Homeನ್ಯಾಯ ಪಥಮೂರು ಡೇಟಾ ಮತ್ತು ಒಂದು ಖರೇ ಜನ್ಮಸ್ಥಾನ : ಬೈ ಡೇಟಾಮ್ಯಾಟಿಕ್ಸ್

ಮೂರು ಡೇಟಾ ಮತ್ತು ಒಂದು ಖರೇ ಜನ್ಮಸ್ಥಾನ : ಬೈ ಡೇಟಾಮ್ಯಾಟಿಕ್ಸ್

- Advertisement -
- Advertisement -

‘ಒಂದು ಸಣ್ಣ ಪಕ್ಷಿಯ ಸಾವು ನಿನ್ನನ್ನು ಕವಿಯಾಗಿಸಿದೆ. ನಿನ್ನ ಕಾವ್ಯ ಕಾಲವನ್ನು ಸೋಲಿಸಲಿದೆ’ ಅಂತ ಬ್ರಹ್ಮ ವಾಲ್ಮೀಕಿಗೆ ಹೇಳಿದ. ಆ ಕಾವ್ಯವೇ ರಾಮಾಯಣ. ಅದರಲ್ಲಿ ರಾಜನ, ರಾಜಕುಮಾರನ, ಅವನ ಭಕ್ತನ, ರಾಜಕುಮಾರಿಯ, ಪ್ರತಿನಾಯಕನ, ಖಳನ, ಅವರೆಲ್ಲರ ಹಿಂಬಾಲಕರ ಕತಿ ಅದ.

ಆ ಕತಿ ಅತ್ಲಾ ಕಡೆ ಇರಲಿ. ಇತ್ತೀಚಿನ ಸರ್ವೋಚ್ಚ ನ್ಯಾಯಾಲಯದ ಒಂದು ತೀರ್ಪಿನೊಳಗ ಉಪಯೋಗಿಸಿದ ಕೆಲವು ಪದಗಳ ಈಗ ನೋಡೋಣ.

ಪೊಸೆಷನ್ – ಅನುಭೋಗ, ಸ್ವಾಧೀನ, ಹಿಡುವಳಿ
ಹಿಡುವಳಿ ಅಂದರ ಮಾಲಿಕತ್ವ ಅಲ್ಲ. ಅದು ಸದ್ಯದ ಮಟ್ಟಿಗೆ ಆಸ್ತಿ ಯಾರ ಕೈಯಾಗ ಅದ ಅನ್ನೋ ಪ್ರಶ್ನೆಗೆ ಉತ್ತರ. ಇದು ಸಂಪೂರ್ಣ ಮಾಲಿಕಿ ಹಕ್ಕು ಕೊಡೋದಿಲ್ಲ. ಇದರ ಹಕ್ಕುಗಳಿಗೆ ಮಿತಿ ಅದ. ನೀವು ಸ್ವಾಧೀನ ಪಡೆಯುವಾಗ ಇದ್ದಂಗ ಅದು ಇರಬೇಕು. ಅದನ್ನು ನೀವು ಮಾರಲಿಕ್ಕೆ ಬರೋದಿಲ್ಲ, ಲೀಸು, ಬಾಡಿಗಿ ಕೊಡಲಿಕ್ಕೆ ಬರೋದಿಲ್ಲ. ಅದರ ಮೂಲ ಸ್ವರೂಪ ಬದಲಾಯಿಸಲಿಕ್ಕೆ ಬರೋದಿಲ್ಲ, ಇತ್ಯಾದಿ. ಸ್ವಾಧೀನ ಇದ್ದವರು ಬಿಟ್ಟು ಬೇರೆಯವರು ಅದನ್ನು ಕೆಡವಲಿಕ್ಕೆ, ನಾಶ ಮಾಡಲಿಕ್ಕೆ ಬರೋದಿಲ್ಲ.

ಪೊಸೆಷನ್ ಈಸ್ ನೈನ್ ಪಾಯಿಂಟ್ಸ್ ಇನ್ ಲಾ’ ಅಂತ ಒಂದು ಮಾತು ಅದ. ಅಂದರ ಆಸ್ತಿ ಯಾರಿಗೆ ಹೋಗಬೇಕು ಅನ್ನೋ ಮಾತು ಬಂದಾಗ ಸ್ವಾಧೀನ ಇದ್ದವರ ಕಡೆ ಹತ್ತರಲ್ಲಿ ಒಂಬತ್ತು ಅಂಶ ಇದ್ದಂಗ ಅಂತ ಅದರ ಅರ್ಥ.

ಆದರ ನಮ್ಮ ಗೌರವಾನ್ವಿತ ನ್ಯಾಯಾಧೀಶರು ಈ ಸಮುದಾಯ ಈ ಕಟ್ಟಡವನ್ನು ಐನೂರು ವರ್ಷದಿಂದ ಸ್ವಾಧೀನ ಪಡೆದಿದೆ ಅಂತ ಹೇಳಿ, ಅದನ್ನು ಕೆಡವಿದ್ದು ತಪ್ಪು ಅಂತ ಒಂದು ಕಡೆ ಹೇಳತಾರ. ಇನ್ನೊಂದು ಕಡೆ ಕೆಡವಿದರಿಗೆ ಈ ಜಾಗದ ಮಾಲಿಕತ್ವ ಹೋಗಬೇಕು ಅಂತ ಹೇಳತಾರ. ಅದು ಅವರಿಗೆ ಆಭಾಸ ಅನ್ನಿಸಿಲ್ಲ.

ಓನರಷಿಪ್ – ಒಡೆತನ, ಅಥವಾ ಮಾಲೀಕತ್ವ
ಇದು ಮಾಲೀಕ ಹಾಗೂ ವಸ್ತು ವಿಷಯದ ನಡುವಿನ ಸಂಬಂಧ. ಇದರ ಪ್ರಕಾರ ಮಾಲೀಕನಿಗೆ ಅದರ ಮೇಲೆ ಸಂಪೂರ್ಣ ಹಕ್ಕು ಇರತಾವ. ಅವನು ಅದನ್ನ ಮಾರಬಹುದು, ಲೀಸಿಗೆ ಕೊಡಬಹುದು, ಅದನ್ನು ಸುಟ್ಟು ಹಾಕಿಯೋ, ನೀರಿನಲ್ಲಿ ಹಾಕಿಯೋ ನಾಶ ಮಾಡಬಹುದು. ಅದನ್ನ ಕೆಡವಿ ಕಟ್ಟಬಹುದು. ಕೆಡವಿ ಕಟ್ಟಲಾರದೇ ಇರಬಹುದು. ಅದರ ಸ್ವರೂಪ ಬದಲಿಸಬಹುದು. ಅದನ್ನು ಇಲ್ಲಾ ಅನ್ನಿಸಿ ಬಿಡಬಹುದು. ಅವನ ಹಕ್ಕುಗಳಿಗೆ ಮಿತಿ ಇಲ್ಲ. ಅಯೋಧ್ಯಾ ಕೇಸಿನಲ್ಲಿ ನ್ಯಾಯಾಲಯದ ಮುಂದೆ ಇದ್ದದ್ದು ಮಾಲೀಕತ್ವದ ಪ್ರಶ್ನೆ ಅಷ್ಟ. ಅದರ ಮಾಲೀಕರು ಯಾರು ಅನ್ನೋದು ಗೊತ್ತಾದರ ಹೇಳಬೇಕಿತ್ತು. ಇಲ್ಲಾಂದರ ಇಲ್ಲಾ ಅನ್ನಬೇಕಿತ್ತು. ಅದನ್ನು ಬಿಟ್ಟು

ಅಲ್ಲಿ ಗುಡಿ ಕಟ್ಟಬಹುದು, ಆ ಮಸೀದಿ ಕೆಡವಿದ್ದು ತಪ್ಪು. ಅದು ನಮ್ಮ ಜಾಗ ಅಂತ ಕೇಳತಾ ಇರೋ ನಮಾಜಿಗರಿಗೆ ಅದರ ಡಬಲ್ ಜಾಗ ಕೊಟ್ಟು ಬಿಡಿ ಅಂತ ಹೇಳುವ ಹರಕತ್ತು ಇದ್ದಿದ್ದಿಲ್ಲ. ಇದು ತನ್ನಳವಿಗೆ ಮೀರಿದ ತೀರ್ಪು ಅಂತ ಅದನ್ನು ಕೊಟ್ಟವರಿಗೆ ಅನ್ನಿಸಿಲ್ಲ.

ಬ್ಯಾಲೆನ್ಸ ಆಫ್ ಪ್ರಾಬೆಬಿಲಿಟಿಸ್ – ಸಾಧ್ಯಾಸಾಧ್ಯತೆಗಳ ಸಮತೋಲನ
ಇದು ಅತ್ಯಂತ ಮಜಾಶೀರ ಇರೋ ವಿಷಯ. ಅನೇಕ ವರ್ಷದ ಹಿಂದ ಆಸ್ಟೇಲಿಯಾದೊಳಗ ಬ್ರೂಕ್ಸ ಅನ್ನೋ ಹೆಣಮಗಳ ಗಂಡ ರಸ್ತೆ ಅಪಘಾತದೊಳಗ ತೀರಿಕೊಂಡ. ಅವನು ಆ ಗಾಡಿಯ ಚಾಲಕ. ಅವನಲ್ಲದೇ ಆ ಗಾಡಿಗೆ ಇನ್ನೊಬ್ಬ ಚಾಲಕ ಇದ್ದ. ಅವರಿಬ್ಬರೂ ಸತ್ತು ಹೋದರು. ಅಲ್ಲಿ ಸಾಕ್ಷಿ ಇರಲಿಲ್ಲ. ರಸ್ತೆ ಸೀದಾ ಇತ್ತು. ಅಲ್ಲಿ ಇನ್ನೊಂದು ಗಾಡಿ ಇರಲಿಲ್ಲ. ಹೀಗಿದ್ದಾಗ ತಪ್ಪು ಯಾವ ಚಾಲಕಂದು ಅಂತ ತಿಳಕೊಳ್ಳೋದು ಅಲ್ಲಿನ ನ್ಯಾಯಾಲಯಕ್ಕ ಕಷ್ಟ ಆತು. ಕೊನೆಗೆ ಜಜ್ಜುಗಳೆಲ್ಲಾ ಸೇರಿ ಒಬ್ಬ ಗಣಿತ ತಜ್ಞನ ಕಡೆ ಹೋದರು. ಅವನು ಸಾಧ್ಯಾಸಾಧ್ಯತೆಗಳ ಸಮತೋಲನ ಅನ್ನೋ ಸಂಕಲನ ಬಳಸಿ ಅವರಿಗೆ ವೆನ್ ಡಯಾಗ್ರಾಮು ಹಾಕಿ ತೋರಿಸಿದ.

ಅದರ ಪ್ರಕಾರ ಸಾಕ್ಷಿಗಳು ಕಮ್ಮಿ ಇದ್ದಾಗ, ಲಭ್ಯ ಸಾಕ್ಷಿಗಳಿಂದ ಯಾವುದೇ ವಿಷಯವನ್ನು ನಿಸ್ಸಂದೇಹವಾಗಿ ಪ್ರಮಾಣಿಸಿ ತೋರಿಸಿಲಿಕ್ಕೆ ಸಾಧ್ಯವಾಗದೇ ಇದ್ದಾಗ, ಇದು ಹೀಗಾಗುವ ಸಾಧ್ಯತೆ ಹೆಚ್ಚು, ಹಾಗಾಗುವ ಸಾಧ್ಯತೆ ಕಮ್ಮಿ ಅಂತ ನ್ಯಾಯಾಧೀಶರಿಗೆ ಅನ್ನಿಸಬಹುದು. ಹೀಗೆ ಅವರಿಗೆ ಅನ್ನಿಸುವುದ ಆಧಾರದ ಮೇಲೆ ಅವರು ತೀರ್ಪು ಕೊಡಬಹುದು. ಈಗಾಗಿರೋದು ಹಿಂಗನ. ಈ ತೀರ್ಪು ಸಮಾಜದಲ್ಲಿ ಸಮತೋಲನ ತಂದೀತು ಅಂತ ಭಾಳ ಮಂದಿಗೆ ಅನ್ನಿಸಿದ್ದಕ್ಕ ಎಲ್ಲಾರೂ ಸುಮ್ಮನಿದ್ದಾರ. ಆ ಸಮತೋಲನ ಶಾಂತಿ ಸುವ್ಯವಸ್ಥೆಯ ಸಮತೋಲನವೋ ಅಥವಾ ಸತ್ಯಾಸತ್ಯತೆಯ ಸಮತೋಲನವೋ ಅನ್ನೋ ಪ್ರಶ್ನೆಗೆ ಯಾರ ಹತ್ತರಾನೂ ಉತ್ತರ ಇದ್ದಂಗಿಲ್ಲ.

ಹಿಂದೊಮ್ಮೆ ಸಾಯಿಬಾಬಾ ಅವರ ಭೇಟಿಗೆ ಲಾಲಕೃಷ್ಣ ಅದವಾನಿ ಹಾಗೂ ಕೆಲವು ಇತರ ಮುಖಂಡರು ಪುಟಪರ್ತಿಗೆ ಹೋಗಿದ್ದರಂತ. ಆಗ ಅವರು ಇವರನ್ನ ಕೇಳಿದರಂತೆ. ರಾಮನ ಜನ್ಮಸ್ಥಾನ ಯಾವುದು? ಅಲ್ಲಿದ್ದ ದೊಡ್ಡ ದೊಡ್ಡ ನಾಯಕರೆಲ್ಲಾ ಅಯೋಧ್ಯೆ, ಕೌಸಲ, ರಾಮಜನ್ಮಭೂಮಿ ಅಂತೆಲ್ಲಾ ಹೇಳಿದರಂತ. ಯಾವಾಗಲೂ ಹಸನ್ಮುಖಿಯಾಗಿದ್ದ ಸಾಯಿಬಾಬಾ ಅವರು ಅದೆಲ್ಲಾ ಅಲ್ಲಾ. ಅವನು ಹುಟ್ಟಿದ್ದು ಅವನ ತಾಯಿಯ ಗರ್ಭದಿಂದ ಅಲ್ಲವೇ. ಹಂಗಾದರೆ ಅದೇ ಅವನ ಜನ್ಮಸ್ಥಳ ಅಂತ ಹೇಳಿ ನಕ್ಕರಂತೆ. ಹೌದು ಮಹಾಸ್ವಾಮಿ ಅಂತ ಹೇಳಿ ಇವರೆಲ್ಲಾ ನಕ್ಕು ಸುಮ್ಮನಾದರಂತೆ.

ದೊಡ್ಡವರ ಮಾತುಗಳನ್ನು ಕೇಳದೇ ಇದ್ದದ್ದಕ್ಕ ನಾವು ಇವತ್ತು ಈ ದಿನ ಕಾಣುತ್ತಿದ್ದೇವೆ ಅಂತ ಅನಸತದ.

ಹೆಚ್ಚಿನ ಮಾಹಿತಿಗೆ https://www.sci.gov.in/pdf/JUD_2.pdf

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಮೋದಿ ಸರ್ಕಾರಕ್ಕೆ ಸ್ವಲ್ಪವೂ ಸಹಾನುಭೂತಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

0
ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...