Homeಚಳವಳಿಬಲಪಂಥೀಯ ಭಯೋತ್ಪಾದನೆಯ ಬೇರುಗಳು

ಬಲಪಂಥೀಯ ಭಯೋತ್ಪಾದನೆಯ ಬೇರುಗಳು

- Advertisement -
- Advertisement -

ನಮ್ಮ ತಂಡದ ಕ್ಯಾಪ್ಟನ್, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆಗಾರರ ಜಾಲವನ್ನು ಕೆದಕಿದಷ್ಟೂ ಆತಂಕಕಾರಿ ಮಾಹಿತಿಗಳು ಹೊರಬರುತ್ತಿವೆ. ಈ ಕೊಲೆಯ ಸಂಚಿನಲ್ಲಿ ಸೇನೆಯ ನಿವೃತ್ತ ಕರ್ನಲ್ ಒಬ್ಬನನ್ನು ಒಳಗೊಂಡು ಬಲಪಂಥೀಯ ಸಂಘಟನೆಯೊಂದರ ನಾಲ್ಕು ಟಾಪ್ ಲೀಡರ್‍ಗಳು ಭಾಗಿಯಾಗಿದ್ದಾರೆಂದು ಎಸ್‍ಐಟಿ ಮೂಲಗಳನ್ನು ಆಧರಿಸಿ ಇಂಡಿಯನ್ ಎಕ್ಸ್‍ಪ್ರೆಸ್ ವರದಿ ಮಾಡಿದೆ.
ಗೌರಿಯವರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿ, ಈಗ ಜೈಲಿನಲ್ಲಿರುವ ಪರಶುರಾಮ ವಾಗ್ಮೋರೆ ‘ಯಾರೋ ಮಾಡಿದ ಸಂಚಿಗೆ ನಾನು ಹರಕೆಯ ಕುರಿಯಾದೆ’ ಎಂದು ತನ್ನ ತಂದೆ ತಾಯಿಯ ಬಳಿ ಪಶ್ಚಾತ್ತಾಪದ ಮಾತಾಡಿದ್ದಾನೆಂಬುದು ವರದಿಯಾಗಿತ್ತು. ಈ ಪಾತಕದ ಸಂಚು ರೂಪಿಸಿದ್ದು ಈಗ ಎಸ್‍ಐಟಿ ವಶದಲ್ಲಿರುವ ಮಹಾರಾಷ್ಟ್ರ ಮೂಲದ ಅಮೋಲ್ ಕಾಳೆ ಎಂಬ ಅಭಿಪ್ರಾಯಕ್ಕೆ ಎಸ್‍ಐಟಿ ತಲುಪಿತ್ತು. ಆದರೆ ತನಿಖೆ ಮುಂದುವರೆಯುತ್ತಿದ್ದಂತೆ ಹೊರಬಿದ್ದ ರಹಸ್ಯ ‘ಸಂಘ’ದ ಉನ್ನತ ಹಂತದ ಸಂಚುಕೋರ ನಾಯಕರ ಆದೇಶವನ್ನು ಅಮೋಲ್ ಕಾಳೆ ಜಾರಿ ಮಾಡಿದ್ದಾನೆ ಎಂಬುದು. ಈ ಕೃತ್ಯಕ್ಕೆ ಬೇಕಾದ ಹಣಕಾಸನ್ನು ಕೂಡ ಇದೇ ಸಂಘಟನೆ ಒದಗಿಸಿದೆ. ಇದಕ್ಕಾಗಿ ಅಮೋಲ್ ಕಾಳೆಗೆ ಪ್ರತಿ ತಿಂಗಳು ಕನಿಷ್ಟ 1.25 ಲಕ್ಷ ರೂಪಾಯಿ ಪಾವತಿಯಾಗಿದೆ. ಈ ಹಣ ಒದಗಿಸಿದ್ದು ಆತನ ಕಿಲ್ಲರ್ ಗ್ಯಾಂಗ್‍ನ ನಿರ್ವಹಣೆಗಾಗಿ ಎಂದು ವರದಿ ಹೇಳಿದೆ.
