Homeಕಥೆಕಪಿಲ ಪಿ ಹುಮನಾಬಾದೆ ಅವರ ಕಥೆ: ಫೋಟೋ ಕನಸು

ಕಪಿಲ ಪಿ ಹುಮನಾಬಾದೆ ಅವರ ಕಥೆ: ಫೋಟೋ ಕನಸು

- Advertisement -
- Advertisement -

ರಾತ್ರಿ ಯಾವ ಸಪ್ಪಳವು ಮಾಡದೆ ಸುಮ್ಮನೆ ಮಲಗಿತ್ತು. ನಕ್ಷತ್ರಗಳು ಸಹ ಸುಸ್ತಾಗಿದ್ದವು. ನೆಲದ ಮೇಲಿನ ಮಣ್ಣಿನ ಮೇಲೆ ಯಾರೋ ನೀರು ಎರಚಿ ಹೋದಂತೆ ತಂಪಾದ ಗಾಳಿ ಮೂಗಿಗೆ ಬಂದು ಬಡಿಯುತ್ತಿತ್ತು. ಅಲ್ಲೇ ಮನೆ ಮುಂದಿನ ಅಂಗಳದಲ್ಲಿ ಮಲಗಿದ್ದ ಸುಮಯ್ಯ ಇವೆಲ್ಲ ಗಮನಿಸುತ್ತ ತನ್ನ ಪುಟ್ಟ ಕೈಗಳಿಂದ ತನ್ನವೇ ಕಾಲುಗಳು ಒತ್ತಿಕೊಳ್ಳುತ್ತ ಕೂತಿದ್ದಳು. ನಡುರಾತ್ರಿ ಹೀಗೆ ಹುಡುಗಿ ಎಚ್ಚರಗೊಂಡ ಸದ್ದಿಗೆ, ಸುಮಯ್ಯಳ ಅಮ್ಮ ರಜಿಯಾ ಕಣ್ಣು ಬಿಟ್ಟು ಎಚ್ಚರಗೊಂಡರು ಸಹ, ಮಗಳೊಂದಿಗೆ ಮಾತನಾಡಲು ಹೋಗಲಿಲ್ಲ. ಪಡಸಾಲಿಗೆ ಹೋಗಿ ನೀರು ಕುಡಿಯಬೇಕೆಂದುಕೊಂಡ ಫಾತಿಗೆ ಕತ್ತಲು ಯಾಕೋ ಭಯ ಹುಟ್ಟಿಸುತ್ತಿತ್ತು.

ನಡುರಾತ್ರಿ ನಸುಕಿಗೆ ಧುಮುಕುವುದಕ್ಕೆ ಇವತ್ಯಾಕೆ ಇಷ್ಟು ಹೊತ್ತು ತಗುಲಿತಿದೆಯೆಂದು ವಿಚಾರಕ್ಕೆ ಕೂತವಳಿಗೆ, ನಿದ್ದೆ ಬಂದು ಎತ್ತುಕೊಂಡು ಹೋಗಿದ್ದು, ಮುಂಜಾನೆ ಎದ್ದಮೇಲೆಯೇ ಹೊಳೆದದ್ದು. ಅಮ್ಮೀ ರಜಿಯಾ ಬಂದು “ಏಳೇ ಸುಮ್ಮಿ ಹೊತ್ತು ತಲಿ ಮ್ಯಾಲ ಏರ್ಯಾದ” ಅಂದಾಗ ಬುಸಕ್ಕನೆ ಎದ್ದಳು. ಹಾಸಿಗೆಯಿಂದ ಎದ್ದ ತಕ್ಷಣ ಮಗಳ ಮುಖ ದಿಟ್ಟಿಸಿ ವಿವರವಾಗಿ ನೋಡಿದ ರಜಿಯಾ, ಸುಮಯ್ಯ ದಿನಕ್ಕಿಷ್ಟು ಎತ್ತರವಾಗಿ ಮತ್ತು ಗಂಭೀರವಾಗಿ ಕಾಣುತ್ತಿರುವುದನ್ನು ನೋಡಿ ಒಳಗೊಳಗೆ ಭಯಪಟ್ಟಳು.

