Homeಅಂತರಾಷ್ಟ್ರೀಯಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾ; ವಿವಿಧ ರಾಷ್ಟ್ರಗಳ ಮುಖಂಡರು ಹೇಳಿದ್ದೇನು?

ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾ; ವಿವಿಧ ರಾಷ್ಟ್ರಗಳ ಮುಖಂಡರು ಹೇಳಿದ್ದೇನು?

ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಭಾರತವು ತಟಸ್ಥ ನಿಲುವನ್ನು ಹೊಂದಿದೆ.

- Advertisement -
- Advertisement -

ರಷ್ಯಾ ಅಧ್ಯಕ್ಷ ವ್ಲಾದಿಮರ್ ಪುಟಿನ್ ಉಕ್ರೇನ್ ಮೇಲೆ ಯುದ್ಧ ಸಾರಿದ್ದಾರೆ. ರಷ್ಯಾದ ಪಡೆಗಳು ಉಕ್ರೇನ್ ನೆಲ ತಲುಪಿದ್ದು ಮಿಲಿಟರಿ ಕಾರ್ಯಾಚರಣೆ ಆರಂಭಿಸಿವೆ. ಉಕ್ರೇನ್ NATOಗೆ ಸದಸ್ಯ ರಾಷ್ಟ್ರವಾಗಲು ಮುಂದಾಗಿರುವುದನ್ನು ವಿರೋಧಿಸಿ ಮತ್ತು ಉಕ್ರೇನ್‌ ದೇಶದ ಪೂರ್ವದಲ್ಲಿನ ಡಾನ್‌ಬಾಸ್ ಎಂದು ಕರೆಯಲ್ಪಡುವ ಪ್ರದೇಶದಲ್ಲಿನ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳನ್ನು ರಕ್ಷಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ದ ಅನಿವಾರ್ಯ ಎಂದಿದ್ದಾರೆ. ಈ ಕುರಿತು ಬೇರೆ ಬೇರೆ ರಾಷ್ಟ್ರಗಳ ಮುಖಂಡರು ಹೇಳಿದ್ದು ಇಲ್ಲಿದೆ.

ರಷ್ಯಾ ರಕ್ತಪಾತ ಮತ್ತು ವಿನಾಶದ ಮಾರ್ಗವನ್ನು ಆರಿಸಿಕೊಂಡಿದೆ – ಇಂಗ್ಲೆಂಡ್

ಉಕ್ರೇನ್‌ನಲ್ಲಿನ ಭೀಕರ ಘಟನೆಗಳಿಂದ ದಿಗ್ಭ್ರಮೆಗೊಂಡಿದ್ದೇನೆ ಮತ್ತು ಮುಂದಿನ ಹಂತಗಳನ್ನು ಚರ್ಚಿಸಲು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತನಾಡಿದ್ದೇನೆ. ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ಮೇಲೆ ಈ ಅಪ್ರಚೋದಿತ ದಾಳಿಯನ್ನು ನಡೆಸುವ ಮೂಲಕ ರಕ್ತಪಾತ ಮತ್ತು ವಿನಾಶದ ಮಾರ್ಗವನ್ನು ಆರಿಸಿಕೊಂಡಿದ್ದಾರೆ. ಇಂಗ್ಲೆಂಡ್ ಮತ್ತು ನಮ್ಮ ಮಿತ್ರರಾಷ್ಟ್ರಗಳು ಈ ಕುರಿತು ನಿರ್ಣಾಯಕವಾಗಿ ಪ್ರತಿಕ್ರಿಯಿಸುತ್ತವೆ”. – ಬೋರಿಸ್ ಜಾನ್ಸನ್, ಇಂಗ್ಲೆಂಡ್ ಪ್ರಧಾನಿ.

