ನಟ ಪುನೀತ್ ರಾಜ್ಕುಮಾರ್ ಅವರ ಹಠಾತ್ ನಿಧನವು ಅವರ ಲಕ್ಷಾಂತರ ಅಭಿಮಾನಿಗಳಿಗೆ ಆಘಾತ ತಂದಿದೆ. ಪುನೀತ್ ಅವರ ಚಾರಿಟಿ ಕಾರ್ಯಗಳ ಮುಂದುವರಿಕೆಯ ಬಗ್ಗೆ ಅನಿಶ್ಚಿತತೆಯೂ ಉಂಟಾಗಿತ್ತು.
ಪುನೀತ್ ರಾಜ್ಕುಮಾರ್ ಅವರು ಬಡವರಿಗೆ ಸಹಾಯ ನೀಡುತ್ತಾ ಬಂದಿದ್ದರು. ಅವುಗಳಲ್ಲಿ ಒಂದು ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಧನಸಹಾಯ. ಪುನೀತ್ ಅವರು ಕಂಡು ಇನ್ನು ಮುಂದೆ ಕನಸು ನನಸಾಗುವುದಿಲ್ಲ ಎಂದು ಎಲ್ಲರೂ ಭಾವಿಸಿದ್ದರು. ಈಗ ಅದನ್ನು ಮುಂದಕ್ಕೆ ಕೊಂಡೊಯ್ಯಲು ಒಬ್ಬ ನಟ ಮುಂದೆ ಬಂದಿದ್ದಾರೆ.
ಪುನೀತ್ ರಾಜ್ಕುಮಾರ್ ಅವರಿಂದ ಉಚಿತ ಶೈಕ್ಷಣಿಕ ನೆರವು ಪಡೆಯುತ್ತಿರುವ 1,800 ವಿದ್ಯಾರ್ಥಿಗಳ ಪೋಷಣೆಯನ್ನು ಮುಂದುವರಿಸುವುದಾಗಿ ತಮಿಳು ನಟ ವಿಶಾಲ್ ಭರವಸೆ ನೀಡಿದ್ದಾರೆ.
ಮೂಲತಃ ಬೆಂಗಳೂರಿನವರಾದ ವಿಶಾಲ್, ಭಾನುವಾರ ರಾತ್ರಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುತ್ತಾ, “ಸಹೋದರನ ಕಾರ್ಯವನ್ನು ನಾನು ಮುಂದುವರಿಸುತ್ತೇನೆ” ಎಂದಿದ್ದಾರೆ.
ವಿಶಾಲ್ ಅವರ ಈ ನಿಲುವಿಗೆ ಕನ್ನಡಿಗರು ಮನಸೋತಿದ್ದಾರೆ. ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್ಮಟ್ಟು ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿ, “ಭಾಷೆ ಅರ್ಥವಾಗದಿದ್ದರೂ ಸರಿ, ಕೆಟ್ಟ ಚಿತ್ರವಾದರೂ ಸರಿ, ಕರ್ನಾಟಕದಲ್ಲಿ ಬಿಡುಗಡೆಯಾಗುವ ನಟ ವಿಶಾಲ್ ಅವರ ಎಲ್ಲ ಸಿನಿಮಾಗಳನ್ನು ಚಿತ್ರಮಂದಿರಕ್ಕೆ ಹೋಗಿ ನೋಡುತ್ತೇನೆ” ಎಂದಿದ್ದಾರೆ.
ಇದನ್ನೂ ಓದಿರಿ: ಅಪ್ಪು ಒಡನಾಟದ ನೆನಪುಗಳನ್ನು ಹಂಚಿಕೊಂಡ ಮಿಲನ ಸಿನಿಮಾ ನಟಿ ಪಾರ್ವತಿ ತಿರುವೊತು
“ವಿಶಾಲ್ ಅವರ ತಂದೆ ಅಪ್ಪಟ ಕನ್ನಡಿಗ, ಮಾನವೀಯತೆಗೆ ಮರುಗುವ ಜೀವ ವಿಶಾಲ್. ತಮಿಳುನಾಡಿನಲ್ಲಿ ಕೆ.ಜಿ.ಎಫ್. ಚಿತ್ರ ಹವಾ ಸೃಷ್ಟಿಸಿದ್ದರ ಹಿಂದೆ ವಿಶಾಲ್ ಶ್ರಮ ಸಾಕಷ್ಟಿದೆ. ಅದ್ಭುತ ನಟನೆ ವಿಶಾಲ್ ಅವರದ್ದು. ಮೌಲ್ಯಾಧಾರಿತ ವ್ಯಕ್ತಿ ವಿಶಾಲ್” ಎಂದು ಸಂತೋಷ್ ಪಾಪಣ್ಣ ಕಮೆಂಟ್ ಮಾಡಿದ್ದಾರೆ.
“ಹೆಸರು ಮಾತ್ರ ವಿಶಾಲವಾಗಿಲ್ಲ, ಇವರ ಮನಸ್ಸೂ ವಿಶಾಲವಾಗಿದೆ. ನಾನು ಸಹ ಇನ್ನು ಮುಂದೆ ವಿಶಾಲ್ ನಟಿಸುವ ಎಲ್ಲಾ ಚಿತ್ರಗಳನ್ನೂ ನೋಡುತ್ತೇನೆ. ಮೊಬೈಲ್ನಲ್ಲಿ ಅಲ್ಲ, ಸಿನಿಮಾ ಥಿಯೇಟರ್ನಲ್ಲಿ ಟಿಕೆಟ್ ಪಡೆದು ನೋಡುವೆ” ಎಂದು ನಗು ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
“ಇತ್ತೀಚೆಗೆ ಕೆಲವು ಮಾನಸಿಕವಾಗಿ ಅಸ್ಥಿರತೆ ಉಳ್ಳವರು ವ್ಯಕ್ತಪಡಿಸುವ ಹೊಲಸು ಮಾತುಗಳಿಗಿಂತ ನಟ ವಿಶಾಲ್ ಅವರ ಮಾತು ಅತ್ಯಂತ ಮೌಲ್ಯಧಾರಿತವಾಗಿದೆ” ಎಂದು ರಫೀಕ್ ದಾಲ್ಕಜೆ ಕೊಲ್ಪೆ ತಿಳಿಸಿದ್ದಾರೆ.