ಹಲ್ಲುಜ್ಜಿ, ಮುಖ ತೊಳೆದುಕೊಳ್ಳಲು ಹೇಳಿದ ಅಮ್ಮಿಯ ಮಾತು ಧಿಕ್ಕರಿಸಿ ನೇರವಾಗಿ ಚಹಾ ಹೀರುತ್ತಾ ಕೂತಳು. ಎಂದಿನಂತೆ ಅವಸರದಲ್ಲಿದ್ದಳು. ಕಣ್ಣೆದುರು ಬಗೆಬಗೆಯ ತರಕಾರಿಗಳು ತುಂಬಿದ ಬುಟ್ಟಿಯೊಂದು ಅವಳ ತಲೆಯೇರಲು ಕಾದು ಕುಳಿತಿತ್ತು. “ಅಮ್ಮಿಯ ಕಾಲು ನೆಟ್ಟಗಿದ್ದರೆ, ನಾನೊಂದು ಕೈಯಲ್ಲಿ ಸಣ್ಣ ತರಕಾರಿ ಚೀಲವೊಂದು ಹಿಡಿದುಕೊಂಡು ಬರ್ತಿದ್ದೆ. ಈಗ ಇಡೀ ತರಕಾರಿ ಬುಟ್ಟಿ ಹೊತ್ತುಕೊಳ್ಳುವಂತೆ” ಆಗಿದೆಯೆಂದು ಒಳಗೊಳಗೆ ಅಂದುಕೊಂಡು ನಿಟ್ಟುಸಿರೊಂದಬಿಟ್ಟಳು.

“ಅಮ್ಮೀ ಈ ಬುಟ್ಟಿ ಎತ್ತಿ ಜರಾ ತಲಿ ಮ್ಯಾಲಿನ ಸಿಂಬಿ ಮ್ಯಾಲ ಕರೆಕ್ಟ್ ಆಗಿ ಕುಂದರುವಂಗ ಇಡು” ಅಂದಳು ಸುಮಯ್ಯ. ತಾಳಗಿ ಇನ್ನೂ ಗಟ್ಟಿಯಾಗದ ತಲೆ ಮೇಲೆ ಎಂತಹ ಭಾರ ಹೊರೆಸುವಂತಾಯಿತ್ತಲ್ಲ ಎಂದು ರಜಿಯಾ ಮರುಕಪಟ್ಟಳು.

ಅಮ್ಮೀ ಕಣ್ಣುಗಳು ಹಸಿಯಾಗಿದ್ದು ನೋಡಿ, “ಆಮ್ಯಾಲ ಅಳುವಂತಿ, ಫಸ್ಟ್ ತಲೀ ಮ್ಯಾಲ ಬುಟ್ಟಿ ಇಡು, ಬಿಸಿಲು ನೆತ್ತಿಗೇರದರ ಏನ ಮಾಡ್ಲಿ ಹೇಳು, ಕಾಯಿಪಲ್ಯ ಎಷ್ಟು ನೀರು ಹಾಕಿದ್ರು ಒಣಗಿ ಹೋಗ್ತದ” ಎಂದಳು.

ನಾಜೂಕಾಗಿ ಮಗಳ ತಲೆ ಮೇಲೆ ಬುಟ್ಟಿ ಇಟ್ಟು ಅಂಗಳದಿಂದ ಇಳಿದುಹೋಗುತ್ತಿದ್ದ ಸುಮಯ್ಯಳ ಬೆನ್ನು ನೋಡುತ್ತಾ ನಿಂತಳು. ಅವಳ ದೇಹದ ಆಕಾರಕ್ಕಿಂತ ದೊಡ್ಡದಾದ ತರಕಾರಿ ಬುಟ್ಟಿ ಭಾರಕ್ಕೆ, ಹುಡುಗಿಗೆ ಸರಿಯಾಗಿ ಬಾಯಿಂದ ಗಾಳಿ ಸಹ ಬಿಡಲು ತೊಂದರೆ ಮಾಡುತ್ತಿತ್ತು. ಕೂದಲು ದಟ್ಟವಾಗಿ, ಉದ್ದವಾಗಿ ಬೆಳೆದು ನಿಂತಿದೆ. ನಮ್ಮ ಸುಮಯ್ಯಳಿಗೆ ಸಾಲಿಗೆ ಸೇರಿಸಿದ್ದರೆ ಈಗ ಏಳನೇ ಕ್ಲಾಸಿನಲ್ಲಿರುತಿದ್ದಳು, ಎಂದು ಒಂದೆರಡು ವರ್ಷದ ಕೆಳಗೆ ಹೇಳಿದ ತುಂಗಪ್ಪ ಮಾಸ್ತರರ ಮಾತು ಎಂದಿನಂತೆ ಮತ್ತೆ ಕೇಳಿಸಿತು. ಏನೂ ಮಾಡಲಾಗದ ಅಸಹಾಯಕತೆಯಲ್ಲಿ ಅಡುಗೆ ಮನೆ ಸೇರಿ ರಜಿಯಾ ಕೆಲಸಕ್ಕಿಳಿದಳು.