ಆ ನಾಲ್ಕು ಉನ್ನತ ಹಂತದ ನಾಯಕರೇ ಗೌರಿ ಕೊಲೆ ಮಾಡಲು ಆದೇಶ ಹೊರಡಿಸಿದ್ದು ಎಂಬ ಸುಳಿವು ಎಸ್‍ಐಟಿಗೆ ಸಿಕ್ಕಿದೆಯಾದರೂ ಖಚಿತ ಸಾಕ್ಷ್ಯಾಧಾರಗಳು ಸದ್ಯ ಲಭ್ಯವಿಲ್ಲದ ಕಾರಣ ತನಿಖೆ ಮುಂದುವರೆದಿದೆ. ಮಾತ್ರವಲ್ಲ, ನಾಪತ್ತೆಯಾಗಿರುವ ಇತರೆ ಆರೋಪಿಗಳನ್ನು ಶತಾಯಗತಾಯ ರಕ್ಷಣೆಮಾಡಲು ಅದೇ ಸಂಘಟನೆ ಶ್ರಮಿಸುತ್ತಿದೆ ಎಂಬ ಆಘಾತಕಾರಿ ಮಾಹಿತಿಯೂ ಹೊರಬಿದ್ದಿದೆ. ಹಲವು ಪ್ರತಿಕೂಲ ಅಂಶಗಳ ಹೊರತಾಗಿಯೂ ಎಸ್‍ಐಟಿ ತನಿಖೆ ಸರಿದಿಕ್ಕಿನಲ್ಲಿದೆ ಎಂದು ಭಾವಿಸೋಣ.
ಅತ್ತ ಮಹಾರಾಷ್ಟ್ರದಲ್ಲಿ, ದಾಬೋಲ್ಕರ್ ಮತ್ತು ಪನ್ಸಾರೆ ಹತ್ಯೆಗಳ ಕೇಸಿನ ವಿಚಾರಣೆಯಲ್ಲೂ ಕೂಡ ನ್ಯಾಯ ದೊರಕಬಹುದೆ ಎಂಬ ಆಶಾಭಾವ ಚಿಗುರುವಂತಹ ಬೆಳವಣಿಗೆಗಳು ನಡೆದಿವೆ. 2013ರ ಆಗಸ್ಟ್‍ನಲ್ಲಿ ಕೊಲೆಯಾದ ನರೇಂದ್ರ ದಾಬೋಲ್ಕರ್ ಅವರ ಕೇಸಿನ ತನಿಖೆಯನ್ನು ಹಾಲಿ ಸಿಬಿಐ ನಡೆಸುತ್ತಿದೆ. 2015ರ ಫೆಬ್ರವರಿಯಲ್ಲಿ ಕೊಲೆಯಾದ ಗೋವಿಂದ್ ಪನ್ಸಾರೆ ಕೇಸಿನ ತನಿಖೆ ಅಡಿಷನಲ್ ಎಸ್‍ಪಿ ನೇತೃತ್ವದ ತಂಡದ ಉಸ್ತುವಾರಿಯಲ್ಲಿದೆ. ಆದರೆ ನಡೆದದ್ದೇನು? ಈ ಕೇಸುಗಳ ತನಿಖೆಯಲ್ಲಿ ಯಾವುದೇ ಮಹತ್ವದ ಸುಳಿವು ಲಭ್ಯವಿಲ್ಲದೆ ತಾವು ‘ಡೆಡ್ ಎಂಡ್’ ತಲುಪಿದ್ದೇವೆ ಎಂಬುದು ಈ ಘನತೆವೆತ್ತ ತನಿಖಾ ಸಂಸ್ಥೆಗಳ ವಾದ. ಈ ಹಿನ್ನೆಲೆಯಲ್ಲಿ ದಾಬೋಲ್ಕರ್ ಹಾಗೂ ಪನ್ಸಾರೆ ಕುಟುಂಬದವರು ‘ಈ ಎಲ್ಲ ಕೊಲೆ ಕೇಸುಗಳಲ್ಲಿ ಸಾಮ್ಯತೆಯಿದ್ದು, ಒಂದೇ ಪಾತಕ ಗುಂಪಿನ ಕೈವಾಡವಿರುವುದರಿಂದ ಸೂಕ್ತ ಸಮನ್ವಯದಿಂದ ತನಿಖೆ ಮುಂದುವರೆಸಲು ಒಂದು ವಿಶೇಷ ತಂಡಕ್ಕೆ ಈ ಕೇಸುಗಳನ್ನು ವಹಿಸಿಕೊಡಬೇಕೆಂದು’ ಕೋರಿ ಕೋರ್ಟ್‍ಗೆ ಅಫಿಡೇವಿಟ್ ಸಲ್ಲಿಸಿದ್ದರು.
