ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ, ಕೈಯಿಂದ ಎಳೆಯುವ ಬಂಡಿಗಳು/ರಿಕ್ಷಾಗಳ ಪದ್ಧತಿ ಮುಂದುವರೆದಿರುವುದನ್ನು ಖಂಡಿಸಿದ ಸುಪ್ರೀಂ ಕೋರ್ಟ್, “ಇದು ಅಮಾನವೀಯ, ರದ್ದುಗೊಳಿಸುವ ಅಗತ್ಯವಿದೆ” ಎಂದು ಬುಧವಾರ (ಆ.6) ಅಭಿಪ್ರಾಯಪಟ್ಟಿದೆ.
ಮಹಾರಾಷ್ಟ್ರದ ಮಥೆರಾನ್ ಬೆಟ್ಟದ ಪಟ್ಟಣದಲ್ಲಿ ಪ್ರಾಯೋಗಿಕ ಇ-ರಿಕ್ಷಾ ಯೋಜನೆಯ ಕುರಿತಾದ ಸಮಸ್ಯೆಗಳನ್ನು ಸಿಜೆಐ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠವು ಆಲಿಸಿತು.
ಸ್ವಾತಂತ್ರ್ಯ ಬಂದು 78 ವರ್ಷಗಳ ನಂತರವೂ ಕೈಯಿಂದ ಎಳೆಯುವ ಬಂಡಿಗಳ ಪದ್ಧತಿ ಮುಂದುವರೆದಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದ್ದು, ಇದು ವ್ಯಕ್ತಿಗಳ ಘನತೆಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಹೇಳಿದೆ.
ಜೀವನೋಪಾಯಕ್ಕಾಗಿ ಜನರು ಇಂತಹ ಅಮಾನವೀಯ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ ಎಂದು ನ್ಯಾಯಾಲಯ ತಿಳಿಸಿದೆ.
ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಮಾನವ ಘನತೆಯ ಮೂಲ ಪರಿಕಲ್ಪನೆಗೆ ವಿರುದ್ಧವಾದ ಇಂತಹ ಪದ್ಧತಿಗೆ ಅವಕಾಶ ನೀಡುವುದು, ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಸಾಂವಿಧಾನಿಕ ಭರವಸೆಗಳನ್ನು ಕುಂದಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಆಝಾದ್ ರಿಕ್ಷಾ ಪುಲ್ಲರ್ಸ್ ಯೂನಿಯನ್ (ನೋಂದಣಿ) ವರ್ಸಸ್ ಪಂಜಾಬ್ ರಾಜ್ಯ ಮತ್ತು ಇತರೆ ಪ್ರಕರಣದ ತೀರ್ಪನ್ನು ಪೀಠವು ಉಲ್ಲೇಖಿಸಿದ್ದು, ಕೈಯಿಂದ ಎಳೆಯುವ ರಿಕ್ಷಾಗೆ ಅನುಮತಿಸುವುದು ಸಾಮಾಜಿಕ ನ್ಯಾಯದ ಆಶಯಕ್ಕೆ ಹೊಂದಾಣಿಕೆಯಾಗುವುದಿಲ್ಲ ಎಂದಿದೆ.
“ಆಝಾದ್ ರಿಕ್ಷಾ ಪುಲ್ಲರ್ಸ್ ಯೂನಿಯನ್ ಪ್ರಕರಣದಲ್ಲಿ ಈ ನ್ಯಾಯಾಲಯವು ಅಭಿಪ್ರಾಯಗಳನ್ನು ತಿಳಿಸಿದ 45 ವರ್ಷಗಳ ನಂತರವೂ, ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಎಳೆಯುವ ಪದ್ಧತಿ ಮಥೆರಾನ್ ಪಟ್ಟಣದಲ್ಲಿ ಇನ್ನೂ ಪ್ರಚಲಿತದಲ್ಲಿದೆ ಎಂಬುದು ನಿಜಕ್ಕೂ ದುರದೃಷ್ಟಕರ” ಎಂದು ನ್ಯಾಯಾಲಯ ಹೇಳಿದೆ.
