ಛತ್ತೀಸ್ಗಢ ಮದ್ಯ ಹಗರಣ ಪ್ರಕರಣದ ಆರೋಪಿಯ ವಿರುದ್ಧ ‘ಯಾವುದೇ ಸಾಕ್ಷ್ಯಗಳಿಲ್ಲದೆ’ ಆರೋಪಗಳನ್ನು ಮಾಡಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಸೋಮವಾರ ಜಾರಿ ನಿರ್ದೇಶನಾಲಯವನ್ನು (ಇಡಿ) ತರಾಟೆಗೆ ತೆಗೆದುಕೊಂಡಿದ್ದು, “ನಿಮಗೆ ಇದೇ ರೂಢಿಯಾಗಿದೆ” ಎಂದು ಛೀಮಾರಿ ಹಾಕಿದೆ.
ಛತ್ತೀಸ್ಗಢದಲ್ಲಿ ನಡೆದ 2,000 ಕೋಟಿ ರೂಪಾಯಿಗಳ ಮದ್ಯ ಹಗರಣದಲ್ಲಿ ಜಾಮೀನು ಕೋರಿ ಅರವಿಂದ್ ಸಿಂಗ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ವಿಚಾರಣೆ ನಡೆಸಿತು.
“ಇದು ಹಲವಾರು ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯ ಅಳವಡಿಸಿಕೊಂಡ ಮಾದರಿಯಾಗಿದೆ. ನೀವು ಯಾವುದೇ ಪುರಾವೆಗಳಿಲ್ಲದೆ ಆರೋಪಗಳನ್ನು ಮಾಡುತ್ತೀರಿ. ಈ ರೀತಿ ಪ್ರಾಸಿಕ್ಯೂಷನ್ ನ್ಯಾಯಾಲಯದ ಮುಂದೆ ನಿಲ್ಲುವುದಿಲ್ಲ” ಎಂದು ಪೀಠ ಹೇಳಿದೆ.
ವಿಚಾರಣೆಯ ಸಮಯದಲ್ಲಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ ರಾಜು ಅವರು, ವಿಕಾಸ್ ಅಗರ್ವಾಲ್ ಎಂಬ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಿಂಗ್ 40 ಕೋಟಿ ರೂ.ಗಳನ್ನು ಸಂಪಾದಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಗರ್ವಾಲ್ ಅವರನ್ನು ಆರೋಪಿಯನ್ನಾಗಿ ಮಾಡಲಾಗಿದೆಯೇ ಎಂದು ನ್ಯಾಯಾಲಯ ಕೇಳಿದಾಗ, ಅವರು ತಲೆಮರೆಸಿಕೊಂಡಿದ್ದಾರೆ ಎಂದು ರಾಜು ಅವರು ಉತ್ತರಿಸಿದ್ದಾರೆ.
“ಅವರು (ಸಿಂಗ್) 40 ಕೋಟಿ ರೂ. ಗಳಿಸಿದ್ದಾರೆ ಎಂದು ನೀವು ನಿರ್ದಿಷ್ಟ ಆರೋಪ ಮಾಡಿದ್ದೀರಿ. ಈಗ ನಿಮಗೆ ಈ ವ್ಯಕ್ತಿಗೆ ಈ ಕಂಪನಿ ಅಥವಾ ಯಾವುದೇ ಇತರ ಕಂಪನಿಯೊಂದಿಗೆ ಸಂಪರ್ಕವಿದೆಯೇ ಎಂದು ತೋರಿಸಲು ಸಾಧ್ಯವಾಗುತ್ತಿಲ್ಲ” ಎಂದು ಪೀಠ ಗರಂ ಆಗಿದೆ.
“ಅವರು ಆ ಕಂಪನಿಗಳ ನಿರ್ದೇಶಕರೇ, ಬಹುಪಾಲು ಷೇರುದಾರರೇ, ವ್ಯವಸ್ಥಾಪಕ ನಿರ್ದೇಶಕರೇ ಎಂಬುದನ್ನು ನೀವು ಹೇಳಬೇಕು. ಏನಾದರೂ ಇರಬೇಕು” ಎಂದಿದೆ.
ಇದಕ್ಕೆ ಉತ್ತರಿಸಿದೆ ರಾಜು ಅವರು, ಒಬ್ಬ ವ್ಯಕ್ತಿಯು ಕಂಪನಿಯನ್ನು ನಿಯಂತ್ರಿಸಬಹುದು. ಆದರೆ ಕಂಪನಿಯ ನಡವಳಿಕೆಗೆ ಅವನು ಜವಾಬ್ದಾರನಾಗಿರಬೇಕಾಗಿಲ್ಲ ಎಂದು ಹೇಳಿದ್ದಾರೆ.
ಏಪ್ರಿಲ್ 28 ರಂದು ಛತ್ತೀಸ್ಗಢ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್, ರಾಜ್ಯ ಅಧಿಕಾರಿಗಳು ದಾಖಲಿಸಿರುವ ಮದ್ಯ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಎಷ್ಟು ಕಾಲ ಜೈಲಿನಲ್ಲಿ ಇಡುತ್ತೀರಿ? ಎಂದು ಕೇಳಿತ್ತು.
