Homeಮುಖಪುಟಶಿರಾ ಉಪಚುನಾವಣೆ: ಪ್ರತಿಷ್ಠೆಯ ಜಿದ್ದಾಜಿದ್ದಿನಲ್ಲಿ ಯಾವ ಪಕ್ಷ ಮುಂದು?

ಶಿರಾ ಉಪಚುನಾವಣೆ: ಪ್ರತಿಷ್ಠೆಯ ಜಿದ್ದಾಜಿದ್ದಿನಲ್ಲಿ ಯಾವ ಪಕ್ಷ ಮುಂದು?

ಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದಾರೆ. ಇದನ್ನು ಕಾಡುಗೊಲ್ಲ ಸಮುದಾಯ ಸ್ವಾಗತಿಸಿದೆ.

- Advertisement -
- Advertisement -

ಶಿರಾ ಉಪಚುನಾವಣೆ ಘೋಷಣೆಯಾಗಿದ್ದು ಮೂರು ಪಕ್ಷಗಳ ಪ್ರಚಾರ ಭರಾಟೆ ಜೋರಾಗಿ ಸದ್ದುಮಾಡುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಯ ಹೆಸರನ್ನು ಮೊದಲೇ ಘೋಷಣೆ ಮಾಡಿದ್ದರೆ, ನಂತರ ಜೆಡಿಎಸ್ ಘೋಷಿಸಿದೆ. ಬಿಜೆಪಿ ಇನ್ನೂ ಲೆಕ್ಕಾಚಾರದಲ್ಲಿದೆ. ಆಡಳಿತಾರೂಢ ಬಿಜೆಪಿ ಪ್ರಚಾರದಲ್ಲಿ ಮುಂದಿದ್ದರೆ, ಉಳಿದ ಎರಡು ಪಕ್ಷಗಳಲ್ಲಿ ಅಬ್ಬರ ಕಂಡುಬರುತ್ತಿಲ್ಲ. ಬಿಜೆಪಿ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಲು ಹರಸಾಹಸಪಡುತ್ತಿದೆ. ಹಳೆಯ ದಾಳಗಳನ್ನೇ ಉರುಳಿಬಿಡುತ್ತಿದೆ. ಭಾವನಾತ್ಮಕ ವಿಷಯಗಳನ್ನು ಹರಿಯಬಿಟ್ಟರೆ ಗೆಲುವು ಖಚಿತ ಎಂಬ ಭ್ರಮೆಯಲ್ಲಿ ಮುಂದೆ ಸಾಗುತ್ತಿದೆ.

ಬಿಜೆಪಿ ನಾಯಕರಿಗೆ ಜಿಲ್ಲೆಯಲ್ಲಿ ಇದುವರೆಗೂ ಇಲ್ಲದಿದ್ದ ‘ಹಿಂದೂಗಳ ಬಗೆಗಿನ ಪ್ರೀತಿ’ ಇದೇ ಮೊದಲ ಬಾರಿಗೆ ಉಕ್ಕಿ ಹರಿದಂತೆ ಕಾಣುತ್ತಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್ ಗೌಡ ಶಿರಾದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂಬ ಹೇಳಿಕೆ ನೀಡಿದರೆ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಹಿಂದೂಗಳ ಸಂರಕ್ಷಣೆ ಕುರಿತು ಮಾತನಾಡಿ ಹೋಗಿದ್ದಾರೆ.

ಕಳೆದ ನಾಲ್ಕು ತಿಂಗಳ ಹಿಂದೆ ಶಿರಾ ಯುವಕ ಅಜಯ್ ಕುಮಾರ್ ಗಾಲಿ ‘ಪಾಕಿಸ್ತಾನ ಮತ್ತು ಚೈನಾದ ಪರ ಜೈಕಾರ ಹಾಕಿ ಭಾರತೀಯ ಸೇನೆಯ ಬಗ್ಗೆ ನಿಕೃಷ್ಟವಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದ’ ಎಂಬ ವಿಷಯ ಜೋರಾಗಿ ಸದ್ದು ಮಾಡಿತ್ತು. ಹಿಂದೂ ಸಂಘಟನೆಯೊಂದು ಅಜಯ್ ವಿರುದ್ದ ದೂರು ದಾಖಲಿಸಿತು. ಕೂಡಲೇ ಪೊಲೀಸರು ತನಿಖೆಯನ್ನೂ ನಡೆಸದೆ ಅಜಯ್ ಕುಮಾರ್ ಗಾಲಿ ವಿರುದ್ದ 124ಎ ದೇಶದ್ರೋಹ ಪ್ರಕರಣ ದಾಖಲಿಸಿದರು.

