Homeಕಥೆಕಪಿಲ ಪಿ ಹುಮನಾಬಾದೆ ಅವರ ಕಥೆ: ಫೋಟೋ ಕನಸು

ಕಪಿಲ ಪಿ ಹುಮನಾಬಾದೆ ಅವರ ಕಥೆ: ಫೋಟೋ ಕನಸು

- Advertisement -
- Advertisement -

ರಾತ್ರಿ ಯಾವ ಸಪ್ಪಳವು ಮಾಡದೆ ಸುಮ್ಮನೆ ಮಲಗಿತ್ತು. ನಕ್ಷತ್ರಗಳು ಸಹ ಸುಸ್ತಾಗಿದ್ದವು. ನೆಲದ ಮೇಲಿನ ಮಣ್ಣಿನ ಮೇಲೆ ಯಾರೋ ನೀರು ಎರಚಿ ಹೋದಂತೆ ತಂಪಾದ ಗಾಳಿ ಮೂಗಿಗೆ ಬಂದು ಬಡಿಯುತ್ತಿತ್ತು. ಅಲ್ಲೇ ಮನೆ ಮುಂದಿನ ಅಂಗಳದಲ್ಲಿ ಮಲಗಿದ್ದ ಸುಮಯ್ಯ ಇವೆಲ್ಲ ಗಮನಿಸುತ್ತ ತನ್ನ ಪುಟ್ಟ ಕೈಗಳಿಂದ ತನ್ನವೇ ಕಾಲುಗಳು ಒತ್ತಿಕೊಳ್ಳುತ್ತ ಕೂತಿದ್ದಳು. ನಡುರಾತ್ರಿ ಹೀಗೆ ಹುಡುಗಿ ಎಚ್ಚರಗೊಂಡ ಸದ್ದಿಗೆ, ಸುಮಯ್ಯಳ ಅಮ್ಮ ರಜಿಯಾ ಕಣ್ಣು ಬಿಟ್ಟು ಎಚ್ಚರಗೊಂಡರು ಸಹ, ಮಗಳೊಂದಿಗೆ ಮಾತನಾಡಲು ಹೋಗಲಿಲ್ಲ. ಪಡಸಾಲಿಗೆ ಹೋಗಿ ನೀರು ಕುಡಿಯಬೇಕೆಂದುಕೊಂಡ ಫಾತಿಗೆ ಕತ್ತಲು ಯಾಕೋ ಭಯ ಹುಟ್ಟಿಸುತ್ತಿತ್ತು.

ನಡುರಾತ್ರಿ ನಸುಕಿಗೆ ಧುಮುಕುವುದಕ್ಕೆ ಇವತ್ಯಾಕೆ ಇಷ್ಟು ಹೊತ್ತು ತಗುಲಿತಿದೆಯೆಂದು ವಿಚಾರಕ್ಕೆ ಕೂತವಳಿಗೆ, ನಿದ್ದೆ ಬಂದು ಎತ್ತುಕೊಂಡು ಹೋಗಿದ್ದು, ಮುಂಜಾನೆ ಎದ್ದಮೇಲೆಯೇ ಹೊಳೆದದ್ದು. ಅಮ್ಮೀ ರಜಿಯಾ ಬಂದು “ಏಳೇ ಸುಮ್ಮಿ ಹೊತ್ತು ತಲಿ ಮ್ಯಾಲ ಏರ್ಯಾದ” ಅಂದಾಗ ಬುಸಕ್ಕನೆ ಎದ್ದಳು. ಹಾಸಿಗೆಯಿಂದ ಎದ್ದ ತಕ್ಷಣ ಮಗಳ ಮುಖ ದಿಟ್ಟಿಸಿ ವಿವರವಾಗಿ ನೋಡಿದ ರಜಿಯಾ, ಸುಮಯ್ಯ ದಿನಕ್ಕಿಷ್ಟು ಎತ್ತರವಾಗಿ ಮತ್ತು ಗಂಭೀರವಾಗಿ ಕಾಣುತ್ತಿರುವುದನ್ನು ನೋಡಿ ಒಳಗೊಳಗೆ ಭಯಪಟ್ಟಳು.

