Homeಕರ್ನಾಟಕಶಿರಾ ಉಪಚುನಾವಣೆ: ಚುನಾವಣೋತ್ತರ ಸಮೀಕ್ಷೆಗಳು ಏನು ಹೇಳುತ್ತವೆ?

ಶಿರಾ ಉಪಚುನಾವಣೆ: ಚುನಾವಣೋತ್ತರ ಸಮೀಕ್ಷೆಗಳು ಏನು ಹೇಳುತ್ತವೆ?

ಈ ಮಟ್ಟದ ಹಣದ ಹೊಳೆ ಹರಿದಿರುವುದು ಶಿರಾ ಚುನಾವಣೆಯ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾಗುತ್ತಿದೆ.

- Advertisement -
- Advertisement -

ಶಿರಾ ಉಪಚುನಾವಣೆಯ ಮತದಾನ ಅಂತ್ಯಗೊಂಡಿದೆ. ಮೂರು ಪಕ್ಷದ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ದಾಖಲಾಗಿದೆ. ಉಪಚುನಾವಣೆಯಲ್ಲಿ ಶೇ.84.31 ರಷ್ಟು ಮತದಾನವಾಗಿದ್ದು ಎರಡು ಹೋಬಳಿಯಲ್ಲಿ ಕಾಂಗ್ರೆಸ್ ಜೆಡಿಎಸ್ ಅಭ್ಯರ್ಥಿಗಳ ನಡುವೆ ಮತ್ತು ಗೌಡಗೆರೆ ಹೋಬಳಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಅಧಿಕ ಮತ ಗಳು ಹಂಚಿಕೆಯಾಗಿರುವುದು ಆಯಾ ಪಕ್ಷಗಳು ನಡೆಸಿರುವ ಆಂತರಿಕ ಸಮೀಕ್ಷೆಗಳಿಂದ ತಿಳಿದುಬಂದಿದೆ. ಕ್ಷೇತ್ರದಲ್ಲಿ ಮೂರು ಅಭ್ಯರ್ಥಿಗಳಲ್ಲಿ ಯಾರನ್ನೂ ನಿರ್ಲಕ್ಷಿಸುವಂತಿಲ್ಲ ಎನ್ನುತ್ತಾರೆ ಮತದಾರರು.

ಕೆಲವೊಂದು ಹಟ್ಟಿಗಳಲ್ಲಿ ಬಹುತೇಕ ಮತದಾರರ ಮತಗಳು ಹಾಗೂ ಶಿರಾ ನಗರದ ನಾಲ್ಕು ವಾರ್ಡುಗಳಲ್ಲಿ ಹೆಚ್ಚಿನ ಮತಗಳು ಬಿಜೆಪಿ ಪಾಲಾಗಿವೆ. ಉಳಿದ ಕಡೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ನಡುವೆ ಮತಗಳು ಹಂಚಿಹೋಗಿವೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿಯ ಗೆಲುವು ಖಚಿತ ಎಂದು ಹೇಳುತ್ತಿದ್ದರೂ ಫಲಿತಾಂಶ ಬೇರೆಯೇ ಇದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಕಂಡುಬಂದಿದ್ದರೆ, ಜೆಡಿಎಸ್ 3 ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ಹಣ ಹಂಚಿದ ಬಿಜೆಪಿ ಅಭ್ಯರ್ಥಿಯನ್ನು ಅನರ್ಹಗೊಳಿಸಿ; ಕಾಂಗ್ರೆಸ್ ದೂರು

ಚುನಾವಣಾ ಪ್ರಚಾರ ಅಂತ್ಯಗೊಂಡ ದಿನದಂದು ನಡೆದ ಘಟನೆ ಜೆಡಿಎಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಡಲು ಕಾರಣ. ನವೆಂಬರ್ 1 ರಂದು ಶಿರಾ ನಗರದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಸಮಾವೇಶದಲ್ಲಿ ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಬಂದು ಗೌರಿಶಂಕರ್ ಅವರಿಗೆ ಭಾಷಣ ನಿಲ್ಲಿಸುವಂತೆ ತಾಕೀತು ಮಾಡಿದ್ದಾರೆ. ಇದರಿಂದ ಅಸಮಾಧಾನಗೊಂಡ ಗೌರಿಶಂಕರ್ ಸಿಟ್ಟಾಗಿ ಮೈಕ್ ಎಸೆದು ವೇದಿಕೆಯಿಂದ ಇಳಿದು ಹೋಗಿದ್ದಾರೆ.

ಈ ಘಟನೆ ನಂತರ ಕಾರ್ಯಕರ್ತರು ಕೂಡ ಒಬ್ಬೊಬ್ಬರಾಗಿ ಹೊರಟು ಹೋದರೆಂದು, ಕೊನೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮಾತನಾಡುವ ವೇಳೆಗೆ ಕೇವಲ 100 ಮಂದಿ ಕಾರ್ಯಕರ್ತರು ಮಾತ್ತ ಇದ್ದರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಶಿರಾ ಉಪಚುನಾವಣೆ: ಮತದಾರರಿಗೆ ಹಣ ಹಂಚುತ್ತಿರುವ ಬಿಜೆಪಿ?