ಕಳೆದ ವಾರ ವಿಚಾರಣೆ ನಡೆಸುತ್ತಿದ್ದ ಬಾಂಬೆ ಹೈಕೋರ್ಟ್‍ನ ನ್ಯಾ.ಸತ್ಯರಂಜನ್ ಧರ್ಮಾಧಿಕಾರಿ ಮತ್ತು ನ್ಯಾ.ಭಾರತಿ ಡಾಂಗ್ರೆ ಅವರ ಪೀಠವು ‘ಈ ಕೇಸುಗಳ ತನಿಖೆ ಪ್ರಾಮಾಣಿಕವಾಗಿ ನಡೆದಿಲ್ಲ’, ‘ತನಿಖಾ ಸಂಸ್ಥೆಗಳಿಗೆ ಗಂಭೀರತೆಯ ಕೊರತೆಯಿದೆ’ ಎಂದು ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದೆ. ‘ಕರ್ನಾಟಕ ಪೊಲೀಸರನ್ನು ನೋಡಿ ಅವರ ಕಾರ್ಯದಕ್ಷತೆ ಮತ್ತು ಗಂಭೀರತೆಗಳನ್ನು ಕಲಿತುಕೊಳ್ಳಿ’ ಎಂದು ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಸಿಐಡಿ ಸಂಸ್ಥೆಗಳಿಗೆ ಕೋರ್ಟ್ ಛೀಮಾರಿ ಹಾಕಿದೆ. ಮಹಾರಾಷ್ಟ್ರ ಸರ್ಕಾರ ಮತ್ತು ಸಿಬಿಐಗಳಿಗೆ ನೋಟೀಸ್ ಜಾರಿಮಾಡಿ ಸಿಬಿಐನ ಜಂಟಿ ನಿರ್ದೇಶಕರು ಹಾಗೂ ಮಹಾರಾಷ್ಟ್ರ ಗೃಹ ಇಲಾಖೆಯ ಕಾರ್ಯದರ್ಶಿಗಳು ಇದೇ ಜುಲೈ 12ಕ್ಕೆ ಖುದ್ದಾಗಿ ಕೋರ್ಟ್‍ಗೆ ಹಾಜರಾಗಿ ಈ ಕೇಸುಗಳ ತನಿಖೆಗೆ ಸಂಬಂಧಿಸಿದ ವಿವರಣೆ ನೀಡಬೇಕೆಂದು ಆದೇಶಿಸಿದೆ.