ಈ ಪ್ರಕರಣದಲ್ಲಿ ಮೂರು ಆರೋಪ ಪಟ್ಟಿಗಳನ್ನು ಸಲ್ಲಿಸಲಾಗಿದ್ದು, ತನಿಖೆ ಇನ್ನೂ ನಡೆಯುತ್ತಿದೆ ಎಂಬುವುದನ್ನು ನ್ಯಾಯಾಲಯ ಗಮನಿಸಿತ್ತು.
“ಮೂರು ಆರೋಪ ಪಟ್ಟಿಗಳನ್ನು ಸಲ್ಲಿಸಿದ ಬಳಿಕವೂ ತನಿಖೆ ನಡೆಯುತ್ತಿದೆ. ನೀವು ಆ ವ್ಯಕ್ತಿಯನ್ನು ಕಸ್ಟಡಿಯಲ್ಲಿ ಇರಿಸುವ ಮೂಲಕ ವಾಸ್ತವಿಕವಾಗಿ ಶಿಕ್ಷೆ ವಿಧಿಸುತ್ತಿದ್ದೀರಿ. ನೀವು ಪ್ರಕ್ರಿಯೆಯನ್ನು ಶಿಕ್ಷೆಯನ್ನಾಗಿ ಮಾಡಿದ್ದೀರಿ. ಇದು ಭಯೋತ್ಪಾದಕ ಅಥವಾ ತ್ರಿವಳಿ ಕೊಲೆಯ ಪ್ರಕರಣವಲ್ಲ” ಎಂದು ನ್ಯಾಯಪೀಠ ಮೌಖಿಕವಾಗಿ ಹೇಳಿತ್ತು.
ರಾಜ್ಯ ಸರ್ಕಾರ ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿತ್ತು. ಪ್ರಕರಣದ ಇತರ ಆರೋಪಿಗಳೊಂದಿಗೆ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ ಎಂದು ವಾದಿಸಿತ್ತು.
ಆರೋಪಿಗಳ ಪರವಾಗಿ ಹಾಜರಾದ ಹಿರಿಯ ವಕೀಲ ಸಿದ್ಧಾರ್ಥ್ ಅಗರ್ವಾಲ್, ಪ್ರಕರಣದಲ್ಲಿ ಮೂರು ಆರೋಪಪಟ್ಟಿಗಳನ್ನು ಸಲ್ಲಿಸಲಾಗಿದ್ದು, ಇನ್ನೂ ಆರೋಪಗಳನ್ನು ರೂಪಿಸಬೇಕಾಗಿದೆ ಎಂದು ವಾದಿಸಿದ್ದರು.
ಅರವಿಂದ್ ಸಿಂಗ್ ಮತ್ತು ಅಮಿತ್ ಸಿಂಗ್ ಅವರಿಗೆ ಮಾಜಿ ಅಬಕಾರಿ ಸಚಿವ ಕವಾಸಿ ಲಖ್ಮಾ ಅವರನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿ, ಮೇ 9ಕ್ಕೆ ವಿಚಾರಣೆಯನ್ನು ಮುಂದೂಡಿತ್ತು.
2019-22ರಲ್ಲಿ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು, ಖಾಸಗಿ ವ್ಯಕ್ತಿಗಳು ಮತ್ತು ರಾಜಕೀಯ ವ್ಯಕ್ತಿಗಳು ಜಂಟಿಯಾಗಿ ಈ ಹಗರಣವನ್ನು ಎಸಗಿದ್ದು, 2,000 ಕೋಟಿ ರೂ.ಗೂ ಹೆಚ್ಚು ಮೊತ್ತದ ಅಕ್ರಮ ನಡೆದಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಈ ಹಣ ವರ್ಗಾವಣೆ ಪ್ರಕರಣವು 2022 ರಲ್ಲಿ ದೆಹಲಿಯ ನ್ಯಾಯಾಲಯದಲ್ಲಿ ಸಲ್ಲಿಸಲಾದ ಆದಾಯ ತೆರಿಗೆ ಇಲಾಖೆ ಆರೋಪಪಟ್ಟಿಯಿಂದ ಹುಟ್ಟಿಕೊಂಡಿದೆ.
ಸಿಎಸ್ಎಂಸಿಎಲ್ (ಮದ್ಯ ಖರೀದಿ ಮತ್ತು ಮಾರಾಟದ ರಾಜ್ಯ ಸಂಸ್ಥೆ) ನಿಂದ ಸಂಗ್ರಹಿಸಿದ ಪ್ರತಿ ಮದ್ಯದ ಮೇಲೆ ರಾಜ್ಯದ ಡಿಸ್ಟಿಲರಿಗಳಿಂದ ಲಂಚವನ್ನು ಪಡೆಯಲಾಗಿದೆ ಮತ್ತು ದೇಶೀಯ ಮದ್ಯವನ್ನು ಲೆಕ್ಕದಿಂದ ಹೊರಗಿಟ್ಟು ಮಾರಾಟ ಮಾಡಲಾಗಿದೆ ಎಂದು ಇಡಿ ಆರೋಪಿಸಿದೆ.
ನ್ಯಾಯಮೂರ್ತಿ ನಿವಾಸದಲ್ಲಿ ನಗದು ಪತ್ತೆ ಪ್ರಕರಣ: ತನಿಖಾ ವರದಿ ಸುಪ್ರಿಂಕೋರ್ಟ್ಗೆ ಸಲ್ಲಿಕೆ


