Homeಕರ್ನಾಟಕಪುನೀತ್‌ ಎಂದ ಕೂಡಲೇ ಕಣ್ಣೆದುರಿಗೆ ಬರುವುದು ಡಾ.ರಾಜ್‌ ವ್ಯಕ್ತಿತ್ವ

ಪುನೀತ್‌ ಎಂದ ಕೂಡಲೇ ಕಣ್ಣೆದುರಿಗೆ ಬರುವುದು ಡಾ.ರಾಜ್‌ ವ್ಯಕ್ತಿತ್ವ

ಡಾ.ರಾಜ್‌ ಕುಟುಂಬದೊಂದಿಗೆ ಅಪಾರ ಒಡನಾಟ ಹೊಂದಿರುವ ಸಾಹಿತಿ ಹಾಗೂ ಸಿನಿಮಾ ನಿರ್ದೇಶಕರಾದ ಡಾ.ಬರಗೂರು ರಾಮಚಂದ್ರಪ್ಪ ಅವರು ಪುನೀತ್‌ ರಾಜ್‌ಕುಮಾರ್‌ ಅವರ ಮಾನವೀಯ ಕಾರ್ಯಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.

- Advertisement -
- Advertisement -

ಪುನೀತ್‌ ಎಂದ ಕೂಡಲೇ ನನ್ನ ಕಣ್ಣೆದುರಿಗೆ ಬರುವುದು ರಾಜ್‌ಕುಮಾರ್‌ ಅವರೇನೇ. ಪುನೀತ್‌ ಅಷ್ಟೇ ಅಲ್ಲ, ರಾಜ್‌ಕುಮಾರ್‌ ಅವರ ಮೂವರು ಮಕ್ಕಳೂ ಡಾ.ರಾಜ್‌ ಅವರ ಸಾರ್ವಜನಿಕ ನಡವಳಿಕೆಯ ಮಾದರಿಯನ್ನು ಅನುಸರಿಸಿದವರು.

ಜನಪ್ರಿಯ ಹೀರೋ ಎಂದ ಕೂಡಲೇ ಅಭಿಮಾನಿಗಳ ದೊಡ್ಡ ಬಳಗವೇ ಇರುತ್ತದೆ. ಆಗ ಒಬ್ಬ ಹೀರೋ ನಿಜವಾದ ಅರ್ಥದಲ್ಲಿ ತನ್ನ ಚಿತ್ರಗಳ ಮೂಲಕ ಯಾವ ಸಂದೇಶವನ್ನು ನೀಡುತ್ತಾನೆ ಎಂಬುದು ಮುಖ್ಯವಾಗುತ್ತದೆ. ಅಂದರೆ ಅವರು ಎಂತಹ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಸಂಗತಿ.

ಪಾತ್ರದ ವಿಚಾರ ನಿರ್ದೇಶಕನದ್ದಲ್ಲವೇ ಎಂದು ಕೆಲವರು ಕೇಳಬಹುದು, ನಿಜ. ಆದರೆ ಜನಪ್ರಿಯ ನಟರಾದವರ ಕೈಯಲ್ಲೇ ಕಥಾ ವಸ್ತುವಿನ ಆಯ್ಕೆ ಇರುತ್ತದೆ. ನಾನು ಇಂತಹ ಕಥೆ ಇದ್ದರೆ ಮಾತ್ರ ನಟಿಸುತ್ತೇನೆ ಎಂದು ಹೇಳುವ ಮಟ್ಟಕ್ಕೆ ನಟ ಬೆಳೆದಿರುತ್ತಾನೆ. ಇಂತಹ ಸಂದರ್ಭದಲ್ಲಿ ತನಗೆ ಹೊಂದುವಂತಹ ಕಥೆ ಇದ್ದಾಗ ಮಾತ್ರ ನಟನೆಗೆ ಮುಂದಾಗುತ್ತಾನೆ. ಒಬ್ಬ ನಾಯಕ ಎಂತಹ ಕಥೆ ಆಯ್ಕೆ ಮಾಡಿಕೊಳ್ಳುತ್ತಾನೆ ಎಂಬುದು ಮುಖ್ಯವಾಗುತ್ತದೆ. ಈ ಅರ್ಥದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರು ಸದಭಿರುಚಿಯ ಕಥಾ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು.

