ಬಿಜೆಪಿ ಸರ್ಕಾರ ಯಾವ ಪ್ರತಿಭಟನೆ ವಿರೋಧಕ್ಕೂ ಮಣಿದಿಲ್ಲ, ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವ ವಿಚಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಇಂದು ಮೈಸೂರಿನಲ್ಲಿ ಸ್ಪಷ್ಟನೆ ನೀಡಿರುವ ಸಚಿವ ಸುರೇಶ್ ಕುಮಾರ್, “ಸಾವರ್ಕರ್ ಸ್ವಾತಂತ್ಯ್ರ ಹೋರಾಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಅವರು ಈ ದೇಶಕ್ಕಾಗಿ ಶ್ರಮಿಸಿದ್ದಾರೆ. ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ಮಾಡಿ 11 ಗಂಟೆಗೆ ಅರೆಸ್ಟ್ ಆಗಿ. 12 ಗಂಟೆಗೆ ಬಿಡುಗಡೆಯಾಗಿ ಬಂದವರಿಗೆ ಸಾವರ್ಕರ್ ಪ್ರತಿಭಟನೆ ಬಗ್ಗೆ ಏನು ಗೊತ್ತು?” ಎಂದು ಹೇಳಿದ್ದಾರೆ.
“ಬಿಬಿಎಂಪಿಯೂ ಹೇಳಿದೆ ಹೀಗಾಗಿ ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಆಡಳಿತ ಪಕ್ಷ ಯಾವ ವಿರೋಧಕ್ಕೂ ಮಣಿದಿಲ್ಲ. ಬದಲಾಗಿ ಸರ್ಕಾರವು ಸಾರ್ವಕರ್ ಹೆಸರಿಡಲು ಬದ್ದವಾಗಿದೆ” ಎಂದು ತಿಳಿಸಿದ್ದಾರೆ.
ಯಹಂಕದ ಬಳಿ ನೂತನವಾಗಿ ನಿರ್ಮಿಸಲಾಗಿರುವ ಮೇಲ್ಸೇತುವೆಗೆ ಸಾವರ್ಕರ್ ಹೆಸರನ್ನಿಡಲು ಬಿಜೆಪಿ ಸರ್ಕಾರ ಮುಂದಾಗಿತ್ತು. ಈ ಕುರಿತು ಬಿಬಿಎಂಪಿಯಿಂದಲೂ ಅನುಮೋದನೆ ಪಡೆಯಲಾಗಿತ್ತು. ಎಲ್ಲಾ ಅಂದುಕೊಂಡತೆ ನಡೆದಿದ್ದರೆ ಈ ಮೇಲ್ಸೇತುವೆ ಗುರುವಾರ ಲೋಕಾರ್ಪಣೆಯಾಗಬೇಕಿತ್ತು.
ಆದರೆ, ಸಾವರ್ಕರ್ ಹೆಸರಿನ ಕುರಿತ ಸಾರ್ವಜನಿಕರು ಹಾಗೂ ವಿರೋಧ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸಿದ ಕಾರಣ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು. ಅಲ್ಲದೆ, ಈ ಕಾರ್ಯಕ್ರಮವನ್ನೇ ಮುಂದೂಡಿತ್ತು.
ಓದಿ: ಸಾವರ್ಕರ್ ಕ್ಷಮಾಪಣೆ ಪತ್ರಗಳು ಹೇಳುವ ಸತ್ಯಗಳು; ಸಂಘಪರಿವಾರಕ್ಕೆ ಅಸ್ತ್ರವೋ, ದೌರ್ಬಲ್ಯವೋ?