“ಕರ್ನಾಟಕ ರಣಧೀರ ಪಡೆಯ ಸಮಸ್ತ ಕುಟುಂಬದ ವತಿಯಿಂದ ಕೋಟಿ ಕೋಟಿ ನಮಸ್ಕಾರಗಳು. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಕರ್ನಾಟಕದ ಮಹಾ ಜನತೆ ನಿಮ್ಮನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಭಗವಂತ ನಿಮ್ಮನ್ನು ಉತ್ತಮವಾದ ಆರೋಗ್ಯ ಸಿರಿ ಸಂಪತ್ತು ಸಕಲವು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುವೆ” ಎಂದು ಮಲ್ಲಿಕಾರ್ಜುನ್ ಬಿ.ಕುಲ್ಗೇರಿ ಮಡಿವಾಳ್ ಪ್ರತಿಕ್ರಿಯೆ ನೀಡಿದ್ದಾರೆ.
– ಹೀಗೆ ಸಾವಿರಾರು ಕನ್ನಡಿಗರು ವಿಶಾಲ್ ಅವರ ನಿರ್ಧಾರಕ್ಕೆ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಮಾನ ಶಿಕ್ಷಣದ ಕುರಿತು ಸರ್ಕಾರ ಗಮನ ಹರಿಸುತ್ತಿಲ್ಲ ಎಂಬುದೂ ಮುನ್ನಲೆಗೆ ಬಂದಿದೆ.
“ಈಗ ಇದೆಲ್ಲ ಭಾವಾವೇಶದಿಂದ ಹೊರಬಂದು ಯೋಚಿಸಿದರೆ… ಪುನೀತ್ ಸಾವಿರದೆಂಟುನೂರು ಮಕ್ಕಳ ಓದು ನೋಡ್ಕೊತಿದ್ರು, ಅದರ ಕತೆ ಮುಂದೆ ಹೇಗೋ ಅಂತ ಯೋಚಿಸ್ತಿದ್ದೇವೆಯೇ ಹೊರತು, ಸರಕಾರಕ್ಕೆ ಮಕ್ಕಳಿಗೆ ಕನಿಷ್ಟ ಹನ್ನೆರಡನೆಯ ತರಗತಿಯ ತನಕವಾದರೂ ಸಮಾನ ಮತ್ತು ಉಚಿತ ಶಿಕ್ಷಣ ನೀಡಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ನಮ್ಮಲ್ಲಿ ಪ್ರಶ್ನೆಯೇ ಹುಟ್ಟಲ್ಲ. ನಲವತ್ತು ರೂಪಾಯಿಯ ಪೆಟ್ರೋಲ್ಗೆ ಎಪ್ಪತ್ತು ರೂಪಾಯಿ ಟ್ಯಾಕ್ಸ್ ಕಟ್ಟುತ್ತಾ ಮಕ್ಕಳ ಶಿಕ್ಷಣದ ಜವಾಬ್ದಾರಿ ಇನ್ನೊಬ್ಬ ನಟ ತೆಗೆದುಕೊಳ್ಳಲಿ ಎಂದು ಬಯಸುತ್ತೇವೆ. ನಮ್ಮ ಯೋಚನೆಯ ದಾಟಿಯಲ್ಲೇ ಸಮಸ್ಯೆ ಇರುವಾಗ ಯಾರನ್ನ ಅಂದು ಏನು ಪ್ರಯೋಜನ?” ಎಂದು ಲೇಖಕ ಎನ್.ಎಸ್.ಕೆಂಚನೂರು ಕೇಳಿದ್ದಾರೆ.
ಇದನ್ನೂ ಓದಿರಿ: ಪುನೀತ್ ಎಂದ ಕೂಡಲೇ ಕಣ್ಣೆದುರಿಗೆ ಬರುವುದು ಡಾ.ರಾಜ್ ವ್ಯಕ್ತಿತ್ವ
ವಿಶಾಲ್ ಸರ್ ನಿಮ್ಮ ಮನಸು ನಿಮ್ಮ ಗೆಳೆತನ ನಿಮ್ಮ ಶ್ರೀಮಂತಿಕೆ ಭಾವನೆ ತುಂಬಾ ದೊಡ್ಡದು … ನಿಮಗೆ ಕೋಟಿ ಕೋಟಿ ಗೌರವಪೂರ್ವಕ ನಮನಗಳು…
ಈ ಮಾತನ್ನು ಇಲ್ಲಿ ಯಾರೂ ಕೂಡ ಹೇಳಲಿಲ್ಲ… ಧೈರ್ಯ ಕೊಡಲಿಲ್ಲ…. ದೇವರು ನಿಮಗೆ ಆಯಸ್ಸು ಆರೋಗ್ಯ ಭಾಗ್ಯ ಕೊಡಲಿ ವಿಶಾಲ್ ಸರ್ ನಿಮ್ಮಂತವರು ಯಾವಾಗಲೂ ಚೆನ್ನಾಗಿರಬೇಕು ಮಾದರಿಯಾಗಿರಬೇಕು