ಕರ್ನಾಟಕ ಪೊಲೀಸರು ಗೌರಿ ಲಂಕೇಶ್ ಹಂತಕರನ್ನು ಮಹಾರಾಷ್ಟ್ರದಲ್ಲಿ ಬಂಧಿಸುವುದು ಸಾಧ್ಯವಿರುವುದಾದರೆ ಮಹಾರಾಷ್ಟ್ರ ಪೊಲೀಸರು ಏನು ಮಾಡುತ್ತಿದ್ದಾರೆ ಎಂಬ ಅಸಲಿ ಪ್ರಶ್ನೆ ನ್ಯಾಯಾಧೀಶರದು. ಪನ್ಸಾರೆ ಮತ್ತು ಕರ್ನಾಟಕದ ಕಲ್ಬುರ್ಗಿ ಅವರನ್ನು ಹತ್ಯೆ ಮಾಡಲು ಒಂದೇ ಪಿಸ್ತೂಲು ಬಳಸಲಾಗಿದೆಯೆಂದು, ಫೊರೆನ್ಸಿಕ್ ವರದಿಗಳನ್ನು ಆಧರಿಸಿ ಸಿಬಿಐ ಮತ್ತು ಸಿಐಡಿ ತಂಡಗಳು ಈ ಹಿಂದೆ ಕೋರ್ಟಿಗೆ ತಿಳಿಸಿದ್ದವು. ಆದರೆ ಅಲ್ಲಿಂದ ಒಂದು ಹೆಜ್ಜೆಯೂ ಮುಂದೆ ಸಾಗಿಲ್ಲ. ಇನ್ನುಮುಂದೆ ತನಿಖೆ ಎತ್ತ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.
ಆದರೆ ಈ ತನಿಖೆಗಳ ಮೇಲೆ ನಾವು ಎಷ್ಟು ವಿಶ್ವಾಸ ಇಡಬಹುದು? ನೂರಾರು ಜನರ ಸಾವಿಗೆ ಕಾರಣವಾಗಿದ್ದ ಘೋರ ಪಾತಕ ಕೃತ್ಯಗಳ ತನಿಖೆಗಳನ್ನು ಹಳ್ಳಹಿಡಿಸಿ, ಸಾಕಷ್ಟು ಸಾಕ್ಷ್ಯಗಳ ಸಮೇತ ಸಿಕ್ಕಿಬಿದ್ದಿದ್ದ ಆರೋಪಿಗಳಿಗೆ ಸಾಲುಸಾಲಾಗಿ ಕ್ಲೀನ್ ಚಿಟ್ ಕೊಡುತ್ತಿರುವ ವಿದ್ಯಮಾನ ನಮ್ಮ ಕಣ್ಣೆದುರಿನಲ್ಲೇ ನಡೆಯುತ್ತಿದೆ. 2006ರಲ್ಲಿ ಮಾಳೆಗಾಂವ್‍ನಲ್ಲಿ ನಡೆದ ಬಾಂಬ್ ಸ್ಫೋಟ, 2007ರಲ್ಲಿ ಹೈದರಾಬಾದ್‍ನ ಮೆಕ್ಕಾ ಮಸೀದಿಯಲ್ಲಿ ನಡೆದ ಬಾಂಬ್ ಸ್ಫೋಟ, ಸಂಜೋತಾ ರೈಲಿನಲ್ಲಿ ಆದ ಬಾಂಬ್ ಸ್ಫೋಟ, ಅಜ್ಮೇರ್‍ನ ಪ್ರಸಿದ್ಧ ದರ್ಗಾದಲ್ಲಿ ನಡೆದ ಬಾಂಬ್ ಸ್ಫೋಟ ಮುಂತಾದ ಕೇಸುಗಳಲ್ಲಿ ಸಾಕ್ಷಿಪುರಾವೆಗಳ ಸಮೇತ ಸಿಕ್ಕಿಬಿದ್ದಿದ್ದ ಆರೋಪಿಗಳಿಗೆ ಈ ನಾಲ್ಕು ವರ್ಷಗಳಲ್ಲಿ ಕ್ಲೀನ್ ಚಿಟ್ ಭಾಗ್ಯ ಲಭಿಸಿದೆ.
