ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಬಿಜೆಪಿಯ ಹಿರಿಯ ಮುಖಂಡ ಎಲ್. ಕೆ. ಅಡ್ವಾಣಿಯನ್ನು ಭೇಟಿಯಾಗಿದ್ದಾರೆ, ಅಡ್ವಾಣಿ ಜುಲೈ 24 ಶುಕ್ರವಾರ ಬಾಬರಿ ಮಸೀದಿ ಧ್ವಂಸಗೊಳಿಸಿದ ಪ್ರಕರಣದಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಲಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
92 ವರ್ಷದ ಅಡ್ವಾಣಿಯನ್ನು ಅವರ ನಿವಾಸದಲ್ಲಿ ಅಮಿತ್ ಷಾ ಭೇಟಿಯಾದಾಗ ಅವರೊಂದಿಗೆ ಸರ್ಕಾರಿ ವಕೀಲರು ಇದ್ದರು ಎಂದು ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಬಾಬರಿ ಮಸೀದಿಯನ್ನು 1992 ರ ಡಿಸೆಂಬರ್ 6 ರಂದು ಹಿಂದು ಉಗ್ರಗಾಮಿಗಳು ಕೆಡವಿ ಹಾಕಿದ್ದರು.
ಬಿಜೆಪಿ ಮುಖಂಡರಾದ ಅಡ್ವಾಣಿ, ಉಮಾ ಭಾರತಿ ಮತ್ತು ಮುರುಳಿ ಮನೋಹರ್ ಜೋಶಿಯವರು ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದಾರೆ. ವಿಶೇಷ ನ್ಯಾಯಾಧೀಶ ಎಸ್. ಕೆ. ಯಾದವ್ ಗುರುವಾರ ಮುರುಳಿ ಮನೋಹರ್ ಜೋಶಿ ಹೇಳಿಕೆಯನ್ನು ದಾಖಲಿಸಲಿದ್ದಾರೆ.
ಬಾಬರಿ ಮಸೀದಿ ಧ್ವಂಸಗೊಳಿಸಿದ ಪ್ರಕರಣದ ವಿಚಾರಣೆಯನ್ನು ಒಂಬತ್ತು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ಜುಲೈನಲ್ಲಿ ಹೇಳಿತ್ತು. ಆದಾಗ್ಯೂ, ಮೇ 8 ರಂದು ವಿಚಾರಣಾ ನ್ಯಾಯಾಲಯವು ತನ್ನ ತೀರ್ಪನ್ನು ಆಗಸ್ಟ್ 31 ರವರೆಗೆ ಘೋಷಿಸಲು ಗಡುವನ್ನು ವಿಸ್ತರಿಸಿದೆ.
ಏಪ್ರಿಲ್ 19, 2017 ರಂದು, ಉನ್ನತ ನ್ಯಾಯಾಲಯವು ಈ ಪ್ರಕರಣದಲ್ಲಿ ದಿನನಿತ್ಯದ ವಿಚಾರಣೆಗೆ ಆದೇಶಿಸಿತ್ತು. ಅದನ್ನು ಎರಡು ವರ್ಷಗಳಲ್ಲಿ ತೀರ್ಮಾನಿಸಬೇಕು ಎಂದು ಹೇಳಲಾಗಿತ್ತು. ಅಡ್ವಾಣಿ, ಜೋಶಿ, ವಿನಯ್ ಕಟಿಯಾರ್, ರಿತಂಬರ ಮತ್ತು ವಿಷ್ಣು ಹರಿ ದಾಲ್ಮಿಯಾ ವಿರುದ್ಧ ದಾಖಲಾದ ಕ್ರಿಮಿನಲ್ ಪಿತೂರಿ ಆರೋಪಗಳನ್ನು ನ್ಯಾಯಾಲಯವು ಮತ್ತೆ ವಿಚಾರಣೆಗೆ ತೆಗೆದುಕೊಂಡಿತು.
ಪ್ರಕರಣದಲ್ಲಿ ಈ ಹಿಂದೆ ಖುಲಾಸೆಗೊಂಡಿದ್ದ ಹಲವಾರು ಇತರ ಹಿಂದುತ್ವ ನಾಯಕರ ವಿರುದ್ಧದ ಆರೋಪಗಳನ್ನೂ ಸಹ ವಿಚಾರಣೆಗೆ ತೆಗೆದುಕೊಂಡಿತು. ಇತರ ಮೂವರು ಆರೋಪಿಗಳಾದ ಗಿರಿರಾಜ್ ಕಿಶೋರ್, ವಿಶ್ವ ಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಾಲ್ ಮತ್ತು ವಿಷ್ಣು ಹರಿ ದಾಲ್ಮಿಯಾ ವಿಚಾರಣೆಯ ಸಮಯದಲ್ಲಿ ಸಾವನ್ನಪ್ಪಿದರು ಹಾಗಾಗಿ ಅವರ ವಿರುದ್ಧದ ವಿಚಾರಣೆಯನ್ನು ರದ್ದುಪಡಿಸಲಾಯಿತು.
ನವೆಂಬರ್ನಲ್ಲಿ ನೀಡಿದ ಮಹತ್ವದ ತೀರ್ಪಿನಲ್ಲಿ, ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ಭೂಮಿಯನ್ನು ರಾಮ ಮಂದಿರ ನಿರ್ಮಾಣಕ್ಕಾಗಿ ಸರ್ಕಾರ ನಡೆಸುವ ಟ್ರಸ್ಟ್ಗೆ ಹಸ್ತಾಂತರಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಬಾಬರಿ ಮಸೀದಿ ನೆಲಸಮ ಮಾಡಿರುವುದು ಕಾನೂನುಬಾಹಿರ ಎಂದು ನ್ಯಾಯಾಲಯ ಹೇಳಿದ್ದು, ಮಸೀದಿ ನಿರ್ಮಿಸಲು ಪರ್ಯಾಯ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಅಯೋಧ್ಯೆಯ ರಾಮ ದೇವಾಲಯದ ಅಡಿಪಾಯ ಹಾಕುವ ಸಮಾರಂಭ ಆಗಸ್ಟ್ 5 ರಂದು ನಡೆಯಲಿದೆ ಎಂದು ಪಿಟಿಐ ವರದಿ ಮಾಡಿದೆ. ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗಿದೆ.
ಇದನ್ನೂ ಓದಿ: ನಿಜವಾದ ಅಯೋಧ್ಯೆ ನೇಪಾಳದಲ್ಲಿದೆ, ಭಗವಾನ್ ರಾಮ ನೇಪಾಳಿ: ನೇಪಾಳದ ಪ್ರಧಾನಿ ಕೆ.ಪಿ ಶರ್ಮಾ ಒಲಿ