ಅರ್ಧ ಎಕರೆಯಷ್ಟು ಹೊಲವಿರುವ ರಜಿಯಾ, ಊರಲ್ಲಿ ಯಾರ ಮುಂದೆಯೂ ಕೈ ಚಾಚಿದವಳಲ್ಲ. ಕುಡಿದು ಬಂದು ದನಕ್ಕೆ ಬಡಿದಂತೆ ಬಡಿಯುತ್ತಿದ್ದ ಗಂಡ ಸತ್ತು ಮೂರ್ನಾಲ್ಕು ವರ್ಷಗಳೆ ಆಯ್ತು. ಅವನ ನೆನಪುಗಳಿಗೆ ಎಂದಿಗೂ ಮಾತಾಡಿಸಿದವಳಲ್ಲ. ಒಂದಿಷ್ಟು ತರಕಾರಿ ಬೆಳೆದು, ಮಗಳಿಂದ ಮಾರಿಸಿ ಬದುಕು ಸಾಗಿಸುತ್ತಿದ್ದಳು.

“ಎರಡು ಹೊಟ್ಟಿ ತುಂಬಲಕ ಇಷ್ಟು ಸಾಕಲ್ಲವೇ?” ಎಂದು ತನಗೆ ತಾನೇ ಹೇಳಿಕೊಳ್ಳುತ್ತಿದ್ದಳು.

ಮುಂಜಾನೆ ಏಳೆಂಟು ಅನ್ನುವಷ್ಟರಲ್ಲಿಯೇ “ಫ್ರೆಶ್ ಪಾಲಕ್, ಚೌಳಿಕಾಯಿ, ಎಳಿಕ ಗಜರಿ, ಹೀರೆಕಾಯಿ, ಹತ್ತು ರೂಪಾಯಿಗಿ ಎರಡು ಸೂಡು ಮೆಂತಿ ಪಲ್ಯ ಅಂತ ಸೌಂಡು ಬರುವವರೆಗೂ ಎಷ್ಟೋ ಮನೆಗಳಲ್ಲಿ ಗ್ಯಾಸ್ ಆನ್ ಆಗುತ್ತಲೆ ಇರಲಿಲ್ಲ. ಸುಮಯ್ಯ ತನ್ನೂರಿಂದ ಸಮೀಪವೆ ಇರುವ ದೊಡ್ಡ ಪಟ್ಟಣದ ಏರಿಯಾ ಒಂದರಲ್ಲಿ ತರಕಾರಿ ಮಾರುತ್ತಿದ್ದಳು. ಅದೇ ಟೈಮಲ್ಲಿ ಬಣ್ಣಬಣ್ಣದ ಸ್ಕರ್ಟ್‌ಗಳು ತೊಟ್ಟುಕೊಂಡು, ತಲೆಗೆ ಕೆಂಪು ರಿಬ್ಬನ್ ಹಾಕಿಕೊಂಡು ಸ್ಕೂಲಿಗೋಗುವ ಹುಡುಗಿಯರತ್ತ ಆಸೆಗಣ್ಣಿನಿಂದ ನೋಡುತ್ತಾ ನಿಲ್ಲುತ್ತಿದ್ದಳು.

“ಏನೇ ಫಾತಿ ಮೊನ್ನಿ ಉಳದಿಂದೆ ಬುಟ್ಯಾಗ ತುರಕೊಂಡ ಬಂದಿ ಅನಸ್ತದ” ಅನ್ನುತ್ತಲೆ ತರಕಾರಿ ತೆಗೆದುಕೊಳ್ಳುವ ಆಂಟಿಯರೆದುರು, “ಇಲ್ಲರೀ ಯವ್ವಾ ಫ್ರೆಶ್ ಮಾಲ್ ಅದ” ಅಂತ ನಗುತ್ತಾ ಹೇಳುವುದನ್ನು ಈಗ ಅವಳು ಪೂರ್ತಿ ಕೈಬಿಟ್ಟಿದ್ದಳು. ನಾಲ್ಕೈದು ರೂಪಾಯಿ ಉಳಸೋ ಸಲುವಾಗಿ ಈ ಆಂಟಿಯರು ಈ ಡೈಲಾಗ್ ಹೊಡಿಲತರ ಎಂಬುವುದು ಅವಳಿಗೆ ಗೊತ್ತಾಗಿ ಹೋಗಿತ್ತು.

ಹೀಗೆ ಮನೆಯಿಂದ ಮನೆಗೆ ನಡೆಯುತ್ತಿದ್ದ ಸುಮಯ್ಯಳಿಗೆ, ರಸ್ತೆಯಲ್ಲಿ ಕೆಸರು ಗುಂಡಿಗಳು ಕಂಡರೆ ಸಾಕು ಮೊದಲಿನಂತೆ ಟಣ್ ಅಂತ ಹಾರದೆ, ಅದರ ಇನ್ನೊಂದು ಬದಿಯಿಂದ ನಾಜೂಕಾಗಿ ನಡೆಯುವುದು ಈಗ ಕಲಿತು ಬಿಟ್ಟಿದ್ದಳು. ಹಾಗೇ ಹೋಗು ತ್ತಿದ್ದವಳಿಗೆ ಎಂದಿನಂತೆ ಕರೆದು, ಒಂದಿಷ್ಟು ಉಳಿದಿದ್ದ ಟಿಫಿನ್ ಕೊಟ್ಟು ಮಾತಾಡಿಸುವ ದೊಡ್ಡ ದೇಹದ ಹೆಂಗಸಾದ ಸಂಗವ್ವ ಇವತ್ತೂ ಸಹ ಕರೆದಳು.

ಅಷ್ಟೇನೂ ವಯಸ್ಸಾಗಿರದ ಐವತ್ತು ದಾಟಿದ ಸಂಗವ್ವ ಸುಮಯ್ಯಗೆ ಏನಾದರೂ ತಿನ್ನಲು ಸದಾ ಕೊಡುತ್ತಿದ್ದಳು.
“ರಾತ್ರಿ ಭಾಳ ಕಾಲ ನೋಯಿಸಿತಿರಬೇಕಲ್ಲ? ಮೊದಲೆ ಎಳಿ ಹುಡುಗಿ” ಅಂದಳು ಸಂಗವ್ವ. ಇದಕ್ಕೆ ಏನು ಪ್ರತಿಕ್ರಿಯೆ ನೀಡದೆ ಪ್ಲೇಟಿನಲ್ಲಿದ್ದ ಉಪ್ಪಿಟ್ಟು ತಿನ್ನುತ್ತಾ ಕೂತಿದ್ದಳು ಸುಮಯ್ಯ.

ಪ್ರೀತಿ ಉಕ್ಕಿಸುವ ನೋಟದಿಂದ ಸಂಗವ್ವ “ಯಾಕೋ ಮುಖ ಭಾಳ ಬಾಡಿ ಹೋಗ್ಯಾದೆ ಪೋರಿ” ಎಂದಳು.

“ಏನಿಲ್ಲೇ ಸಂಗವ್ವ ರಾತ್ರಿ ವಿಚಿತ್ರ ಕನಸು ಬೀಳ್ತಾವ. ಫಸ್ಟ್ ಫಸ್ಟಿಗಿ ತರಕಾರಿ ಮಾರೋದ ಹೆಂಗತ ಚಿಂತಿ ಆಗಿತ್ತು. ಈಗ ರೂಢಿ ಬಿದ್ದದ. ಥೋಡೆ ಕಾಲು ಕೈ ಎಳಿತವ ಖರೇ, ಅವೆ ದೊಡ್ಡದು ಮಾಡಕೊಂತ ಕುಂತ ಅಂದರ ಅಮ್ಮೀ ಮೊತಿ ಸಣ್ಣದ ಮಾಡ್ತಾಳ” ಅನ್ನುತ್ತಲೇ ಸುಮಯ್ಯ ಮೌನವಾದಳು.

“ರಾತ್ರಿಗಿ ಅಂತದೇನ ಕನಸು ಬೀಳ್ತಾವೆ ಸುಮ್ಮಿ?”

ಎದೆಯೊಳಗೆ ಮುಚ್ಚಿಟ್ಟುಕೊಂಡಿದ್ದ ಪುಟ್ಟದೊಂದು ನಿಟ್ಟುಸಿರು ಬಿಟ್ಟಳು ಸುಮ್ಮಿ. “ಈ ಹೀರೆಕಾಯಿ ಹಂಗ ಉದ್ದ ಬೆಳಿಲತಿನಿ ಆದರ ಜೀವ ಇಲ್ಲ ಅನಸಲತದ ಒಳಗ. ಬಾಜು ಮನಿ ಫಾತಿ ಅಂತಾಳ ಟಮೋಟ್ ಹಂಗ ಕೆಂಪು ಅದೀ ಅಂತ ಆದರ ಒಳಗ ಒಣಗಿ ಹೋಗಿನಿ ಅನಸಲತದ ಸಂಗವ್ವ. ನನ್ನ ವಯಸ್ಸಿನ ಗೆಳತ್ಯಾರ ಜೊತಿ ಆಟ ಆಡೋ ವಯಸ್ಸಾಗ ನಿನ್ನ ಹಂತಕಿ ಸಂಗಟ ಮಾತ ಆಡಕೊತ ಕುಂದರೋ ಟೈಮ್ ಬಂದದ ನೋಡು ಯವ್ವಾ ಅಂದಳು.

ಯಾಕೋ ತಟ್ಟನೆ ಇಬ್ಬರೂ ಮಾತು ಮುಂದು ವರೆಸುವ ಆಸಕ್ತಿ ತೋರಿಸಲಿಲ್ಲ. ಮನೆಮುಂದಿನ ಗಾರ್ಡನ್ನಿನಲ್ಲಿಟ್ಟಿದ್ದ ಪಂಜರದೊಳಗೆ ಬಣ್ಣ ಬಣ್ಣದ ಹಕ್ಕಿಗಳು ಆಡೋದು ನೋಡಿ ಹೊರಗಿಂದ ಸುಮ್ಮಿ ಕೈತಟ್ಟಿ ಸಂಭ್ರಮಿಸಿದಳು. ಆ ಪಂಜರದ ಪಕ್ಕದಲ್ಲಿದ್ದ ಕೆಂಪು ಗೋಡೆ ಮೇಲೆ ಹಸಿರು ಬಣ್ಣದ ಹಕ್ಕಿಯೊಂದು ತಲೆ ಮೇಲೆ ಕೂತಂತೆ ಫೋಟೋ ತೆಗೆಸಿಕೊಂಡಿದ್ದ ಪುಟ್ಟ ಹುಡುಗನ ಪಟ ನೋಡಿ,

“ಯಾರಿದು ಸಂಗವ್ವ?” ಅಂದಳು.

“ಇದು ನನ್ನ ಮೊಮ್ಮಗ ಆಕರ್ಷ, ಅವರಪ್ಪ ಏನೇನೋ ಮಾಡಿ ಹಕ್ಕಿ ಒಯ್ದು ಪಾರಂದ ತಲಿ ಮ್ಯಾಲ ಕುಂದರಸಿ ಹಂಗ ಫೋಟೋ ತೆಗದಾನ ನೋಡು” ಅಂದಳು ಸಂಗವ್ವ.

“ಚಂದ ಬಂದದ, ಮೊಮ್ಮಗ ಮಸ್ತ್ ಹನಾ ನೋಡ” ಎನ್ನುತ್ತಾ, ಬುಟ್ಟಿಯಲ್ಲಿ ಉಳಿದಿದ್ದ ಕೋತ್ತಂಬರಿಯನ್ನ ಸಂಗವ್ವ ಬೇಡ ಅಂದರು ಅವಳ ಕೈಗಿಟ್ಟು, ಗೇಟು ತೆಗೆದು ಹೊರಬಂದಳು.

