Homeಚಳವಳಿ144 ಸೆಕ್ಷನ್‌ ಯಾವಾಗ ಹಾಕಬಹುದು? ಯಾವಾಗ ಹಾಕಬಾರದು ನಿಮಗೆ ಗೊತ್ತೆ?

144 ಸೆಕ್ಷನ್‌ ಯಾವಾಗ ಹಾಕಬಹುದು? ಯಾವಾಗ ಹಾಕಬಾರದು ನಿಮಗೆ ಗೊತ್ತೆ?

- Advertisement -
- Advertisement -

ನಮ್ಮ ದೇಶದಾಗ ಎಲ್ಲಾರಿಗೂ ಗೊತ್ತಿರುವ ಮೂರು ಕಾಯಿದೆ ಅಂದರ ಐಪಿಸಿ 420 ಮತ್ತು 302 ಹಾಗೂ ಸಿಆರ್‍ಪಿಸಿ 144.

420 ಅಂದರ ಭಾರತೀಯ ಅಪರಾಧ ಸಂಹಿತೆಯ ಪ್ರಕಾರ ಮೋಸದ’ ವ್ಯಾಖ್ಯಾನ. ಯಾವದಾದರೂ ವ್ಯಕ್ತಿ ಇನ್ನೊಬ್ಬನಿಗೆ ನಂಬಿಕೆ ದ್ರೋಹ ಮಾಡಿ, ಆ ಮೂಲಕ ಒಂದು ವಸ್ತುವನ್ನು ಬಿಟ್ಟುಕೊಡುವಂತೆ ಅಥವಾ ಯಾರಿಗಾದರೂ ಕೊಡುವಂತೆ ಮಾಡಿದರೆ ಅಥವಾ ಪ್ರಮುಖ ದಸ್ತಾವೇಜೊಂದನ್ನು ಸೃಷ್ಟಿಸಿ, ಬದಲಿಸಿ ಅಥವಾ ನಾಶ ಮಾಡಲು ಪ್ರಯತ್ನಿಸುವಂತೆ ಮಾಡಿದರೆ ಅಥವಾ ಯಾವುದಾದರೂ ಒಂದು ಸಹಿ ಮಾಡಿ, ಸೀಲು ಹಾಕಲಾದ ದಾಖಲೆಯೊಂದನ್ನು ದಸ್ತಾವೇಜನ್ನಾಗಿ ಪರಿವರ್ತಿಸಲು ಪ್ರಯತ್ನಿಸಿದರೆ, ಅವನಿಗೆ ಏಳು ವರ್ಷದವರೆಗೆ ಸಜೆ ಹಾಗೂ ದಂಡ ವಿಧಿಸಲಾಗುವುದು.

ಇಷ್ಟು ಸರಳ ಇರೋ ವಿಚಾರ ತಿಳೀದ ನಮ್ಮ ಸಾಹಿತಿಗಳು, ಚಲನಚಿತ್ರ ಹಾಗೂ ಸೀರಿಯಲ್ಲು ನಿರ್ದೇಶಕರು ತಪ್ಪುತಪ್ಪಾಗಿ ವಜ್ರಮುನಿ, ತೂಗುದೀಪ ಶ್ರೀನಿವಾಸ, ದಿನೇಶ ಮುಂತಾದವರಿಗೆ 420, 420 ಅಂದ ಬಿಟ್ಟರಲ್ಲಾ ಪಾಪ ! ಇನ್ನ ಎಲ್ಲಾ ರಂಗದಾಗೂ ತಮ್ಮ ಮಹಾನ್ ನಾಯಕರಿಗೆ ನಡಕೊಳ್ಳೋ ನಮ್ಮ ಜನ ತಮ್ಮ ತಮ್ಮ ಊರಾಗ ಯಾರ್ಯಾರು ಪ್ರಶ್ನಾರ್ಥಕ ಸ್ವಭಾವದ ಜನ ಇರತಾರೋ ಅವರಿಗೆಲ್ಲಾ 420 ಅಂದು ಕೈತೊಳಕೊಂಡರು.