ಅಂತರರಾಷ್ಟ್ರೀಯ ಸಂಬಂಧದ ಅಡಿಪಾಯವನ್ನು ಅಲುಗಾಡಿಸುತ್ತದೆ- ಜಪಾನ್

“ಉಕ್ರೇನ್ ಮೇಲಿನ ರಷ್ಯಾದ ದಾಳಿಯು ಅಂತರರಾಷ್ಟ್ರೀಯ ಸಂಬಂಧದ ಅಡಿಪಾಯವನ್ನು ಅಲುಗಾಡಿಸುತ್ತದೆ. ನಾವು ರಷ್ಯಾವನ್ನು ಬಲವಾಗಿ ಖಂಡಿಸುತ್ತೇವೆ. ಇಂತಹ ಯಥಾಸ್ಥಿತಿಯನ್ನು ಬದಲಾಯಿಸುವ ಏಕಪಕ್ಷೀಯ ಪ್ರಯತ್ನಗಳನ್ನು ಅನುಮತಿಸುವುದಿಲ್ಲ. ಇದನ್ನು ತಡೆಯಲು ಅಮೆರಿಕ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯದೊಂದಿಗೆ ಸೇರಿ ಪ್ರಯತ್ನಗಳನ್ನು ಸಂಘಟಿಸುತ್ತೇವೆ ಮತ್ತು ಇದನ್ನು ತ್ವರಿತವಾಗಿ ನಿಭಾಯಿಸುತ್ತೇವೆ” – ಫ್ಯೂಮಿಯೊ ಕಿಶಿಡಾ, ಜಪಾನ್ ಪ್ರಧಾನಿ.

ರಷ್ಯಾದ ಮೇಲೆ ಆರ್ಥಿಕ ನಿರ್ಬಂಧ ವಿಧಿಸುತ್ತೇವೆ – ಆಸ್ಟ್ರೇಲಿಯಾ

“ರಷ್ಯಾ ಯುದ್ಧವನ್ನು ಆಯ್ಕೆ ಮಾಡಿದೆ. ಇಂತಹ ಕ್ರೂರ ಆಕ್ರಮಣ ಮತ್ತು ಏಕಪಕ್ಷೀಯ ಪ್ರತಿಕೂಲ ಕ್ರಮಗಳನ್ನು ನಾವು ಖಂಡಿಸುತ್ತೇವೆ. ಕೂಡಲೇ ರಷ್ಯಾ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತೇನೆ. ಈ ಅತಿರೇಕದ ಕೃತ್ಯಗಳಿಗೆ ರಷ್ಯಾದ ಅಧಿಕಾರಿಗಳು ಮತ್ತು ಘಟಕಗಳನ್ನು ನಾವು ಹೊಣೆಗಾರರನ್ನು ಗುರುತಿಸುತ್ತೇವೆ ಮತ್ತು ಆಸ್ಟ್ರೇಲಿಯಾವು ರಷ್ಯಾ ವಿರುದ್ಧ ಮತ್ತಷ್ಟು ಆರ್ಥಿಕ ನಿರ್ಬಂಧಗಳನ್ನು ವಿಧಿಸುತ್ತದೆ” – ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್

ಫ್ರಾನ್ಸ್ ಖಂಡಿಸುತ್ತದೆ

“ಉಕ್ರೇನ್ ವಿರುದ್ಧ ಯುದ್ಧ ಮಾಡುವ ರಷ್ಯಾದ ನಿರ್ಧಾರವನ್ನು ಫ್ರಾನ್ಸ್ ದೃಢವಾಗಿ ಖಂಡಿಸುತ್ತದೆ. ರಷ್ಯಾ ತನ್ನ ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣವೇ ಕೊನೆಗೊಳಿಸಬೇಕು.- ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್