ಸಣ್ಣ ಕನ್ನಡಿಯಲ್ಲಿ ತನ್ನ ಮುಖ ತಾನೇ ನೋಡಿಕೊಂಡದ್ದು ಬಿಟ್ಟರೆ ತನ್ನದು ಅಂತ ಒಂದು ಫೋಟೋ ಇಲ್ಲವಲ್ಲ ಎಂಬುವುದು ಅವಳಿಗೆ ಇವತ್ತು ನೆನಪಾಯ್ತು! “ಛೇ! ಇಷ್ಟು ದಿನ ಹೊಳೆಯಲೇ ಇಲ್ಲ. ನಂದೊಂದು ಪೋಟೋ ಆದ್ರು ತೆಗಸಿಕೊಂಡು ಬರಬೇಕು ಅಮ್ಮೀಗೆ ಹೇಳಿ. ಒಂದು ಹತ್ತು ರೂಪಾಯಿ ಹೆಚ್ಚಿಗಿ ಕೊಟ್ಟು ಅಂಥದೊಂದು ಹಕ್ಕಿ ನನ್ನ ತಲಿ ಮ್ಯಾಲನು ಕುಂದರಸ ಅಂತ ಹೇಳಬೇಕು ಫೋಟೋ ತೆಗಿಯೊನಿಗೆ ಅಂದುಕೊಳ್ಳುತ್ತಾ, ಬುಟ್ಟಿಯಲ್ಲಿ ಇನ್ನೂ ಸ್ವಲ್ಪ ಉಳಿದಿದ್ದ ತರಕಾರಿ ಕಡೆ ನೋಡದೆ ಊರ ಹಾದಿ ಹಿಡಿದಳು.

“ಅಮ್ಮಿದು ನಂದು ಒಂದು ಫೋಟೊಯಿಲ್ಲ. ನೆನಪಿಗರೆ ಮುಂದ ನೋಡಲಕ ಫೋಟೋ ಇರಬೇಕು. ಸಂಗವ್ವನ ಜೊತಿ ಇವತ್ತು ಕುಂತಿದು ಮಸ್ತ್ ಆಯ್ತು ಇಲ್ಲಂದ್ರ ತಲ್ಯಾಗೆ ಬರತಿರಲಿಲ್ಲ ಈ ವಿಚಾರ” ಅಂದುಕೊಳ್ಳುತ್ತಾ, ಊರು ಪ್ರವೇಶಿಸಿದಳು.

ಊರಿಗೆ ಕಾಲಿಟ್ಟ ಸುಮ್ಮಿಗೆ ತಲಿ ಮ್ಯಾಲಿನ ಬುಟ್ಟಿ ಇನ್ನೂ ತುಸು ಭಾರವಾಗೆ ಇರೋದು ಈಗ ಅರಿವಿಗೆ ಬಂತು. ಅಮ್ಮಿಗೆ ಇವತ್ತು ಯಾರೂ ಅಷ್ಟು ತೊಗೊಳಿಲ್ಲ ಅಂತ ಹೇಳಿದರೆ ಆಯ್ತೆಂದು ಧೈರ್ಯದಿಂದ ನಡೆದಳು. ಅವಳ ಮುಂದಿನಿಂದಲೇ ಠಣ್ ಅಂತ ಜಿಗಿದು ಕರಿ ಬೆಕ್ಕಿನ ಮರಿಯೊಂದು ಮಿಂಚಿಹೋಯ್ತು. ಅವಳು ತಲೆಗೆ ಬಿಗಿಯಾಗಿ ಕಟ್ಟಿಕೊಂಡಿದ್ದ ಸ್ಕಾರ್ಫ್ ಸಡಿಲವಾಗಿತ್ತು. ಕೊಳೆತ ಈರುಳ್ಳಿಯೊಂದರ ವಾಸನೆ ಬುಟ್ಟಿಯಿಂದ ಸೋರಿ ಅವಳ ಮೂಗಿಗೆ ಕಿರಿಕಿರಿ ಉಂಟುಮಾಡುತ್ತಿತ್ತು.