ತಾಯಿ ಮತ್ತು ಮಗನ ಸಂಬಂಧದ ಕೌಟುಂಬಿಕ ಪಾತ್ರಗಳು ಒಂದು ಕಡೆ ಇರುತ್ತವೆ. ಇನ್ನೊಂದು ಕಡೆ ಅನಾಥ ಮಕ್ಕಳನ್ನು ಪುನರ್ವಸತಿ ಕೇಂದ್ರದಲ್ಲಿ ಇಟ್ಟಾಗ ಏನು ಸಂದೇಶ ಸಾರಬಹುದು, ಗಣಿಗಾರಿಕೆ ನಡೆಯುತ್ತಿರುವ ಸಂದರ್ಭದಲ್ಲಿ ಗಣಿಗಾರಿಕೆಯ ಅನಾಹುತಗಳೇನು?- ಈ ಥರದ ಕಥಾ ವಸ್ತುಗಳಲ್ಲೂ ಅವರು ಹೀರೋ ಆಗಿ ಅಭಿನಯಿಸಿದರು.

ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ಜಿಮ್‌ನಲ್ಲಿ ಕುಸಿದು ಬೀಳುತ್ತಿರುವ ಈ ವಿಡಿಯೊ ‘ಪುನೀತ್‌ ರಾಜ್‌ಕುಮಾರ್‌’ ಅವರದಲ್ಲ

ಹೀರೋಗಳ ಸಾರ್ವಜನಿಕ ನಡೆವಳಿಕೆಯೂ ಬಹಳ ಮುಖ್ಯ ಎಂದು ಭಾವಿಸಿದ್ದೇನೆ. ಆ ದೃಷ್ಟಿಯಿಂದಲೂ ನಮ್ಮ ಚಿತ್ರರಂಗದಲ್ಲಿ ಮೆಚ್ಚಲೇಬೇಕಾದ, ಗೌರವಿಸಬೇಕಾದ ವ್ಯಕ್ತಿತ್ವ ಪುನೀತ್‌ ರಾಜ್‌ಕುಮಾರ್‌. ವರನಟ ಡಾ.ರಾಜ್‌ಕುಮಾರ್‌ ಥರದ ಪ್ರಬುದ್ಧ ಕಲಾವಿದ ಮತ್ತೊಬ್ಬ ಸಿಗುವುದು ಕಷ್ಟ. ಹೀಗಾಗಿ ರಾಜ್‌ ಕುಮಾರ್ ಅವರನ್ನು ಇಡೀ ನಾಡು ಅಪಾರವಾಗಿ ಗೌರವಿಸುತ್ತದೆ. ಜೊತೆಗೆ ರಾಜ್‌ಕುಮಾರ್‌ ಅವರ ಸಾರ್ವಜನಿಕ ನಡವಳಿಕೆ ಮಾದರಿಯಾದದ್ದು. ಡಾ.ರಾಜ್‌ಕುಮಾರ್‌ ಅವರ ಸಜ್ಜನಿಕೆ, ವಿನಯ, ಅನ್ಯರ ಬಗೆಗಿನ ಗೌರವ, ಸರಳತೆ, ಅಹಂಕಾರ ಇಲ್ಲದೆ ಇರುವುದು- ಇದೆಲ್ಲವೂ ಪುನೀತ್‌ ರಾಜ್‌ಕುಮಾರ್‌ ಅವರಲ್ಲಿತ್ತು.

ಪುನೀತ್‌ ರಾಜ್‌ಕುಮಾರ್‌ ಅವರ ಸಾರ್ವಜನಿಕ ನಡವಳಿಕೆ ಇವತ್ತಿನ ಯುವಕರ ದೃಷ್ಟಿಯಿಂದ ಬಹಳ ಮುಖ್ಯವಾದದ್ದು. ಯಾಕೆಂದರೆ ಒಬ್ಬ ಹೀರೋ ಹೇಗಿರುತ್ತಾನೋ ಹಾಗೇ ತಮ್ಮ ಅಭಿಮಾನಿಗಳು ವರ್ತಿಸಲು ಶುರುಮಾಡುತ್ತಾರೆ. ಪುನೀತ್‌ ಅವರ ಸಭ್ಯತೆ ಮತ್ತು ಸಂಭಾವಿತನದ ಇಮೇಜ್‌ ಯುವಕರಿಗೆ ಮಾದರಿಯಾಗಿತ್ತು. ಈ ಗುಣಗಳು ಅವರ ಅಭಿಮಾನಿಗಳ ಮೇಲೆ ಪ್ರಭಾವ ಬೀರಿದೆ.

ರಾಜ್‌ಕುಮಾರ್‌ ಅವರ ಮಕ್ಕಳು ಎಲ್ಲಿಯೂ ಸಾರ್ವಜನಿಕ ವಿವಾದಗಳಿಗೆ ಒಳಗಾದವರಲ್ಲ. ಪುನೀತ್ ಅವರನ್ನು ಕರ್ನಾಟಕದ ಅಸಂಖ್ಯಾತ ಯುವಕರು ಇಷ್ಟಪಡುತ್ತಾರೆ. ಅವರನ್ನು ಸಾರ್ವತ್ರಿಕವಾಗಿ ಇಷ್ಟಪಡುವ ಬಹುದೊಡ್ಡ ಪಡೆಯೇ ನಾಡಿನಲ್ಲಿದೆ. ಅವರ ನಡವಳಿಕೆಯನ್ನು ಸಾಮಾಜಿಕ ಜವಾಬ್ದಾರಿಯ ನಡವಳಿಕೆ ಎನ್ನಬಹುದು.

ಸಾರ್ವಜನಿಕ ಸೇವೆಯ ಗುರುತು

ಪುನೀತ್‌ ರಾಜ್‌ಕುಮಾರ್‌ ಅವರ ಸಾರ್ವಜನಿಕ ಸೇವೆ ಅನನ್ಯವಾದದ್ದು. ಮೈಸೂರಿನಲ್ಲಿ ಪಾರ್ವತಮ್ಮ ರಾಜ್‌ಕುಮಾರ್‌ ಅವರ ನೇತೃತ್ವದಲ್ಲಿ ಶಕ್ತಿಧಾಮ ಶುರು ಮಾಡಲಾಯಿತು. ರಾಜ್‌ಕುಮಾರ್‌ ಅವರ ಬೆಂಬಲ ಶಕ್ತಿಧಾಮ ಸ್ಥಾಪನೆಗೆ ಇತ್ತು. ಬೀದಿಗೆ ಬಿದ್ದ ಹೆಣ್ಣು ಮಕ್ಕಳಿಗೆ ಆಶ್ರಯವನ್ನು ಶಕ್ತಿಧಾಮ ನೀಡುತ್ತಿದೆ. ಪುನೀತ್‌ ರಾಜ್‌ಕುಮಾರ್‌ ಹಾಡಿ ಸಂಪಾದಿಸಿದ್ದು ಇರಬಹುದು, ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋ ಮೂಲಕ ಬಂದ ಸಂಭಾವನೆ ಇರಬಹುದು- ಇದರ ಬಹುಪಾಲನ್ನು ಶಕ್ತಿಧಾಮಕ್ಕೆ ನೀಡುತ್ತಾ ಬಂದಿದ್ದರು. ಅನೇಕ ಅನಾಥಾಶ್ರಮಗಳಿಗೆ ಹಣ ಕೊಡುತ್ತಿದ್ದರು.

PC: newindianexpress.com

ರಾಜ್‌ಕುಮಾರ್‌‌ ಅವರು ನೂರು ಸಿನಿಮಾಗಳನ್ನು ಪೂರೈಸಿದಾಗ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿ.ವಿ.ಎಲ್‌.ಶಾಸ್ತ್ರಿಯವರ ಅಧ್ಯಕ್ಷತೆಯಲ್ಲಿ ಒಂದು ಶಿಕ್ಷಣ ಸಮಿತಿ ರಚಿಸುತ್ತಾರೆ. ಆನಂತರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸಾಕಷ್ಟು ಕೆಲಸಗಳನ್ನು ಮಾಡುತ್ತಾರೆ. ಅನಾಥಾಶ್ರಮಗಳಿಗೆ ಸಹಕಾರ ನೀಡುತ್ತಾರೆ. ರಂಗ ಮಂದಿರಗಳು ರಾಜ್ಯಾದ್ಯಾಂತ ಸ್ಥಾಪನೆಯಾಗಲು ರಸಸಂಜೆ ಕಾರ್ಯಕ್ರಮಗಳ ಮೂಲಕ ನೆರವಾಗುತ್ತಾರೆ.

ಒಮ್ಮೆ ರಾಜ್‌ಕುಮಾರ್‌ ಅವರು ನಮ್ಮ ಮನೆಗೆ ಬಂದಾಗ, “ಇಷ್ಟೆಲ್ಲ ಮಾಡುತ್ತೀರಿ, ಆದರೂ ಎಲ್ಲಿಯೂ ಪ್ರಚಾರ ತೆಗೆದುಕೊಳ್ಳುವುದಿಲ್ಲವಲ್ಲ ಸಾರ್” ಎಂದೆ. “ನಾವು ಕಲಾವಿದರು. ಬಲಗೈಲಿ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದು. ನಾವು ಸಿನಿಮಾ ಮಾಡ್ತೀವಿ. ಇದನ್ನೆಲ್ಲ ಯಾಕೆ ಪ್ರಚಾರ ಮಾಡಬೇಕು” ಎಂದಿದ್ದರು.

