ಬೆಂಗಳೂರು: ದೇವನಹಳ್ಳಿ ಪ್ರದೇಶದ ರೈತರ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಕರ್ನಾಟಕ ಸರ್ಕಾರ ಮಣಿಯದಿದ್ದರೆ, ದೇಶಾದ್ಯಂತ ಈ ಹೋರಾಟವನ್ನು ವಿಸ್ತರಿಸಬೇಕಾಗುತ್ತದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (SKM) ನಾಯಕ ದರ್ಶನ್ ಪಾಲ್ ಎಚ್ಚರಿಕೆ ನೀಡಿದ್ದಾರೆ. ಇಂದು (ಶುಕ್ರವಾರ, ಜುಲೈ 4) ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ‘ನಾಡ ಉಳಿಸಿ ಸಮಾವೇಶ’ದಲ್ಲಿ ಭಾಗವಹಿಸಿದ್ದ ಅವರು, ರೈತರ ಭೂಮಿ ಕಿತ್ತುಕೊಳ್ಳುವ ಸರ್ಕಾರದ ಪ್ರಯತ್ನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ದೇವನಹಳ್ಳಿ ಹೋರಾಟಕ್ಕೆ ರಾಷ್ಟ್ರಮಟ್ಟದ ಬೆಂಬಲ: “ನಾನು ಸಂಯುಕ್ತ ಕಿಸಾನ್ ಮೋರ್ಚಾದ ಪರವಾಗಿ ಇಲ್ಲಿನ ರೈತರ ಹೋರಾಟಕ್ಕೆ ಬೆಂಬಲ ನೀಡಲು ಬಂದಿದ್ದೇನೆ. ಬೆಂಗಳೂರು ಜಿಲ್ಲೆಯ ದೇವನಹಳ್ಳಿಯ ಸಾವಿರಾರು ಜನರು ಭೂಸ್ವಾಧೀನ ವಿರೋಧಿಸಿ ಕಳೆದ 1185 ದಿನಗಳಿಂದ ನಡೆಸುತ್ತಿರುವ ಈ ಹೋರಾಟಕ್ಕೆ ಬೆಂಬಲ ನೀಡುತ್ತಿರುವುದು ಸಂತೋಷದ ಸಂಗತಿ,” ಎಂದು ದರ್ಶನ್ ಪಾಲ್ ಹೇಳಿದರು. ರೈತರ ನಿಯೋಗದೊಂದಿಗೆ ಮುಖ್ಯಮಂತ್ರಿಗಳ ಭೇಟಿಯ ನಂತರ ಹೋರಾಟದ ಮುಂದಿನ ರೂಪುರೇಷೆಗಳು ಸ್ಪಷ್ಟವಾಗಲಿವೆ ಎಂದು ಅವರು ತಿಳಿಸಿದರು.
ಕರಾಳ ಕಾಯ್ದೆಗಳ ವಿರುದ್ಧದ ಹೋರಾಟದ ಪುನರಾವರ್ತನೆ? ಕೇಂದ್ರದ ಮೂರು ಕರಾಳ ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿ 13 ತಿಂಗಳ ಸುದೀರ್ಘ ಹೋರಾಟ ನಡೆಸಿ, ಮೋದಿ ಸರ್ಕಾರ ಕೃಷಿ ವಿರೋಧಿ ಕಾನೂನುಗಳನ್ನು ವಾಪಸ್ ಪಡೆದುಕೊಳ್ಳುವಂತೆ ಮಾಡಿದ್ದನ್ನು ದರ್ಶನ್ ಪಾಲ್ ನೆನಪಿಸಿಕೊಂಡರು. “ಅದೇ ಉತ್ಸಾಹದಲ್ಲಿ ದೇವನಹಳ್ಳಿಯ ಈ ಹೋರಾಟವೂ ನಡೆಯುತ್ತಿದೆ. ಅದಕ್ಕೆ ನಮ್ಮೆಲ್ಲರ ಬೆಂಬಲ ಇದೆ,” ಎಂದು ಅವರು ದೃಢಪಡಿಸಿದರು. “ಮೂರು ವರ್ಷದ ಸುದೀರ್ಘ ಹೋರಾಟ ಎಂದರೆ ಸಾಮಾನ್ಯ ವಿಷಯವಲ್ಲ. ದೇವನಹಳ್ಳಿಯ ರೈತರು ಅದನ್ನು ಮಾಡಿ ತೋರಿಸಿದ್ದಾರೆ,” ಎಂದು ಶ್ಲಾಘಿಸಿದರು.
ರೈತರ ಒಪ್ಪಿಗೆ ಇಲ್ಲದೆ ಒಂದಿಂಚು ಭೂಮಿಯೂ ಇಲ್ಲ! ಅನೇಕ ರಾಜ್ಯ ಸರ್ಕಾರಗಳು 2013ರಲ್ಲಿ ಭೂ ಸ್ವಾಧೀನ ಕಾಯಿದೆಯನ್ನು ಅಂಗೀಕರಿಸಿವೆ. ಈ ಕಾಯಿದೆಯ ಪ್ರಕಾರ, ಸರ್ಕಾರ ಕೈಗಾರಿಕಾ ಉದ್ದೇಶಕ್ಕೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾದರೆ ಶೇಕಡಾ 70ರಷ್ಟು ರೈತರ ಒಪ್ಪಿಗೆ ಕಡ್ಡಾಯ. ಜೊತೆಗೆ, ಜೀವನ ಭದ್ರತೆ ಸೇರಿದಂತೆ ಎಲ್ಲ ಅಂಶಗಳು ಈ ಪ್ರಕ್ರಿಯೆಯಲ್ಲಿ ಒಳಗೊಳ್ಳಬೇಕು. ಆದರೆ, “ದೇವನಹಳ್ಳಿಯಲ್ಲಿ ಶೇಕಡ 80ರಷ್ಟು ಜನ ರೈತರು ಭೂಮಿ ಕೊಡಲ್ಲ ಎಂದು ಬರೆದುಕೊಟ್ಟಿದ್ದಾರೆ. ರೈತರ ಒಪ್ಪಿಗೆ ಇಲ್ಲದೇ ಒಂದಿಂಚು ಭೂಮಿಯನ್ನೂ ಸ್ವಾಧೀನಪಡಿಸಿಕೊಳ್ಳಬಾರದು,” ಎಂದು ದರ್ಶನ್ ಪಾಲ್ ಆಗ್ರಹಿಸಿದರು.
“ಸರ್ಕಾರ ಎಲ್ಲ ಕಡೆಗಳಲ್ಲಿ ಭೂಮಿಯನ್ನು ಕಿತ್ತುಕೊಳ್ಳುವ ಪ್ರಯತ್ನ ಮುಂದುವರಿಸಿದೆ. ಕೈಗಾರಿಕೆಗಳಿಗೆ ಕೊಟ್ಟಿರುವ ಭೂಮಿಯನ್ನು ಕಿತ್ತು ನಾವು ಅಲ್ಲಿ ಬೆಳೆ ಬೆಳೆಯುತ್ತೇವೆ ಎಂದರೆ ಅವರು ಕೊಡುತ್ತಾರೆಯೇ? ಸರ್ಕಾರ ಭೂಮಿಯನ್ನು ಖಾಸಗಿ ಮಾಲಕರಿಗೆ ಕೊಡುತ್ತಿರುವುದನ್ನು ನಾವು ವಿರೋಧಿಸುತ್ತೇವೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಸರ್ಕಾರಕ್ಕೆ ತೀಕ್ಷ್ಣ ಪ್ರಶ್ನೆಗಳು: ದೆಹಲಿ ಗಡಿಗಳಲ್ಲಿ ರೈತರ ಪ್ರತಿಭಟನೆ ನಡೆದಾಗ ಪಂಜಾಬ್ನಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಆಗ ಬಿಜೆಪಿ ಸರ್ಕಾರ ರೈತರ ವಿರುದ್ಧ ದಾಳಿ ಮಾಡುತ್ತಿದ್ದರೂ, ಪಂಜಾಬ್ ಸರ್ಕಾರ ರೈತರಿಗೆ ನೈತಿಕವಾಗಿ, ಹಣಕಾಸಿನ ಮೂಲಕ ಸಂಪೂರ್ಣ ಬೆಂಬಲ ನೀಡಿತ್ತು. ಆ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ 700ಕ್ಕೂ ಹೆಚ್ಚು ರೈತರಿಗೆ ತಲಾ 5 ಲಕ್ಷ ರೂ. ಪರಿಹಾರ ಮತ್ತು ಮನೆಗೊಂದು ಸರ್ಕಾರಿ ಕೆಲಸ ಘೋಷಿಸಿತ್ತು. “ಆದರೆ ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ಯಾಕೆ ಈ ರೀತಿ ನಡೆದುಕೊಳ್ಳುತ್ತಿದೆ?” ಎಂದು ದರ್ಶನ್ ಪಾಲ್ ನೇರವಾಗಿ ಪ್ರಶ್ನಿಸಿದರು.
“ರಾಹುಲ್ ಗಾಂಧಿ ದೆಹಲಿಯ ಗಡಿಗಳಲ್ಲಿ ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದರು. ಆದರೆ, ಇಲ್ಲಿ ಸಿದ್ದರಾಮಯ್ಯ ಸರ್ಕಾರ ಬಿಜೆಪಿ ಯಾವ ಪಾತ್ರವನ್ನು ನಿರ್ವಹಿಸಿತೋ, ಅದೇ ರೀತಿಯಲ್ಲಿ ಕರ್ನಾಟಕದಲ್ಲಿ ನಡೆದುಕೊಳ್ಳುತ್ತಿದೆ. ರಾಜ್ಯ ಸರ್ಕಾರ ಜನರನ್ನು ಬೆದರಿಸುತ್ತಿದೆ, ಹೋರಾಟಗಾರರ ವಿರುದ್ಧ ಪೊಲೀಸರನ್ನು ಚೂ ಬಿಡಲಾಗುತ್ತಿದೆ,” ಎಂದು ಅವರು ಆಪಾದಿಸಿದರು.
ಜುಲೈ 20ರ ಗಡುವು ಮತ್ತು ರಾಷ್ಟ್ರವ್ಯಾಪಿ ಹೋರಾಟದ ಕರೆ: ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ಕನ್ಯಾಕುಮಾರಿ ಇಂದ ಕಾಶ್ಮೀರದವರೆಗೂ ವ್ಯಾಪಿಸಿದೆ. “ರಾಜ್ಯ ಸರ್ಕಾರ ಈ ಹೋರಾಟಕ್ಕೆ ಮಣಿದು, ರೈತರ ಭೂಮಿ ಪಡೆದುಕೊಳ್ಳುವುದಿಲ್ಲ ಎಂದು ಘೋಷಿಸದಿದ್ದರೆ, ದೇಶಾದ್ಯಂತ ಹೋರಾಟ ಮಾಡಬೇಕಾಗುತ್ತದೆ. ದೇಶದ ಉದ್ದಗಲಕ್ಕೂ ಬೆಂಬಲ ಕೊಡಬೇಕಾಗುತ್ತದೆ. ಆದ್ದರಿಂದ ಈಗಲೇ ರೈತರ ಪರವಾಗಿ ಘೋಷಣೆ ಮಾಡಿ,” ಎಂದು ದರ್ಶನ್ ಪಾಲ್ ಒತ್ತಾಯಿಸಿದರು.
