ಥೆನ್ಪೆನ್ನೈ ನದಿಯ ಮಾರ್ಕಂಡೇಯ ಉಪನದಿಗೆ ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಪ್ರಯತ್ನಗಳನ್ನು ತಡೆಹಿಡಿಯಬೇಕೆಂದು ಕೋರಿದ್ದ ತಮಿಳುನಾಡು ಸರ್ಕಾರದ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ..
ಥೆನ್ಪೆನ್ನೈ ನದಿ ಅಥವಾ ದಕ್ಷಿಣ ಪೆನ್ನಾರ್ ನದಿ ಕರ್ನಾಟಕದಲ್ಲಿ ಹುಟ್ಟಿ ಕೃಷ್ಣಗಿರಿ, ತಿರುವಣ್ಣಾಮಲೈ, ವಿಲ್ಲುಪುರಂ ಮತ್ತು ತಮಿಳುನಾಡಿನ ಕಡಲೂರು ಜಿಲ್ಲೆಗಳ ಮೂಲಕ ಹರಿದು ಬಂಗಾಳಕೊಲ್ಲಿ ಸೇರುತ್ತದೆ.
ಮಾರ್ಕಂಡೇಯ ನದಿಯು ಥೆನ್ಪೆನ್ನೈ ನದಿಯ ಉಪನದಿಯಾಗಿದ್ದು, ಇದು ತಮಿಳುನಾಡಿನೊಳಗೆ ಸುಮಾರು 30 ಕಿಲೋಮೀಟರ್ ಪ್ರಯಾಣಿಸಿದ ನಂತರ ಕೃಷ್ಣಗಿರಿ ಜಲಾಶಯದ ಬಳಿ ಮುಖ್ಯ ನದಿಯನ್ನು ಸೇರುತ್ತದೆ.
ಥೆನ್ಪೆನ್ನೈ ನೀರನ್ನು ಬಳಸುವಲ್ಲಿ ರಾಜ್ಯಗಳ ಹಕ್ಕುಗಳನ್ನು ತಮಿಳುನಾಡು ಮತ್ತು ಕರ್ನಾಟಕದ ಹಿಂದಿನ ರಾಜ್ಯಗಳಾದ ಮದ್ರಾಸ್ ರಾಜ್ಯ ಮತ್ತು ಮೈಸೂರು ನಡುವೆ 1892 ರಲ್ಲಿ ಮಾಡಿಕೊಂಡ ಒಪ್ಪಂದದಲ್ಲಿ ನೋಡಬಹುದಾಗಿದೆ. ಈ ಒಪ್ಪಂದವನ್ನು 1933 ರಲ್ಲಿ ಮಾರ್ಪಡಿಸಲಾಗಿದೆ.
ಮಾಲೂರು, ಕೋಲಾರ ಮತ್ತು ಬಂಗಾರಪೇಟೆ ಪಟ್ಟಣಗಳು ಮತ್ತು ನದಿಯ ಹಾದಿಯಲ್ಲಿರುವ 45 ಹಳ್ಳಿಗಳ ಕುಡಿಯುವ ನೀರಿನ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಮಾರ್ಕಂಡೇಯ ನದಿಗೆ ಅಡ್ಡಲಾಗಿ 500 Mcft ಶೇಖರಣಾ ಸಾಮರ್ಥ್ಯದ ಅಣೆಕಟ್ಟು ನಿರ್ಮಿಸುತ್ತಿದೆ.

ಬಂಗಾರಪೇಟೆ ತಾಲ್ಲೂಕಿನ ಯಾರ್ಗೋಲ್ ಗ್ರಾಮದ ಸಮೀಪವಿರುವ ಮಾರ್ಕಂಡೇಯ ಅಣೆಕಟ್ಟು ಯೋಜನೆಗೆ 2007 ರಲ್ಲಿ 240 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಅನುಮೋದನೆ ನೀಡಲಾಯಿತು. 240 ಕೋಟಿ ರೂ.ಗಳಲ್ಲಿ 160 ಕೋಟಿ ರೂ.ಗಳನ್ನು ಕರ್ನಾಟಕ ಸರ್ಕಾರದಿಂದ ಮತ್ತು 79.92 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದಿಂದ ನೀಡಬೇಕಿದೆ.
ಕರ್ನಾಟಕ ಸರ್ಕಾರವು 2013ರಲ್ಲಿ ಅಣೆಕಟ್ಟಿನ ನಿರ್ಮಾಣವನ್ನು ಪ್ರಾರಂಭಿಸಿದ್ದು 75-80% ಪೂರ್ಣಗೊಂಡಿದೆ ಎಂದು ಕರ್ನಾಟಕ ಸರ್ಕಾರದ ವಕೀಲರು ಸಲ್ಲಿಸಿದ ಅಫಿಡವಿಟ್ನಲ್ಲಿ ತಿಳಿಸಲಾಗಿದೆ.
ತಮಿಳುನಾಡು ಮತ್ತು ಕರ್ನಾಟಕದ ನಡುವಿನ ವಿವಾದ
ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣವು ತಮಿಳುನಾಡಿಗೆ ನೀರಿನ ಹರಿವನ್ನು ನಿಲ್ಲಿಸುತ್ತದೆ, ಇದರಿಂದಾಗಿ ಕೃಷ್ಣಗಿರಿ, ಧರ್ಮಪುರಿ, ತಿರುವಣ್ಣಾಮಲೈ, ವಿಲ್ಲುಪುರಂ ಮತ್ತು ಕಡಲೂರಿನಲ್ಲಿ ವಾಸಿಸುವ ರೈತರ ಜೀವನೋಪಾಯಕ್ಕೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದು ತಮಿಳುನಾಡು ಸರ್ಕಾರ ಆರೋಪಿಸಿದೆ.