ಸತ್ಯಸಂಗತಿ ಎಂದರೆ ಅಜಯ್ ಫೇಸ್‌ಬುಕ್‌ನಲ್ಲಿ ಪಾಕ್, ಚೀನ ಪರ ಜೈಕಾರ ಹಾಕಿದ ಪೋಸ್ಟ್ ಅಪ್‌ಲೋಡ್ ಆಗಿದ್ದ ಸಮಯದಲ್ಲಿ ಬುಕ್ಕಾಪಟ್ನ ಹೊನ್ನೇನಹಳ್ಳಿಯ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಮೊಬೈಲ್ ನೆಟ್‌ವರ್ಕ್ ಕೂಡ ಸಿಗುವುದಿಲ್ಲ. ಆದರೂ ಸೇನೆಯ ವಿರುದ್ದದ ಒಂದು ಪೋಸ್ಟ್ ಅಪ್‌ಲೋಡ್ ಆಗಿತ್ತು. ಈ ಬಗ್ಗೆ ಅಜಯ್‌ಗೆ ಮಾಹಿತಿ ಇರಲಿಲ್ಲ. ವಾಟ್ಸಪ್‌ನಲ್ಲಿ ಈ ಬಗ್ಗೆ ಅಜಯ್ ವಿರುದ್ದ ಟೀಕೆ, ನಿಂದನೆ ಹರಿದಾಡತೊಡಗಿದಾಗ ಸ್ನೇಹಿತರು ಅಜಯ್‌ಗೆ ಮಾಹಿತಿ ನೀಡುತ್ತಾರೆ. ಕೂಡಲೇ ಟವರ್ ಸಿಗುವ ಕಡೆ ಬಂದು ನೋಡಿದರೆ ಅಜಯ್‌ಗೆ ಶಾಕ್ ಆಗುತ್ತದೆ.

ಪೊಲೀಸರು ವಿಚಾರಣೆಗೆಂದು ಕರೆಸಿ ಅಜಯ್ ಅವರನ್ನು ಬಂಧಿಸುತ್ತಾರೆ. 20 ದಿನಗಳ ಜೈಲುವಾಸವನ್ನು ಅನುಭವಿಸಬೇಕಾಗುತ್ತದೆ. ಮಾಜಿ ಸಚಿವ ಟಿ.ಬಿ.ಜಯಚಂದ್ರ ಕೂಡಲೇ ಎಸ್‌ಪಿ ಅವರನ್ನು ಭೇಟಿ ಮಾಡಿ ಈ ಸಂಬಂಧ ಚರ್ಚಿಸುತ್ತಾರೆ. ನಂತರದ ವಿದ್ಯಮಾನದಲ್ಲಿ ಅಜಯ್ ಅವರಿಗೆ ನ್ಯಾಯಾಲಯದಲ್ಲಿ ಜಾಮೀನು ದೊರೆತು ಬಿಡುಗಡೆ ಹೊಂದುತ್ತಾರೆ. ಇದರ ಬಗ್ಗೆ ವಿಚಾರಣೆಯಾಗಿ ಅಜಯ್ ಅವರ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಯಿತೇ ಎಂಬುದರ ಬಗ್ಗೆ ತನಿಖೆ ಮಾಡಬೇಕಿದೆ.

ಅಜಯ್ ಬಿಜೆಪಿಯ ಕಟ್ಟಾ ವಿರೋಧಿ. ರೈತನಾದ ಈತ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಶಿರಾ ಘಟಕದ ಸಂಚಾಲಕ. ಸಹಜವಾಗಿಯೇ ಬಿಜೆಪಿ ಅದರಲ್ಲೂ ಪ್ರಧಾನಿ ಮೋದಿ ವಿರುದ್ಧ ತನ್ನ ಫೇಸ್‌ಬುಕ್‌ನಲ್ಲಿ ಸಾಕಷ್ಟು ಟೀಕೆಗಳನ್ನು ಮಾಡಿ ಪೋಸ್ಟ್ ಮಾಡಿದ್ದಾರೆ. ಕೋಮುವಾದದ ವಿರುದ್ದ ದನಿ ಎತ್ತಿದ್ದಾರೆ. ಈ ಕಾರಣಕ್ಕೆ ಅವರ ಮೇಲೆ ವೆಬ್‌ನಲ್ಲಿ ದಾಳಿಯಾಗಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ.

