Homeಕರ್ನಾಟಕನಾಡ ಉಳಿಸಿ ಸಮಾವೇಶ: 'ಕಾಂಗ್ರೆಸ್ ಕಾರ್ಪೊರೇಟ್ ತಾಳಕ್ಕೆ ಕುಣಿದರೆ ರೈತರ ಕಪ್ಪು ಚುಕ್ಕೆ' - ಸುನಿಲಂ...

ನಾಡ ಉಳಿಸಿ ಸಮಾವೇಶ: ‘ಕಾಂಗ್ರೆಸ್ ಕಾರ್ಪೊರೇಟ್ ತಾಳಕ್ಕೆ ಕುಣಿದರೆ ರೈತರ ಕಪ್ಪು ಚುಕ್ಕೆ’ – ಸುನಿಲಂ ನೇರ ಎಚ್ಚರಿಕೆ!

- Advertisement -
- Advertisement -

ಬೆಂಗಳೂರು: ದೇವನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟವು ರಾಜ್ಯ ಸರ್ಕಾರಕ್ಕೆ ‘ಗಂಟಲ ಮುಳ್ಳಾಗಿದೆ’ ಎಂದು ಸಂಯುಕ್ತ ಕಿಸಾನ್ ಮೋರ್ಚಾ (SKM) ನಾಯಕ ಸುನಿಲಂ ಹೇಳಿದರು. ಇಂದು (ಜುಲೈ 4) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ‘ನಾಡ ಉಳಿಸಿ ಸಮಾವೇಶ’ದಲ್ಲಿ ಕರ್ನಾಟಕದ ನಾನಾ ಭಾಗಗಳಿಂದ ಬಂದ ರೈತರಿಗೆ ಅಭಿನಂದನೆ ಸಲ್ಲಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹೈಕಮಾಂಡ್‌ಗೆ ತೀಕ್ಷ್ಣ ಎಚ್ಚರಿಕೆ ನೀಡಿದರು.

‘ಸಿದ್ದರಾಮಯ್ಯ ಅವರೇ, ರೈತ-ಕಾರ್ಮಿಕರ ಸಂಗಾತಿಯಾಗಿರಿ!’: “ಸಿದ್ದರಾಮಯ್ಯನವರೇ, ನಿಮಗೆ ನಾನು ಹೇಳಲು ಬಯಸುತ್ತೇನೆ. ನೀವು ಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷದ ನಾಯಕ ಆಗಿದ್ದು ಆಮೇಲೆ. ಅದಕ್ಕೂ ಮುನ್ನ ನೀವು ರೈತರು, ಕಾರ್ಮಿಕರ ಸಂಗಾತಿ. ಅದನ್ನು ಮರೆತು ನೀವು ಕಾರ್ಪೊರೇಟ್ ತಾಳಕ್ಕೆ ಕುಣಿದು ನಿಮ್ಮ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ತಂದುಕೊಳ್ಳಬೇಡಿ,” ಎಂದು ಸುನಿಲಂ ನೇರವಾಗಿ ಕರೆ ನೀಡಿದರು.

ಕಾಂಗ್ರೆಸ್ ಹೈಕಮಾಂಡ್‌ಗೂ ಇದೇ ಸಂದೇಶ ನೀಡಿದ ಅವರು, “ಕರ್ನಾಟಕದ ಭ್ರಷ್ಟ ಬಿಜೆಪಿ ಸರ್ಕಾರವನ್ನು ತೊಲಗಿಸಿದ್ದು ಕೇವಲ ಕಾಂಗ್ರೆಸ್ ಕಾರ್ಯಕರ್ತರು ಮಾತ್ರವಲ್ಲ. ಇಲ್ಲಿನ ರೈತರು, ಕಾರ್ಮಿಕರು, ನಾಗರಿಕ ಸಂಘಟನೆಗಳು ಶ್ರಮಿಸಿವೆ. ಅದನ್ನು ನೀವು ಮರೆಯಬಾರದು,” ಎಂದು ನೆನಪಿಸಿದರು.

‘ನಾಗರಿಕ ಸಂಘಟನೆಗಳು ಶಾಶ್ವತ ವಿರೋಧ ಪಕ್ಷ’: “ನಾಗರಿಕ ಸಮಾಜ ಕೆಲವೊಂದು ಸಲ ಯಾವುದಾದರೂ ಪಕ್ಷದ ಪರ ನಿಂತರೆ ಅವರಿಗೆ ‘ಇವರು ನಮ್ಮವರು’ ಎಂದು ಅನಿಸಿಬಿಡುತ್ತದೆ. ಸಿದ್ದರಾಮಯ್ಯನವರೇ, ನೀವು ಕೇಳಿಸಿಕೊಳ್ಳಿ. ನಾಗರಿಕ ಸಂಘಟನೆಗಳು ಯಾವತ್ತೂ ಪಕ್ಷಗಳ ಪರ ಅಲ್ಲ. ರೈತರ ಪರ, ಕಾರ್ಮಿಕರ ಪರ. ನಾಗರಿಕ ಸಂಘಟನೆಗಳು ಶಾಶ್ವತ ವಿರೋಧ ಪಕ್ಷ,” ಎಂದು ಸುನಿಲಂ ನಾಗರಿಕ ಸಮಾಜದ ನಿಲುವನ್ನು ಸ್ಪಷ್ಟಪಡಿಸಿದರು.