ಕರ್ನಲ್ ಪುರೋಹಿತ್ ಎಂಬ ಸೇನಾಧಿಕಾರಿ ಈ ಸ್ಫೋಟಗಳಿಗೆ ಸೇನಾ ಉಗ್ರಾಣದಿಂದಲೇ ಆರ್‍ಡಿಎಕ್ಸ್ ಕದ್ದು ಸಾಗಿಸಿದ್ದ ಆರೋಪ ಹೊತ್ತು ಕಳೆದ 9 ವರ್ಷಗಳಲ್ಲಿ ಜೈಲಿನಲ್ಲಿದ್ದ. 2017ರ ಆಗಸ್ಟ್‍ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಸ್ವಾಮಿ ಅಸೀಮಾನಂದ ಎಂಬ ಕಟ್ಟರ್ ಆರೆಸ್ಸೆಸ್ ಪ್ರಚಾರಕನ ಕೇಸು ಬಹಳ ಕುತೂಹಲಕಾರಿಯಾಗಿದೆ. ಈತ ಮೇಲಿನ ನಾಲ್ಕೂ ಸ್ಫೋಟಗಳಲ್ಲಿ ಸ್ವತಃ ಭಾಗಿಯಾಗಿದ್ದಾಗಿ ಕೋರ್ಟ್ ಮುಂದೆ ಸ್ವಯಂಪ್ರೇರಿತ ಹೇಳಿಕೆ ಕೊಟ್ಟಿದ್ದ. ಈ ಹೇಳಿಕೆಯಿಂದ ನನಗೆ ಮರಣದಂಡನೆಯಾಗಬಹುದೆಂಬುದು ತನಗೆ ತಿಳಿದಿದೆ, ಆದರೆ ನಾನು ಮಾಡಿದ ತಪ್ಪಿಗೆ ಅಮಾಯಕರು ಶಿಕ್ಷೆ ಅನುಭವಿಸುವಂತಾಗಬಾರದೆಂದು ಆತ ಹೇಳಿಕೆ ನೀಡಿದ್ದ. ಈ ಹೇಳಿಕೆಗೆ ಸಿನಿಮೀಯ ರೀತಿಯ ಹಿನ್ನೆಲೆಯೊಂದಿತ್ತು. ಈಗಾಗಲೇ ಮಾಳೆಗಾಂವ್ ಕೇಸಿನಲ್ಲಿ ಜೈಲು ಸೇರಿದ್ದ ಅಸೀಮಾನಂದರಿಗೆ ಅದೇ ಜೈಲಿನಲ್ಲಿದ್ದ 21ರ ಹರೆಯದ ಕಲೀಮ್ ಎಂಬ ಮುಸ್ಲಿಂ ಯುವಕ ಬಹಳ ಆಪ್ತನಾದ. ಕಾರಣ ವಯೋವೃದ್ಧನಾಗಿದ್ದ ಅಸೀಮಾನಂದ ಜೈಲಿನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಕಲೀಂ ರಾತ್ರಿ ಹಗಲು ಈ ವೃದ್ದರ ಸೇವೆ ಮಾಡಿದ್ದ. ಆ ಕಲೀಂನನ್ನು ಮೆಕ್ಕಾ ಮಸೀದಿ ಬಾಂಬ್ ಸ್ಫೋಟದ ಕೇಸಿನಲ್ಲಿ ಬಂಧಿಸಲಾಗಿದೆ ಎಂಬ ವಿಷಯ ತಿಳಿದಾಗ ಅಸೀಮಾನಂದ ತೀವ್ರ ವ್ಯಾಕುಲತೆಗೆ ಗುರಿಯಾದ. ವಾಸ್ತವದಲ್ಲಿ ಆ ಸ್ಫೋಟ ನಡೆಸಿದ್ದವರು ಅಸೀಮಾನಂದದ ತಂಡದವರೇ ಆಗಿದ್ದರು. ಬಾಳಿಬದುಕಬೇಕಿದ್ದ ಅಮಾಯಕ ಕಲೀಂ ಅದೇ ಕೇಸಿನಲ್ಲಿ ಜೈಲು ಪಾಲಾಗಿದ್ದ. ಅಸೀಮಾನಂದನಲ್ಲಿದ್ದ ಧರ್ಮಾಂಧತೆ ಕರಗಿ ಮನುಷ್ಯ ಗುಣ ಮೇಲುಗೈ ಸಾಧಿಸಿತ್ತು. ನ್ಯಾಯಾಧೀಶರ ಮುಂದೆ ಸುಧೀರ್ಘ ಐದು ತಾಸುಗಳ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ.