ಶಿರಾದಲ್ಲಿ ಹಿಂದೂ-ಮುಸ್ಲಿಮರು ಶಾಂತಿ-ಸಹಬಾಳ್ವೆ ಸೌಹಾರ್ದತೆಯಿಂದ ಪರಸ್ಪರ ಕೂಡಿಯೇ ಜೀವನ ನಡೆಸುತ್ತಿದ್ದಾರೆ. 1992ರಲ್ಲಿ ಬಾಬ್ರಿ ಮಸೀದಿ ಕೆಡವಿದಾಗ ಗಲಭೆ ಆಗಿದ್ದು ಬಿಟ್ಟರೆ ಮತ್ತೆಂದೂ ಅಲ್ಲಿ ಹಿಂದೂ-ಮುಸ್ಲಿಮರ ನಡುವೆ ಗಲಭೆ ನಡೆದಿಲ್ಲ. ಅಂಥಾದ್ದರಲ್ಲಿ ಬಿಜೆಪಿ ನಾಯಕರು ಹಿಂದೂಗಳಿಗೆ ರಕ್ಷಣೆ ಇಲ್ಲ ಎಂದು ಹೇಳುತ್ತಲೇ ತಮ್ಮನ್ನು ಟೀಕೆ ಮಾಡಿದ ಹಿಂದೂ ಯುವಕನನ್ನೇ ಜೈಲಿಗೆ ಅಟ್ಟುವಂತಹ ಕೆಲಸ ಮಾಡಿರುವುದು ಜನರ ಕಣ್ಣ ಮುಂದೆ ಇದೆ.

ಬಿಜೆಪಿ ಜಿಲ್ಲಾ ಮುಖಂಡರು ಶಿರಾದ ಮದಲೂರು ಕೆರೆಗೆ ನೀರು ಹರಿಸುವ ವಿಚಾರವನ್ನೂ ತೇಲಿಬಿಟ್ಟರು. ಹಿಂದೆ 2010ರಲ್ಲಿ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಟಿ.ಬಿ.ಜಯಚಂದ್ರ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲು ಮುಂದಾದಾಗ ಬಿಜೆಪಿಯ ಬಿ.ಸುರೇಶ್ ಗೌಡ, ಮಾಜಿ ಸಚಿವ ಸೊಗಡು ಶಿವಣ್ಣ ಮೊದಲಾದವರು ಇದಕ್ಕೆ ತಗಾದೆ ತೆಗೆದಿದ್ದರು. ಇದು ಶಿರಾ ಜನರ ಮನಸ್ಸಿನಿಂದ ಅಳಿಸಿಹೋಗಿಲ್ಲ.

ಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದಾರೆ. ಇದನ್ನು ಕಾಡುಗೊಲ್ಲ ಸಮುದಾಯ ಸ್ವಾಗತಿಸಿದೆ. ಆದರೆ ಅಭಿವೃದ್ಧಿ ನಿಗಮಕ್ಕೆ ನಯಾ ಪೈಸೆಯನ್ನೂ ನೀಡದಿರುವುದು ಕಾಡುಗೊಲ್ಲರಲ್ಲಿ ಅಸಮಾಧಾನ ಮೂಡಿಸಿದೆ. ಬಿಜೆಪಿ ಬೆಂಬಲಿಗ ಕಾಡುಗೊಲ್ಲರು ಸಂಭ್ರಮ ಆಚರಿಸಿದ್ದರೆ ಉಳಿದವರು ಇದು ಚುನಾವಣೆ ಗಿಮಿಕ್ ಎಂದು ಮೌನವಹಿಸಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿತ್ತು. ಮನೆಯೊಂದು ಮೂರು ಬಾಗಿಲು ಎಂಬಂತಹ ವಾತಾವರಣ ನಿರ್ಮಾಣವಾಗಿತ್ತು. ಮಾಜಿ ಸಚಿವ ಟಿ.ಬಿ.ಜಯಚಂದ್ರ, ಡಾ.ಜಿ.ಪರಮೇಶ್ವರ್ ಮತ್ತು ಕೆ.ಎನ್. ರಾಜಣ್ಣ ಅವರ ನಡುವೆ ಭಿನ್ನಾಭಿಪ್ರಾಯಗಳು ಇದ್ದುದ್ದರಿಂದ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಿಲ್ಲೆಯ ಮುಖಂಡರನ್ನು ಕರೆಸಿ ಮಾತನಾಡಿದ ಮೇಲೆ ಒಗ್ಗಟ್ಟು ಮೂಡಿದೆ ಎನ್ನಲಾಗುತ್ತಿದೆ. ಈ ಮೂವರು ನಾಯಕರು ಪತ್ರಿಕಾಗೋಷ್ಠಿಯಲ್ಲಿ ಒಬ್ಬರ ಪಕ್ಕ ಒಬ್ಬರು ಕೂತು ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವಂತೆ ಕಾಣುತ್ತಿದೆ.

