ಬೆಂಗಳೂರು: ಸಮಸ್ಯೆಗಳ ಪಟ್ಟಿ ಹಾಗೂ ಮನೆಹಾಳು ಯೋಜನೆಗಳ ಪಟ್ಟಿ ಬೆಳೆಯುತ್ತಲೇ ಇದೆ. ಆದರೆ ಪರಿಹಾರ ಮಾತ್ರ ಸಿಗುತ್ತಿಲ್ಲ. ಮುಖ್ಯಮಂತ್ರಿಗಳ ಬಗ್ಗೆ ನಮ್ಮ ಅಭಿಪ್ರಾಯ ಏನು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ, ಹೊಲಸು ರಾಜಕೀಯದಲ್ಲಿ ಅವರ ಮೇಲೆ ನಮಗೆ ಅಪಾರವಾದ ನಂಬಿಕೆ ಇದೆ ಎಂದು ಜನಶಕ್ತಿಯ ನೂರ್ ಶ್ರೀಧರ್ ಹೇಳಿದರು.
ನವೆಂಬರ್ 26ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ‘ಸಂಯುಕ್ತ ಹೋರಾಟ ಕರ್ನಾಟಕದ ಆಶ್ರಯ’ದಲ್ಲಿ ನಡೆದ ‘ಬೆಂಗಳೂರು ಚಲೋ’ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸರ್ಕಾರದ ನಿಲುವುಗಳ ಬಗ್ಗೆ ಪ್ರಶ್ನಿಸಿದ ನೂರ್ ಶ್ರೀಧರ್ ಅವರು ನೀವು ಅಧಿಕಾರಕ್ಕೆ ಬಂದ ಬಳಿಕ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಬಿಜೆಪಿ ಸರ್ಕಾರದ ಎಲ್ಲ ಕಾನೂನುಗಳನ್ನು ವಿರೋಧ ಪಕ್ಷವಿದ್ದಾಗ ವಿರೋಧ ಮಾಡಿದ್ದೀರಾ, ಈಗ ನೀವು ಏನು ಮಾಡುತ್ತಾ ಇದ್ದೀರಿ ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕಾಯ್ದೆ ಜಾರಿ ಆಗುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಂಯುಕ್ತ ಹೋರಾಟ ವೇದಿಕೆಯಲ್ಲಿ ಹೇಳಿದ್ದೀರಿ, ಆದರೆ, ಎಪಿಎಂಸಿ ಕಾಯ್ದೆಗೆ ಸ್ವಲ್ಪ ತಿದ್ದುಪಡಿ ಮಾಡಿದ್ದು ಬಿಟ್ಟರೆ ಎಲ್ಲ ಕಾನೂನುಗಳೂ ಹಾಗೆ ಇವೆ. ಪ್ರಜಾತಂತ್ರವನ್ನು ಬುಡಮೇಲು ಮಾಡುವ, ವಿರೋಧ ಪಕ್ಷಗಳು ಅಧಿಕಾರಕ್ಕೆ ಬರಲೇಬಾರದು ಎಂದು SIR ಕಾಯ್ದೆ ಜಾರಿ ಮಾಡುತ್ತಿದ್ದಾರೆ. ಜಾತ್ಯತೀತ ಮತದಾರರ ಹೆಸರುಗಳನ್ನ ಶೇ.15 ರಷ್ಟು ಅಳಿಸುತ್ತಿದ್ದಾರೆ, ಇಷ್ಟೆಲ್ಲಾ ಆದರೂ ಕರ್ನಾಟಕದಲ್ಲಿ ನೀವು ಏನು ಮಾಡುತ್ತಾ ಇದ್ದೀರಾ ಎಂದು ಕೇಳಿದರು.
ಮಮತಾ ಬ್ಯಾನರ್ಜಿ ಸೇರಿದಂತೆ ಎಡ ಪಕ್ಷಗಳು ಬಿಜೆಪಿಯ ಜನವಿರೋಧಿ ನೀತಿಗಳನ್ನ ವಿರೋಧಿಸುತ್ತಿದ್ದಾರೆ. ಆದರೆ ನೀವು ಇಲ್ಲಿ ತಣ್ಣಗೆ ಮಲಗಿದ್ದೀರಾ. ದೇವನಹಳ್ಳಿ ಭೂಸ್ವಾಧೀನ ರದ್ದುಪಡಿಸಲು ನಾವು ಹೋರಾಟಗಾರರು ತಿಂಗಳುಗಟ್ಟಲೆ ಎಲ್ಲಾ ಕೆಲಸ ಬಿಟ್ಟು ಹೋರಾಟ ಮಾಡಬೇಕಾಯಿತು, ಹಾಗಾದರೆ ಉಳಿದ ಬೇಡಿಕೆ ಈಡೇರಿಸಿಕೊಳ್ಳಲು ನಾವು ಇನ್ನೆಷ್ಟು ವರ್ಷ ಹೋರಾಟ ಮಾಡಬೇಕು ಎಂದು ಪ್ರಶ್ನಿಸಿದರು.