1892 ರ ಒಪ್ಪಂದದ ಷರತ್ತುಗಳ ಪ್ರಕಾರ ಕರ್ನಾಟಕವು ತಮಿಳುನಾಡಿನ ಒಪ್ಪಿಗೆಯಿಲ್ಲದೆ ಯಾವುದೇ ಹೊಸ ನೀರಾವರಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕಾಗಿಲ್ಲ ಎಂದು ತಮಿಳುನಾಡಿನ ವಕೀಲರು ಹೇಳಿದ್ದಾರೆ.
ಏತನ್ಮಧ್ಯೆ, ಕರ್ನಾಟಕ ಸರ್ಕಾರವು 1892 ಮತ್ತು 1933 ರ ಎರಡೂ ಒಪ್ಪಂದಗಳ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ವಾದಿಸಿತು. ಯಾವುದೇ ನೀರಾವರಿ ಅಥವಾ ಇನ್ನಿತರ ವಾಣಿಜ್ಯ ಉದ್ದೇಶಗಳಿಗಾಗಿ ಅಣೆಕಟ್ಟು ನಿರ್ಮಾಣಕ್ಕೆ ಮಾತ್ರ ಮದ್ರಾಸ್ ಸರ್ಕಾರದ ಒಪ್ಪಿಗೆ ಪಡೆಯಬೇಕಾಗಿದೆ. ಒಪ್ಪಂದದ ಪ್ರಕಾರ, ನಾವು ಕುಡಿಯುವ ನೀರು ಸರಬರಾಜುಗಾಗಿ ಅಣೆಕಟ್ಟು ನಿರ್ಮಿಸುತ್ತಿರುವುದರಿಂದ ತಮಿಳುನಾಡಿನಿಂದ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ ಎಂದು ವಾದಿಸಿದರು.
ಈ ನದಿಯ 75% ನಷ್ಟು ನದಿ ಜಲಾನಯನ ಪ್ರದೇಶ ತಮಿಳುನಾಡಿನಲ್ಲಿದೆ ಆದ್ದರಿಂದ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟುವುದರಿಂದ ತಮಿಳುನಾಡಿನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕರ್ನಾಟಕದ ವಕೀಲರು ವಾದಿ ಮಂಡಿಸಿದರು.
ಈ ಮಧ್ಯೆ, ಎರಡೂ ರಾಜ್ಯ ಸರ್ಕಾರಗಳು ಈ ಸಮಸ್ಯೆಯನ್ನು ಬಗೆಹರಿಸಲು ಅಂತರಾಜ್ಯ ಜಲ ವಿವಾದ ನ್ಯಾಯಮಂಡಳಿ ಸ್ಥಾಪಿಸಲು ಕೇಂದ್ರ ಬಳಿ ಕೋರಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಸುಪ್ರೀಂ ಕೋರ್ಟ್ ಆದೇಶ
ಕೆಲವು ವರ್ಷಗಳಿಂದ ನಿರ್ಮಾಣ ಕಾರ್ಯಗಳು ನಡೆಯುತ್ತಿರುವುದರಿಂದ ಮತ್ತು ಯೋಜನೆಯು ಸುಮಾರು 75% ಪೂರ್ಣಗೊಂಡಿರುವುದರಿಂದ ಜೊತೆಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಅನುಮತಿ ಪಡೆದಿರುವುದರಿಂದ ನ್ಯಾಯಾಲಯವು ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಯೋಜನೆಯ 2007ರ ಅನುಮೋದನೆ ಹಂತದಿಂದಲೂ ಮತ್ತು 2013 ರಲ್ಲಿ ನಿರ್ಮಾಣವನ್ನು ಪ್ರಾರಂಭಿಸಿದಾಗಿನಿಂದಲೂ ನಡೆಯುತ್ತಿದೆ. ಅಲ್ಲದೇ ಈ ವಿಚಾರದಲ್ಲಿ ಅಂತರಾಜ್ಯ ಜಲ ವಿವಾದ ನ್ಯಾಯಮಂಡಳಿ ಸ್ಥಾಪಿಸಲು ಕೇಂದ್ರ ಬಳಿ ಎರಡೂ ರಾಜ್ಯಗಳು ಕೋರಿಲ್ಲವಾದ್ದರಿಂದ ನ್ಯಾಯಾಲಯವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣಕ್ಕೆ ಅವಕಾಶ ನೀಡುವುದನ್ನು ಬಿಟ್ಟು ಬೇರೆ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದಿದೆ. ಆದರೆ, ಆದೇಶ ನೀಡಿದ ನಾಲ್ಕು ವಾರಗಳಲ್ಲಿ ಮಧ್ಯಪ್ರವೇಶಿಸಿ ಅಂತರರಾಜ್ಯ ನದಿ ನೀರಿನ ವಿವಾದ ನ್ಯಾಯಮಂಡಳಿ ಸ್ಥಾಪಿಸುವಂತೆ ತಮಿಳುನಾಡು ಕೇಂದ್ರ ಸರ್ಕಾರವನ್ನು ಕೋರಬಹುದು ಎಂದಿದೆ.
ಆಧಾರ: ದಿ ನ್ಯೂಸ್ ಮಿನಿಟ್


