Homeಮುಖಪುಟರಾಜ್ಯ ಅಲಿಯಾಸ್ ಪ್ರಭುತ್ವ ಅಂದರ ಏನಂತ ಗೊತ್ತೇನು? : ಸುದ್ದಿಯೇನೇ, ಮನೋಲ್ಲಾಸಿನಿ ಬೈ ಐ.ವಿ.ಗೌಲ್

ರಾಜ್ಯ ಅಲಿಯಾಸ್ ಪ್ರಭುತ್ವ ಅಂದರ ಏನಂತ ಗೊತ್ತೇನು? : ಸುದ್ದಿಯೇನೇ, ಮನೋಲ್ಲಾಸಿನಿ ಬೈ ಐ.ವಿ.ಗೌಲ್

- Advertisement -
- Advertisement -

ನಿಮ್ಮ ಫೋನಿನ ಹೃದಯದೊಳಗ ಇರೋ ವಾಟ್ಸಪ್ಪು ಯುನಿವರ್ಸಿಟಿಯೊಳಗ ನಿಮಗೊಂದು ಜೋಕು ಬಂದಿರಲಿಕ್ಕೇ ಬೇಕು. “ಈ ದೇಶದಾಗ ಒಂಬತ್ತು ಜನ ಅಪರಾಧಿಗಳು ತಪ್ಪಿಸಿಕೊಂಡರೂ ಸರಿ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು’ ಅಂತ ಒಂದು ಕಾನೂನು ಇದೆ. ಇಂತಹ ಬ್ರಿಟಿಷರು ಮಾಡಿದ ಕಾನೂನುಗಳನ್ನು ನಮಗೆ ಬೇಡ. ಇಂತಹ ಅನೇಕ ಕಾನೂನುಗಳನ್ನು ತಿದ್ದಲೆಂದೇ ನಾವು ಬಂದಿದ್ದೇವೆ” ಅಂತ.

ಇದನ್ನ ನೋಡಿದಾಗ ನಿಮಗೂ ಅನ್ನಿಸಿರಬಹುದು. ‘ಹೌದಲ್ಲಾ ಅ ಬ್ರಿಟಿಷ್ ನನ ಮಕ್ಕಳು ಏನೇನು ಮಾಡಿ ಹೋಗ್ಯಾರ. ಇದನ್ನೆಲ್ಲಾ ಬದಲಾಯಿಸಬೇಕು. ಅದಕ್ಕೊಬ್ಬ ಸೂಪರ್ ಹೀರೋ ಬೇಕು’ ಅಂತ. ಆದರ ಅದರ ಹಿಂದಿನ ತಥ್ಯವನ್ನು ನೋಡೋಣ.

ಭಾರತದ ಸಂವಿಧಾನದಾಗ 12 ನೇ ಕಲಂ ಅಂತ ಒಂದು ಮೂರು ಸಾಲಿನ ಒಂದು ಪ್ಯಾರಾ ಐತಿ.
ಅದೇನಪಾ ಅಂದರ ರಾಜ್ಯ ಅಂದರ ಏನು ಅನ್ನೋದರ ವ್ಯಾಖ್ಯಾನ.

ಸಂವಿಧಾನದ ಭಾಷಾದಾಗ ರಾಜ್ಯ ಅಂದ್ರ ಕರ್ನಾಟಕ, ತಮಿಳುನಾಡು, ಕಾಶ್ಮೀರ ಅಂತ ಅವ ಅಲ್ಲಾ, ಹಿಂತಾ ರಾಜ್ಯ ಅಲ್ಲ. ಅದರ ಪ್ರಕಾರ ರಾಜ್ಯ ಅಂದ್ರ ಅಕೆಡೆಮಿಕ್ ಭಾಷಾದಾಗ ಪ್ರಭುತ್ವ. ’ಹಂಗಂದರ ಏನು ಮತ್ತ ಎಲ್ಲಿ ಸಿಗತದ’ ಅಂತ ನೀವು ಜವಾರಿ ಭಾಷಾದಾಗ ಕೇಳಿದರ ಅದಕ್ಕ ನಿಮಗ 12ನೇ ಕಲಂ ನೋಡು ಅಂತ ಉತ್ತರ ಸಿಗಬಹುದು.

ಅದರ ಪ್ರಕಾರ ಸಂಸತ್ತು ಹಾಗೂ ರಾಜ್ಯ ಶಾಸನಸಭೆಗಳು ಪ್ರಭುತ್ವದಾಗ ಬರತಾವ. ಕೇಂದ್ರ ಮತ್ತು ರಾಜ್ಯ ಸರಕಾರ ಪ್ರಭುತ್ವದಾಗ ಬರತಾವ. ಈವಲ್ಲದನ, ನಗರ ಸಭೆ, ಪಂಚಾಯಿತಿ ಮುಂತಾದ ಸ್ಥಳೀಯ ಸಂಸ್ಥೆಗಳನ್ನು ಸಹ ಇದರಾಗ ಕೂಡಿಸ್ಯಾರ. ಮಜಾ ಏನಂದರ ಸರಕಾರದ ಸಂಸ್ಥೆಗಳು ಅಥವಾ ಸರಕಾರದಿಂದ ನಿಯಂತ್ರಿತವಾದ ಸಂಸ್ಥೆಗಳು ಇವೆಲ್ಲವೂ ಪ್ರಭುತ್ವ ಎನ್ನಿಸಿಕೊಳ್ಳುತ್ತವೆ ಎನ್ನುವುದು ಇದರ ಸಾರಾಂಶ.

ಈ ಪ್ರಭುತ್ವದ ಮುಖ್ಯ ಕೆಲಸ ಏನಪಾ ಅಂದ್ರ ರಾಷ್ಟ್ರ ರಕ್ಷಣೆ, ಶಾಂತಿ ಕಾಪಾಡುವಿಕೆ, ನ್ಯಾಯ ನಿರ್ಣಯ, ಜನ ಕಲ್ಯಾಣ ಹಾಗೂ ದಿನನಿತ್ಯದ ಆಡಳಿತ. ಬರಬರತಾ ಸರಕಾರಗಳ ಕೆಲಸ ಜಾಸ್ತಿ ಆಗಿ ಕಲ್ಯಾಣ ಕಾರ್ಯಕ್ರಮಗಳು ಹಾಗೂ ವ್ಯಾಪಾರ ವ್ಯವಹಾರ -(ಅದು ಸರಕಾರಿ ಸಂಸ್ಥೆ ಇರಬಹುದು ಅಥವಾ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆ ಪಾಲುದಾರಿಕೆ ಇರಬಹುದು) ದೊಳಗನ ಹೆಚ್ಚಿನ ಟೈಂ ಹೋಗಲಿಕ್ಕೆ ಹತ್ತೇದ. ಈಗಿನ ಕೇಂದ್ರ ಸರಕಾರ ಮಾತ್ರ ತಮ್ಮ ಕೆಲಸ ಬ್ಯಾರೆ ಏನೂ ಅಲ್ಲ, ಬರೇ ರಕ್ಷಣೆ ಒಂದ ಅಂತ ನಮಗ ಹೇಳಲಿಕ್ಕೆ ಹತ್ತೇದ. ಒಬ್ಬ ವಿದ್ಯಾರ್ಥಿ ಪರೀಕ್ಷೆಯೊಳಗ ಹತ್ತರೊಳಗ ಬರೇ ಒಂದ ಪ್ರಶ್ನೆ ಉತ್ತರ ಬರದು ನನಗ ಮೊದಲನೆ ದರ್ಜೆ ಕೊಡರಿ ಅಂತ ಹೇಳಿದಂಗ!. ಇರಲಿ ಅದು ಬೇರೆ.

ಹಿಂದಿನ ಕಾಲದ ಚಕ್ರವರ್ತಿಗಳಿಗೆ ಶಾಸನ ಮಾಡೋದು, ಜಾರಿ ಮಾಡೋದು, ಕಾನೂನು ಪಾಲಿಸದವರಿಗೆ ಶಿಕ್ಷಾ ಕೊಡೋದು ಇವೆಲ್ಲಾ ಅಧಿಕಾರ ಇತ್ತು. ಇತ್ತೋ ಅಥವಾ ಅವರಾಗೇ ತೊಗೊಂಡಿದ್ದರೋ ಅದು ಬ್ಯಾರೆ. ಆದರ ಆಧುನಿಕ ದಿನಮಾನದಾಗ ಇಂತಹ ಪ್ರಭುತ್ವಕ್ಕ ಮೂರು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಎಲ್ಲಾ ಶಕ್ತಿ ಕೊಡಬಾರದು ಅಂತ ಒಂದು ಥಿಯರಿ ಅದ. ಅದರ ಪ್ರಕಾರ ನಮ್ಮ ಜನಸತ್ತಾದೊಳಗ ಈ ಮೂರು ಜವಾಬ್ದಾರಿಗಳನ್ನು ಬೇರೆ ಬೇರೆ ಅಂಗಗಳಿಗೆ ಹಂಚ್ಯಾರ.

ಆದರೂ ಸರಕಾರಗಳು ಮೂರೂ ರೀತಿಯ ಅಧಿಕಾರಗಳನ್ನ ಬಳಸತಾವು. ಉದಾಹರಣೆಗೆ ಪೊಲೀಸರನ್ನು ನೇಮಕ ಮಾಡೋದು ಪ್ರಭುತ್ವ, ಅವರಿಗೆ ಕೆಲಸ ಹೇಳೋದು ಸರಕಾರ. ನ್ಯಾಯಾಲಯಗಳನ್ನು ಆರಂಭಿಸಿ, ನ್ಯಾಯಾಧೀಶರನ್ನು ನೇಮಿಸಿ ಅವರ ಮುಂದೆ ಕೇಸು ತೊಗೊಂಡು ಹೋಗೋದು ಪ್ರಭುತ್ವ. ಹಿಂಗಿದ್ದಾಗ ನ್ಯಾಯಾಲಯಗಳಲ್ಲಿ ಬರೇ ಸರಕಾರದ ದನಿ ಕೇಳಿ ಗರೀಬ ಆರೋಪಿತರ ದನಿ ಅಡುಗಿಹೋಗಬಾರದು ಅಂತ ಕೆಲವು ನಿಯಮ ಅವ. ಅವಕ್ಕ ಪ್ರಕ್ರಿಯಾ ಕಾನೂನು ಅಂತ ಹೆಸರು. ಉದ್ದೇಶದ ಜೊತೆ ಪ್ರಕ್ರಿಯಾನೂ ಸರಿ ಇರಬೇಕು ಅಂತ ಅದರ ನೇಮ.

ಅವು ಯಾಕ ಬೇಕಂದ್ರ ಸರಕಾರ ಅನ್ನೋದು ಸರ್ವಾಧಿಕಾರ ಆಗಬಾರದು ಅಂತ.

ಅದು ಯಾವಾಗ ಆಗಬಹುದಪಾ ಅನ್ನಲಿಕ್ಕೆ ಕೆಲವು ಉದಾಹರಣೆ ನೋಡೋಮು.

ಹರಿಯಾಣಾದ ಮಾಜಿ ಮುಖ್ಯಮಂತ್ರಿ ಓಂಪ್ರಕಾಶ ಚೌಟಾಲಾ ಅವರ ಮೊಮ್ಮಗ ಅಜಯ ಚೌಟಾಲಾ ಅವರಿಗೆ ಎರಡು ವಾರದ ಸಜಾ ಕಾಲದ ರಜೆ ಸಿಕ್ಕದ. ಅದರ ಹಿಂದಿನ ದಿವಸ ಅಜಯ ಅವರ ಮಗ ದುಷ್ಯಂತ ಚೌಟಾಲಾ ಅವರು ಬಿಜೆಪಿಗೆ ಬೆಂಬಲ ಸೂಚಿಸಿ ಹಂಗಾಗಿದ್ದ ಹರಿಯಾಣಾ ವಿಧಾನಸಭೆಯನ್ನು ಹಂಗ ಮಾಡಿದ್ದರು. ಅದಕ್ಕೂ ಇದಕ್ಕೂ ಸಂಬಂಧ ಇರಬಹುದು ಅನ್ನುಕೊಳ್ಳುವುದು ಅಂದುಕೊಂಡವರ ಚಿತ್ತ. ಸಜಾ ಕಾಲದ ರಜೆ (ಫರಲೋ) ಹಾಗೂ ಸಜಾ ಕಾಲದ ಬಿಡುಗಡೆ ( ಪರೋಲ್) ಗೂ ಫರ್ಕು ಏನಪಾ ಅಂದರ ಫರಲೋ ಅನ್ನುವುದು ಒಬ್ಬ ಕೈದಿಯ ಹಕ್ಕು. ಪರೋಲ್ ಅನ್ನುವುದು ಹಕ್ಕಲ್ಲ. ಅದು ಸರಕಾರದ ಹಾಗೂ ನ್ಯಾಯಾಲಯದ ಚಿತ್ತ. ಜಂಬೂ ದ್ವೀಪದ ಮಹಾನ್ ನಾಯಕ ಸಂಜೂ ಬಾಬಾ ಅವರು ಸುಮಾರು 39 ಸರೆ ಫರಲೋ ಹಾಗೂ ಪರೋಲ್ ಸೌಭಾಗ್ಯ ಪಡೆದಿದ್ದರು. ಅವರು ಪಡೆದು ಬಂದವರು.