ಓಣಿ ತಿರುವಿಗೆ ಸುಮ್ಮಿಗಾಗಿ ಶತಮಾನದಿಂದ ಕಾಯುತ್ತಿರುವಂತೆ ಅವಳ ಗೆಳತಿ ಫಾತಿ ಯಾವುದೋ ಒಂದು ಗಾಢ ಚಿಂತೆಯಲ್ಲಿರುವಂತೆ ಕುಳಿತಿದ್ದವಳು, ಇವಳಿಗೆ ನೋಡಿ ತುಸು ನಿರಾಳವಾಗಿ ಬಂದು ಕೈಹಿಡಿದಳು. ಇಬ್ಬರೂ ಮನೆಯತ್ತ ಸಾಗಿದರು. ಅಂಗಳವೇರಿ ಒಳಬಂದ ಸುಮ್ಮಿಯ ಕಣ್ಣುಗಳ ಮುಂದೆ ಅಮ್ಮೀ ತೀರಾ ಸೊರಗಿ ಹೋದಂತೆ ಕಾಣುತ್ತಿದ್ದಳು. ಮುಂಜಾನೆ ಲವಲವಿಕೆಯಿಂದ ಓಡಾಡಿಕೊಂಡಿದ್ದ ಅಮ್ಮೀ ಹೀಗೆ ಗರಬಡಿದಂತೆ ಕೂರಲು ಕಾರಣವೇನಿರಬಹುದೆಂದು ಹುಡುಕುತ್ತಿದ್ದ ಸುಮ್ಮಿಗೆ ತಲೆಯೊಳಗಿದ್ದ ಫೋಟೋ ಕಲ್ಪನೆಗಳು ಫಳಾರನೆ ಒಡೆದುಹೋದವು.

ರಜಿಯಾ ಮಗಳ ಗಲ್ಲ ನೇವರಿಸುತ್ತ. ಒಳಮನೆಯಿಂದ ಕುಡಿಯಲು ನೀರು ತಂದುಕೊಟ್ಟಳು.

“ಮಗ ಹೆಂಗಾಯ್ತು ವ್ಯಾಪಾರ?”

“ಅಮ್ಮೀ, ಎಲ್ಲಾ ಹೆಂಗಸರದು ಒಂದೇ ಗೋಳು, ತರಕಾರಿ ಎಷ್ಟು ಫ್ರೆಶ್ ಒಯ್ದು ಕೊಟ್ಟರೂ ಫ್ರೆಶ್ ಇಲ್ಲಂತರಾ, ಅಷ್ಟೇನ ಉಳಿದಿಲ್ಲ ಬಿಡು ಬುಟ್ಯಾಗ, ದಿನ ಹೋಗೊಷ್ಟೆ ಹೊಗ್ಯಾದ” ಅಂದಳು.

ಸಪ್ಪಗೆ ಬಿದ್ದ ಅಮ್ಮೀ ಮುಖ ನೋಡಿ ಏನಾಗಿದೆ ಅನ್ನೋ ನೋಟ ಬೀರಿದಳು.

ರಜಿಯಾ ತುದಿ ಬೆರಳುಗಳಿಂದ ನೆಲ ಸವರುತ್ತ ಮಗಳ ಹಣಿ ಮೇಲೆ ಕೈಯಾಡಿಸುತ್ತ. “ನಿನಗಂತೂ ಸಾಲಿ ಮುಖ ತೋರಸೋದು ನನ್ನ ಕೈಯಲ್ಲಿಂದ ಆಗಲಿಲ್ಲ ಸುಮ್ಮು, ನಂದು ಕಾಲಂತೂ ಮುರದೆ ಹೊಗ್ಯಾದ, ಅದು ನೆಟ್ಟಗ ನಿಲ್ಲಬೇಕಂದರ ಎಷ್ಟು ದಿನ ಬೇಕೊ ಏನೋ…” ಅನ್ನುತ್ತಾ ರಜಿಯಾ ಮಾತು ತುಂಡರಸಿ ನಿಂತಳು.

ಹೇಳಲಾಗದ ಮಾತುಗಳು ಗಂಟಲೊಳಗೆ ನುಂಗಿಕೊಳ್ಳುತ್ತಿದ್ದ ರಜಿಯಾಗೆ ಆ ಮಾತುಗಳು ಹೊರಹಾಕುವುದು ಇಷ್ಟವಿರಲಿಲ್ಲ.

ಇದು ಕಂಡ ಸುಮ್ಮಿ ನಗುತ್ತಾ “ಅಮ್ಮೀ ಒಂದು ಮಾತು ಛೋಲೊಂದು ಇರ್ತದ, ಇನ್ನೊಂದು ಖರಾಬ್ ಇರ್ತಾದ, ಎರಡರಾಗವೊಂದು ಕೇಳಬೇಕೆ ಬಿಡು, ಹೇಳ ಏನ ಆಗಲ್ಲ ಅಂದಳು.