‘ರೈತರು, ಕಾರ್ಮಿಕರು ಈ ದೇಶದ ನಿಜವಾದ ದೊರೆಗಳು’: “ಕಾಂಗ್ರೆಸ್‌ನ ಜನಗಳೇ ಮತ್ತೊಂದು ವಿಚಾರ. ಇಲ್ಲಿ ಕುಳಿತಿರುವವರನ್ನು ಕಂಡರೆ ಬಿಜೆಪಿಗೆ ಭಯ. ಸಂಸತ್ತಿನಲ್ಲಿ ಆಯೋಜಿಸಿದ್ದ ಕೃಷಿ ಸ್ಥಾಯಿ ಸಮಿತಿ ಸಭೆಗೆ ರೈತರು, ಕಾರ್ಮಿಕರ ಪರವಾಗಿ ಪ್ರಕಾಶ್ ರಾಜ್ ಒಬ್ಬರು ಹೋದಾಗ ಬಿಜೆಪಿಗರು ಪಲಾಯನ ಮಾಡಿದರು. ರೈತರು, ಕಾರ್ಮಿಕರು ಈ ದೇಶದ ನಿಜವಾದ ದೊರೆಗಳು. ಈ ದೇಶ ಅವರಿಗೆ ಸೇರಿದ್ದು,” ಎಂದು ಸುನಿಲಂ ರೈತ ಮತ್ತು ಕಾರ್ಮಿಕ ಶಕ್ತಿಯನ್ನು ಒತ್ತಿ ಹೇಳಿದರು.

“ಬಿಜೆಪಿಯ ಧೋರಣೆ ಸ್ಪಷ್ಟ – ಯಾರು ರೈತರು, ಕಾರ್ಮಿಕರ ಪರ ನಿಂತವರನ್ನು ಅವರು ದೇಶದ್ರೋಹಿಗಳು, ‘ತುಕ್ಡೆ ತುಕ್ಡೆ ಗ್ಯಾಂಗ್’ನವರು ಎನ್ನುತ್ತಾರೆ. ‘ಇಂಡಿಯಾ’ ಒಕ್ಕೂಟಕ್ಕೆ ಆ ಧೋರಣೆ ಇಲ್ಲ ಎಂಬ ವಿಶ್ವಾಸದಲ್ಲಿ ನಾವಿದ್ದೇವೆ,” ಎಂದರು.

‘ದೇವನಹಳ್ಳಿ ಹೋರಾಟ ದೇಶಕ್ಕೆ ಅನುಕರಣೀಯ’: ಸರ್ಕಾರ ನಂಬಿರುವ ಅಭಿವೃದ್ಧಿ ಮಾದರಿ ರೈತರನ್ನು, ಹಳ್ಳಿಗಳನ್ನು ನಾಶ ಮಾಡುವಂತದ್ದಾಗಿದೆ ಎಂದು ಸುನಿಲಂ ಟೀಕಿಸಿದರು. “ಅದಕ್ಕಾಗಿಯೇ ಅವರು ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಜಾರಿಗೆ, ಸಾಲ ಮನ್ನಾಗೆ ಸಿದ್ಧರಿಲ್ಲ. ರೈತರ ಭೂಮಿಯನ್ನು ಕಸಿದುಕೊಂಡು ಅವರನ್ನು ಓಡಿಸುವ ಯೋಚನೆಯಲ್ಲಿ ಅವರಿದ್ದಾರೆ,” ಎಂದು ಆರೋಪಿಸಿದರು.

ಕೊನೆಯದಾಗಿ, “ದೇವನಹಳ್ಳಿಯ ರೈತರ ಹೋರಾಟ ದೇಶಕ್ಕೆ ಅನುಕರಣೀಯ. ಎಂತಹದ್ದೇ ಪರಿಹಾರ ಕೊಟ್ಟರೂ ಒಂದಿಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲ ಎಂಬ ಅವರ ನಿಲುವು ಮೆಚ್ಚುವಂತದ್ದು. ನಾವು ದೆಹಲಿಯನ್ನು ಸುತ್ತುವರಿದು ಹೋರಾಟ ಮಾಡಿದ್ದೆವು. ಅಂತಹ ಹೋರಾಟ ಬೆಂಗಳೂರಿನಲ್ಲಿ ಮಾಡುವ ಶಕ್ತಿ ನಮಗಿದೆ. ಸರ್ಕಾರ ಅಂತಹ ಪರಿಸ್ಥಿತಿ ತಂದುಕೊಳ್ಳುವುದು ಬೇಡ. ಸರ್ಕಾರ ರೈತರ ಹೋರಾಟಕ್ಕೆ ಮಣಿಯಬೇಕು, ಭೂ ಸ್ವಾಧೀನ ಕೈಬಿಡಬೇಕು,” ಎಂದು ಸುನಿಲಂ ಕರ್ನಾಟಕ ಸರ್ಕಾರಕ್ಕೆ ಅಂತಿಮ ಎಚ್ಚರಿಕೆ ನೀಡಿದರು.

‘ಸಿದ್ದರಾಮಣ್ಣೋವ್ರೇ, ಏನಾದ್ರೂ ಮಾಡಿ ನಮ್ಮ ಭೂಮಿನ ಉಳಿಸಿ ಕೊಡಿ!’ – ‘ನಾಡ ಉಳಿಸಿ ಸಮಾವೇಶ’ದಲ್ಲಿ ಚನ್ನರಾಯಪಟ್ಟಣ ರೈತ ಮಹಿಳೆಯ ಕಳಕಳಿಯ ಮೊರೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -