ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ವಿಡಿಯೊ ಮಾಡಿದ್ದ ಯೂಟ್ಯೂಬರ್ ಸಮೀರ್ ಎಂ.ಡಿ. ಅವರ ವಿರುದ್ಧ ದಾಖಲಿಸಲಾದ ಎಫ್ಐಆರ್ಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಎರಡನೇ ವರ್ಷದ ಪದವಿ ಪೂರ್ವ ವಿದ್ಯಾರ್ಥಿನಿಯಾಗಿದ್ದ ಸೌಜನ್ಯ (17) ಅವರನ್ನು ಅಕ್ಟೋಬರ್ 9, 2012 ರಂದು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಸೌಜನ್ಯ ಪ್ರಕರಣದ ವಿಡಿಯೊ
ಸಮೀರ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ, 2023 ರ ಸೆಕ್ಷನ್ 299 (ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದು) ಅಡಿಯಲ್ಲಿ ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಎಫ್ಐಆರ್ಗೆ ತಡೆಯಾಜ್ಞೆ ನೀಡುವ ಮೂಲಕ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿಗೆ ಮಧ್ಯಂತರ ಪರಿಹಾರ ನೀಡಿದ್ದಾರೆ. ಸೌಜನ್ಯ ಪ್ರಕರಣದ ವಿಡಿಯೊ
ಸಮೀರ್ ಅವರು ತಮ್ಮ ಯೂಟ್ಯೂಬ್ ಚಾನೆಲ್ ‘ಧೂತ: ಸಮೀರ್ ಎಂಡಿ’ಯಲ್ಲಿ “ಊರಿಗೆ ದೊಡ್ಡವರೆ ಕೊಲೆ ಮಾಡಿದವರಾ; ಧರ್ಮಸ್ಥಳ ಸೌಜನ್ಯ ಪ್ರಕರಣ” ಎಂಬ ಶೀರ್ಷಿಕೆಯ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ವಿಡಿಯೊದ ಥಂಬ್ನೈಲ್ನಲ್ಲಿ ಅವರು ”ಧರ್ಮಸ್ಥಳ ಹಾರರ್” ಎಂಬ ಪೋಸ್ಟರ್ ಹಾಕಿದ್ದರು. ಈ ವಿಡಿಯೊ ಪ್ರಸ್ತುತ 180 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
ಈ ವೀಡಿಯೊದಲ್ಲಿ ಅವರು ಧರ್ಮಸ್ಥಳ ಪ್ರದೇಶದಲ್ಲಿ ದಶಕಗಳ ಕಾಲ ನಡೆದ ಹಲವಾರು ಕ್ರಿಮಿನಲ್ ಪ್ರಕರಣಗಳ ಬಗ್ಗೆ ಮಾತನಾಡಿದ್ದರು. ಅದರಲ್ಲೂ ವಿಶೇಷವಾಗಿ 2012 ರ ಸೌಜನ್ಯ ಅವರ ಅತ್ಯಾಚಾರ ಮತ್ತು ಕೊಲೆ, ಸಂತೋಷ್ ರಾವ್ ಅವರನ್ನು ತಪ್ಪಾಗಿ ಬಂಧಿಸಿದ್ದು, ನಂತರದ ಅವರು ಖುಲಾಸೆಗೊಂಡಿದ್ದನ್ನು ಮತ್ತು ಹಲವು ಕಾಣದ ಕೈಗಳು ಕ್ರಿಮಿನಲ್ ತನಿಖೆಗಳಲ್ಲಿ ಪ್ರಭಾವ ಬೀರಿದ ಬಗ್ಗೆ ಮಾತನಾಡಿದ್ದರು.
ಅದಾಗ್ಯೂ, ಈ ವಿಡಿಯೊ ರಾಜ್ಯದಾದ್ಯಂತ ವ್ಯಾಪಕ ಸಂಚಲನ ಮೂಡಿಸಿತ್ತು. ಈ ನಡುವೆ ಮಾರ್ಚ್ 5, 2025 ರಂದು, ಕೌಲ್ ಬಜಾರ್ ಪೊಲೀಸರು ಸಮೀರ್ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿದ್ದರು. ಸಮೀರ್ ಅವರ ಈ ವೀಡಿಯೊದಲ್ಲಿ ಧರ್ಮಸ್ಥಳ ಮತ್ತು ಅದರ ಧಾರ್ಮಿಕ ನಾಯಕರ ಬಗ್ಗೆ ಜನರಿಗೆ ಇದ್ದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿತ್ತು.
