ಕೃಷಿ ಕಾನೂನುಗಳ ವಿರುದ್ಧ ಹೋರಾಡುತ್ತಿರುವ ರೈತರನ್ನು ದಮನಿಸಲು ಮತ್ತು ಹೆಚ್ಚಿನ ರೈತರು ಪ್ರತಿಭಟನೆಗೆ ಬಂದು ಸೇರದಂತೆ ತಡೆಯಲು ಕೇಂದ್ರ ಸರ್ಕಾರವು ರಸ್ತೆಗಳನ್ನು ಅಗೆದು, ಚೂಪಾದ ಮೊಳೆಗಳನ್ನು ನೆಟ್ಟಿ, ದೊಡ್ಡ ದೊಡ್ಡ ಗೋಡೆಗಳು, ಮುಳ್ಳುತಂತಿಗಳು, ಬ್ಯಾರಿಕೇಡ್ಗಳನ್ನು ಹಾಕುತ್ತಿರುವುದಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರೋಧ ವ್ಯಕ್ತಪಡಿಸಿದ್ದಾರೆ. ಸೇತುವೆಗಳನ್ನು ಕಟ್ಟಿ, ಗೋಡೆಗಳನ್ನಲ್ಲ ಎಂದು ಅವರು ಆಗ್ರಹಿಸಿದ್ದಾರೆ.
ಮಾಧ್ಯಮಗಳಲ್ಲಿ ಪ್ರಕಟಗೊಂಡ ಕೇಂದ್ರ ಸರ್ಕಾರದ ದಮನಕಾರಿ ಕ್ರಮಗಳ ಫೋಟೊಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ “ಭಾರತ ಸರ್ಕಾರ, ಸೇತುವೆಗಳನ್ನು ಕಟ್ಟಿ, ಗೋಡೆಗಳನ್ನಲ್ಲ” ಎಂದು ಕಿಡಿಕಾರಿದ್ದಾರೆ.
ದೆಹಲಿಯ ಗಡಿಗಳಲ್ಲಿ ರೈತರು ಪ್ರತಿಭಟಿಸುತ್ತಿರುವ ಸ್ಥಳಗಳ ಸುತ್ತ ಮತ್ತು ಹತ್ತಿರದ ರಸ್ತೆಗಳಲ್ಲಿ ಬ್ಯಾರಿಕೇಡ್, ಕಾಂಕ್ರಿಟ್ ಗೋಡೆ ಮತ್ತು ಕಬ್ಬಿಣ ತಂತಿ-ಕಬ್ಬಿಣ ಮುಳ್ಳುಗಳನ್ನು ಅಳವಡಿಸಿರುವ ಸರ್ಕಾರದ ಕ್ರಮವನ್ನು ರಾಹುಲ್ ಗಾಂಧಿ ವ್ಯಂಗ್ಯದ ಮೂಲಕ ಟೀಕೆ ಮಾಡಿದ್ದು ಕೇವಲ ನಾಲ್ಕು ಪದಗಳ ಟ್ವೀಟ್ ಮಾಡಿದ್ದಾರೆ.
GOI,
Build bridges, not walls! pic.twitter.com/C7gXKsUJAi
— Rahul Gandhi (@RahulGandhi) February 2, 2021
ಶಾಂತಿಯುತ ಪ್ರತಿಭಟನೆಯೋ ಅಥವಾ ಯುದ್ಧವೋ ? ರೈತರ ಧ್ವನಿಯನ್ನು ತಡೆಗಟ್ಟಲು ಈ ರೀತಿ ಮಾಡುವುದಕ್ಕೆ ಯಾವುದೇ ಸಮರ್ಥನೆಯಿಲ್ಲ. ನಿಮ್ಮ ಬ್ಯಾರಿಕೇಡ್ಗಳು, ಮುಳ್ಳುತಂತಿಗಳಿಂದ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ನಾವು ಶಾಂತಿಯುತವಾಗಿದ್ದೆವು, ಶಾಂತಿಯುವಾಗಿದ್ದೇವೆ ಮತ್ತು ಶಾಂತಿಯುತವಾಗಿರುತ್ತೇವೆ. ನಿಮ್ಮ ಗೂಂಡಾಗಳಿಂದ ನಮ್ಮನ್ನು ಪ್ರಚೋದಿಸಬೇಡಿ ಎಂದು ಕಿಸಾನ್ ಏಕ್ತಾ ಮೋರ್ಚಾ ಟ್ವೀಟ್ ಮಾಡಿದೆ.
You can't stop us with your barriers or nails! We were peaceful, are peaceful, will be peaceful. Don't provoke us with your planted goons. #FencingLikeChinaPak
— Kisan Ekta Morcha (@Kisanektamorcha) February 2, 2021
ಈ ಕುರಿತು ಪ್ರಿಯಾಂಕಾ ಗಾಂಧಿ ಕೂಡ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ‘ಪ್ರಧಾನ್ಮಂತ್ರಿ ಜಿ, ಅಪನೆ ಕಿಸಾನೊ ಸೆ ಹಿಂ ಯುದ್ಧ್?’ (ಪ್ರಧಾನಮಂತ್ರಿಯವರೇ, ನಮ್ಮ ರೈತರೊಂದಿಗೇ ಯುದ್ಧವಾ?) ಎಂದು ಕುಟುಕಿದ್ದಾರೆ. ಅವರು ಗೋಡೆ, ಕಬ್ಬಿಣ ತಂತಿ ಅಳವಡಿಸುವ ವಿಡಿಯೋ ಶೇರ್ ಮಾಡಿದ್ದಾರೆ.