ಇನ್ನ ಐಪಿಸಿ 302. ಇದರ ಪ್ರಕಾರ ಯಾವ ವ್ಯಕ್ತಿ ಕೊಲೆ ಮಾಡುತ್ತಾನೋ ಅವನಿಗೆ ಗಲ್ಲು ಅಥವಾ ಜೀವಾವಧಿ ಶಿಕ್ಷೆ ಆಗುವುದು. ಅದರ ಜೊತೆಗೆ ಆ ವ್ಯಕ್ತಿ ದಂಡವನ್ನು ತೆತ್ತಬೇಕಾಗುವುದು.

ಹಳೇ ಹಿಂದಿ ಸಿನಿಮಾ ಅಥವಾ ಕಪ್ಪು- ಬಿಳಿ ಕನ್ನಡ ಸಿನಿಮಾ ನೋಡಿದ ಎಲ್ಲಾರಿಗೂ 302 ಗೊತ್ತಿರತದ. ಅದರಾಗ ಇಫ್ತಿಕಾರ್ ಅವರು ನ್ಯಾಯಮೂರ್ತಿಯಾಗಿ ಫಾರ್ಸಿ- ಉರ್ದು ಮಾತಾಡೋ ಲಕನೋ ಬ್ರಾಹ್ಮಣನಾಗಿ ತಾಜರಾತೆ ಎ ಹಿಂದ ದಫಾ ತೀನ ಸೌ ದೋ ಅಂತ ಅಂದರ ಇಲ್ಲೆ ನಾಯಕನ ತಾಯಿಯ ರೂಪದಾಗಿನ ನಿರುಪಾ ರಾಯ್ ನಹೀಂ ಅಂತ ಅಳ್ಳಿಕ್ಕೆ ಹತ್ತಿ ಬಿಡತಾಳ. ಕನ್ನಡದಾಗ ಅಪರಾಧಸಂಹಿತೆ 302 ಪ್ರಕಾರ ಗಲ್ಲು ಶಿಕ್ಷೆ ಅಂತ ಅಂದಕೂಡಲೇ ನಾಯಕಿ ತನ್ನ ಕುಂಕುಮ ಅಳಿಸಿಕೊಂಡು ಬಿಡತಾಳ. ಗಲ್ಲಿಗೇರಿಸುವುದು ಇನ್ನೂ ಮುಂದಿನ ಸೀನಿನ್ಯಾಗ ಇರತದ. ತಲಗವಾರ ಸೀತಾರಾಮ ಅವರ ಮಮಕಾರದ ಸೀರಿಯಲ್ಲಿನ್ಯಾಗ ಯಾವ ವಿಲನ್ನುಗಳು 302 ಶಿಕ್ಷೆಗೆ ಒಳಗಾಗುವಷ್ಟು ದೊಡ್ಡ ತಪ್ಪು ಇನ್ನೂ ಮಾಡಿಲ್ಲ. ಅದಕ್ಕ ನಮ್ಮ ಕರುನಾಡಿನ ಮಧ್ಯಮ ವರ್ಗದವರಿಗೆ ಇನ್ನೂ ಅದು ಗೊತ್ತಾಗಿರಲಿಕ್ಕಿಲ್ಲ.

