ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಸುಟ್ಟಿದ್ದನ್ನು ವಿರೋಧಿಸಿ ಮತ್ತು ಎಂಇಎಸ್ ಮುಖಂಡರು ಮುಖಕ್ಕೆ ಮಸಿಬಳಿದವರನ್ನು ಪೊಲೀಸರು ಬಂಧಿಸಿದ್ದನ್ನು ವಿರೋಧಿಸಿ ಕನ್ನಡ ಚಿತ್ರರಂಗ ಸಿಡಿದೆದ್ದಿದೆ. ನಟ ಶಿವ ರಾಜ್ಕುಮಾರ್, ದರ್ಶನ್ ತೂಗುದೀಪ, ದುನಿಯಾ ವಿಜಯ್ ಮತ್ತು ನಿರ್ದೇಶಕ ಪವನ್ ಒಡೆಯರ್ ಸೇರಿದಂತೆ ಹಲವಾರು ಜನರು ಕನ್ನಡ ಧ್ವಜವನ್ನು ಸುಟ್ಟವರಿಗೆ ತಕ್ಕ ಶಿಕ್ಷೆ ನೀಡುವಂತೆ ಮತ್ತು ಕನ್ನಡ ಪರ ಹೋರಾಟಗಾರರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ ನಡೆಸುವುದನ್ನು ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ರ್ಯಾಲಿಯನ್ನು ನಡೆಸಲು ಉದ್ದೇಶಿಸಿತ್ತು. ಆದರೆ ಇದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಎಂಇಎಸ್ ಮುಖಂಡರ ಮುಖಕ್ಕೆ ಮಸಿ ಬಳಿದಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕನ್ನಡ ಪರ ಸಂಘಟನೆಗಳ ಮೂವರನ್ನು ಬಂಧಿಸಿದ್ದರು. ಈ ಮಧ್ಯೆ ಎಂಇಎಸ್ ಕಾರ್ಯಕರ್ತರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ಧ್ವಜವನ್ನು ಸುಟ್ಟು ತಮ್ಮ ನಾಯಕರ ಮೇಲೆ ಮಸಿ ಬಳಿದಿದ್ದಕ್ಕೆ ಪ್ರತಿಭಟಿಸಿದ್ದರು.
ಇದನ್ನೂ ಓದಿ: ಕಸಾಪ ನೂತನ ಅಧ್ಯಕ್ಷರ ಶುದ್ಧ ಕನ್ನಡ ವ್ಯಾಮೋಹ ಮತ್ತು ಭಾಷೆಯ ಜಾಯಮಾನ
ಈ ಘಟನೆಗಳ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ನಟ ಶಿವ ರಾಜ್ಕುಮಾರ್, “ನಮ್ಮ ನಾಡ ಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆ ಆಗಲಿ. ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಿ” ಎಂದು ಮುಖ್ಯಮಂತ್ರಿ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ ಮತ್ತು ಬೆಳಗಾವಿ ಪೊಲೀಸರಿಗೆ ಆಗ್ರಹಿಸಿದ್ದಾರೆ.
ಇಷ್ಟೇ ಅಲ್ಲದೆ, ಶಿವ ರಾಜ್ಕುಮಾರ್ ಅವರು ತಮ್ಮ ಟ್ವೀಟ್ನಲ್ಲಿ, “ಜೈ ಕನ್ನಡ, ಜೈ ಕರ್ನಾಟಕ” ಎಂದು ಉಲ್ಲೇಖಿಸಿದ್ದು,#ಕನ್ನಡಹೋರಾಟಗಾರರನ್ನಬಿಡುಗಡೆಗೊಳಿಸಿ ಎಂಬ ಹ್ಯಾಶ್ಟ್ಯಾಗ್ ಅನ್ನು ಬಳಿಸಿದ್ದಾರೆ.