ಸಮೀರ್ ಪರ ವಾದ ಮಂಡಿಸಿದ ವಕೀಲ ಎ. ವೇಲನ್, ಕಾನೂನು ಪ್ರಕ್ರಿಯೆಯನ್ನು ಸಂಪೂರ್ಣವಾಗಿ ದುರುಪಯೋಗ ಮಾಡಿ ಎಫ್ಐಆರ್ ದಾಖಲು ಮಾಡಲಾಗಿದೆ. ಜೊತೆಗೆ ಈ ಎಫ್ಐಆರ್ ಸಮೀರ್ ಅವರ ಅಭಿವ್ಯಕ್ತಿಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದ್ದಾರೆ. ಬಿಎನ್ಎಸ್ನ ಸೆಕ್ಷನ್ 299 ಅಡಿಯಲ್ಲಿ ವ್ಯಾಖ್ಯಾನ ಮಾಡಿದ್ದ ಪೊಲೀಸರ ಕ್ರಮಕ್ಕೆ ಅನುಮತಿ ನೀಡಿದರೆ ಅದು ಅಪಾಯಕಾರಿ ಪೂರ್ವ ನಿದರ್ಶನವಾಗಲಿದೆ ಎಂದು ಎತ್ತಿ ತೋರಿಸಿದ್ದಾರೆ.
ಕರ್ನಾಟಕದಲ್ಲಿ, ಅದರಲ್ಲೂ ವಿಶೇಷವಾಗಿ ರಾಜ್ಯದ ಕರಾವಳಿ ಪ್ರದೇಶದಲ್ಲಿ ಸೌಜನ್ಯ ಪ್ರಕರಣವು ವ್ಯಾಪಕವಾಗಿ ಚರ್ಚಿಸಲ್ಪಟ್ಟ ಪ್ರಕರಣವಾಗಿತ್ತು. ನೇತ್ರಾವತಿ ನದಿಯ ಬಳಿ ಸೌಜನ್ಯ ಅವರ ಶವ ಪತ್ತೆಯಾಗಿದ್ದು, ಈ ವೇಳೆ ಅವರ ಕೈಗಳನ್ನು ಶಾಲಿನಿಂದ ಮರಕ್ಕೆ ಕಟ್ಟಲಾಗಿತ್ತು.
ಇದರ ನಂತರ ಪೊಲೀಸರು ಸಂತೋಷ್ ರಾವ್ ವಿರುದ್ಧ ಕೊಲೆ ಆರೋಪ ಹೊರಿಸಿದ್ದರು. ಆದರೆ ಜೂನ್ 16, 2023 ರಂದು ಬೆಂಗಳೂರು ಸೆಷನ್ಸ್ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿತ್ತು. ಕಾನೂನು ಪ್ರಕ್ರಿಯೆಗಳ ಉದ್ದಕ್ಕೂ, ಸೌಜನ್ಯ ಅವರ ಕುಟುಂಬವು ಸಂತೋಷ್ ರಾವ್ ಅವರನ್ನು ತಪ್ಪಾಗಿ ಆರೋಪಿಸಲಾಗಿದೆ ಎಂದು ವಾದಿಸಿತ್ತು. ಜೊತೆಗೆ ತನಿಖೆಯಲ್ಲಿನ ನ್ಯೂನತೆಗಳನ್ನು ಆರೋಪಿಸಿ ಧರ್ಮಸ್ಥಳದ ಧಾರ್ಮಿಕ ಮುಖಂಡ ವೀರೇಂದ್ರ ಹೆಗ್ಗಡೆ ನಿಜವಾದ ಅಪರಾಧಿಗಳನ್ನು ರಕ್ಷಿಸಿದ್ದಾರೆ ಎಂದು ಪ್ರತಿಪಾದಿಸಿತ್ತು.
ಸಂತೋಷ್ ರಾವ್ ಅವರು ಖುಲಾಸೆಗೊಂಡ ನಂತರ ಕೂಡಾ ಸಾರ್ವಜನಿಕ ಪ್ರತಿಭಟನೆಗಳು ನಡೆದಿದ್ದವು. ಜೊತೆಗೆ ಪ್ರಕರಣವನ್ನು ಮರು ತನಿಖೆ ಮಾಡಬೇಕು ಎಂದು ಕರೆಗಳು ಬಂದವು. 11 ವರ್ಷಗಳ ತನಿಖೆಯ ನಂತರ, ಬೆಂಗಳೂರಿನ ನ್ಯಾಯಾಲಯವು 2023 ರಲ್ಲಿ ಪ್ರಕರಣದ ಏಕೈಕ ಆರೋಪಿ ಸಂತೋಷ್ ರಾವ್ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತ್ತು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಬಂಗಾಳದಲ್ಲಿ ಬಿಜೆಪಿ ಗೆದ್ದ ಬಳಿಕ ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ ಹೊರಕ್ಕೆ ಎಸೆಯುತ್ತೇವೆ : ಸುವೇಂದು ಅಧಿಕಾರಿ
ಬಂಗಾಳದಲ್ಲಿ ಬಿಜೆಪಿ ಗೆದ್ದ ಬಳಿಕ ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ ಹೊರಕ್ಕೆ ಎಸೆಯುತ್ತೇವೆ : ಸುವೇಂದು ಅಧಿಕಾರಿ

