ರಾಜ್ಯಗಳ ಮೇಲಿನ ದಾಳಿಗೆ ಜನಪ್ರತಿರೋಧವನ್ನು ದಾಖಲಿಸುವ ಸಲುವಾಗಿ ಇಂದು (ಸೆ.14) ‘ಒಕ್ಕೂಟ ಉಳಿಸಿ ಆಂದೋಲನ’ದ ಚಾಲನಾ ಸಭೆ ನಡೆಯಿತು.
ಬೆಂಗಳೂರಿನ ಕೆ.ಆರ್ ವೃತ್ತದ ಬಳಿಯ ಯುವಿಸಿಇ ಅಲುಮ್ನಿ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಒಕ್ಕೂಟ ಸರ್ಕಾರವು ಎಲ್ಲಾ ರಾಜ್ಯಗಳ ಹಕ್ಕುಗಳು ಮತ್ತು ಅಸ್ಮಿತೆಯ ಮೇಲೆ ಬಹುಮುಖಿ ದಾಳಿಯನ್ನು ನಡೆಸುತ್ತಿರುವುದು, ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳ ಸಂಪನ್ಮೂಲಗಳನ್ನು ಬಸಿಯುತ್ತಿರುವುದು, ರಾಜ್ಯಗಳ ಪಾಲನ್ನು ಕೊಡದೆ ವಂಚಿಸುತ್ತಿರುವುದು, ನಮ್ಮ ಭಾಷೆ ಮತ್ತು ಸಂಸ್ಕೃತಿಗಳನ್ನು ಮೂಲೆಗೊತ್ತುತ್ತಿರುವುದರ ಕುರಿತು ಚರ್ಚಿಸಲಾಯಿತು ಮತ್ತು ಅದರ ವಿರುದ್ಧ ನಿರ್ಣಾಯಕವಾದ ಆಂದೋಲನವನ್ನು ರೂಪಿಸಲು ದೃಢ ನಿಶ್ಚಯ ಮಾಡಿದೆ ಎಂದು ಸಭೆ ಸರ್ವಾನುಮತದಿಂದ ಘೋಷಿಸಿತು.
ರಾಜ್ಯ ಪಟ್ಟಿಯಲ್ಲಿರುವ ವಿಷಯಗಳ ಕುರಿತು ಒಕ್ಕೂಟ ಸರ್ಕಾರವೇ ಜನ ವಿರೋಧಿ ರೀತಿಯಲ್ಲಿ ಶಾಸನಗಳನ್ನು ರೂಪಿಸುವುದು, ಅವನ್ನು ಜಾರಿಗೊಳಿಸಲೇಬೇಕು ಎಂದು ಒತ್ತಡ ಹಾಕುವುದು, ಇಲ್ಲವಾದರೆ ಅನುದಾನ ನೀಡುವುದಿಲ್ಲ ಎಂದು ಬೆದರಿಕೆ ಹಾಕುವುದು ಮೊದಲಾದ ಅಸಂವಿಧನಾತ್ಮಕ ನಡತೆಯನ್ನು ಒಕ್ಕೂಟ ಸರ್ಕಾರ ಪ್ರದರ್ಶಿಸುತ್ತಿದೆ. ಇದು ಒಕ್ಕೂಟ ತತ್ವದ ಮೇಲೆ ನಡೆಸುತ್ತಿರುವ ಅಪಚಾರವಾಗಿದೆ. ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಕಡಿಮೆ ಅನುದಾನ ನೀಡುವುದು, ಜಿಎಸ್ ಟಿ ಮೂಲಕ ರಾಜ್ಯಗಳ ಸಂಪನ್ಮೂಲಗಳನ್ನೆಲ್ಲಾ ತಾನೇ ಬಾಚಿಕೊಂಡು ರಾಜ್ಯಗಳಿಗೆ ಕನಿಷ್ಟ ಅರ್ಧಪಾಲನ್ನೂ ಸಹ ನೀಡದಿರುವುದು, ಬೆಲೆ ಏರಿಕೆಗೆ ಕಾರಣವಾಗುವ ರೀತಿಯಲ್ಲಿ ಸೆಸ್ ಮತ್ತು ಸರ್ ಚಾರ್ಜ್ ಹೆಚ್ಚಿಸುತ್ತಾ, ಅದರಲ್ಲಿ ರಾಜ್ಯಗಳಿಗೆ ಎಳ್ಳಷ್ಟು ಪಾಲನ್ನೂ ನೀಡದೆ ತಾನೇ ಕಬಳಿಸುವುದು, ಇವೆಲ್ಲವೂ ವಿತ್ತೀಯ ಕೇಂದ್ರೀಕರಣದ ಅಕ್ರಮ ಮಾರ್ಗಗಳಾಗಿವೆ. ಇಂತಹ ವಿವಿಧ ಕ್ರಮಗಳಿಗೆ ನಮ್ಮ ಪ್ರತಿರೋಧ ಇದ್ದೇ ಇರುತ್ತದೆ ಎಂದು ಸಭೆ ನಿರ್ಣಯಿಸಿತು.

200 ವರ್ಷಗಳ ವೀರೋಚಿತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಕ್ಷಾಂತರ ಜನರ ಬಲಿದಾನದ ಮುಖಾಂತರ ವಸಾಹತುಶಾಹಿಗಳ ವಿರುದ್ಧದ ಆಂದೋಲನದಲ್ಲಿ ಒಂದುಗೂಡಿದ ಈ ದೇಶದ ಶಕ್ತಿ ಇದರ ವೈವಿಧ್ಯತೆಯಾಗಿದೆ. ಇಂತಹ ವಿಶಿಷ್ಟ ದೇಶ ಈ ಪ್ರಪಂಚದಲ್ಲಿ ಇನ್ನೊಂದಿಲ್ಲ. ಈ ವಿಶಿಷ್ಟತೆಯನ್ನು ನಾಶ ಮಾಡಿ ಇದನ್ನು ದುರ್ಬಲಗೊಳಿಸುವ ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಧರ್ಮ, ಒಂದು ರಾಜಕೀಯ ಪಕ್ಷ, ಒಬ್ಬ ನಾಯಕ, ಒಂದು ಚಿಂತನೆ ಎಂಬ ಸಿದ್ಧಾಂತವನ್ನು ನಾವು ವಿರೋಧಿಸುತ್ತೇವೆ. ಅದೇ ರೀತಿ, ಒಂದು ತೆರಿಗೆ, ಒಂದು ಮಾರುಕಟ್ಟೆ, ಒಮ್ಮೆಗೇ ಚುನಾವಣೆಯಂತಹ ಕ್ರಮಗಳೂ ಸಹಾ ದುರುದ್ದೇಶದಿಂದ ಕೂಡಿದೆ. ಈ ನಿಟ್ಟಿನಲ್ಲಿ ಇದುವರೆಗೆ ತೆಗೆದುಕೊಳ್ಳಲಾಗಿರುವ ಕ್ರಮಗಳನ್ನು ಹಿಂತೆಗೆದುಕೊಳ್ಳಬೇಕೆಂದು ನಾವು ಆಗ್ರಹಿಸುತ್ತೇವೆ ಮತ್ತು ಮುಂದಿನ ದಿನಗಳಲ್ಲಿ ಅಂತಹ ಕ್ರಮಗಳನ್ನು ತೆಗೆದುಕೊಂಡರೆ ಯಾವುದೇ ಬೆಲೆ ತೆತ್ತಾದರೂ ಅದನ್ನು ತಡೆಯುತ್ತೇವೆ ಎಂಬ ದೃಢ ನಿಶ್ಚಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಹೀಗಿವೆ..
ಕೇಂದ್ರೀಯ ಏಜೆನ್ಸಿಗಳಾದ ಸಿಬಿಐ, ಐಟಿ, ಇಡಿ ಇತ್ಯಾದಿಗಳನ್ನೂ, ರಾಜ್ಯಪಾಲರ ಕಚೇರಿಯೂ ಸೇರಿದಂತೆ ವಿವಿಧ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಗಳನ್ನೂ ಒಕ್ಕೂಟ ಸರ್ಕಾರವು ತನ್ನ ಖಾಸಗಿ ಏಜೆನ್ಸಿಗಳಂತೆ ಬಳಸಿಕೊಳ್ಳುತ್ತಿದೆ. ತನ್ನ ವಿರೋಧಿಗಳನ್ನು ಅಕ್ರಮವಾಗಿ ಬಗ್ಗುಬಡಿಯಲು, ತನ್ನ ಜೊತೆಗಿರುವವರನ್ನು ರಕ್ಷಿಸಲು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಹುನ್ನಾರವು ದೇಶದ ಜನರಿಗೆ ಸ್ಪಷ್ಟವಾಗಿ ಕಂಡಿದ್ದು, ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ಕಾಪಾಡಲು ಮತ್ತು ದೇಶದಲ್ಲಿ ಭ್ರಷ್ಟಾಚಾರ ಹಾಗೂ ವಿವಿಧ ಅಕ್ರಮಗಳ ನಿಷ್ಪಕ್ಷಪಾತ ತನಿಖೆ ನಡೆಯುವಂತಾಗಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ನಾವು ಮಾಡುತ್ತೇವೆ.
ಕೇಂದ್ರೀಕರಣದ ಪ್ರಯತ್ನಗಳನ್ನು ಹಿಂದೆ ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ಆಡಳಿತದ ಸಂದರ್ಭದಲ್ಲಿ ಮಾಡಲಾಗಿದೆ; ಅವೆಲ್ಲವನ್ನೂ ನಾವು ನೆನಪಿನಲ್ಲಿಟ್ಟಿದ್ದೇವೆ. ಆದರೆ, 2014ರಿಂದ ಈಚೆಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷವು ಕೇಂದ್ರೀಕರಣವನ್ನು ತೀವ್ರಗೊಳಿಸಿದ್ದಲ್ಲದೇ ಎಲ್ಲಾ ಮೇರೆಗಳನ್ನು ದಾಟಿ ನಿರ್ಲಜ್ಜವಾಗಿ ಮುಂದುವರೆದಿದೆ. ಇದನ್ನು ಎದುರಿಸಿ ನಿಲ್ಲಲು, ದೇಶದ ಎಲ್ಲಾ ರಾಜ್ಯಗಳ ಪ್ರಜಾತಂತ್ರವಾದಿ ಜನತೆ, ರಾಜಕೀಯ ಪಕ್ಷಗಳು, ವಿಶೇಷವಾಗಿ ವಿದ್ಯಾರ್ಥಿ ಯುವ ಜನರನ್ನು ಒಳಗೊಂಡು ರಾಷ್ಟ್ರೀಯ ಅಭಿಯಾನವನ್ನು ರೂಪಿಸಲು ಈ ಸಭೆ ನಿರ್ಣಯಿಸುತ್ತಿದೆ.
‘ಒಕ್ಕೂಟ’ ಸರ್ಕಾರದ ಒಕ್ಕೂಟ ತತ್ವ ವಿರೋಧಿ ನೀತಿಯ ಕುರಿತು, ಅದರ ಪರಿಣಾಮಗಳ ಕುರಿತು ಅರಿವು ಮೂಡಿಸಲು ಮುಂದಿನ ಒಂದು ತಿಂಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಜಾಗೃತಿ ಸಭೆಗಳನ್ನು ನಡೆಸುವುದು.
ನವೆಂಬರ್ ತಿಂಗಳಿನಲ್ಲಿ ಈ ವಿಚಾರವನ್ನೇ ಕೇಂದ್ರಬಿಂದುವಾಗಿಟ್ಟುಕೊಂಡು ಬೃಹತ್ ಸಮಾವೇಶವನ್ನು ಸಂಘಟಿಸುವುದು.
ವಿವಿಧ ರಾಜ್ಯಗಳ ಸಮಾನ ಮನಸ್ಕರನ್ನು ಸಂಪರ್ಕಿಸಿ ದೇಶ ಮಟ್ಟದಲ್ಲಿ ಕೇಂದ್ರದ ರಾಜ್ಯ ವಿರೋಧಿ ಧೋರಣೆ ವಿರುದ್ಧ ದನಿ ಎತ್ತಲು ದೆಹಲಿಯಲ್ಲಿ ಅಖಿಲ ಭಾರತ ಮಟ್ಟದ ಪ್ರತಿಭಟನಾ ಸಭೆಯೊಂದನ್ನು ಆಯೋಜಿಸುವುದು.
ರಾಜ್ಯದ ಅಸ್ಮಿತೆ, ಹಕ್ಕು ಹಾಗೂ ಪಾಲಿನ ರಕ್ಷಣೆಗಾಗಿ ರಾಜ್ಯ ಸರ್ಕಾರವೂ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ರಾಜ್ಯವ್ಯಾಪಿಯಾಗಿ ಹಕ್ಕೊತ್ತಾಯ ಸಲ್ಲಿಸುವುದು.
ಇದೇ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಅವರ ಬಿಡುಗಡೆಗೆ ಸಭೆ ಆಗ್ರಹಿಸಿತು. ದೆಹಲಿ ದಂಗೆಗಳಿಗೆ ಕಾರಣ ಎಂಬ ಆಧಾರ ರಹಿತ ಸುಳ್ಳು ಆರೋಪದ ಮೇಲೆ ಖಾಲಿದ್ ಅವರನ್ನು ಬಂಧಿಸಿ ಇಂದಿಗೆ 4 ವರ್ಷಗಳಾಗುತ್ತಿವೆ. ವಿನಾಕಾರಣ ಬೇಲ್ ಸಹ ನೀಡದೆ ಕೊಳೆಸುತ್ತಿರುವುದಲ್ಲದೆ, ಕನಿಷ್ಟ ವಿಚಾರಣೆಯನ್ನೂ ಪ್ರಾರಂಭಿಸದೆ ಅವರ ಪ್ರಜಾತಾಂತ್ರಿಕ ಹಕ್ಕನ್ನು ದಮನ ಮಾಡಲಾಗುತ್ತಿದೆ. ಈ ಸಂಚಿನಲ್ಲಿ ಒಕ್ಕೂಟ ಸರ್ಕಾರದ ಗೃಹ ಮಂತ್ರಾಲಯವು ನೇರವಾಗಿ ಭಾಗಿಯಾಗಿದೆ. ಅನ್ಯಾಯಗಳ ವಿರುದ್ಧ ದನಿ ಎತ್ತಿದವರನ್ನು ಈ ರೀತಿ ದಮನ ಮಾಡುವುದನ್ನು ಈ ಸಭೆ ತೀವ್ರವಾಗಿ ಖಂಡಿಸುತ್ತದೆ. ಉಮರ್ ಖಾಲಿದ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಸಭೆ ಒತ್ತಾಯಿಸಿದೆ.
ನ್ಯಾಯಮೂರ್ತಿ ಗೋಪಾಲಗೌಡ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಿವರಾಯಪ್ಪ
ಜೋಗಿನ ಪ್ರಸ್ತಾವನೆ ಮಂಡಿಸಿದರು. ಜೆ.ಎಂ ವೀರಸಂಗಯ್ಯ ಸಭೆಯ ನಿರ್ವಹಣೆ ಮಾಡಿದರು. ಬಿ.ಟಿ ಲಲಿತಾ ನಾಯಕ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಎ.ನಾರಾಯಣ ಹಾಗೂ
ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿದರು. ಕೆ.ಷರೀಫಾ ನಿರ್ಣಯಗಳನ್ನು ಮಂಡಿಸಿದರು.
ಇದನ್ನೂ ಓದಿ : ಜೀವ ಬೆದರಿಕೆ, ಜಾತಿ ನಿಂದನೆ ಆರೋಪ : ಬಿಜೆಪಿ ಶಾಸಕ ಮುನಿರತ್ನ ವಿರುದ್ದ ಎಫ್ಐಆರ್ ದಾಖಲು