ಹಲ್ಲುಜ್ಜಿ, ಮುಖ ತೊಳೆದುಕೊಳ್ಳಲು ಹೇಳಿದ ಅಮ್ಮಿಯ ಮಾತು ಧಿಕ್ಕರಿಸಿ ನೇರವಾಗಿ ಚಹಾ ಹೀರುತ್ತಾ ಕೂತಳು. ಎಂದಿನಂತೆ ಅವಸರದಲ್ಲಿದ್ದಳು. ಕಣ್ಣೆದುರು ಬಗೆಬಗೆಯ ತರಕಾರಿಗಳು ತುಂಬಿದ ಬುಟ್ಟಿಯೊಂದು ಅವಳ ತಲೆಯೇರಲು ಕಾದು ಕುಳಿತಿತ್ತು. “ಅಮ್ಮಿಯ ಕಾಲು ನೆಟ್ಟಗಿದ್ದರೆ, ನಾನೊಂದು ಕೈಯಲ್ಲಿ ಸಣ್ಣ ತರಕಾರಿ ಚೀಲವೊಂದು ಹಿಡಿದುಕೊಂಡು ಬರ್ತಿದ್ದೆ. ಈಗ ಇಡೀ ತರಕಾರಿ ಬುಟ್ಟಿ ಹೊತ್ತುಕೊಳ್ಳುವಂತೆ” ಆಗಿದೆಯೆಂದು ಒಳಗೊಳಗೆ ಅಂದುಕೊಂಡು ನಿಟ್ಟುಸಿರೊಂದಬಿಟ್ಟಳು.

“ಅಮ್ಮೀ ಈ ಬುಟ್ಟಿ ಎತ್ತಿ ಜರಾ ತಲಿ ಮ್ಯಾಲಿನ ಸಿಂಬಿ ಮ್ಯಾಲ ಕರೆಕ್ಟ್ ಆಗಿ ಕುಂದರುವಂಗ ಇಡು” ಅಂದಳು ಸುಮಯ್ಯ. ತಾಳಗಿ ಇನ್ನೂ ಗಟ್ಟಿಯಾಗದ ತಲೆ ಮೇಲೆ ಎಂತಹ ಭಾರ ಹೊರೆಸುವಂತಾಯಿತ್ತಲ್ಲ ಎಂದು ರಜಿಯಾ ಮರುಕಪಟ್ಟಳು.

ಅಮ್ಮೀ ಕಣ್ಣುಗಳು ಹಸಿಯಾಗಿದ್ದು ನೋಡಿ, “ಆಮ್ಯಾಲ ಅಳುವಂತಿ, ಫಸ್ಟ್ ತಲೀ ಮ್ಯಾಲ ಬುಟ್ಟಿ ಇಡು, ಬಿಸಿಲು ನೆತ್ತಿಗೇರದರ ಏನ ಮಾಡ್ಲಿ ಹೇಳು, ಕಾಯಿಪಲ್ಯ ಎಷ್ಟು ನೀರು ಹಾಕಿದ್ರು ಒಣಗಿ ಹೋಗ್ತದ” ಎಂದಳು.

ನಾಜೂಕಾಗಿ ಮಗಳ ತಲೆ ಮೇಲೆ ಬುಟ್ಟಿ ಇಟ್ಟು ಅಂಗಳದಿಂದ ಇಳಿದುಹೋಗುತ್ತಿದ್ದ ಸುಮಯ್ಯಳ ಬೆನ್ನು ನೋಡುತ್ತಾ ನಿಂತಳು. ಅವಳ ದೇಹದ ಆಕಾರಕ್ಕಿಂತ ದೊಡ್ಡದಾದ ತರಕಾರಿ ಬುಟ್ಟಿ ಭಾರಕ್ಕೆ, ಹುಡುಗಿಗೆ ಸರಿಯಾಗಿ ಬಾಯಿಂದ ಗಾಳಿ ಸಹ ಬಿಡಲು ತೊಂದರೆ ಮಾಡುತ್ತಿತ್ತು. ಕೂದಲು ದಟ್ಟವಾಗಿ, ಉದ್ದವಾಗಿ ಬೆಳೆದು ನಿಂತಿದೆ. ನಮ್ಮ ಸುಮಯ್ಯಳಿಗೆ ಸಾಲಿಗೆ ಸೇರಿಸಿದ್ದರೆ ಈಗ ಏಳನೇ ಕ್ಲಾಸಿನಲ್ಲಿರುತಿದ್ದಳು, ಎಂದು ಒಂದೆರಡು ವರ್ಷದ ಕೆಳಗೆ ಹೇಳಿದ ತುಂಗಪ್ಪ ಮಾಸ್ತರರ ಮಾತು ಎಂದಿನಂತೆ ಮತ್ತೆ ಕೇಳಿಸಿತು. ಏನೂ ಮಾಡಲಾಗದ ಅಸಹಾಯಕತೆಯಲ್ಲಿ ಅಡುಗೆ ಮನೆ ಸೇರಿ ರಜಿಯಾ ಕೆಲಸಕ್ಕಿಳಿದಳು.

ಅರ್ಧ ಎಕರೆಯಷ್ಟು ಹೊಲವಿರುವ ರಜಿಯಾ, ಊರಲ್ಲಿ ಯಾರ ಮುಂದೆಯೂ ಕೈ ಚಾಚಿದವಳಲ್ಲ. ಕುಡಿದು ಬಂದು ದನಕ್ಕೆ ಬಡಿದಂತೆ ಬಡಿಯುತ್ತಿದ್ದ ಗಂಡ ಸತ್ತು ಮೂರ್ನಾಲ್ಕು ವರ್ಷಗಳೆ ಆಯ್ತು. ಅವನ ನೆನಪುಗಳಿಗೆ ಎಂದಿಗೂ ಮಾತಾಡಿಸಿದವಳಲ್ಲ. ಒಂದಿಷ್ಟು ತರಕಾರಿ ಬೆಳೆದು, ಮಗಳಿಂದ ಮಾರಿಸಿ ಬದುಕು ಸಾಗಿಸುತ್ತಿದ್ದಳು.

“ಎರಡು ಹೊಟ್ಟಿ ತುಂಬಲಕ ಇಷ್ಟು ಸಾಕಲ್ಲವೇ?” ಎಂದು ತನಗೆ ತಾನೇ ಹೇಳಿಕೊಳ್ಳುತ್ತಿದ್ದಳು.

ಮುಂಜಾನೆ ಏಳೆಂಟು ಅನ್ನುವಷ್ಟರಲ್ಲಿಯೇ “ಫ್ರೆಶ್ ಪಾಲಕ್, ಚೌಳಿಕಾಯಿ, ಎಳಿಕ ಗಜರಿ, ಹೀರೆಕಾಯಿ, ಹತ್ತು ರೂಪಾಯಿಗಿ ಎರಡು ಸೂಡು ಮೆಂತಿ ಪಲ್ಯ ಅಂತ ಸೌಂಡು ಬರುವವರೆಗೂ ಎಷ್ಟೋ ಮನೆಗಳಲ್ಲಿ ಗ್ಯಾಸ್ ಆನ್ ಆಗುತ್ತಲೆ ಇರಲಿಲ್ಲ. ಸುಮಯ್ಯ ತನ್ನೂರಿಂದ ಸಮೀಪವೆ ಇರುವ ದೊಡ್ಡ ಪಟ್ಟಣದ ಏರಿಯಾ ಒಂದರಲ್ಲಿ ತರಕಾರಿ ಮಾರುತ್ತಿದ್ದಳು. ಅದೇ ಟೈಮಲ್ಲಿ ಬಣ್ಣಬಣ್ಣದ ಸ್ಕರ್ಟ್‌ಗಳು ತೊಟ್ಟುಕೊಂಡು, ತಲೆಗೆ ಕೆಂಪು ರಿಬ್ಬನ್ ಹಾಕಿಕೊಂಡು ಸ್ಕೂಲಿಗೋಗುವ ಹುಡುಗಿಯರತ್ತ ಆಸೆಗಣ್ಣಿನಿಂದ ನೋಡುತ್ತಾ ನಿಲ್ಲುತ್ತಿದ್ದಳು.

“ಏನೇ ಫಾತಿ ಮೊನ್ನಿ ಉಳದಿಂದೆ ಬುಟ್ಯಾಗ ತುರಕೊಂಡ ಬಂದಿ ಅನಸ್ತದ” ಅನ್ನುತ್ತಲೆ ತರಕಾರಿ ತೆಗೆದುಕೊಳ್ಳುವ ಆಂಟಿಯರೆದುರು, “ಇಲ್ಲರೀ ಯವ್ವಾ ಫ್ರೆಶ್ ಮಾಲ್ ಅದ” ಅಂತ ನಗುತ್ತಾ ಹೇಳುವುದನ್ನು ಈಗ ಅವಳು ಪೂರ್ತಿ ಕೈಬಿಟ್ಟಿದ್ದಳು. ನಾಲ್ಕೈದು ರೂಪಾಯಿ ಉಳಸೋ ಸಲುವಾಗಿ ಈ ಆಂಟಿಯರು ಈ ಡೈಲಾಗ್ ಹೊಡಿಲತರ ಎಂಬುವುದು ಅವಳಿಗೆ ಗೊತ್ತಾಗಿ ಹೋಗಿತ್ತು.

ಹೀಗೆ ಮನೆಯಿಂದ ಮನೆಗೆ ನಡೆಯುತ್ತಿದ್ದ ಸುಮಯ್ಯಳಿಗೆ, ರಸ್ತೆಯಲ್ಲಿ ಕೆಸರು ಗುಂಡಿಗಳು ಕಂಡರೆ ಸಾಕು ಮೊದಲಿನಂತೆ ಟಣ್ ಅಂತ ಹಾರದೆ, ಅದರ ಇನ್ನೊಂದು ಬದಿಯಿಂದ ನಾಜೂಕಾಗಿ ನಡೆಯುವುದು ಈಗ ಕಲಿತು ಬಿಟ್ಟಿದ್ದಳು. ಹಾಗೇ ಹೋಗು ತ್ತಿದ್ದವಳಿಗೆ ಎಂದಿನಂತೆ ಕರೆದು, ಒಂದಿಷ್ಟು ಉಳಿದಿದ್ದ ಟಿಫಿನ್ ಕೊಟ್ಟು ಮಾತಾಡಿಸುವ ದೊಡ್ಡ ದೇಹದ ಹೆಂಗಸಾದ ಸಂಗವ್ವ ಇವತ್ತೂ ಸಹ ಕರೆದಳು.

ಅಷ್ಟೇನೂ ವಯಸ್ಸಾಗಿರದ ಐವತ್ತು ದಾಟಿದ ಸಂಗವ್ವ ಸುಮಯ್ಯಗೆ ಏನಾದರೂ ತಿನ್ನಲು ಸದಾ ಕೊಡುತ್ತಿದ್ದಳು.
“ರಾತ್ರಿ ಭಾಳ ಕಾಲ ನೋಯಿಸಿತಿರಬೇಕಲ್ಲ? ಮೊದಲೆ ಎಳಿ ಹುಡುಗಿ” ಅಂದಳು ಸಂಗವ್ವ. ಇದಕ್ಕೆ ಏನು ಪ್ರತಿಕ್ರಿಯೆ ನೀಡದೆ ಪ್ಲೇಟಿನಲ್ಲಿದ್ದ ಉಪ್ಪಿಟ್ಟು ತಿನ್ನುತ್ತಾ ಕೂತಿದ್ದಳು ಸುಮಯ್ಯ.

ಪ್ರೀತಿ ಉಕ್ಕಿಸುವ ನೋಟದಿಂದ ಸಂಗವ್ವ “ಯಾಕೋ ಮುಖ ಭಾಳ ಬಾಡಿ ಹೋಗ್ಯಾದೆ ಪೋರಿ” ಎಂದಳು.

“ಏನಿಲ್ಲೇ ಸಂಗವ್ವ ರಾತ್ರಿ ವಿಚಿತ್ರ ಕನಸು ಬೀಳ್ತಾವ. ಫಸ್ಟ್ ಫಸ್ಟಿಗಿ ತರಕಾರಿ ಮಾರೋದ ಹೆಂಗತ ಚಿಂತಿ ಆಗಿತ್ತು. ಈಗ ರೂಢಿ ಬಿದ್ದದ. ಥೋಡೆ ಕಾಲು ಕೈ ಎಳಿತವ ಖರೇ, ಅವೆ ದೊಡ್ಡದು ಮಾಡಕೊಂತ ಕುಂತ ಅಂದರ ಅಮ್ಮೀ ಮೊತಿ ಸಣ್ಣದ ಮಾಡ್ತಾಳ” ಅನ್ನುತ್ತಲೇ ಸುಮಯ್ಯ ಮೌನವಾದಳು.

“ರಾತ್ರಿಗಿ ಅಂತದೇನ ಕನಸು ಬೀಳ್ತಾವೆ ಸುಮ್ಮಿ?”

ಎದೆಯೊಳಗೆ ಮುಚ್ಚಿಟ್ಟುಕೊಂಡಿದ್ದ ಪುಟ್ಟದೊಂದು ನಿಟ್ಟುಸಿರು ಬಿಟ್ಟಳು ಸುಮ್ಮಿ. “ಈ ಹೀರೆಕಾಯಿ ಹಂಗ ಉದ್ದ ಬೆಳಿಲತಿನಿ ಆದರ ಜೀವ ಇಲ್ಲ ಅನಸಲತದ ಒಳಗ. ಬಾಜು ಮನಿ ಫಾತಿ ಅಂತಾಳ ಟಮೋಟ್ ಹಂಗ ಕೆಂಪು ಅದೀ ಅಂತ ಆದರ ಒಳಗ ಒಣಗಿ ಹೋಗಿನಿ ಅನಸಲತದ ಸಂಗವ್ವ. ನನ್ನ ವಯಸ್ಸಿನ ಗೆಳತ್ಯಾರ ಜೊತಿ ಆಟ ಆಡೋ ವಯಸ್ಸಾಗ ನಿನ್ನ ಹಂತಕಿ ಸಂಗಟ ಮಾತ ಆಡಕೊತ ಕುಂದರೋ ಟೈಮ್ ಬಂದದ ನೋಡು ಯವ್ವಾ ಅಂದಳು.

ಯಾಕೋ ತಟ್ಟನೆ ಇಬ್ಬರೂ ಮಾತು ಮುಂದು ವರೆಸುವ ಆಸಕ್ತಿ ತೋರಿಸಲಿಲ್ಲ. ಮನೆಮುಂದಿನ ಗಾರ್ಡನ್ನಿನಲ್ಲಿಟ್ಟಿದ್ದ ಪಂಜರದೊಳಗೆ ಬಣ್ಣ ಬಣ್ಣದ ಹಕ್ಕಿಗಳು ಆಡೋದು ನೋಡಿ ಹೊರಗಿಂದ ಸುಮ್ಮಿ ಕೈತಟ್ಟಿ ಸಂಭ್ರಮಿಸಿದಳು. ಆ ಪಂಜರದ ಪಕ್ಕದಲ್ಲಿದ್ದ ಕೆಂಪು ಗೋಡೆ ಮೇಲೆ ಹಸಿರು ಬಣ್ಣದ ಹಕ್ಕಿಯೊಂದು ತಲೆ ಮೇಲೆ ಕೂತಂತೆ ಫೋಟೋ ತೆಗೆಸಿಕೊಂಡಿದ್ದ ಪುಟ್ಟ ಹುಡುಗನ ಪಟ ನೋಡಿ,

“ಯಾರಿದು ಸಂಗವ್ವ?” ಅಂದಳು.

“ಇದು ನನ್ನ ಮೊಮ್ಮಗ ಆಕರ್ಷ, ಅವರಪ್ಪ ಏನೇನೋ ಮಾಡಿ ಹಕ್ಕಿ ಒಯ್ದು ಪಾರಂದ ತಲಿ ಮ್ಯಾಲ ಕುಂದರಸಿ ಹಂಗ ಫೋಟೋ ತೆಗದಾನ ನೋಡು” ಅಂದಳು ಸಂಗವ್ವ.

“ಚಂದ ಬಂದದ, ಮೊಮ್ಮಗ ಮಸ್ತ್ ಹನಾ ನೋಡ” ಎನ್ನುತ್ತಾ, ಬುಟ್ಟಿಯಲ್ಲಿ ಉಳಿದಿದ್ದ ಕೋತ್ತಂಬರಿಯನ್ನ ಸಂಗವ್ವ ಬೇಡ ಅಂದರು ಅವಳ ಕೈಗಿಟ್ಟು, ಗೇಟು ತೆಗೆದು ಹೊರಬಂದಳು.

ಸಣ್ಣ ಕನ್ನಡಿಯಲ್ಲಿ ತನ್ನ ಮುಖ ತಾನೇ ನೋಡಿಕೊಂಡದ್ದು ಬಿಟ್ಟರೆ ತನ್ನದು ಅಂತ ಒಂದು ಫೋಟೋ ಇಲ್ಲವಲ್ಲ ಎಂಬುವುದು ಅವಳಿಗೆ ಇವತ್ತು ನೆನಪಾಯ್ತು! “ಛೇ! ಇಷ್ಟು ದಿನ ಹೊಳೆಯಲೇ ಇಲ್ಲ. ನಂದೊಂದು ಪೋಟೋ ಆದ್ರು ತೆಗಸಿಕೊಂಡು ಬರಬೇಕು ಅಮ್ಮೀಗೆ ಹೇಳಿ. ಒಂದು ಹತ್ತು ರೂಪಾಯಿ ಹೆಚ್ಚಿಗಿ ಕೊಟ್ಟು ಅಂಥದೊಂದು ಹಕ್ಕಿ ನನ್ನ ತಲಿ ಮ್ಯಾಲನು ಕುಂದರಸ ಅಂತ ಹೇಳಬೇಕು ಫೋಟೋ ತೆಗಿಯೊನಿಗೆ ಅಂದುಕೊಳ್ಳುತ್ತಾ, ಬುಟ್ಟಿಯಲ್ಲಿ ಇನ್ನೂ ಸ್ವಲ್ಪ ಉಳಿದಿದ್ದ ತರಕಾರಿ ಕಡೆ ನೋಡದೆ ಊರ ಹಾದಿ ಹಿಡಿದಳು.

“ಅಮ್ಮಿದು ನಂದು ಒಂದು ಫೋಟೊಯಿಲ್ಲ. ನೆನಪಿಗರೆ ಮುಂದ ನೋಡಲಕ ಫೋಟೋ ಇರಬೇಕು. ಸಂಗವ್ವನ ಜೊತಿ ಇವತ್ತು ಕುಂತಿದು ಮಸ್ತ್ ಆಯ್ತು ಇಲ್ಲಂದ್ರ ತಲ್ಯಾಗೆ ಬರತಿರಲಿಲ್ಲ ಈ ವಿಚಾರ” ಅಂದುಕೊಳ್ಳುತ್ತಾ, ಊರು ಪ್ರವೇಶಿಸಿದಳು.

ಊರಿಗೆ ಕಾಲಿಟ್ಟ ಸುಮ್ಮಿಗೆ ತಲಿ ಮ್ಯಾಲಿನ ಬುಟ್ಟಿ ಇನ್ನೂ ತುಸು ಭಾರವಾಗೆ ಇರೋದು ಈಗ ಅರಿವಿಗೆ ಬಂತು. ಅಮ್ಮಿಗೆ ಇವತ್ತು ಯಾರೂ ಅಷ್ಟು ತೊಗೊಳಿಲ್ಲ ಅಂತ ಹೇಳಿದರೆ ಆಯ್ತೆಂದು ಧೈರ್ಯದಿಂದ ನಡೆದಳು. ಅವಳ ಮುಂದಿನಿಂದಲೇ ಠಣ್ ಅಂತ ಜಿಗಿದು ಕರಿ ಬೆಕ್ಕಿನ ಮರಿಯೊಂದು ಮಿಂಚಿಹೋಯ್ತು. ಅವಳು ತಲೆಗೆ ಬಿಗಿಯಾಗಿ ಕಟ್ಟಿಕೊಂಡಿದ್ದ ಸ್ಕಾರ್ಫ್ ಸಡಿಲವಾಗಿತ್ತು. ಕೊಳೆತ ಈರುಳ್ಳಿಯೊಂದರ ವಾಸನೆ ಬುಟ್ಟಿಯಿಂದ ಸೋರಿ ಅವಳ ಮೂಗಿಗೆ ಕಿರಿಕಿರಿ ಉಂಟುಮಾಡುತ್ತಿತ್ತು.

ಓಣಿ ತಿರುವಿಗೆ ಸುಮ್ಮಿಗಾಗಿ ಶತಮಾನದಿಂದ ಕಾಯುತ್ತಿರುವಂತೆ ಅವಳ ಗೆಳತಿ ಫಾತಿ ಯಾವುದೋ ಒಂದು ಗಾಢ ಚಿಂತೆಯಲ್ಲಿರುವಂತೆ ಕುಳಿತಿದ್ದವಳು, ಇವಳಿಗೆ ನೋಡಿ ತುಸು ನಿರಾಳವಾಗಿ ಬಂದು ಕೈಹಿಡಿದಳು. ಇಬ್ಬರೂ ಮನೆಯತ್ತ ಸಾಗಿದರು. ಅಂಗಳವೇರಿ ಒಳಬಂದ ಸುಮ್ಮಿಯ ಕಣ್ಣುಗಳ ಮುಂದೆ ಅಮ್ಮೀ ತೀರಾ ಸೊರಗಿ ಹೋದಂತೆ ಕಾಣುತ್ತಿದ್ದಳು. ಮುಂಜಾನೆ ಲವಲವಿಕೆಯಿಂದ ಓಡಾಡಿಕೊಂಡಿದ್ದ ಅಮ್ಮೀ ಹೀಗೆ ಗರಬಡಿದಂತೆ ಕೂರಲು ಕಾರಣವೇನಿರಬಹುದೆಂದು ಹುಡುಕುತ್ತಿದ್ದ ಸುಮ್ಮಿಗೆ ತಲೆಯೊಳಗಿದ್ದ ಫೋಟೋ ಕಲ್ಪನೆಗಳು ಫಳಾರನೆ ಒಡೆದುಹೋದವು.

ರಜಿಯಾ ಮಗಳ ಗಲ್ಲ ನೇವರಿಸುತ್ತ. ಒಳಮನೆಯಿಂದ ಕುಡಿಯಲು ನೀರು ತಂದುಕೊಟ್ಟಳು.

“ಮಗ ಹೆಂಗಾಯ್ತು ವ್ಯಾಪಾರ?”

“ಅಮ್ಮೀ, ಎಲ್ಲಾ ಹೆಂಗಸರದು ಒಂದೇ ಗೋಳು, ತರಕಾರಿ ಎಷ್ಟು ಫ್ರೆಶ್ ಒಯ್ದು ಕೊಟ್ಟರೂ ಫ್ರೆಶ್ ಇಲ್ಲಂತರಾ, ಅಷ್ಟೇನ ಉಳಿದಿಲ್ಲ ಬಿಡು ಬುಟ್ಯಾಗ, ದಿನ ಹೋಗೊಷ್ಟೆ ಹೊಗ್ಯಾದ” ಅಂದಳು.

ಸಪ್ಪಗೆ ಬಿದ್ದ ಅಮ್ಮೀ ಮುಖ ನೋಡಿ ಏನಾಗಿದೆ ಅನ್ನೋ ನೋಟ ಬೀರಿದಳು.

ರಜಿಯಾ ತುದಿ ಬೆರಳುಗಳಿಂದ ನೆಲ ಸವರುತ್ತ ಮಗಳ ಹಣಿ ಮೇಲೆ ಕೈಯಾಡಿಸುತ್ತ. “ನಿನಗಂತೂ ಸಾಲಿ ಮುಖ ತೋರಸೋದು ನನ್ನ ಕೈಯಲ್ಲಿಂದ ಆಗಲಿಲ್ಲ ಸುಮ್ಮು, ನಂದು ಕಾಲಂತೂ ಮುರದೆ ಹೊಗ್ಯಾದ, ಅದು ನೆಟ್ಟಗ ನಿಲ್ಲಬೇಕಂದರ ಎಷ್ಟು ದಿನ ಬೇಕೊ ಏನೋ…” ಅನ್ನುತ್ತಾ ರಜಿಯಾ ಮಾತು ತುಂಡರಸಿ ನಿಂತಳು.

ಹೇಳಲಾಗದ ಮಾತುಗಳು ಗಂಟಲೊಳಗೆ ನುಂಗಿಕೊಳ್ಳುತ್ತಿದ್ದ ರಜಿಯಾಗೆ ಆ ಮಾತುಗಳು ಹೊರಹಾಕುವುದು ಇಷ್ಟವಿರಲಿಲ್ಲ.

ಇದು ಕಂಡ ಸುಮ್ಮಿ ನಗುತ್ತಾ “ಅಮ್ಮೀ ಒಂದು ಮಾತು ಛೋಲೊಂದು ಇರ್ತದ, ಇನ್ನೊಂದು ಖರಾಬ್ ಇರ್ತಾದ, ಎರಡರಾಗವೊಂದು ಕೇಳಬೇಕೆ ಬಿಡು, ಹೇಳ ಏನ ಆಗಲ್ಲ ಅಂದಳು.