ಕಾಂಗ್ರೆಸ್‌ನಿಂದ ಟಿ.ಬಿ ಜಯಚಂದ್ರ

ಮಾಜಿ ಸಚಿವ ಜಯಚಂದ್ರ ವಿರುದ್ಧ ಮುನಿಸಿಕೊಂಡಿದ್ದ ಕಾಡುಗೊಲ್ಲರ ಮುಖಂಡ ಸಾಸಲು ಸತೀಶ್ ಅವರನ್ನು ಡಿಸಿಸಿ (ಜಿಲ್ಲಾ ಕಾಂಗ್ರೆಸ್ ಸಮಿತಿ) ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರನ್ನು ಶಿರಾ ಉಪಚುನಾವಣೆಗೆ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಇದು ಜಯಚಂದ್ರ ಅವರಿಗೆ ಪೂರಕವಾಗಬಹುದು. ಇದೇ ವೇಳೆ ಕಾಂಗ್ರೆಸ್ ನಾಯಕರು ಅದರಲ್ಲೂ ವಿಶೇಷವಾಗಿ ಟಿ.ಬಿ.ಜಯಚಂದ್ರ “ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ ಮದಲೂರು ಕೆರೆಗೆ ಹೇಮಾವತಿ ನೀರನ್ನು ಹರಿಸುತ್ತೇನೆ” ಎಂದು ಭರವಸೆ ನೀಡಿದ್ದಾರೆ.

ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಮತಗಳು ಹೆಚ್ಚಾಗಿವೆ. ಒಕ್ಕಲಿಗರ ಮತಗಳು 49 ಸಾವಿರ, ಕಾಡುಗೊಲ್ಲರ ಮತಗಳು 26 ಸಾವಿರ, ಮುಸ್ಲಿಂ ಸಮುದಾಯದ ಮತಗಳು 22 ಸಾವಿರ, ಕುರುಬ ಸಮುದಾಯದ ಮತಗಳು 13 ಸಾವಿರ, ನಾಯಕ ಸಮುದಾಯದ ಮತಗಳು 13 ಸಾವಿರ, ಬಲಿಜ ಜನಾಂಗದ ಮತಗಳು 7 ಸಾವಿರ. ಹೀಗೆ ಬಹುಸಂಖ್ಯಾತರು ಈ ಸಮುದಾಯಗಳೇ ಆಗಿವೆ. ಈ ಸಮುದಾಯದ ಮತಗಳು ಮೂರು ಪಕ್ಷಗಳಲ್ಲೂ ಹಂಚಿ ಹೋಗಲಿವೆ. ಹಂಚಿಕೆಯಲ್ಲಿ ಏರುಪೇರು ಸ್ಪಷ್ಟವಾಗಿದೆ.