ಈಗ ಸದ್ಯ ಇಡೀ ರಾಜ್ಯದಲ್ಲಿ ಮೂರು ದಿನ 144 ಸೀಆರ್‍ಪಿಸಿ ದ ಕಪಿಮುಷ್ಟಿಯೊಳಗ ಅದ. ಇದೂ ಸಹಿತ ಬಹಳ ಜನರಿಗೆ ಗೊತ್ತಿರೋ ವಿಷಯ. ಬೆಂಗಾವಲೂರಿನ ಬೆಂಗಾವಲು ಅಧಿಕಾರಿಯೊಬ್ಬರು ಇತರರಿಗೆ ಅನಾನುಕೂಲವಾದಾಗ ಇದನ್ನು ಜಾರಿ ಮಾಡಬಹುದು. ಇದರಿಂದ ಯಾರಿಗಾದರೂ ಅನಾನುಕೂಲವಾದರೆ ಅವರು ಉತ್ತರ ಭಾರತಕ್ಕೆ ಹೋಗಲಿ ಅಂತ ಹೇಳಿದ್ದಾರೆ. ಯಾವ ಪ್ರತಿಭಟನೆಗೂ ಹೋಗಬೇಡಿ. ಪಾಲಕರು ಮಕ್ಕಳಿಗೆ ಬುದ್ಧಿವಾದ ಹೇಳಿ ಅಂತ ಉತ್ತರ ಪ್ರದೇಶದ ಪೊಲೀಸ್ ಮುಖ್ಯಸ್ಥ ಸಲಹೆ ಕೊಟ್ಟಾರ. ಬ್ಯಾರೆ ಎಲ್ಲಾ ಕಡೆ ಕಾನೂನು ಸುವ್ಯವಸ್ಥೆ ಪಾಲಿಸೋ ದೃಷ್ಟಿಯಿಂದ ಹಾಕೇವಿ ಅಂತ ಹೇಳತಾರ. ಇಷ್ಟೆಲ್ಲ ಮುಂಜಾಗ್ರತೆ ಇದ್ದರೂ ಕೂಡ ಹಿಂಸಾಚಾರ, ಪೊಲೀಸ್ ದೌರ್ಜನ್ಯ, ಸಾವು, ನೋವು ಕಮ್ಮಿ ಆಗಿಲ್ಲ.  ಇಷ್ಟೆಲ್ಲ  ಗುಂಡು ಹಾರಿಸಿದರೂ ಒಂದೂ ಹೆಣ ಬೀಳಲಿಲ್ಲ ಅಂತ ಕೆಲವರು ಬೇಜಾರು ಮಾಡಿಕೊಳ್ಳೋಹಂಗ ಆತು. ಅದು ಬ್ಯಾರೆ ವಿಷಯ. ಇಷ್ಟೆಲ್ಲ ಕುತಂತ್ರದ ಪ್ರತಿಭಟನೆ ನಡದರೆ ಸುಮ್ಮನೆ ಕೂಡಲು ಕೇಂದ್ರ ಹಾಗೂ ರಾಜ್ಯದಲ್ಲಿ ಇರೋದು ಹೇಡಿ ಸರಕಾರ ಅಲ್ಲ. ಅದನ್ನ ಹೇಗೆ ಎದುರಿಸಬೇಕು ಅನ್ನೊದು ನಮಗ ಗೊತ್ತೈತಿ ಅಂತ ಸಚಿವ ಚಿಕ್ಕಮಾಗರವಳ್ಳಿ ತಿಮ್ಮೇ ಗೌಡ ರವಿ ಅವರು ಹೇಳ್ಯಾರ. ಯಾಕ ಗೋಧ್ರಾ ನೆನಪ ಐತ್ಯೋ ಇಲ್ಲೋ ಅಂತ ಮಾಜಿ ಕಾಂಗ್ರೆಸ್ ಸಚಿವರೊಬ್ಬರಿಗೆ ಎದುರುತ್ತರ ಕೊಟ್ಟಾರ.

ಭವ್ಯ ಭರತಖಂಡದ ಬಹುತೇಕ ರಾಜ್ಯದಾಗ ಜಾರಿಗೆ ಬಂದಿರೋ ಈ 144ರ ಹಕೀಕತ್ತು ಏನು? ಇದರ ಪ್ರಕಾರ ಜಿಲ್ಲಾ ದಂಡಾಧಿಕಾರಿ, ಉಪವಿಭಾಗಾಧಿಕಾರಿ ಅಥವಾ ಇತರ ಯಾವುದೇ ವಿಶೇಷ ಅಧಿಕಾರ ಹೊಂದಿದ ಅಧಿಕಾರಿ ಯಾವುದೇ ವ್ಯಕ್ತಿ ಅಥವಾ ಗುಂಪಿಗೆ ಇದನ್ನು ಮಾಡಿ, ಇದನ್ನು ಮಾಡಬೇಡಿ ಅಂತ ಹೇಳಬಹುದು. ಈ ಆಸ್ತಿಯನ್ನು ಈ ರೀತಿಯಿಂದ ಕಾಳಜಿ ಮಾಡಿ ಅಂತ ಸಲಹೆ ನೀಡಬಹುದು.

ಇದನ್ನು ಮೂರು ಸಂದರ್ಭದೊಳಗ ಮಾಡಬಹುದು.
1. ಶಾಂತಿ ಭಂಗದ ಸಾಧ್ಯತೆ. ಹಿಂಸಾತ್ಮಕ ಘಟನೆ, ದೊಂಬಿಯ ಸಾಧ್ಯತೆ.
2. ಮಾನವ ಮಾನಹಾನಿ, ಆರೋಗ್ಯ, ಸುರಕ್ಷೆಗೆ ಅಪಾಯ ಸಾಧ್ಯತೆ.
3. ಸರಕಾರಿ ಅಧಿಕಾರಿಯ ಕೆಲಸಕ್ಕೆ ಅಡ್ಡಿಯಾದರೆ, ತೊಂದರೆ, ಗಾಯ ಆಗುವ ಸಾಧ್ಯತೆ ಇದ್ದರೆ.

ಈ ಕಾಯಿದೆ ಸಂವಿಧಾನದಲ್ಲಿ ಕೊಟ್ಟ ಮೂಲ ಸ್ವಾತಂತ್ರ್ಯದ ಹಕ್ಕಾದ 1. ವಾಕ್ ಸ್ವಾತಂತ್ರ್ಯ, ನಡೆದಾಡುವ ಹಾಗೂ ಪ್ರತಿಭಟನೆಯ ಹಕ್ಕನ್ನು ಕಸಿದುಕೊಳ್ಳುತ್ತದೆ. ಇವುಗಳ ಮಿತಿಯಿಂದ ಇದನ್ನು ತಪ್ಪಿಸಬೇಕೆಂದರ ಅದಕ್ಕ ವಿಶೇಷ ಸ್ಥಾನ ಇರಬೇಕು.

ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಮೀರಬೇಕಾದ ಯಾವುದೇ ಕಾನೂನು ಸಕಾರಣವಾಗಿರಬೇಕು. ನ್ಯಾಯಯುತವಾಗಿರಬೇಕು, ಪಾರದರ್ಶಕವಾಗಿರಬೇಕು ಅಂತ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಹೇಳಿದ ಹಂಗ ಇರಬೇಕು.
ಹಂಗಂದರ 144 ಅನ್ನೋದು ಇಷ್ಟೆಲ್ಲ ಪರೀಕ್ಷೆಗಳನ್ನ ಮೀರತದಾ? ಮಾಡರ್ನ ಡೆಂಟಲ್ ಕಾಲೇಜು ಪ್ರಕರಣದಾಗ ನ್ಯಾಯಾಲಯ ಸಿದ್ಧಪಡಿಸಿದ ಸಮಪಾತಳಿಯ ಸಿದ್ಧಾಂತದ ಪ್ರಕಾರ ಇದು ಇರಬೇಕು.

1. ಪ್ರತಿಯೊಂದು ಇಂಥಾ ಪ್ರಕರಣಕ್ಕೂ ಇದು ಅತ್ಯಗತ್ಯವಾಗಿರಬೇಕು.
2. ಇದರಿಂದ ಆ ಕಾರ್ಯಸಾಧನೆ ಆಗುವಂತಿರಬೇಕು.
3. ಇದಕ್ಕೊಂದು ನಿರ್ದಿಷ್ಟ ಗುರಿ ಇರಬೇಕು.
ಇನ್ನು ಪುಟ್ಟಸ್ವಾಮಿ ಪ್ರಕರಣದಾಗ ಹೇಳಿದಂಗ ಅದು ಸರಕಾರದ ಕ್ರಮಕ್ಕೂ ನಡಿತಾ ಇರೋ ಘಟನೆಗೂ 1. ನೇರ ಸಂಬಂಧ 2. ನೈಜವಾದ ಗುರಿ, 3. ಕಾರ್ಯಕಾರಣ ಸಮತೋಲನ ಇರಬೇಕು ಹಾಗೂ ಬಳಸಿದ ಕ್ರಮ 4. ಸಕಾರಣವಾದ ಪ್ರಕ್ರಿಯೆ ಆಗಿರಬೇಕು.

ಬಾಬುಲಾಲ ಪರಾಠೆ ಪ್ರಕರಣದೊಳಗ ಪ್ರತಿಭಟನೆಯಿಂದ ಹಿಂಸೆ ಆಗಬಹುದು ಎನ್ನುವ ಊಹಾಪೋಹಗಳಿಗೆಲ್ಲ 144 ಹಾಕಬಾರದು ಅಂತ ಸುಪ್ರೀಂಕೋರ್ಟು ಹೇಳೇದ. ಮಧು ಲಿಮಯೆ ಪ್ರಕರಣದೊಳಗ ಇದನ್ನು ಅತ್ಯಂತ ಜರೂರಿನ ಪ್ರಕರಣಗಳಲ್ಲಿ, ಗಂಭೀರ ಸಮಸ್ಯೆ ಎದುರಾದಾಗ , ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಬಳಸಬೇಕು ಅಂತ ಅಭಿಪ್ರಾಯ ಪಟ್ಟದ.

ಆದರೆ ಚುನಾಯಿತ ಸರಕಾರಗಳು ಜನರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು, ಲೋಕಸತ್ತಾತ್ಮಕ ಪ್ರತಿಭಟನೆಗಳನ್ನು ಹತ್ತಿಕ್ಕಲು ಇದನ್ನು ಬಳಸುತ್ತವೆ ಅನ್ನೋದು ತಿಳಿದವರ ಅಂಬೋಣ.

ಹಿರಿಯ ನ್ಯಾಯವಾದಿ ಮೇನಕಾ ಗುರುಸ್ವಾಮಿ ಅವರು ಇದು ಬ್ರಿಟಿಷರು ಮಾಡಿಹೋದ ಕಾನೂನನ್ನು ಸಾರಾಸಾರ ವಿಚಾರ ಮಾಡದೇ ಬಳಸುವ ತರಾತುರಿಯ ಕ್ರಮ. ಇದು ನಮ್ಮನ್ನು ಆಳುವವರ ವಸಾಹತುಶಾಹಿ ಮಾನಸಿಕತೆಯ ಗುರುತು ಅಂತ ಟೀಕೆ ಮಾಡಿದಾರ. ಹಿಂಸೆ ಆಗಲು ಬಲವಾದ ಕಾರಣ ಇರದೇ, ಸಾಕ್ಷ್ಯ ಇರದೇ ಇದನ್ನು ಬಳಸುವುದು ಸರಿ ಅಲ್ಲ, ಅಂತ ಸುಪ್ರೀಂಕೋರ್ಟು ಹೇಳೇದ. ಜಿಲ್ಲಾಧಿಕಾರಿ ಇದನ್ನು ಜಾರಿ ಮಾಡುವಾಗ ಲಿಖಿತ ಆದೇಶ ನೀಡಬೇಕು ಅದರಲ್ಲಿ ಹಿಂಸೆಯ ಪ್ರಚೋದನೆಗೆ ಸಂಬಂಧಿಸಿದಂತೆ ಕಾರಣ ನೀಡಬೇಕು ಅಂತ ನ್ಯಾಯಮೂರ್ತಿಗಳು ಆದೇಶ ಮಾಡ್ಯಾರ.

ರಾಮಲೀಲಾ ಮೈದಾನ ಪ್ರಕರಣದಾಗ ಅನಗತ್ಯವಾಗಿ 144 ಹಾಕಿದ್ದಕ್ಕ ಅಧಿಕಾರಿಗಳಿಗೆ ದಂಡ ಹಾಗೂ ಪೊಲೀಸ್ ದೌರ್ಜನ್ಯಕ್ಕ ಒಳಗಾದವರಿಗೆ ಪರಿಹಾರ ಕೊಡಿಸಿತು. ಅದನ್ನು ನಾವು ಮರೆತುಬಿಟ್ಟಿವಿ.

ರಾಮ ಮನೋಹರ ಲೋಹಿಯಾ ಪ್ರಕರಣದಾಗ ಅಕಾರಣವಾಗಿ ಮೂಲಭೂತ ಹಕ್ಕುಗಳನ್ನು ತಡೆಯೋದು ಪ್ರತಿಭಟನೆ ನಿಲ್ಲಿಸುವ ನೆವ ಅಷ್ಟೆ ಅಂತ ನ್ಯಾಯಾಲಯ ಅಭಿಪ್ರಾಯ ಪಟ್ಟದ. ಆದರ ನಾವು ಭಾರತೀಯರು ಜಾಣ ಕಿವುಡರು. ನಮಗೆ ಬೇಕಿದ್ದಷ್ಟನ್ನ ನಾವು ಕೇಳತೇವಿ.