ಇಂದಿನ ಕಾಲದಲ್ಲೂ ಹಸ್ತಚಾಲಿತ ರಿಕ್ಷಾಗಳಿಗೆ ಅವಕಾಶ ನೀಡುವುದು ಭಾರತದ ಜನರು ತಮಗೆ ತಾವೆ ಅಳವಡಿಸಿಕೊಂಡಿರುವ ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಭರವಸೆಗೆ ದ್ರೋಹ ಬಗೆದಂತೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಸಂವಿಧಾನದ ವಿಧಿ 23ಕ್ಕೆ ವಿಸ್ತೃತ ವ್ಯಾಖ್ಯಾನ ಹೇಳಿದ ಪೀಪಲ್ ಆಫ್ ಇಂಡಿಯಾ ಫಾರ್ ಡೆಮಾಕ್ರಟಿಕ್ ರೈಟ್ಸ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದ ತೀರ್ಪನ್ನೂ ಕೂಡ ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ. ಈ ಪ್ರಕರಣವು 1982ರ ಏಷ್ಯನ್ ಕ್ರೀಡಾಕೂಟದ ನಿರ್ಮಾಣ ಯೋಜನೆಗಳ ಸಮಯದಲ್ಲಿ ಕಾರ್ಮಿಕ ಹಕ್ಕುಗಳ ಉಲ್ಲಂಘನೆಯ ವಿಷಯಕ್ಕೆ ಸಂಬಂಧಿಸಿದೆ. ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಕಾರ್ಮಿಕರಿಗೆ ಕನಿಷ್ಠ ವೇತನ ಪಾವತಿಸದಿರುವುದು ಬಲವಂತದ ದುಡಿಮೆಗೆ ಸಮಾನವಾಗಿದೆ ಎಂದು ಅಭಿಪ್ರಾಯಪಟ್ಟಿತ್ತು.
ಕೈಯಿಂದ ಎಳೆಯುವ ರಿಕ್ಷಾ ಪದ್ದತಿಯನ್ನು ನಿಷೇಧ ಮಾಡಿದರೆ ಜನರು ಜೀವನೋಪಾಯಕ್ಕೆ ಏನು ಮಾಡುವುದು ಎಂಬ ಪ್ರಶ್ನೆಗೂ ಸುಪ್ರೀಂ ಕೋರ್ಟ್ ಉತ್ತರ ಕೊಟ್ಟಿದ್ದು, ಇ-ರಿಕ್ಷಾ ಇದಕ್ಕೆ ಪರ್ಯಾಯ ವ್ಯವಸ್ಥೆಯಾಗಿದ್ದು, ಈ ಸಂಬಂಧ ಯೋಜನೆ ಜಾರಿಗೊಳಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದೆ.
ಮಥೆರಾನ್ ಪಟ್ಟಣದಲ್ಲಿರುವ ಕೈ ರಿಕ್ಷಾ ಎಳೆಯುವವರಿಗೆ ಪುನರ್ವಸತಿ ಕಲ್ಪಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ ಸುಪ್ರೀಂ ಕೋರ್ಟ್, ಗುಜರಾತ್ನ ಕೆವಾಡಿಯಾದಲ್ಲಿ ಇರುವಂತೆ ಇ-ರಿಕ್ಷಾ ನೀತಿಯನ್ನು ಅಳವಡಿಸಿಕೊಳ್ಳುಲು ಸೂಚಿಸಿದೆ. ಈ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಹಣದ ಕೊರತೆಯು ಅಡ್ಡಿಯಾಗಬಾರದು ಎಂದು ನ್ಯಾಯಾಲಯ ಎಚ್ಚರಿಸಿದೆ.
ಪರಿಸರದ ಕಾಳಜಿಯಿಂದಾಗಿ ಮಥೆರಾನ್ನಲ್ಲಿ ಪೆಟ್ರೋಲ್, ಡೀಸೆಲ್ ವಾಹನಗಳ ಸಂಚಾರಕ್ಕೆ ನಿಷೇಧವಿದೆ. ತುರ್ತು ಸಂದರ್ಭಗಳಲ್ಲಿ ಅಗ್ನಿಶಾಮಕ ವಾಹನ ಮತ್ತು ಆಂಬ್ಯುಲೆನ್ಸ್ಗಳು ಮಾತ್ರ ಪಟ್ಟಣಕ್ಕೆ ಪ್ರವೇಶಿಸಬಹುದಾಗಿದೆ.
ಗಮನಾರ್ಹವಾಗಿ, ಫೆಬ್ರವರಿಯಲ್ಲಿ, ಪಾದಚಾರಿ ಬೆಟ್ಟದ ಪಟ್ಟಣವಾದ ಮಥೆರಾನ್ನಲ್ಲಿ ಮೂಲ ಕೈಗಾಡಿ ಎಳೆಯುವವರಿಗೆ 20 ಇ-ರಿಕ್ಷಾ ಪರವಾನಗಿಗಳನ್ನು ನೀಡುವ ಪ್ರಕ್ರಿಯೆಯನ್ನು ಮರುಪರಿಶೀಲಿಸುವ ಪ್ರಸ್ತಾವನೆಯನ್ನು ಸಲ್ಲಿಸಲು ನ್ಯಾಯಾಲಯವು ಮಹಾರಾಷ್ಟ್ರ ರಾಜ್ಯಕ್ಕೆ 2 ವಾರಗಳ ಕಾಲಾವಕಾಶ ನೀಡಿತ್ತು.
ನ್ಯಾಯಾಲಯವು ಈ ಕೆಳಗಿನ ನಿರ್ದೇಶನಗಳನ್ನು ಸಹ ನೀಡಿದೆ:
(1) ದಸ್ತೂರಿ ನಾಕಾ (ಬಸ್ ನಿಲ್ದಾಣ) ದಿಂದ ಮಥೆರಾನ್ನಲ್ಲಿರುವ ಶಿವಾಜಿ ಪ್ರತಿಮೆಯವರೆಗೆ ರಾಜ್ಯ ಸರ್ಕಾರ ಪೇವರ್ ಬ್ಲಾಕ್ಗಳನ್ನು ಹಾಕಬಹುದು.
(2) ಆಂತರಿಕ ರಸ್ತೆ ಮತ್ತು ವ್ಯಾಪಾರ ಮಾರ್ಗಗಳಲ್ಲಿ ಯಾವುದೇ ಪೇವರ್ ಬ್ಲಾಕ್ಗಳನ್ನು ಹಾಕಬಾರದು.
(3) ಇಂದಿನಿಂದ (ಆ.6) 6 ತಿಂಗಳ ಅವಧಿಯಲ್ಲಿ ಕೈಯಿಂದ ಎಳೆಯುವ ರಿಕ್ಷಾಗಳ ಪದ್ದತಿಯನ್ನು ಹಂತ ಹಂತವಾಗಿ ನಿಲ್ಲಿಸಬೇಕು.
(4) ಮಹಾರಾಷ್ಟ್ರ ಸರ್ಕಾರ ಗುಜರಾತ್ನ ಕೆವಾಡಿಯಾದಲ್ಲಿರುವಂತೆ ಇ-ರಿಕ್ಷಾಗಳನ್ನು ಖರೀದಿಸಿ ನಿಜವಾದ ರಿಕ್ಷಾ ಎಳೆಯುವವರಿಗೆ ಬಾಡಿಗೆ ಆಧಾರದ ಮೇಲೆ ನೀಡುವ ಯೋಜನೆಯಂತೆ ಒಂದು ಯೋಜನೆಯನ್ನು ರೂಪಿಸಬೇಕು.
(5) ನಿಜವಾದ ರಿಕ್ಷಾ ಚಾಲಕರನ್ನು ಗುರುತಿಸಲು ಪರಿಸರ ಸೂಕ್ಷ್ಮ ವಲಯದ ಅಡಿಯಲ್ಲಿ ರಚಿಸಲಾದ ಮಥೆರಾನ್ ಕಲೆಕ್ಟರ್ ಅಧ್ಯಕ್ಷತೆಯ ಮಥೆರಾನ್ ಮೇಲ್ವಿಚಾರಣಾ ಸಮಿತಿ ಮೂಲಭೂತ ವಾಸ್ತವಗಳನ್ನು ಪರಿಗಣಿಸಿದ ನಂತರ ಅಗತ್ಯವಿರುವ ಇ-ರಿಕ್ಷಾಗಳ ಸಂಖ್ಯೆಯನ್ನು ನಿರ್ಧರಿಸಬೇಕು.
(6) ಉಳಿದ ಇ-ರಿಕ್ಷಾಗಳನ್ನು ಬುಡಕಟ್ಟು ಮಹಿಳೆಯರು ಮತ್ತು ಮಥೆರಾನ್ನ ಇತರ ವ್ಯಕ್ತಿಗಳಿಗೆ ಹಂಚಿಕೆ ಮಾಡುವುದರಿಂದ ಅವರ ಜೀವನೋಪಾಯ ಸ್ಥಿರವಾಗಿರುತ್ತದೆ.
(7) ಈಗಾಗಲೇ ಹಾಕಿರುವ ಕಾಂಕ್ರೀಟ್ ಬ್ಲಾಕ್ಗಳನ್ನು ಪೇವರ್ ಬ್ಲಾಕ್ಗಳಿಗೆ ಬದಲಾಯಿಸಬೇಕು.