ಇದನ್ನೂ ಓದಿ:ನಟ ಚೇತನ್ ಎತ್ತಿರುವ ಮೌಲಿಕ ಪ್ರಶ್ನೆಗಳು ಮತ್ತು ಕನ್ನಡ ಚಿತ್ರರಂಗದ ಮೌನ
ನಟ ದರ್ಶನ್ ತೂಗುದೀಪ ಅವರು, “ನಮ್ಮ ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ನಿಜವಾಗಿ ಕನ್ನಡ ಪರ ಹೋರಾಟ ಮಾಡುವವರನ್ನು ಬಿಡುಗಡೆಗೊಳಿಸಿ. ಕನ್ನಡ ತಾಯಿ ತಾಯ್ನಾಡು ವಿಷಯಕ್ಕೆ ಈ ರೀತಿ ಅಪಮಾನ ಮಾಡಿರುವವರಿಗೆ ತಕ್ಕ ಪಾಠ ಕಲಿಸಲೇಬೇಕು” ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ವಿನಂತಿಸಿದ್ದಾರೆ.
ನಟ ದುನಿಯಾ ವಿಜಯ್ ಅವರು, “ನಾಡು,ನುಡಿ,ಭಾಷೆ ನಮ್ಮ ಉಸಿರಾಟದ ಒಂದು ಭಾಗ.ಕನ್ನಡಕ್ಕೆ ಮಾಡಿದ ಅವಮಾನವನ್ನು ಕನ್ನಡಾಂಬೆಯ ಮಕ್ಕಳಾಗಿ ನಾವ್ಯಾರು ಸಹಿಸೆವು. ನಾಡಧ್ವಜ ಸುಟ್ಟ ದ್ರೋಹಿಗಳನ್ನು ಬಂಧಿಸಿ ನಮ್ಮ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕೆಂದು ಸರ್ಕಾರಕ್ಕೆ ನನ್ನ ಕಳಕಳಿಯ ಮನವಿ” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಹಳತು ವಿವೇಕ : ಕನ್ನಡ ಭಾಷೆಗೆ ಅಸಹಜವಾಗಿ ನುಸುಳಿರುವ ಮಹಾಪ್ರಾಣಗಳು
ನಿರ್ದೇಶಕ ಪವನ್ ಒಡೆಯರ್ ಅವರು, “ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಿ. ಜೈ ಕನ್ನಡ. ಜಯ ಕರ್ನಾಟಕ” ಎಂದು ಟ್ವೀಟ್ ಮಾಡಿದ್ದು #ಕನ್ನಡಹೋರಾಟಗಾರರನ್ನಬಿಡುಗಡೆಗೊಳಿಸಿ ಎಂದು ಹ್ಯಾಶ್ ಟ್ಯಾಗ್ ಬಳಸಿಕೊಂಡಿದ್ದಾರೆ.
ಇಷ್ಟೇ ಅಲ್ಲದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವಾರು ರಾಜಕೀಯ ನಾಯಕರು ಕನ್ನಡ ಪರ ಹೋರಾಟಗಾರರ ಬೆಂಬಲಕ್ಕೆ ನಿಂತಿದ್ದಾರೆ.
ಸಿದ್ದರಾಮಯ್ಯ ಅವರು, “ಕನ್ನಡಿಗರೆಲ್ಲರ ಅಧಿಕೃತ ಬೆಂಬಲದ ಠಸ್ಸೆ ಬಿದ್ದಿರುವ ಕನ್ನಡ ಬಾವುಟ ನಮ್ಮ ಘನತೆ, ಗೌರವ ಮತ್ತು ಅಸ್ಮಿತೆಯ ಸಂಕೇತ. ಕನ್ನಡ ಧ್ವಜಕ್ಕೆ ಮಾಡುವ ಅವಮಾನ ಕನ್ನಡಿಗರಿಗೆ ಮಾತ್ರವಲ್ಲ, ಕರ್ನಾಟಕಕ್ಕೆ ಮಾಡುವ ಅವಮಾನ. ಕನ್ನಡ ಧ್ವಜವನ್ನು ಸುಟ್ಟು ಅವಮಾನಿಸಿದ ಕನ್ನಡ ದ್ರೋಹಿ ದುರುಳರನ್ನು ತಕ್ಷಣ ಬಂಧಿಸಿ, ಸೂಕ್ತ ಕ್ರಮಕೈಗೊಳ್ಳಿ” ಎಂದು ಮುಖ್ಯಮಂತ್ರಿಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಕಸಾಪ ನೂತನ ಅಧ್ಯಕ್ಷರ ಶುದ್ಧ ಕನ್ನಡ ವ್ಯಾಮೋಹ ಮತ್ತು ಭಾಷೆಯ ಜಾಯಮಾನ