ಕೆಲವು ದಿನಗಳ ನಂತರ ಸಿಬಿಐಗೆ ಈ ಬಗ್ಗೆ ಪತ್ರ ಕೂಡ ಬರೆದಿದ್ದ. ಈ ಕೃತ್ಯಗಳಲ್ಲಿ ಆರೆಸ್ಸೆಸ್‍ನ ಕೈವಾಡ ಇದ್ದುದಾಗಿಯೂ, ಆರೆಸ್ಸೆಸ್ ನಾಯಕ ಮೋಹನ್ ಭಾಗವತ್‍ನ ಸೂಚನೆಯಿತ್ತೆಂದೂ ಆತ ತಿಳಿಸಿದ್ದ ವರದಿಗಳು ಪ್ರಕಟವಾಗಿದ್ದವು. ನಂತರದ ದಿನಗಳಲ್ಲಿ ದೊಡ್ಡ ದೊಡ್ಡ ನಾಯಕರು ಅಸೀಮಾನಂದರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಕೆಲವು ತಿಂಗಳುಗಳ ನಂತರ ಆತ ಒತ್ತಡದಲ್ಲಿ ಹೇಳಿಕೆ ನೀಡಿದ್ದಾಗಿ ವಿಷಯವನ್ನು ತಿರುಚಲಾಯಿತು.
2017ರ ಮಾರ್ಚ್‍ನಲ್ಲಿ ಅಸೀಮಾನಂದನ ಬಿಡುಗಡೆಯಾಗಿದೆ. ಗುಜರಾತ್ ನರಮೇಧದ ಆರೋಪಿ ಸಚಿವೆ ಮಾಯಾ ಕೊಡ್ನಾನಿಗೆ ಈ ವರ್ಷದ ಏಪ್ರಿಲ್‍ನಲ್ಲಿ ಬಿಡುಗಡೆಯ ಭಾಗ್ಯ ಲಭಿಸಿದೆ. ಈ ಎಲ್ಲ ಸ್ಫೋಟಗಳಲ್ಲಿ ಭಾಗಿಯಾಗಿದ್ದ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಹೊರಬಂದಿದ್ದಾಳೆ. ನಕಲಿ ಎನ್‍ಕೌಂಟರ್ ಕೇಸಿನಲ್ಲಿ ಅಮಿತ್ ಶಾ ಖುಲಾಸೆಯಾಗಿದ್ದಾನೆ. ಜಸ್ಟೀಸ್ ಲೋಯಾ ಕೇಸು ವಿಚಾರಣೆಯೂ ಇಲ್ಲದೆ ಮೂಲೆ ಸೇರಿದೆ. ಹೀಗೆ ಬರೆಯುತ್ತಾ ಹೋದರೆ…
ಈ ಎಲ್ಲ ಪಾತಕಗಳು ತಾರ್ಕಿಕ ಅಂತ್ಯ ತಲುಪಬೇಕೆಂದರೆ ಕನಿಷ್ಟ ಕರ್ನಾಟಕದ ಎಸ್‍ಐಟಿ ಮಾದರಿಯ ತನಿಖೆಯಾದರೂ ನಡೆಯಬೇಕು. ತೆರೆಯ ಹಿಂದಿನ ಪಾತಕಿಗಳಿಗೆ ಹೆಡೆಮುರಿ ಕಟ್ಟಬೇಕು. ಆದರೆ…?

– ಸಂಪಾದಕ ಮಂಡಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...