ಜನರ ಸಲುವಾಗಿ ಹೋರಾಟ ಮಾಡೋ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ಬಂಧನ ಆಗೇದ. ಅವರನ್ನ 25 ವರ್ಷ ಹಳೆಯ ಕೇಸೊಂದರಲ್ಲಿ ಭಾಗಿಯಾಗಿದ್ದ ವಿನೋದ ಎನ್ನುವ ವ್ಯಕ್ತಿಯೆಂದರೆ ಇವನೇ ಅಂತ ಹೇಳಿ ರಾಯಚೂರು ಪೊಲೀಸರು ಹಿಡಕೊಂಡು ಹೋಗ್ಯಾರ. ಹಂಗಂತ ಅವರೇನು ಬೆಂಗಳೂರ ತನಾ ಬಂದು ಅವರನ್ನ ಹಿಡಕೊಂಡು ಹೋಗಿಲ್ಲ. ರಾಯಚೂರು ಕಾರ್ಯಕ್ರಮಕ್ಕ ಹೋದಾಗ ಪೊಲೀಸ್ ಟೇಸನಕ್ಕ ಬರ್ರಿ ಅಂತ ಹೇಳಿ ಕರಿಸಿಕೊಂಡು ಅರೆಸ್ಟು ಮಾಡ್ಯಾರ

ಬೆಂಗಳೂರಾಗ ಎಲ್ಲಾರ ಎದುರಿಗೆ ಖುಲ್ಲಂಖುಲ್ಲಾ ಓಡಾಡಿಕೊಂಡು ಇದ್ದ ಈ ಮನುಷ್ಯ 25 ವರ್ಷ ತಲೆ ಮರೆಸಿಕೊಂಡಿದ್ದ ಅಂತ ಪೊಲೀಸರು ಕತಿ ಹೇಳ್ಯಾರ. ಅದಕ್ಕ ಅವರಿಗೆ ಸರಿಯಾದ ಸಾಕ್ಷಿ ಇಲ್ಲ. ಅವರಿಗೆ ಇರೋ ಸಾಕ್ಷಿ ಅಂದರ ಒಬ್ಬ ಮಾಜಿ ಪೊಲೀಸ್ ಸಿಬ್ಬಂದಿಯ ನೆನಪಿನ ಶಕ್ತಿ. ಇದು ಭಾರತೀಯ ದಂಡಸಂಹಿತೆ ಹಾಗೂ ಸಂವಿಧಾನದ ಪ್ರಕಾರ ಲಾಗೂ ಆಗೋದಿಲ್ಲ. ಆದರೆ ಅದು ನ್ಯಾಯಾಧೀಶರ ಎದುರಿಗೆ ವಾದಕ್ಕ ಬಂದಾಗಿನ ಮಾತು. ಅಲ್ಲಿ ತನಕಾ ಸರಕಾರದ ಮಾತೇ ಸರಿ.