ದೆಹಲಿಯ ಸಿಂಘು, ಟಿಕ್ರಿ ಹಾಗೂ ಗಾಜಿಪುರ್ ಗಡಿಗಳಲ್ಲಿ ರೈತರ ಪ್ರತಿಭಟೆನೆಗಳು ತೀವ್ರವಾಗಿ ಹೆಚ್ಚುತ್ತಿದೆ. ರೈತರು ಅಲ್ಲಿಗೆ ಭಾರಿ ಸಂಖ್ಯೆಯಲ್ಲಿ ಹರಿದು ಬರುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಅಲ್ಲಿ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿಸುವುದು ಸೇರಿದಂತೆ, ಹಲವು ಹಂತಗಳ ಬ್ಯಾರಿಕೇಡ್ ಹಾಕಲಾಗಿದೆ. ಜೊತೆಗೆ ರಸ್ತೆಗಳಲ್ಲಿ ತಡರಾತ್ರಿ ಕಂದಕಗಳನ್ನು ಅಗೆಯಲಾಗಿದೆ. ರಸ್ತೆಯಲ್ಲಿ ಮುಳ್ಳು ಕಂಬಿಗಳನ್ನು ನೆಡುವ ಮೂಲಕ ರೈತರ ಟೈಯರ್ ಪಂಚರ್ ಮಾಡಲು ಯತ್ನಿಸುತ್ತಿದೆ.
ಪೊಲೀಸರು ರಸ್ತೆಗಳನ್ನು ಅಗೆಯುತ್ತಿದ್ದು, ದೊಡ್ಡ ದೊಡ್ಡ ಬ್ಯಾರಿಕೇಡ್ಗಳು, ಮುಳ್ಳು ತಂತಿಗಳನ್ನು ನೆಡುವ ಮೂಲಕ ರೈತರು ಪ್ರತಿಭಟನೆಗೆ ಬಾರದಂತೆ ತಡೆಯುತ್ತಿದೆ. ರೈಲುಗಳ ಮಾರ್ಗಗಳನ್ನೇ ಬದಲಿಸುತ್ತಿದೆ. ಬಿಜೆಪಿ-ಆರ್ಎಸ್ಎಸ್ ಗೂಂಡಾಗಳನ್ನು ಛೂ ಬಿಟ್ಟು ಶಾಂತಿಯುತ ರೈತ ಹೋರಾಟಕ್ಕೆ ಅಡ್ಡಿಪಡಿಸಲಾಗುತ್ತಿದೆ. ಇಂತಹ ಕೃತ್ಯಗಳನ್ನು ಕೇಂದ್ರ ಸರ್ಕಾರ ನಿಲ್ಲಿಸುವವರೆಗೂ ಸರ್ಕಾರದೊಂದಿಗೆ ಔಪಚಾರಿಕ ಮಾತುಕತೆ ಸಾಧ್ಯವಿಲ್ಲವೆಂದು ಸಂಯುಕ್ತ ಕಿಸಾನ್ ಮೋರ್ಚಾ ಘೋಷಿಸಿದೆ. ಅಲ್ಲದೆ ಫೆಬ್ರವರಿ 6ರ ಶನಿವಾರ ಮಧ್ಯಾಹ್ನ 12 ರಿಂದ 3 ಗಂಟೆಯ ತನಕ ಅಂದರೆ ಒಟ್ಟು ಮೂರು ಗಂಟೆಗಳ ಕಾಲ ದೇಶಾದ್ಯಂತ ‘ಸಂಚಾರ ಸ್ಥಗಿತ ಚಳವಳಿ’ ನಡೆಸುವಂತೆ ಕರೆ ನೀಡಿದೆ.
100ಕ್ಕೂ ಹೆಚ್ಚು ರೈತರು ಕಾಣೆಯಾಗಿರುವುದು, ರೈತರು ಮತ್ತು ಪತ್ರಕರ್ತರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿರುವುದು, ರೈತರು ಪ್ರತಿಭಟನೆ ನಡೆಸುತ್ತಿರುವ ಗಡಿಗಳಲ್ಲಿ ಇಂಟರ್ನೆಟ್ ಸ್ಥಗಿತ, ಹೋರಾಟಗಾರರಿಗೆ ಕಿರುಕುಳ, ಪ್ರತಿಭಟನಾ ಸ್ಥಳಗಳ ವಿದ್ಯುತ್ ಮತ್ತು ನೀರು ಸರಬರಾಜನ್ನು ನಿಲ್ಲಿಸಿರುವುದನ್ನು ವಿರೋಧಿಸಿ ಸರ್ಕಾರದ ವಿರುದ್ದ ಪ್ರತಿಭಟಿಸಲು ರೈತರು ಈ ‘ಸಂಚಾರ ಸ್ಥಗಿತ ಚಳವಳಿ’ ಕರೆ ನೀಡಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ ತಡೆಯಲು ದಾರಿಯಲ್ಲಿ ಮುಳ್ಳುಕಂಬ ನೆಡುತ್ತಿರುವ ಕೇಂದ್ರ ಸರ್ಕಾರ!