ಅಂತಾರಾಷ್ಟ್ರೀಯ ಪಾಪ್ ತಾರೆ ರಿಹಾನ್ನಾ ಭಾರತದ ರೈತ ಹೋರಾಟ ಬೆಂಬಲಿಸಿ ಮಾಡಿದ ಟ್ವೀಟ್ ನಂತರ, ಕೇಂದ್ರದ ಮೂರು ವಿವಾದಾತ್ಮಕ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಈಗ ಜಾಗತಿಕ ಮನ್ನಣೆ ಸಿಗತೊಡಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಕಿರಿಯ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಮತ್ತು ಜಗತ್ತನ ವಿವಿಧ ಭಾಗಗಳ ಜನಪ್ರತಿನಿಧಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ರೈತ ಹೋರಾಟಕ್ಕೆ ಅಪಾರ ಬೆಂಬಲವನ್ನು ನೀಡಿದ್ದಾರೆ. ಕಳೆದ ನವೆಂಬರ್ ಅಂತ್ಯದಲ್ಲಿ ದೆಹಲಿಯ ಗಡಿಯ ಬಳಿ ಪ್ರಾರಂಭವಾದ ಆಂದೋಲನದ ಬಗ್ಗೆ ಅಮೆರಿಕ ಮತ್ತು ಬ್ರಿಟನ್ಗಳ ಕೆಲವು ಜನಪ್ರತಿನಿಧಿಗಳು ಪ್ರತಿಕ್ರಿಯೆ ನೀಡಿದ್ದು ಬೆಂಬಲ ಸೂಚಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ಟ್ರಾಕ್ಟರ್ ರ್ಯಾಲಿ ಮತ್ತು ಗಣರಾಜ್ಯೋತ್ಸವದ ನಂತರದ ಅಹಿತಕರ ಘಟನೆಗಳಿಗೆ ದೆಹಲಿಯು ಸಾಕ್ಷಿಯಾದ ಸುಮಾರು ಒಂದು ವಾರದ ನಂತರ, ದೆಹಲಿ ಹೊರವಲಯದಲ್ಲಿ ಅನೇಕ ಬ್ಯಾರಿಕೇಡ್ಗಳು ಮತ್ತು ಮುಳ್ಳುತಂತಿ ಬೇಲಿಗಳನ್ನು ಹಾಕಲಾಗಿದೆ. ಇದನ್ನು ಪ್ರತಿಭಟನಾಕಾರರು “ತೀವ್ರ ದ್ವೇಷದ ಕ್ರಮಗಳು” ಎಂದು ವ್ಯಾಖ್ಯಾನಿಸಿದ್ದಾರೆ. ಇಂಟರ್ನೆಟ್ ಸ್ಥಗಿತಗೊಳಿಸಿದ್ದು, ಹಲವು ಸಂಘಟನೆಗಳ ಟ್ವಿಟರ್ ಖಾಯೆಗಳನ್ನೂ ಸ್ಥಗಿತಗೊಳಿಸಲಾಗಿತ್ತು.
ಇದನ್ನೂ ಓದಿ: ರೈತ ಹೋರಾಟಕ್ಕೆ ಗ್ರೇಥಾ ಥನ್ಬರ್ಗ್ ಮತ್ತು ಪಾಪ್ ಗಾಯಕಿ ರಿಹಾನ್ನಾ ಬೆಂಬಲ; ನೆಟ್ಟಿಗರ ಪ್ರತಿಕ್ರಿಯೆಯೇನು?
ನಿನ್ನೆ ಸಂಜೆ, ಪಾಪ್ ಐಕಾನ್ ರಿಹಾನ್ನಾ ತನ್ನ 100 ಮಿಲಿಯನ್ ಅನುಯಾಯಿಗಳನ್ನು ಉದ್ದೇಶಿಸಿ, “ನಾವು ಈ ರೈತರ ಪ್ರತಿಭಟನೆ ಬಗ್ಗೆ ಏಕೆ ಮಾತನಾಡುತ್ತಿಲ್ಲ?” ಎಂದು ಟ್ವೀಟ್ ಮಾಡಿ, ಇಂಟರ್ನೆಟ್ ಸ್ಥಗಿತ ಕುರಿತಾದ ಸಿಎನ್ಎನ್ ವರದಿ ಹಂಚಿಕೊಂಡಿದ್ದರು. ಇದು ಈಗ ಜಾಗತಿಕ ಮಟ್ಟದಲ್ಲಿ ಬೆಂಬಲವನ್ನು ಪಡೆಯುತ್ತಿದೆ.
ಯುಕೆ ಸಂಸದೆ ಕ್ಲೌಡಿಯಾ ವೆಬ್ಬೆ ಅವರು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ: “ಭಾರತೀಯ ರೈತರಿಗೆ ನನ್ನ ಬೆಂಬಲ. ಧನ್ಯವಾದಗಳು ರಿಹಾನ್ನಾ. ರಾಜಕೀಯ ನಾಯಕತ್ವದ ಕೊರತೆಯಿರುವ ಈ ಸಂದರ್ಭದಲ್ಲಿ ನೀವು ಮುಂದೆ ಹೆಜ್ಜೆ ಹಾಕಿದ್ದಕ್ಕಾಗಿ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ.
Solidarity to the Indian Farmers.
Thank you Rihanna.