ಪ್ರಚಾರ ಮುಗಿದ ದಿನ ನಡೆದಿರುವ ಈ ಘಟನೆ ಮತದಾನದ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಜೆಡಿಎಸ್ ವರಿಷ್ಠರ ಶ್ರಮ ನೀರಿನಲ್ಲಿ ಹುಣಿಸೆಹಣ್ಣು ತೊಳೆದಂತೆ ವ್ಯರ್ಥವಾಗಿದೆ. ನಿಜವಾಗಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ ಮುಖಂಡರನ್ನು ಬಿಟ್ಟು ನಿಖಿಲ್ ಕುಮಾರಸ್ವಾಮಿ ಅವರಿಗೆ ಮಾತನಾಡಲು ಅವಕಾಶ ಕಲ್ಪಿಸಿದ್ದು ಕೂಡ ಸ್ಥಳೀಯ ಮುಖಂಡರ ಅಸಮಾಧಾನ ಮತ್ತು ಆಕ್ರೋಶಕ್ಕೆ ಕಾರಣ ಎಂದು ತಿಳಿದುಬಂದಿದೆ.  ಜೆಡಿಎಸ್ ಬೆಂಬಲಿಗರು ಮತ್ತು ಮುಖಂಡರು ಈ ಆರೋಪವನ್ನು ನಿರಾಕರಿಸುತ್ತಿದ್ದರೂ ಗೌರಿಶಂಕರ್ ಮತ್ತು ಇತರರನ್ನು ನಿರ್ಲಕ್ಷಿಸಿದ್ದೇ ಮತದಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಕಾರಣ ಎಂದು ತಿಳಿದು ಬಂದಿದೆ.

ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಪತಿಯ ಹುಟ್ಟೂರು ಭುವನಹಳ್ಳಿ ಗ್ರಾಮದಲ್ಲೇ ಅವರಿಗೆ ಕಡಿಮೆ ಮತಗಳು ಬಿದ್ದಿವೆ. ಹೆಚ್ಚಿನ ಮತಗಳು ಅಮ್ಮಾಜಮ್ಮ ಅವರ ವಿರುದ್ಧದ ಅಭ್ಯರ್ಥಿಗಳಿಗೆ ಬಿದ್ದಿವೆ ಎಂದು ಹೇಳಲಾಗಿದೆ. ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಇರುವ ಬಗ್ಗೆ ಬೆಟ್ಟಿಂಗ್ ಕೂಡ ನಡೆಯುತ್ತಿದೆ. ಹಣದ ಹರಿವಿನ ಬಗ್ಗೆ ಪ್ರಜ್ಞಾವಂತ ಮತದಾರರು ಅಚ್ಚರಿ ಮತ್ತು ಆತಂಕ ವ್ಯಕ್ತಪಡಿಸಿದ್ದಾರೆ. ಫಲಿತಾಂಶದ ಯಾರ ಪರವಾಗಿಯಾದರೂ ಆಗಲಿ ಈ ಮಟ್ಟದ ಹಣದ ಹೊಳೆ ಹರಿದಿರುವುದು ಶಿರಾ ಚುನಾವಣೆಯ ಇತಿಹಾಸದಲ್ಲೇ ಇದೇ ಮೊದಲು ಎನ್ನುತ್ತಿದ್ದಾರೆ.

ಇದನ್ನೂ ಓದಿ: ಶಿರಾ ಉಪಚುನಾವಣೆ: ಕಾಂಗ್ರೆಸ್- ಜೆಡಿಎಸ್ ನಡುವೆ ನೇರ ಹಣಾಹಣಿ

ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರು ಇವಿಎಂ ದೋಷದ ಬಗ್ಗೆ ಗಮನ ಸೆಳೆದಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿರುವುದಾಗಿಯೂ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಅಲ್ಲಲ್ಲಿ ಮತ ಯಂತ್ರಗಳು ಕೈಕೊಟ್ಟಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ನಾನು ಇವಿಎಂಗಳ ಕುರಿತು ಮುಂದಿನ ದಿನಗಳಲ್ಲಿ ಜೋರು ದನಿಯಲ್ಲಿ ಕೇಳುತ್ತೇನೆ ಎಂದು ಹೇಳಿದ್ದಾರೆ.

ಬಿಜೆಪಿ ಮುಖಂಡ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ನವೆಂಬರ್ 3 ರ ಸಂಜೆ ಮಾಧ್ಯಮಗಳೊಂದಿಗೆ ಮಾತನಾಡಿ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಗೆಲುವು ನೂರಕ್ಕೆ ನೂರರಷ್ಟು ಖಚಿತ. 10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಅತೀವ ವಿಶ್ವಾಸದಿಂದ ಬೀಗುತ್ತಿದೆ. ಈ ಉತ್ಸಾಹ ಬೇರೆಯವರಲ್ಲಿ ಕಂಡು ಬರುತ್ತಿಲ್ಲ.

ಇಷ್ಟಾಗಿಯೂ ಗೆಲುವು ಯಾರದು ಎಂಬ ಪ್ರಶ್ನೆಗೆ ನವೆಂಬರ್ 10ರಂದು ಉತ್ತರ ಸಿಗಲಿದೆ.

ಇದನ್ನೂ ಒದಿ: ಶಿರಾ: ಹಣದ ಹೊಳೆ! ನೆಲೆ ಕಾಣುವುದೇ ಕಮಲ, ಬಲಗೊಳ್ಳುವುದೇ ತೆನೆ, ಒಲವು ಗಳಿಸುವುದೇ ಹಸ್ತ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...