ಒಳಮೀಸಲಾತಿಯ ಕುರಿತು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ಶಿಫಾರಸ್ಸು ಜಾರಿಗೊಳಿಸುವ ಪರ-ವಿರೋಧ ಪ್ರತಿಭಟನೆಗಳು ನಡೆಯುತ್ತಿದ್ದು ಇದು ಕೂಡ ಉಪಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ಬಿಜೆಪಿ ಮೇಲ್ಜಾತಿಗಳ ಪರ ಮತ್ತು ದಲಿತರಲ್ಲಿ ಸ್ಪೃಶ್ಯ ಜಾತಿಗಳ ಪರವಾಗಿರುವುದರಿಂದ ಆ ಮತಗಳು ಬಿಜೆಪಿ ಅಭ್ಯರ್ಥಿಗೆ ಬೀಳುವ ನಿರೀಕ್ಷೆ ಇದೆ. ಕಾಡುಗೊಲ್ಲರು ಮತ್ತು ಪರಿಶಿಷ್ಟರ ಮತಗಳು ಸಾಲಿಡ್ ಆಗಿ ಯಾವುದೇ ಒಂದು ಪಕ್ಷಕ್ಕೆ ವರ್ಗಾವಣೆಗೊಳ್ಳುವುದಿಲ್ಲ ಎಂಬ ವಿಶ್ಲೇಷಣೆಗಳೂ ನಡೆಯುತ್ತಿದೆ. ಹಾಗಾಗಿ ಪರಿಶಿಷ್ಟರ ಮತಗಳು ಮೂರೂ ಪಕ್ಷಗಳ ಪಾಲಾಗಲಿವೆ. ಹನಿಹನಿ ಕೂಡಿ ಹಳ್ಳ ಹರಿದು ಯಾವ ಸಮುದ್ರವನ್ನು ಸೇರಲಿದೆ ಎಂಬುದು ನಿಗೂಢವಾಗಿಯೇ ಇದೆ.

ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ನಡುವೆ ಪೈಪೋಟಿ ಇಲ್ಲ. ಜಯಚಂದ್ರ ಒಬ್ಬರೇ ಅಭ್ಯರ್ಥಿ. ಟಿಕೆಟ್‌ಗಾಗಿ ಪೈಪೋಟಿ ಇದ್ದರೆ ಅದು ಸಮಸ್ಯೆ ಆಗುತ್ತಿತ್ತು. ಆದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ ಹೆಚ್ಚಿದ್ದರಿಂದ ಕೊನೆ ಗಳಿಗೆಯಲ್ಲಿ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿವೆ. ಬಿಜೆಪಿಯಿಂದ ಮಾಜಿ ಸಂಸದ ಮೂಡಲಗಿರಿಯಪ್ಪ ಪುತ್ರ ರಾಜೇಶ್ ಗೌಡ ಅವರ ಹೆಸರು ಚಾಲ್ತಿಯಲ್ಲಿದ್ದರೆ, ಜೆಡಿಎಸ್ ಸತ್ಯನಾರಾಯಣ್ ಕುಟುಂಬಕ್ಕೆ ಮಣೆ ಹಾಕಿದೆ. ಸತ್ಯನಾರಾಯಣ್ ಪತ್ನಿ ಅಮ್ಮಾಜಮ್ಮ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದೆ. ಅದು ಅನುಕಂಪದ ಓಟುಗಳನ್ನು ನೆಚ್ಚಿಕೊಂಡಿದೆ. ಸ್ಥಳೀಯ ಮುಖಂಡರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವುದು ಅದಕ್ಕೆ ಹೊಡೆತ ಬೀಳಲಿದೆ ಎನ್ನಲಾಗುತ್ತಿದೆ.