ಹಂಗಾರ ಕಡೀಕೆ ಏನಾತಪಾ ಅಂದರ 420ಗಳಿಗೆ ಅಧಿಕಾರ ಕೊಟ್ಟರ ಅವರು ಮೊದಲ 144 ಹಾಕತಾರ. ಅದಕ್ಕ ಬಗ್ಗಲಿಲ್ಲ ಅಂದರ ನಾವೆಲ್ಲಾ ಅಣ್ಣ ತಮ್ಮಾ ಹೊಡದಾಡಿಕೊಂಡು 302 ಪ್ರಕರಣಕ್ಕ ಒಳಪಡೋಹಂಗ ಮಾಡತಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಂಗಳೂರು: ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದೆ: ವಿ.ಎಸ್. ಶ್ರೀಧರ್ 

ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು, ಎದ್ದೇಳು ಕರ್ನಾಟಕ ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟವಾದ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಎಸ್‌ಐಆರ್ ಜನಜಾಗೃತಿ ಜಾಥಾದ ಭಾಗವಾಗಿ ಇಂದು (ಜೂನ್-14) ಮಂಗಳೂರಿನಲ್ಲಿ ಸಭೆ...

ಬಿಸಿಲ ನಾಡು ಕಲಬುರಗಿಯಲ್ಲಿ ಮೊಳಗಿದ SIR ವಿರೋಧಿ ಘೋಷಣೆ.

ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿಶೇಷ ತೀವ್ರ ಮತ ಪರಿಷ್ಕರಣೆ SIR ಅನ್ನು ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕದಾದ್ಯಂತ ಎದ್ದೇಳು ಕರ್ನಾಟಕ ಹಾಗಾ SIR ವಿರೋಧಿ ಕರ್ನಾಟಕ ವೇದಿಕೆಯು...

ವಿಜಯಪುರ : ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ

ರಾಜ್ಯದ ಆರು ಜಿಲ್ಲೆಗಳಲ್ಲಿ ನಡೆಯಲಿರುವ ಎಸ್‌ಐಆರ್‌ ವಿರೋಧಿ ಜನಜಾಗೃತಿ ಜಾಥಾಗೆ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ (ಜೂ.13) ಸಂಜೆ ಚಾಲನೆ ದೊರೆಯಿತು. ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅಹಿಂದ ಮುಖಂಡ ಎಸ್ ಎಂ ಪಾಟೀಲ...

ಬಸವಣ್ಣನ ಕಲ್ಯಾಣದಲ್ಲಿ SIR ವಿರೋಧಿ ಜಾಥಾ.

ಬಸವಕಲ್ಯಾಣSIR ವಿರೋಧಿಸಿ ಕರ್ನಾಟಕದಾದ್ಯಂತ ನಡೆಯುತ್ತಿರುವ ಜಾಗೃತಿ ಜಾತಾವು ಬಸವಕಲ್ಯಾಣಕ್ಕೆ ತಲುಪಿತು. ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಜನವಿರೋಧಿ SIR ನ್ನೂ ವಿರೋಧಿಸಿ ನಿರ್ಣಯ ಕೈಗೊಂಡರು. ಸಭೆಯಲ್ಲಿ ಮಾತನಾಡಿದ ಜಾಥಾದ ಮುಖ್ಯಸ್ಥ...

ಸಂಸದ ಬಿ.ವೈ ರಾಘವೇಂದ್ರ ನಡೆಸುತ್ತಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ SIR ವಿರೋಧಿ ಜನಜಾಗೃತಿ ಜಾಥಾ ಕರಪತ್ರ ಹಂಚಿದ ಕಾರ್ಯಕರ್ತರು

ಶಿವಮೊಗ್ಗ : ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರು ಜಿಲ್ಲೆಯ ಸಾಗರ ತಾಲ್ಲೂಕಿನ ರೈಲು ನಿಲ್ದಾಣದಲ್ಲಿ ಕುಂದುಕೊರತೆಗಳ ಸಭೆ ನಡೆಸುತ್ತಿದ್ದ ವೇಳೆ ಎಸ್‌ಐಆರ್ ವಿರುದ್ಧ ’ಎದ್ದೇಳು ಕರ್ನಾಟಕ’ ಮತ್ತು ’ಎಸ್‌ಐಆರ್ ವಿರೋಧಿ ಒಕ್ಕೂಟ’ದ ಮುಖಂಡರು...