In an era where political leadership is lacking we are grateful for others stepping forward#FarmersProtest pic.twitter.com/jdZnGWURBl
— Claudia Webbe MP (@ClaudiaWebbe) February 2, 2021
ಇದನ್ನೂ ಓದಿ: ಹರಿಯಾಣ: ರೈತ ಹೋರಾಟ ಬೆಂಬಲಿಸಿ ಜೆಜೆಪಿ ಪಕ್ಷ ತೊರೆದ ಮುಖಂಡ
ರಿಹಾನ್ನ ಟ್ವೀಟ್ ನಂತರ ಅನೇಕರು ಪ್ರತಿಭಟನಾಕಾರರಿಗೆ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಪಂಜಾಬಿ ಪಾಪ್ ಗಾಯಕ ದಿಲ್ಜಿತ್ , “ಆಂದೋಲನವನ್ನು ಬೆಂಬಲಿಸುವ ಧ್ವನಿಗಳಿಗೆ ಸ್ಪೂರ್ತಿ ನೀಡಿದ ಅಂತರರಾಷ್ಟ್ರೀಯ ಐಕಾನ್ಗೆ ಧನ್ಯವಾದಗಳು” ಎಂದಿದ್ದಾರೆ.
ಅಮೆರಿಕಾ ಡೆಮಾಕ್ರಟ್ ಸಂಸದ ಜಿಮ್ ಕೋಸ್ಟಾ, ರಿಹಾನ್ನಾ ಪೋಸ್ಟ್ ಮಾಡಿದ ಹ್ಯಾಶ್ಟ್ಯಾಗ್ -#FarmersProtest ಅನ್ನು ಬಳಸಿ, ’ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವೆ’ ಎಂದು ಅವರು ಒತ್ತಿ ಹೇಳಿದ್ದಾರೆ. “ಭಾರತದಲ್ಲಿ ನಡೆಯುತ್ತಿರುವ ಘಟನೆಗಳು ಕಿರಿಕಿರಿ ಉಂಟು ಮಾಡುತ್ತಿವೆ. ವಿದೇಶಾಂಗ ವ್ಯವಹಾರಗಳ ಸಮಿತಿಯ ಸದಸ್ಯನಾಗಿ ನಾನು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಯಾವಾಗಲೂ ಗೌರವಿಸಬೇಕು’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಸರ್ಕಾರ ನೀಡುತ್ತಿರುವ ಕಿರುಕುಳ ನಿಲ್ಲಿಸುವವರೆಗೆ ಯಾವುದೇ ಮಾತುಕತೆಯಿಲ್ಲ: ರೈತ ಒಕ್ಕೂಟ
ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸೋದರಿಯ ಮಗಳು ಮೀನಾ ಹ್ಯಾರಿಸ್ ಕೂಡ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. “ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆದಿರುವುದು ಕಾಕತಾಳೀಯವಲ್ಲ, ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಜಾಪ್ರಭುತ್ವವು ಆಕ್ರಮಣಕ್ಕೊಳಗಾಗಿದೆ. ಭಾರತದ ಅಂತರ್ಜಾಲ ಸ್ಥಗಿತಗೊಳಿಸುವಿಕೆ ಮತ್ತು ರೈತ ಪ್ರತಿಭಟನಾಕಾರರ ವಿರುದ್ಧ ಅರೆಸೈನಿಕ ಪಡೆಗಳ ದೌರ್ಜನ್ಯದ ವಿರುದ್ಧ ನಾವೆಲ್ಲರೂ ಆಕ್ರೋಶಗೊಳ್ಳಬೇಕು”ಎಂದು ಅವರು ಟ್ವೀಟ್ ಮಾಡಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಹೋರಾಟ ಮಾಡುತ್ತಿರುವ ಪ್ರತಿಭಟನಾಕಾರರು, ಬ್ಯಾರಿಕೇಡ್ಗಳು ಮತ್ತು ಮುಳ್ಳುತಂತಿ ಬೇಲಿಗಳನ್ನು ಅಳವಡಿಸಿದ್ದರಿಂದ ನೀರು ಮತ್ತು ವಿದ್ಯುತ್ ಸರಬರಾಜಿನಲ್ಲಿ ಅಡ್ಡಿ ಉಂಟಾಗಿದೆ. ರಸ್ತೆಗಳಲ್ಲಿ ಕಂದಕ ಅಗೆಯುವುದು, ಮೊಳೆ ನೆಡುವುದು ಮತ್ತು ತಾತ್ಕಾಲಿಕ ಇಂಟರ್ನೆಟ್ ಅಮಾನತುಗೊಳಿಸುವಿಕೆಯು ಸರ್ಕಾರವು ಆಯೋಜಿಸುತ್ತಿರುವ “ದಾಳಿಯ” ಭಾಗವಾಗಿದೆ ಎಂದು ರೈತ ಒಕ್ಕೂಟ ಸಂಯುಕ್ತ್ ಕಿಸಾನ್ ಮೋರ್ಚಾ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಸೇತುವೆಗಳನ್ನು ಕಟ್ಟಿ, ಗೋಡೆಗಳನ್ನಲ್ಲ: ರೈತ ಹೋರಾಟ ಹಣಿಯುವ ಕೇಂದ್ರದ ಕ್ರಮಕ್ಕೆ ರಾಹುಲ್ ವಿರೋಧ