ಸುತ್ತ ಕಣ್ಣಾಡಿಸಿದ ರಜಿಯಾಳಿಗೆ, ಅಂಗಳದಲ್ಲಿ ದಟ್ಟ ಬಳ್ಳಿ ಹರಡಿಕೊಂಡು ನಿಂತ ಹೀರೆಕಾಯಿ ನೋಡಿ ನನ್ನ ಮಗಳು ಸಹ ಹೀಗೆ ಅಂಗಳದ ತುಂಬಾ ಆಡಿ ಬೆಳೆದವಳು, ಮೂಲೆಯಲ್ಲಿದ್ದ ಟಮೋಟಗಿಂತಲೂ ಕೆಂಪಿರುವವಳು, ಇದೊಂದು ವಸ್ತು ನನ್ನ ಕಡೆ ಉಳಿಬಹುದು ಅನ್ನಕೊಂಡಿದ್ದೆ ಅದು ಸಹ ಹೋಗುವ ಕಾಲ ದೂರವಿಲ್ಲ ಅಂದುಕೊಂಡಳು.

“ಸುಮ್ಮಿ, ಮೆಹಬೂಬ್ ನಗರದ ಹುಸೇನಿ ತಾತ ಬಂದಿದ್ರು. ಮಗಳ ಬೆಳದ ನಿಂತಾಳ. ನಿನ್ನ ಕಣ್ಣಿಗಿ ಸಣ್ಣಾಕಿನಿ ಇರಬೇಕು ಆದರ ಪ್ಯಾಟಿ ಮಂದಿ ಕಣ್ಣು ಛೋಲೊ ಇರಲ್ಲ. ಕಾಲ ಸೂಕ್ಷ್ಮ ಅದ. ನಿನ್ನ ತರಕಾರಿ ಮಾರೋ ಕಾಲಗ, ಕೈಯಾಗಿನ ವಜ್ರ ಕಳಕೊಬ್ಯಾಡ, ಪಟ್ಟಂತ ನಮ್ಮ ಸಂಬಂಧಿ ಹುಡುಗ ಒಂದದ ಅವರ ಕಡೆ ಸಂಬಂಧ ನೋಡೊಣ ಸುಮ್ಮಿಗಿ ಅಂದಾರ” ಅಂದಳು .

ಅಮ್ಮೀ ಮಾತು ಬೆಳೆಯುತ್ತಲೆ ಹೋಗುತಿತ್ತು. “ಕಾನೂನು ಅದು ಇದು ಅಡ್ಡ ಬರ್ತಾವ ನೀ ಇನ್ನೂ ಸಣ್ಣಕಿ ಅದಿ, ಈಗ ಫಿಕ್ಸ್ ಮಾಡಿ ಇಡೋಣ, ಮುಂದಿಂದ ಮುಂದ ನೋಡೊಣ”.

ತುದಿ ಮೊದಲಿಲ್ಲದ ಅಮ್ಮೀ ಮಾತು ಬೆಳೆಯುತ್ತಲೇ ಹೋಗುತ್ತಿತ್ತು.

ಸುಮಯ್ಯ ಗಂಭೀರವಾಗಿ ತಟ್ಟನೆ “ಅಮ್ಮೀ ನಾಳಿಗಿ ಪ್ಯಾಟಿಗಿ ಹೋಗಿ ಒಂದು ಫೋಟೋ ತೆಗಿಸೋಣವಾ? ಅಂದಳು.

ಕಪಿಲ ಪಿ ಹುಮನಾಬಾದೆ

ಕಪಿಲ ಪಿ ಹುಮನಾಬಾದೆ
ಯುವ ಬರಹಗಾರ ಕಪಿಲ ಪಿ ಹುಮನಾಬಾದೆ ಅವರು ಮೂಲತಃ ಬೀದರ್‌ನವರು. ಸದ್ಯ ಕಾವ್ಯಮನೆ ಪ್ರಕಾಶನ ಬಳ್ಳಾರಿ, ಮುಖ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಕಾದಂಬರಿ ಹಾಣಾದಿ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದೆ. ಈಗ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿದ್ಯಾರ್ಥಿ


ಇದನ್ನೂ ಓದಿ: ಇಬ್ಬರು ಹೆಣ್ಣುಗಳು : ಅಕ್ಷತಾ .ಕೆ ಅವರ ಕಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...