೆನ್ನೆನಯ್ಯಾ ಎಂದು ಲಿಂಗ ಧರಿಸಿದವರೆಲ್ಲರನ್ನೂ ನನ್ನವರೆಂದ “ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹರ ಕಕ್ಕಯ್ಯ, ಅಣ್ಣನು ನಮ್ಮ ಕಿನ್ನರಿ ಬೊಮ್ಮಯ್ಯನೆಂದು ಯಾರನ್ನು ಸಮಾಜ ಅಂತ್ಯಜರೆಂದು ಕರೆದಿತ್ತೋ ಅವರನ್ನು ತನ್ನ ಕುಲಬಾಂಧವರೆಂದು ಅವರನ್ನು ಅಪ್ಪಿಕೊಂಡ.

ಇದನ್ನೂ ಓದಿ: ವಚನಗಳ ಸಾಹಿತ್ಯ ಮೌಲ್ಯ: ಬಸವಣ್ಣನವರ ಉಪಮಾಲೋಕ ಒಂದು ಅದ್ಭುತ ಚಿತ್ರಸೃಷ್ಟಿ

ಮುಂದುವರೆದ ದೇಶಗಳೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಪಾಶ್ಚಿಮಾತ್ಯ ರಾಷ್ಟ್ರಗಳಿಗಿಂತ ಮೊದಲೇ ಹೆಣ್ಣಿಗೆ ಸಮಾನ ಸ್ಥಾನಮಾನ ನೀಡಿದ ಮೊದಲ ಸಮಾಜವಾದಿ ಕ್ರಾಂತಿಕಾರಿ ಕೂಡ ಅವರು. ಹೆಣ್ಣಿನ ಋತುಚಕ್ರ ಅವಳಿಗೆ ಕಂಟಕವಾಗಿತ್ತು, ಅದರಿಂದ ಸಮಾಜದಲ್ಲಿ ಹೆಚ್ಚು ಉಪೇಕ್ಷೆಗೆ ಒಳಗಾಗಿದ್ದಳು. ಅಕ್ಕನಿಗೇಕಿಲ್ಲ ಉಪನಯನವೆಂದು ತನ್ನ ಬಾಲ್ಯದಲ್ಲಿಯೇ ಪ್ರಶ್ನಿಸಿದ್ದ ಬಸವಣ್ಣನಿಗೆ ಹೆಣ್ಣು ಗಂಡಿನ ವ್ಯತ್ಯಾಸ ಕೇವಲ ದೈಹಿಕ ರಚನೆ ಎಂದು ಮಾತ್ರ ಗೊತ್ತಿತ್ತು. ಅವರ ಗರಡಿಯಲ್ಲಿ ಬೆಳೆದ ಶರಣೆ ಗೊಗ್ಗವ್ವೆ ಹೇಳುತ್ತಾಳೆ: “ಮೊಲೆ ಮೂಡಿ ಬಂದರೆ ಹೆಣ್ಣೆಂಬರು, ಮೀಸೆ ಕಾಸೆ ಬಂದರೆ ಗಂಡೆಂಬರು, ಒಳಗೆ ಸುಳಿವ ಆತ್ಮ ಗಂಡೂ ಅಲ್ಲ ಹೆಣ್ಣು ಅಲ್ಲ. ಕುಲೀನ ಮನೆತನವೆಂದು ಸಮಾಜದಿಂದ ಜರಿತಕ್ಕೊಳಗಾದ ಕುಟುಂಬದ ಸ್ತ್ರೀ ಶರಣೆ ಗೊಗ್ಗವ್ವೆ. ಅವಳಂತೆ ಇನ್ನೊಬ್ಬ ಶರಣೆ ಆಯ್ದಕ್ಕಿ ಲಕ್ಕಮ್ಮ ಬರೆಯುತ್ತಾಳೆ: “ಕೂಟಕ್ಕೆ ಸತಿಪತಿಯೆಂಬ ನಾಮವಲ್ಲದೆ ಅರಿವಿಂಗೆ ಬೇರೊಂದೊಡಲುಂಟೆ” ಎಂದು. ಹೀಗೆ ಶರಣ ಕ್ರಾಂತಿಯಲ್ಲಿ ಮಹಿಳೆಯರ ಪ್ರಾತಿನಿಧ್ಯದ ಬಗ್ಗೆಯೂ ಎಚ್ಚರದಿಂದ ಅನುಕರಣಿಯ ನಡೆ ಇಟ್ಟವರು ಬಸವಣ್ಣ.

