ಬುಧವಾರ ಅಗಲಿದೆ ಸಾಮಾಜಿಕ ಕಾರ್ಯಕರ್ತೆ, ಹಲವು ಜನಪರ ಚಳವಳಿಗಳ ಒಡನಾಡಿ ನೇಮಿಚಂದ್ರರವರ ಅಂತ್ಯಕ್ರಿಯೆ ಇಂದು ಬೆಳಗಾವಿಯಲ್ಲಿ ನಡೆಯಲಿದೆ. ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಕರ್ನಾಟಕ ಜನಶಕ್ತಿ ಮತ್ತು ಕರ್ನಾಟಕ ವಿದ್ಯಾರ್ಥಿ ಸಂಘಟನೆ ಸೇರಿದಂತೆ ನೂರಾರು ಸಹ ಹೋರಾಟಗಾರರು, ಸ್ನೇಹಿತರು ಮತ್ತು ಕುಟುಂಬದವರು ಇಂದು ಅಂತಿಮ ವಿದಾಯ ಸಲ್ಲಿಸಲಿದ್ದಾರೆ.
ಮೂಲತಃ ಬೆಳಗಾವಿಯವರಾದ ನೇಮಿಚಂದ್ರ ಬೆಂಗಳೂರಿನಲ್ಲಿ ನೆಲೆಸಿದ್ದರು. ವಿದ್ಯಾರ್ಥಿ ದಿಸೆಯಲ್ಲಿಯೇ ಸಾಮಾಜಿಕ ಚಳವಳಿಗಳಲ್ಲಿ ತೊಡಗಿಸಿಕೊಂಡ ನೇಮಿಚಂದ್ರ ತನ್ನ ದಿಟ್ಟತೆ ಮತ್ತು ಜೋರು ದನಿಯಿಂದ ಹೆಸರುವಾಸಿಯಾದವರು. ಯಾವುದೇ ಮೆರವಣಿಗೆಯಲ್ಲಿ ಗಟ್ಟಿಯಾಗಿ ಕೇಳಿಬರುತ್ತಿದ್ದ ಅವರ ಘೋಷಣೆಗಳು ಎಲ್ಲರ ಗಮನ ಸೆಳೆಯುತ್ತಿದ್ದವು. ಉಡುಪಿ ಚಲೋ, ದಿಡ್ಡಳ್ಳಿ ಆದಿವಾಸಿಗಳ ಪರ ಹೋರಾಟ, ತುಮಕೂರು ಚಲೋ, ಗುಡಿಬಂಡೆ ಚಲೋ, ಕಾರಟಗಿ ಚಲೋ ಸೇರಿದಂತೆ ನೂರಾರು ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಅವರು ತಮ್ಮ ಬದುಕಿನ ಬಹುತೇಕ ಸಮಯವನ್ನು ಶೋಷಿತರ ಪರ ಹೋರಾಟಕ್ಕೆ ಮೀಸಲಿಟ್ಟಿದ್ದರು.
ಅವರ ತಂದೆ, ತಾಯಿ ಮತ್ತು ಇಬ್ಬರು ಸಹೋದರಿಯರು ಸಹ ಚಳವಳಿಯಲ್ಲಿ ಗುರುತಿಸಿಕೊಂಡವರು. ಅವರು ಬೆಳಗಾವಿಯ ನೇಕಾರರ ಸಮಸ್ಯೆಗಳನ್ನು ಬಗೆಹರಿಸುವುಕ್ಕಾಗಿ ಹೋರಾಟದಲ್ಲಿ ತೊಡಗಿಕೊಂಡಿದ್ದರು. ಹಾಗಾಗಿ ನೇಮಿಚಂದ್ರರವರಿಗೆ ಹೋರಾಟ ಚಿಕ್ಕಂದಿನಿಂದಲೇ ಆರಂಭವಾಗಿತ್ತು. ಬೆಂಗಳೂರಿನಲ್ಲಿ ಯಾವುದೇ ಜನಪರ ಹೋರಾಟ ನಡೆಯುತ್ತಿದ್ದಲ್ಲಿ ನೇಮಿಚಂದ್ರರವರಿರುತ್ತಿದ್ದರು.
ಎ.ಕೆ ಸುಬ್ಬಯ್ಯ, ಎಚ್.ಎಸ್ ದೊರೆಸ್ವಾಮಿಯವರ ಜೊತೆಗಿದ್ದು ಆರೈಕೆ ಮಾಡುತ್ತಲೇ ಅವರು ಕಾನೂನು ಪದವಿ ಅಭ್ಯಾಸ ಮಾಡುತ್ತಿದ್ದರು. ಆದರೆ ಕೋವಿಡ್ ದಾಳಿ ನಂತರ ಟಿಬಿ, ನ್ಯುಮೋನಿಯಾ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಅವರನ್ನು ಕಾಡಿದ್ದವು. ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 15ರ ಬುಧವಾರ ಕೊನೆಯುಸಿರೆಳೆದಿದ್ದಾರೆ.
ಕೇವಲ 27ನೇ ವಯಸ್ಸಿಗೆ ನೇಮಿಚಂದ್ರರವರು ಅಗಲಿರುವುದು ಅವರ ಅಪಾರ ಸ್ನೇಹಿತರು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಆಘಾತ ತಂದಿದೆ. ಅವರನ್ನು ಕಳೆದುಕೊಂಡ ಸಾವಿರಾರು ಜನರು ಸಾಮಾಜಿಕ ಜಾಲತಾಣಗಳಲ್ಲಿ ಕಂಬನಿ ಮಿಡಿದಿದ್ದಾರೆ. ಅವರೊಂದಿಗೆ ಹೋರಾಟದ ಭಾವನಾತ್ಮಕ ನೆನಪುಗಳನ್ನು ಹಂಚಿಕೊಂಡು ದುಃಖ ತೋಡಿಕೊಂಡಿದ್ದಾರೆ.
ಇಂದು ಬೆಳಿಗ್ಗೆ 11 ಗಂಟೆಗೆ ಬೆಳಗಾವಿಯ ‘ಸದಾಶಿವ ನಗರದ ಸ್ಮಶಾನದಲ್ಲಿ’ ಗೌರವಾದರಗಳೊಂದಿಗೆ ನೇಮಿಚಂದ್ರರವರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಗೌರಿ ಲಂಕೇಶ್ ಕುರಿತು ಸಾಕ್ಷ್ಯಚಿತ್ರ ನಿರ್ಮಿಸುತ್ತಿರುವ ಕವಿತಾ ಲಂಕೇಶ್: ಮುಂದಿನ ತಿಂಗಳು ಬಿಡುಗಡೆ ಸಾಧ್ಯತೆ