ಉಕ್ರೇನ್ ಜನರೊಂದಿಗೆ ನಿಲ್ಲುತ್ತೆನೆ- ಅಮೆರಿಕ

ರಷ್ಯಾದ ಮಿಲಿಟರಿ ಪಡೆಗಳಿಂದ ಅಪ್ರಚೋದಿತ ಮತ್ತು ನ್ಯಾಯಸಮ್ಮತವಲ್ಲದ ದಾಳಿಯಿಂದ ಬಳಲುತ್ತಿರುವ ಉಕ್ರೇನ್ ಜನರೊಂದಿಗೆ ನಿಲ್ಲುತ್ತೇನೆ. ಈ ದಾಳಿಯು ತರುವ ಸಾವು ಮತ್ತು ವಿನಾಶಕ್ಕೆ ರಷ್ಯಾ ಮಾತ್ರ ಕಾರಣವಾಗಿದೆ ಮತ್ತು ಪ್ರಪಂಚವು ರಷ್ಯಾವನ್ನು ಹೊಣೆಗಾರರನ್ನಾಗಿ ಮಾಡುತ್ತದೆ. ಇದಕ್ಕೆ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರು ಒಗ್ಗಟ್ಟಿನಿಂದ ಮತ್ತು ನಿರ್ಣಾಯಕ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ”. ಜೋ ಬೈಡನ್, ಅಮೆರಿಕ ಅಧ್ಯಕ್ಷ

ಅನ್ಯಾಯ ಮತ್ತು ಅಸಮರ್ಥನೀಯ- ಇಟಲಿ

ಉಕ್ರೇನ್ ಮೇಲಿನ ರಷ್ಯಾದ ದಾಳಿಯ ಅನ್ಯಾಯ ಮತ್ತು ಅಸಮರ್ಥನೀಯ. ಇಟಲಿ ಸರ್ಕಾರವು ಉಕ್ರೇನ್ ಮೇಲೆ ರಷ್ಯಾದ ದಾಳಿಯನ್ನು ಖಂಡಿಸುತ್ತದೆ. ಈ ನಾಟಕೀಯ ಕ್ಷಣದಲ್ಲಿ ಇಟಲಿ ಉಕ್ರೇನಿಯನ್ ಜನರು ಮತ್ತು ಸಂಸ್ಥೆಗಳಿಗೆ ಬೆಂಬಲ ನೀಡುತ್ತದೆ. ನಾವು ಯುರೋಪಿಯನ್ ಮತ್ತು ನ್ಯಾಟೋ ಮಿತ್ರರಾಷ್ಟ್ರಗಳೊಂದಿಗೆ ತಕ್ಷಣವೇ ಪ್ರತಿಕ್ರಿಯಿಸಲು, ಏಕತೆ ಮತ್ತು ನಿರ್ಣಯದೊಂದಿಗೆ ಕೆಲಸ ಮಾಡುತ್ತಿದ್ದೇವೆ” ಇಟಾಲಿಯನ್ ಪ್ರಧಾನಿ ಮಾರಿಯೋ ಡ್ರಾಘಿ

ಎಂತಹ ಸಂಭ್ರಮದ ಕ್ಷಣದಲ್ಲಿ ನಾನಿಲ್ಲಿಗೆ ಬಂದಿದ್ದೇನೆ- ಪಾಕ್ ಪ್ರಧಾನಿ ಇಮ್ರಾನ್ ಖಾನ್

ಎರಡು ದಶಕಗಳ ನಂತರ ಪಾಕ್ ಪ್ರಧಾನಿಯೊಬ್ಬರು ರಷ್ಯಾಗೆ ಭೇಟಿ ನೀಡಿದ್ದಾರೆ. ಆ ಸಮಯದಲ್ಲಿ ರಷ್ಯಾ ಉಕ್ರೇನ್ ಮೇಲೆ ಯುದ್ಧ ಘೋಷಿಸಿದೆ. ಈ ಸಂದರ್ಭದಲ್ಲಿ ಮೊದಲ ಬಾರಿಗೆ ಭೇಟಿ ನೀಡಿದ ಪಾಕ್ ಪಿಎಂ ಇಮ್ರಾನ್ ಖಾನ್ “ಎಂತಹ ಸಂಭ್ರಮದ ಕ್ಷಣದಲ್ಲಿ ನಾನಿಲ್ಲಿಗೆ ಬಂದಿದ್ದೇನೆ” ಎಂದು ರಷ್ಯಾ ಅಧಿಕಾರಿಗಳಿಗೆ ಹೇಳುವ ವಿಡಿಯೋವೊಂದು ಸಾಮಾಜಿಕ ಜಾಲತಾನಗಳಲ್ಲಿ ವೈರಲ್ ಆಗಿದೆ.