ಗುಜರಾತು ಪೊಲೀಸರು ಐಪಿಎಸ್ ಅಧಿಕಾರಿ ಸಂಜೀವ ಭಟ್ ಅವರನ್ನು 13 ತಿಂಗಳ ಹಿಂದೆ ಬಂಧಿಸಿದ್ದಾರೆ. ಅವರಿಗೆ ಇನ್ನೂ ಬೇಲು ಸಿಕ್ಕಿಲ್ಲ. ಅವರು 22 ವರ್ಷದ ಹಿಂದ ಪೊಲೀಸ ಅಧೀಕ್ಷಕರಾಗಿದ್ದಾಗ ತಮ್ಮ ವ್ಯಾಪ್ತಿಯಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ಅಧಿಕಾರ ದುರ್ಬಳಕೆ ಪ್ರಸಂಗವೊಂದರಲ್ಲಿ ಅವರನ್ನು ಆರೋಪಿ ಅಂತ ಮಾಡ್ಯಾರ. ಮೂವತ್ತು ವರ್ಷ ಸಂವಿಧಾನ, ನ್ಯಾಯ ಪ್ರಕ್ರಿಯೆ, ಸರಕಾರಿ ಕಾನೂನುಗಳಿಗೆ ತಕ್ಕಂತ ನೌಕರಿ ಮಾಡಿದ ಮನಿಷಾಗ ಕಾನೂನಿನ ಬಗ್ಗೆ ನಂಬಿಕಿ ಇಲ್ಲಾ ಅಂತ ಹೇಳಿ ಸರಕಾರ ಅವರಿಗೆ ಬೇಲು ಕೊಡಿಸಿಲ್ಲ.

ಕಾರ್ಮಿಕ ಮುಖಂಡರಾದ ಸುಧಾ ಭಾರದ್ವಾಜ ಮತ್ತು 10 ಜನ ಜನನಾಯಕರನ್ನು ಒಳಗ ಹಾಕಿ 14 ತಿಂಗಳ ಆತು. ಅದರೊಳಗ ಒಬ್ಬರ ಮನಿಯೊಳಗ ’ವಾರ್ ಆಂಡ್ ಪೀಸ್’ ಅನ್ನೋ ಕಾದಂಬರಿ ಇತ್ತು ಅದು ಅಲ್ಯಾಕ ಇತ್ತು ಅನ್ನೋದು ಭಾರಿ ಸುದ್ದಿ ಆಗಿತ್ತು. ಇದರಾಗೂನು ಅವರ ವಿಚಾರಣೆ ಅನ್ನೋದು ಸುರೂನ ಆಗಿಲ್ಲ. ಅಧಿಕೃತವಾಗಿ ಸರಕಾರದ ತನಿಖೆ ಮುಗದೇ ಇಲ್ಲ.

ಪ್ರಭುತ್ವ ಅನ್ನುವುದು ಸರ್ವಾಧಿಕಾರ ಆಗಬಾರದು. ಯಾಕಂದ್ರ ಭಾರತದೊಳಗ ಆಳುವ ಪಕ್ಷ, ವಿರೋಧ ಪಕ್ಷ ಅಂತ ಯಾವೂ ಇಲ್ಲ. ಇಲ್ಲಿ ಇರೋದು ಇವತ್ತಿನ ಆಳುವ ಪಕ್ಷ, ನಿನ್ನೆಯ ಆಳುವ ಪಕ್ಷ ಹಾಗೂ ನಾಳೆಯ ಆಳುವ ಪಕ್ಷ ಅಂತ ಅಷ್ಟ. ಅವರು ಮಾಡ್ಯಾರ ಅಂತ ಇವರು ತಿನ್ನೋದು ಇವರಿಬ್ಬರೂ ಮಾಡ್ಯಾರ ಅಂತ ಮೂರನೆಯವರು ಮಾಡೋದು ಸರಿ ಅಲ್ಲ. ಇವತ್ತು ಆಳುವವರು ನ್ಯಾಯ ನಿಷ್ಟುರತೆ, ಪಾರದರ್ಶಕ ನೀತಿ ಹಾಗೂ ನಿಷ್ಪಕ್ಷಪಾತ ನಡೆ ಯನ್ನು ಪಾಲಿಸದಿದ್ದರೆ ನಾಳೆ ಬಂದವರೂ ಪಾಲಿಸಲಿಕ್ಕಿಲ್ಲ. ಆವಾಗ ಇವರು ಝಗಳಾ ತಗೀಲಿಕ್ಕೆ ಬರೋದಿಲ್ಲ. ನೀವು ಹಿಂಗ ಮಾಡಿದಿರಿ ಅಂದರ ನೀವು ಮಾಡಿಲ್ಲೇನು ಅಂತ ಅವರು ಅನ್ನಬಹುದು.
ಅದರ ಜನರಿಗೆ ಇವು ಯಾವುವೂ ಬ್ಯಾಡ. ಸಮಾನತೆ ಹಾಗೂ ಶಾಂತಿ ಬೇಕು. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...