ಸುತ್ತ ಕಣ್ಣಾಡಿಸಿದ ರಜಿಯಾಳಿಗೆ, ಅಂಗಳದಲ್ಲಿ ದಟ್ಟ ಬಳ್ಳಿ ಹರಡಿಕೊಂಡು ನಿಂತ ಹೀರೆಕಾಯಿ ನೋಡಿ ನನ್ನ ಮಗಳು ಸಹ ಹೀಗೆ ಅಂಗಳದ ತುಂಬಾ ಆಡಿ ಬೆಳೆದವಳು, ಮೂಲೆಯಲ್ಲಿದ್ದ ಟಮೋಟಗಿಂತಲೂ ಕೆಂಪಿರುವವಳು, ಇದೊಂದು ವಸ್ತು ನನ್ನ ಕಡೆ ಉಳಿಬಹುದು ಅನ್ನಕೊಂಡಿದ್ದೆ ಅದು ಸಹ ಹೋಗುವ ಕಾಲ ದೂರವಿಲ್ಲ ಅಂದುಕೊಂಡಳು.

“ಸುಮ್ಮಿ, ಮೆಹಬೂಬ್ ನಗರದ ಹುಸೇನಿ ತಾತ ಬಂದಿದ್ರು. ಮಗಳ ಬೆಳದ ನಿಂತಾಳ. ನಿನ್ನ ಕಣ್ಣಿಗಿ ಸಣ್ಣಾಕಿನಿ ಇರಬೇಕು ಆದರ ಪ್ಯಾಟಿ ಮಂದಿ ಕಣ್ಣು ಛೋಲೊ ಇರಲ್ಲ. ಕಾಲ ಸೂಕ್ಷ್ಮ ಅದ. ನಿನ್ನ ತರಕಾರಿ ಮಾರೋ ಕಾಲಗ, ಕೈಯಾಗಿನ ವಜ್ರ ಕಳಕೊಬ್ಯಾಡ, ಪಟ್ಟಂತ ನಮ್ಮ ಸಂಬಂಧಿ ಹುಡುಗ ಒಂದದ ಅವರ ಕಡೆ ಸಂಬಂಧ ನೋಡೊಣ ಸುಮ್ಮಿಗಿ ಅಂದಾರ” ಅಂದಳು .

ಅಮ್ಮೀ ಮಾತು ಬೆಳೆಯುತ್ತಲೆ ಹೋಗುತಿತ್ತು. “ಕಾನೂನು ಅದು ಇದು ಅಡ್ಡ ಬರ್ತಾವ ನೀ ಇನ್ನೂ ಸಣ್ಣಕಿ ಅದಿ, ಈಗ ಫಿಕ್ಸ್ ಮಾಡಿ ಇಡೋಣ, ಮುಂದಿಂದ ಮುಂದ ನೋಡೊಣ”.

ತುದಿ ಮೊದಲಿಲ್ಲದ ಅಮ್ಮೀ ಮಾತು ಬೆಳೆಯುತ್ತಲೇ ಹೋಗುತ್ತಿತ್ತು.

ಸುಮಯ್ಯ ಗಂಭೀರವಾಗಿ ತಟ್ಟನೆ “ಅಮ್ಮೀ ನಾಳಿಗಿ ಪ್ಯಾಟಿಗಿ ಹೋಗಿ ಒಂದು ಫೋಟೋ ತೆಗಿಸೋಣವಾ? ಅಂದಳು.

ಕಪಿಲ ಪಿ ಹುಮನಾಬಾದೆ

ಕಪಿಲ ಪಿ ಹುಮನಾಬಾದೆ
ಯುವ ಬರಹಗಾರ ಕಪಿಲ ಪಿ ಹುಮನಾಬಾದೆ ಅವರು ಮೂಲತಃ ಬೀದರ್‌ನವರು. ಸದ್ಯ ಕಾವ್ಯಮನೆ ಪ್ರಕಾಶನ ಬಳ್ಳಾರಿ, ಮುಖ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಕಾದಂಬರಿ ಹಾಣಾದಿ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದೆ. ಈಗ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿದ್ಯಾರ್ಥಿ


ಇದನ್ನೂ ಓದಿ: ಇಬ್ಬರು ಹೆಣ್ಣುಗಳು : ಅಕ್ಷತಾ .ಕೆ ಅವರ ಕಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...