ಕಾಯಕದಲ್ಲಿ ಮೇಲು ಕೀಳು ಸಲ್ಲ ’ಕಾಯಕವೇ ಕೈಲಾಸ’ ಎಂದ ಕಾಯಕ ಯೋಗಿ ಅವರು. ವೃತ್ತಿ ಜಾತಿಯಾಯಿತು. ವರ್ಗ ಭೇದದ ಮೂಲ ಅಧಿಕಾರ. ಸಮಾಜದ ಮೇಲೆ ಯಾರೊಬ್ಬನ ಅಧಿಕಾರ ಇಲ್ಲ. ಸಮಾಜ ನಿಂತಿರುವದು ಒಬ್ಬರ ಮೇಲಲ್ಲ ಇನ್ನೊಬ್ಬರ ಅವಲಂಬನೆಯ ಆಧಾರದ, ಮತ್ತೊಬ್ಬ ಸಹಕಾರ ತತ್ವದ ಮೇಲೆ, ಆದುದರಿಂದ ಅದನ್ನು ಅಧಿಕಾರ ಎಂದು ಅಳೆಯಬಾರದು ಎಂದರು ಶರಣರು. ಕಾಯಕ ಮಾಡುವರೆಲ್ಲರೂ ಶರಣರು. ಅವರಿಗೆ ಮೇಲುಕೀಳು ಎಂಬ ಭಾವ ಏಕೆ? “ಜಾತಿವಿಡಿದು ಸೂತಕವನರಸುವೆ; ಜ್ಯೋತಿವಿಡಿದು ಕತ್ತಲವನರಸುವೆ ಇದೇಕೊ ಮರಳುಮಾನವಾ? ಜಾತಿಯಲ್ಲಿ ಅಧಿಕನೆಂಬೆ! ವಿಪ್ರ ಶತಕೋಟಿಗಳಿದ್ದಲ್ಲಿ ಫಲವೇನೊ?” ಎಂದು ಪ್ರಶ್ನೆ ಮಾಡುವರು ಬಸವಣ್ಣನವರು. ಸೂಳೆ ಸಂಕವ್ವೆ, ಬೀದಿ ಕಸ ಹೆಕ್ಕುವ ಸತ್ಯಕ್ಕ, ಅಕ್ಕಮಹಾದೇವಿ, ಅಕ್ಕ ನಾಗಮ್ಮರೆಲ್ಲರೂ ಒಂದೇ ಸಾಲಿನಲ್ಲಿ. ಇದೆ ಸಾಲಿನಲ್ಲಿ ಬಸವಣ್ಣ, ಸಿದ್ದರಾಮ, ಚನ್ನಬಸವಣ್ಣ, ಮಾಚಯ್ಯ, ಕಕ್ಕಯ್ಯ. ಎಲ್ಲರಿಗೂ ಒಂದೇ ಸ್ಥಾನ. ಇವರೆಲ್ಲರಿಂದ ತುಂಬಿತ್ತು ಅನುಭವ ಮಂಟಪ. ಚರ್ಚೆ, ತರ್ಕ, ವಿತರ್ಕ, ವಚನ ರಚನೆ ಅವುಗಳಿಗೆಲ್ಲ ಅಧಿಪತಿ ಅಧ್ಯಕ್ಷ ಆಧ್ಯಾತ್ಮ ಸೂರ್ಯ ಅಲ್ಲಮಪ್ರಭು.