ಭಾರತದ ನಿಲುವು ಏನು?

ರಷ್ಯಾದ ಯುದ್ಧದ ನಿರ್ಧಾರವನ್ನು ಕಟುವಾಗಿ ಟೀಕಿಸದ ಕೆಲವೇ ದೇಶಗಳಲ್ಲಿ ಭಾರತವೂ ಒಂದು. ಯುಎನ್ ತುರ್ತು ಸಭೆಯಲ್ಲಿ ಭಾರತವು ಎರಡು ಯುರೋಪಿಯನ್ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯ ಬಗ್ಗೆ ಮಾತ್ರ ಪ್ರಸ್ತಾಪಿಸಿದೆ ಮತ್ತು ಎರಡು ರಾಷ್ಟ್ರಗಳು ಅತ್ಯಂತ ಸಂಯಮ  ಕಾಯ್ದುಕೊಳ್ಳುವಂತೆ ಕರೆ ನೀಡಿದೆ. ಇದೇ ಸಂದರ್ಭದಲ್ಲಿ ರಷ್ಯಾ ಮತ್ತು ಭಾರತದ ನಡುವಿನ ಪಾಲುದಾರಿಕೆ ಸಂಬಂಧ ಮುಂದುವರಿಯುತ್ತದೆ ಎಂದು ರಷ್ಯಾದ ರಾಯಭಾರಿ ಕಚೇರಿಯ ಉಸ್ತುವಾರಿ ರೋಮನ್ ಬಾಬುಶ್ಕಿನ್ ಹೇಳಿದ್ದಾರೆ.

“ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಭಾರತವು ತಟಸ್ಥ ನಿಲುವನ್ನು ಹೊಂದಿದೆ. ಅದನ್ನು ನಾವು ಸ್ವಾಗತಿಸುತ್ತೇವೆ. ರಷ್ಯಾ ಮತ್ತು ಭಾರತವು ಪರಸ್ಪರ ದೊಡ್ಡ ಯೋಜನೆಗಳನ್ನು ಹೊಂದಿದ್ದೇವೆ. ನಮ್ಮ ಪಾಲುದಾರಿಕೆಯು ಈಗ ಯಾವ ಮಟ್ಟದ್ದಲ್ಲಿದೆಯೋ, ಮುಂದೆಯೂ ಹಾಗೆಯೇ ಇರುತ್ತದೆ ಎಂದು ನಾವು ಭಾವಿಸುತ್ತೇವೆ. ಉಕ್ರೇನ್ ಜೊತೆಗಿನ ಬಿಕ್ಕಟ್ಟು ರಕ್ಷಣಾ ಕ್ಷೇತ್ರಗಳನ್ನು ಒಳಗೊಂಡಂತೆ ಭಾರತ-ರಷ್ಯಾ ಸಂಬಂಧಗಳ ಮೇಲೆ ಪರಿಣಾಮ ಬೀರುವುದಿಲ್ಲ. ಮುಂದಿನ ತಿಂಗಳು ಗುಜರಾತ್‌ನಲ್ಲಿ ನಡೆಯಲಿರುವ ಡೆಫ್ ಎಕ್ಸ್ಪೋದಲ್ಲಿ ರಷ್ಯಾದ ಭಾಗವಹಿಸುತ್ತದೆ” ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ರಷ್ಯಾದಿಂದ ಉಕ್ರೇನ್ ಮೇಲೆ ದಾಳಿ ಸಂದರ್ಭದಲ್ಲಿ ರಷ್ಯಾಗೆ ಪಾಕ್ ಪಿಎಂ ಇಮ್ರಾನ್ ಖಾನ್ ಭೇಟಿ: ಅಮೆರಿಕ ಖಂಡನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಪ್ರಕರಣ: ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣಗೆ ಮಧ್ಯಂತರ ಜಾಮೀನು

0
ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಗುರುವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 47ರ ಹರೆಯದ ಮನೆ ಕೆಲಸದಾಕೆಗೆ ಲೈಂಗಿಕ...