ಬಿಜೆಪಿ ಸಂಭಾವ್ಯ ಅಭ್ಯರ್ಥಿ ರಾಜೇಶ್ ಗೌಡ

ಹೊರಗಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಮತ ಬೀಳುವುದಿಲ್ಲ ಎಂಬ ಸಂದೇಶವನ್ನು ಶಿರಾ ಕ್ಷೇತ್ರದ ಜನ ರವಾನಿಸಿ ಆಗಿದೆ. ಹಾಗಾಗಿ ಜೆಡಿಎಸ್ ಮತ್ತು ಬಿಜೆಪಿ ಹೊರಗಿನಿಂದ ಅಭ್ಯರ್ಥಿಗಳನ್ನು ಕರೆತಂದು ಕಣಕ್ಕೆ ಇಳಿಸಿದರೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬುದನ್ನು ಮನಗಂಡಿರುವ ಉಭಯ ಪಕ್ಷಗಳು ಶಿರಾ ಕ್ಷೇತ್ರದವರನ್ನೇ ಸ್ಪರ್ಧೆಗೆ ಇಳಿಸಿವೆ. ಮೂರು ಪಕ್ಷಗಳು ಕುಂಚಿಟಿಗರನ್ನೇ ಅಭ್ಯರ್ಥಿಗಳನ್ನಾಗಿ ಕಣಕ್ಕೆ ಇಳಿಸಿರುವುದು ಕುಂಚಿಟಿಗರ ಮತಗಳು ಹರಿದು ಹಂಚಿಹೋಗಲಿವೆ. ಈ ನಡುವೆ ಸಿಪಿಐ ಪಕ್ಷವೂ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ನಿರ್ಧರಿಸಿದೆ. ಕಾಡುಗೊಲ್ಲರು ಕೂಡ ಅಸ್ಮಿತೆಗಾಗಿ, ಸ್ವಾಭಿಮಾನಕ್ಕಾಗಿ ಅಭ್ಯರ್ಥಿಯನ್ನು ಹಾಕುವ ಬಗ್ಗೆ ಚಿಂತನೆ ನಡೆಸಿದ್ದಾರೆ.

ಜೆಡಿಎಸ್‌ನಿಂದ ಸತ್ಯನಾರಾಯಣ್ ಪತ್ನಿ ಅಮ್ಮಾಜಮ್ಮ

ಜೆಡಿಎಸ್‌ನಲ್ಲಿ ದಿವಂಗತ ಶಾಸಕ ಬಿ.ಸತ್ಯನಾರಾಯಣ್ ಅವರ ಕುಟುಂಬದವರಿಗೆ ಟಿಕೆಟ್ ನೀಡಿರುವುದು ಸ್ಥಳೀಯ ಮುಖಂಡರ ತೀವ್ರ ವಿರೋಧಕ್ಕೆ ಕಾರಣವಾಗಿದ್ದು ಹಲವರು ಪಕ್ಷವನ್ನು ತೊರೆದಿದ್ದಾರೆ. ನಾಲ್ಕೈದು ಮಂದಿ ಆಕಾಂಕ್ಷಿಗಳು ಇದ್ದರೂ ಅಂತಿಮವಾಗಿ ಸತ್ಯನಾರಾಯಣ ಕುಟುಂಬಕ್ಕೆ ಜೆಡಿಎಸ್ ವರಿಷ್ಠರು ಮಣೆ ಹಾಕಿದ್ದು ಇದು ಮತದಾನದ ಮೇಲೆ ಪರಿಣಾಮ ಬೀರಲಿದೆ.

ಕ್ಷೇತ್ರದ ಜನರಂತೂ ಸದ್ಯಕ್ಕೆ ತಮ್ಮ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಮೂರೂ ಪಕ್ಷಗಳಲ್ಲಿ ಯಾರು ಸಮರ್ಥರು, ಯಾರಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯ? ಕಷ್ಟ ಕಾಲದಲ್ಲಿ ಕೈಹಿಡಿಯುವವರು ಯಾರು? ಎಂಬ ಬಗ್ಗೆ ಜನರ ನಡುವೆ ಮಾತುಕತೆ ನಡೆಯುತ್ತಿದೆ. ಉಪಚುನಾವಣೆಯಲ್ಲಿ ಹಸ್ತವೇ ಚಾಚುವುದೇ? ತೆನೆಹೊತ್ತ ಮಹಿಳೆ ನಗೆ ಬೀರುವಳೆ, ಕಮಲ ಅರಳವುದೇ? ನೋಡಬೇಕು. ರಾಜಕೀಯ ಪಕ್ಷಗಳು ಅಬ್ಬರಿಸುತ್ತಿವೆ. ಮತದಾರ ಮೌನಕ್ಕೆ ಜಾರಿದ್ದು ತನ್ನ ನಡೆಯೇನು ಎಂಬುದನ್ನು ಬಿಟ್ಟುಕೊಡುತ್ತಿಲ್ಲ.

  • ಕೆ.ಈ ಸಿದ್ಧಯ್ಯ

ಇದನ್ನೂ ಓದಿ: ಶಿರಾ ಉಪಚುನಾವಣೆ: ಜೆಡಿಎಸ್ ತೊರೆದು ’ಕೈ’ ಹಿಡಿದ ಸ್ಥಳೀಯ ಮುಖಂಡರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...