“ನಾವು ದೆಹಲಿಯ ಗಡಿಗಳನ್ನು ಮಾತ್ರವಲ್ಲ, ದೆಹಲಿಯ ರೈಲ್ವೇ ಸ್ಟೇಷನ್ಗಳು ಸೇರಿದಂತೆ ದಿಲ್ಲಿಗೆ ಬರುವ ಎಲ್ಲ ಮಾರ್ಗಗಳನ್ನು ದಿಗ್ಬಂಧನ ಮಾಡಿದ್ದೆವು. ರೈತರು ಈ ಬೆದರಿಕೆಗಳಿಗೆ ಹೆದರುವುದಿಲ್ಲ. ಎಸ್.ಕೆ.ಎಂ. ಅವರ ಜೊತೆಗಿದೆ. ಹಾಗಾಗಿ, ಸರ್ಕಾರ ರೈತಪರ ತೀರ್ಮಾನ ಪ್ರಕಟಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ದೇಶವ್ಯಾಪಿ ವಿಸ್ತರಿಸುತ್ತೇವೆ,” ಎಂದು ಅವರು ಪುನರುಚ್ಚರಿಸಿದರು.
ರೈತರ ದೃಢ ಸಂಕಲ್ಪಕ್ಕೆ ಅಭಿನಂದನೆ: “ಅರ್ಧ ಎಕರೆ, ಒಂದು ಎಕರೆ ಭೂಮಿಯಲ್ಲಿ ರೈತರು ತರಕಾರಿ, ಹಣ್ಣು-ಹಂಪಲ ಬೆಳೆಯುತ್ತಿದ್ದಾರೆ. ಅದನ್ನು ಈಗ ಕಿತ್ತುಕೊಳ್ಳಲು ಹೊರಟಿದೆ. ಈಗ ಒಂದಿಂಚು ಭೂಮಿಯನ್ನು ಕೂಡ ಕೊಡುವುದಿಲ್ಲ ಎಂದು ತೀರ್ಮಾನ ಮಾಡಿರುವುದು ಸಂತೋಷದ ಸಂಗತಿ, ಅದಕ್ಕೆ ನಮ್ಮ ಅಭಿನಂದನೆಗಳು,” ಎಂದು ದರ್ಶನ್ ಪಾಲ್ ರೈತರ ಸಂಕಲ್ಪವನ್ನು ಶ್ಲಾಘಿಸಿದರು. “ಜಾತಿವಾದಿಗಳಿಗೆ, ಮತೀಯವಾದಿಗಳಿಗೆ ಒಳಗಾಗದೆ, ಒಗ್ಗಟ್ಟಾಗಿ ನಾವು ಹೋರಾಟವನ್ನು ಮುಂದುವರಿಸಬೇಕು,” ಎಂದು ಅವರು ಕರೆ ನೀಡಿದರು.
ವಿಮಾನ ನಿಲ್ದಾಣಗಳ ಸಮೀಪದಲ್ಲಿ ಸರ್ಕಾರಗಳು ಭೂಮಿಯನ್ನು ವಶಪಡಿಸಿಕೊಳ್ಳುವ ಹುನ್ನಾರ ಮಾಡುತ್ತಿವೆ. ಇದರ ವಿರುದ್ಧ ನಮ್ಮ ಧ್ವನಿ ಎಂದಿಗೂ ಇರುತ್ತದೆ ಎಂದು ಎಸ್ಕೆಎಂ ನಾಯಕರು ಸ್ಪಷ್ಟಪಡಿಸಿದರು. ಜುಲೈ 20ರಂದು ನಡೆಯುವ ಸಂಯುಕ್ತ ಕಿಸಾನ್ ಮೋರ್ಚಾದ ಸಭೆಯಲ್ಲಿ ದೇವನಹಳ್ಳಿ ರೈತರ ಬೇಡಿಕೆಗಳನ್ನು ಪ್ರಮುಖವಾಗಿ ಚರ್ಚಿಸಿ, ಮುಂದಿನ ಹೋರಾಟದ ರೂಪುರೇಷೆಗಳನ್ನು ಅಂತಿಮಗೊಳಿಸಲಾಗುವುದು ಎಂದು ದರ್ಶನ್ ಪಾಲ್ ತಿಳಿಸಿದರು.