ಇದೇ ವೇಳೆ ರಾಮನಗರ ಜಿಲ್ಲಾಧಿಕಾರಿಗಳು ಮತ್ತು ಕೋಲಾರ ಅರಣ್ಯಾಧಿಕಾರಿಗಳು ರೈತರೊಂದಿಗೆ ಸಂಯಮದಿಂದ ವರ್ತಿಸಬೇಕು. ಇಲ್ಲದಿದ್ದರೆ ಸಂಯುಕ್ತ ಹೋರಾಟ ರೈತರ ಬೆನ್ನಿಗೆ ನಿಲ್ಲಲಿದೆ. ರಾಮನಗರ ಜಿಲ್ಲಾಧಿಕಾರಿಗಳು ಪ್ರಜಾಪ್ರಭುತ್ವದ ಜಿಲ್ಲಾಧಿಕಾರಿ, ಅವರು ಬ್ರಿಟಿಷ್ ಸರ್ಕಾರದ ಪ್ರತಿನಿಧಿಯಂತೆ ವರ್ತಿಸಬಾರದು ಹೀಗೆ ಮುಂದುವರೆದರೆ ರಾಮನಗರಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ರೈತ ಸಂಘದ ಯು. ಬಸವರಾಜಪ್ಪ ಎಚ್ಚರಿಕೆ ನೀಡಿದರು.
ಪ್ರೊ. ಬಾಬು ಮ್ಯಾಥ್ಯೂ ಮಾತನಾಡಿ ‘ಭಾರತದ ಸಂವಿಧಾನ ನಾಶಕ್ಕೆ ಹಲವು ಅಕ್ರಮ ಮತ್ತು ಹುನ್ನಾರ ನಡೆಸಲಾಗುತ್ತಿದೆ.. ಸಂವಿಧಾನ ನಂಬಿಕೊಂಡಿರುವ ರೈತರು ಮತ್ತು ಕಾರ್ಮಿಕರ ಐಕ್ಯತೆ ಮುರಿಯುವ ಯತ್ನ ನಡೆಯುತ್ತಿದೆ. ಸಾಮಾನ್ಯ ಜನರ ಮೇಲೆ ದೊಡ್ಡ ದೌರ್ಜನ್ಯದ ಜೊತೆಗೆ, ಬಂಡವಾಳಶಾಹಿ ವ್ಯಯವಸ್ಥೆಯಲ್ಲಿ ದೊಡ್ಡ ಬದಲಾವಣೆ ನಡೆಯುತ್ತಿದೆ. ಅಂಬಾನಿ ಅದಾನಿ ಎಂಬ ಹೊಸತರಹದ ಬಂಡವಾಳ ಶಾಹಿ ಹುಟ್ಟಿಕೊಂಡಿದ್ದಾರೆ. ಅದೇ ಗುತ್ತೇದಾರಿ (ಮನೋಪಲಿ) ಬಂಡವಾಳಶಾಹಿ.
ಮನೋಪಲಿ ಬಂಡವಾಳಕ್ಕೆ ಹೆಚ್ಚಿನ ಬೆಂಬಲ ನೀಡಿದರೆ ಫಾಸೀಸಂ ಮೇಲೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಆಗ ಅವರು ಸಂವಿಧಾನವನ್ನು ದುರ್ಬಲ ಮಾಡುತ್ತಾರೆ ಎಂದು ಎಚ್ಚರಿಗೆ ನೀಡಿದರು.
ಈಗ ಜಾರಿಯಾಗಿರುವ ಕಾರ್ಮಿಕ ವಿರೋಧಿ ಕಾಯ್ದೆಗಳು ಸಾಕಷ್ಟು ಅಮಾನವೀಯವಾಗಿವೆ. ಇನ್ನು ಮುಂದೆ ಕಾರ್ಮಿಕರು ಲೀಗಲ್ ಸ್ಟ್ರೈಕ್ ಮಾಡುವುದಕ್ಕೆ ಸಾಧ್ಯವಿಲ್ಲ. ಹೋರಾಟ ಮಾಡಿದರೆ ಅದು ಕಾನೂನು ಬಾಹಿರ ಆಗುತ್ತದೆ. ಕಾರ್ಮಿಕರ ಯೂನಿಯನ್ ಗಳು ನಿಷೇಧ ಆಗುತ್ತವೆ
ಹಳೆ ಕಾನೂನುಗಳ ಮೇಲೆ ನಮಗೆ ಹಿಡಿತ ಇತ್ತು. ಆದರೆ ಹೊಸ ಕಾನೂನುಗಳಲ್ಲಿ ಯಾವಾಗ ಬೇಕಾದರೂ ಕಾರ್ಮಿಕರನ್ನು ಕೆಲಸದಿಂದ ತೆಗೆಯಬಹುದು, ಯಾವಾಗ ಬೇಕಾದರೂ ಕಾರ್ಖಾನೆ ಮುಚ್ಚಿ ಬೇರೆ ತೆಗೆಯಬಹುದು. ಇದು ಕಾನೂನು ಬಾಹಿರ ಎಂಬುದನ್ನು ಮರೆಯಬಾರದು ಎಂದು ಹೇಳಿದರು.