ಬೀದರ್‌ ನಿಂದ ಶುರವಾದ SIR ವಿರೋಧಿ ಜನಜಾಗೃತಿ ಜಾಥಾ

SIR ವಿರೋಧಿ ಕರ್ನಾಟಕ ಹಾಗೂ ಎದ್ದೇಳು ಕರ್ನಾಟಕವು ಕರ್ನಾಟಕದಲ್ಲಿ SIR ಜಾರಿಯನ್ನು ವಿರೋಧಿಸಿ ರಾಜ್ಯದ 5 ಸ್ಥಳಗಳಿಂದ ಜನಜಾಗೃತಿ ಜಾಥಾ ಆಯೋಜಿಸಿದೆ. ಇಂದು ಬೀದರ್‌ ನ ಅಂಬೇಡ್ಕರ್‌ ಸರ್ಕಲ್‌ ನಿಂದ ಆರಂಭವಾದ ಜಾಥಾವು...

ಒಬ್ಬರೇ ಒಬ್ಬ ಅರ್ಹ ಮತದಾರರ ಹೊರಗಿಡುವುದನ್ನು ಒಪ್ಪುವುದಿಲ್ಲ : ಯೂಸುಫ್ ಕನ್ನಿ

ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಿ, ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬೇಡವೇ ಬೇಡ. ಎಸ್‌ಐಆರ್‌ ಮೂಲಕ ಒಬ್ಬರೇ ಒಬ್ಬರು ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಗಿಡುವುದನ್ನು ನಾವು ಒಪ್ಪುವುದಿಲ್ಲ ಎಂದು ಜಮಾಅತೆ ಇಸ್ಲಾಮಿ...

ಪ್ರಜಾಪ್ರಭುತ್ವದ ರಕ್ಷಣೆಗೆ ಎಸ್‌ಐಆರ್ (SIR) ವಿರುದ್ಧ ಜನಜಾಗೃತಿ ಜಾಥಾಕ್ಕೆ ಶಿವಮೊಗ್ಗದಲ್ಲಿ ಚಾಲನೆ

ಕೇಂದ್ರ ಸರ್ಕಾರದ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ಜನವಿರೋಧಿ ಅಲೆ ಎದ್ದಿದೆ. "ಸಂತ-ಶರಣರ ಈ ನಾಡಿನಲ್ಲಿ ಯಾವುದೇ ರೀತಿಯ ದುಷ್ಟ ಆಟ, ಮೋಸ, ವಂಚನೆಗೆ ಅವಕಾಶವಿಲ್ಲ" ಎಂಬ ದೃಢ ಸಂಕಲ್ಪದೊಂದಿಗೆ 'ಎಸ್‌ಐಆರ್...

ಜೂನ್ 13 ರಿಂದ ಕರ್ನಾಟಕದಲ್ಲಿ ‘SIR ವಿರೋಧಿ’ ಜನಜಾಗೃತಿ ಜಾಥ

ರಾಜ್ಯ ಚುನಾವಣಾ ಆಯೋಗವು ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ನಾಗರಿಕರ ಆಕ್ಷೇಪಣೆಗಳಿಗೆ ಸ್ಪಂದಿಸದಿರುವ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಾಗೂ ‘ಎದ್ದೇಳು ಕರ್ನಾಟಕ’ ಸಂಘಟನೆಯ ವತಿಯಿಂದ ಜೂನ್ 13 ರಿಂದ...

‘ಕಾನೂನು ಪ್ರಕ್ರಿಯೆಯದುರುಪಯೋಗ’: ನ್ಯೂಸ್‌ಕ್ಲಿಕ್ ವಿರುದ್ಧದ ದೆಹಲಿ ಪೊಲೀಸ್, ಇಡಿ ಪ್ರಕರಣಗಳನ್ನು ರದ್ದುಗೊಳಿಸಿದ ಹೈಕೋರ್ಟ್

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆ ಮತ್ತು ಅದರ ಮುಖ್ಯ ಸಂಪಾದಕ ಪ್ರಬೀರ್ ಪುರಕಾಯಸ್ಥ ವಿರುದ್ಧ ದೆಹಲಿ ಪೊಲೀಸರು ಹಾಗೂ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣಗಳನ್ನು ದೆಹಲಿ...