“ಪ್ರೀತಿಸುವ ಶರಣರ ಮಕ್ಕಳಿಗೆ ಜಾತಿಯ ಸೋಂಕೇಕೆ” ಎಂದು ಅವರ ಜಾತಿಯ ಪೂರ್ವಾಪರ ಎಣಿಸದೆ ಕಲ್ಯಾಣ ಮಾಡಿ ಎಂದ ರಾಜ್ಯದ ಪ್ರಧಾನಿಯಾದ ಬಸವಣ್ಣ. ಹೋಯಿತು ದೊರೆಗೆ ದೂರು. ಕಚ್ಚಿದರು ದೊರೆಯ ಕಿವಿ. ವರ್ಣಸಂಕರವಾದರೆ ಮುಳಗಿಹೋದೀತು ಧರೆ ಎಂದರು ಆಸ್ಥಾನದ ಬ್ರಾಹ್ಮಣರು. ಬಂತು ಬಸವಣ್ಣನವರ ಪ್ರಧಾನಿ ಪಟ್ಟಕ್ಕೆ ಸಂಚು. ಆದರೆ ಅದನ್ನೂ ಲೆಕ್ಕಿಸಲಿಲ್ಲ ಕ್ರಾಂತಿಕಾರಿ ಬಸವಣ್ಣ. “ಅಂಜಿದಡೆ ಮಾಣದು, ಅಳುಕಿದಡೆ ಮಾಣದು, ವಜ್ರ ಪಂಜರದೊಳಗಿದ್ದಡೆ ಮಾಣದು, ತಪ್ಪದುವೋ ಲಿಲಾಟ ಲಿಖಿತ” ಎಂದರು ವಜ್ರ ದೇಹಿ ಬಸವಣ್ಣ. ಅಧಿಕಾರಕ್ಕಿಂತ ಸಿದ್ಧಾಂತ ಮುಖ್ಯವೆಂದ ನಿಸ್ವಾರ್ಥಿ. ತಪ್ಪು ಮಾಡಿದವ ರಾಜನಿರಲಿ ಪ್ರಜೆ ಇರಲಿ ನ್ಯಾಯ ಇಬ್ಬರಿಗೂ ಒಂದೇ ಎಂದು ಪ್ರಜಾಸತ್ತಾತ್ಮಕ ನಿಲುವು ತಳೆದ ನ್ಯಾಯವಾದಿ. ದಾರಿ ತಪ್ಪಿದವನು ರಾಜನಾಗಲಿ ಅಥವಾ ಪ್ರಜೆಯಾಗಲಿ, ಇವರಿಬ್ಬರಿಗೂ ಸಮಾನ ಶಿಕ್ಷೆ ನೀಡುವ ಜ್ಞಾನ ಬಲ, ನೈತಿಕ ಬಲ ತುಂಬಿದ ಜನಪ್ರಿಯ ಕ್ರಾಂತಿಕಾರಿ, “ಬಾರದು ಬಪ್ಪುದು, ಬಪ್ಪುದು ತಪ್ಪದು” ಎಂದು ನಡೆದುಬಿಟ್ಟರು ಕಲ್ಯಾಣದತ್ತ.

  • ಜಿ ಬಿ ಪಾಟೀಲ್


ಬಸವನ ಬಾಗೇವಾಡಿಯ ಜಿ.ಬಿ.ಪಾಟೀಲ್ ಅವರು ಬೆಂಗಳೂರಿನಲ್ಲಿ ಯಶಸ್ವಿ ಉದ್ಯಮಿಯಾಗಿದ್ದೂ, ಸಾಮಾಜಿಕ ಹಾಗೂ ರಾಜಕೀಯ ಸಂಗತಿಗಳಲ್ಲಿ ನಿರಂತರ ಆಸಕ್ತಿ ಹೊಂದಿದ್ದವರು. ಸದ್ಯ ಜಾಗತಿಕ ಲಿಂಗಾಯಿತ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯರಾಗಿದ್ದಾರೆ.


ಇದನ್ನೂ ಓದಿ: ಉಳವಿಯಲ್ಲಿ ಚನ್ನಬಸವಣ್ಣನ ದಿಟ್ಟ ಹೋರಾಟ : ಶರಣ ಚಳುವಳಿಯ ಮಹತ್ವದ ಮೈಲಿಗಲ್ಲು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Hengagutte Lasike, idu virus alve enadru manusyarannu badukisuva medicine iddre heli, nijavaglu badukalu prayatnisi , tatvajnana vu medicine hegagutte , obbarigobbaru sahaya madabekadaru saha medicine bekalla, medicine ellide??????

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...