ಇದನ್ನೂ ಓದಿರಿ: ಹೊಸ ಪ್ರತಿಭೆಗಳ ಮಹಾನ್‌ ಪ್ರೋತ್ಸಾಹಕ ಪುನೀತ್‌ ರಾಜ್‌ಕುಮಾರ್

ಪುನೀತ್ ಅವರಲ್ಲಿ ಒಮ್ಮೆ ಮಾತನಾಡುತ್ತಿದ್ದಾಗ ಹೇಳಿದೆ: “ನಿಮ್ಮ ತಂದೆಯವರು ಬಲಗೈಲಿ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದು ಎಂದು ಹೇಳುತ್ತಿದ್ದರು. ಆ ಕಾಲದಲ್ಲಿ ಹೇಳಿದ್ದನ್ನೇ ನೀವು ಈಗಲೂ ಅನುಸರಿಸುತ್ತಿದ್ದೀರಿ. ಆದರೆ ಇವತ್ತಿನ ಪ್ರಪಂಚ, ಇವತ್ತಿನ ಸಮಾಜ ಬದಲಾಗಿದೆ. ನೀವು ಏನು ಮಾಡುತ್ತಿದ್ದೀರಿ ಎಂದು ಜನ ಕೇಳುತ್ತಾರೆ. ನೀವು ಮಾಡಿರುವುದನ್ನು ಹೇಳಬಹುದಲ್ಲ” ಎಂದೆ. ಆಗ ಪುನೀತ್ ಅವರು (ಐದು ವರ್ಷಗಳ ಹಿಂದೆ) ನಮ್ಮ ಮನೆಗೆ ಸಹಾಯಕರ ಮೂಲಕ ಒಂದು ಪಟ್ಟಿ ಕಳುಹಿಸಿಕೊಟ್ಟರು. ಸುಮಾರು ಐವತ್ತರಿಂದ ಅರವತ್ತು ಸರ್ಕಾರಿ ಶಾಲೆಗಳಿಗೆ ಲಕ್ಷಾಂತರ ರೂಪಾಯಿ ನೀಡಿರುವ ವಿವರಗಳನ್ನು ಆ ಪಟ್ಟಿಯಲ್ಲಿ ನೋಡಿದೆ.

ಸರ್ಕಾರಿ ಶಾಲೆಗಳಿಗೆ ಅವರು ಹಣ ನೀಡಿರುವುದು ಮುಖ್ಯ ಅನಿಸಿತು. ಕೆಲವು ಸರ್ಕಾರಿ ಶಾಲೆಗಳಿಗೆ ಕೊಠಡಿಗಳನ್ನು ಕಟ್ಟಿಸಿಕೊಟ್ಟಿದ್ದರು, ಕೆಲವು ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್‌ ಕೊಟ್ಟಿದ್ದರು. ಹಣ ಸಹಾಯ ಮಾಡಿದ್ದರು. ವೃದ್ಧಾಶ್ರಮಗಳಿಗೆ, ಅನಾಥಾಶ್ರಮಗಳಿಗೆ ಹಣ ಕೊಟ್ಟಿದ್ದರು. ಹಾಗಾಗಿ ಪುನೀತ್‌ ಯುವಕರಿಗೆ ರಂಜನೆ ಮಾಡುತ್ತಿದ್ದ ನಟನಾಗಿ ಅಷ್ಟೇ ಇರಲಿಲ್ಲ. ಸಾಮಾಜಿಕ ಜವಾಬ್ದಾರಿಗಳನ್ನು ಸಿನಿಮಾಗಳ ಮೂಲಕ ತೋರಿಸಿಕೊಡುತ್ತಿದ್ದರು. ಯುವಕರು ಹಾದಿ ತಪ್ಪಬಹುದಾದ ಸಿನಿಮಾಗಳನ್ನು ಅವರು ಮಾಡಲಿಲ್ಲ.

ಜೂನಿಯರ್‌ ರಾಜ್‌ಕುಮಾರ್‌ ಎಂದೇ ಖ್ಯಾತರಾದ ಹಾವೇರಿಯ ಅಶೋಕ್‌ ಬಸ್ತಿ ಅವರು ರಾಜ್‌ಕುಮಾರ್‌ ಅವರ ಹೆಸರಲ್ಲಿ ಸಾಂಸ್ಕೃತಿಕ ಭವನ ಮಾಡಲಿದ್ದರು. ಅದೇ ಸಮಯದಲ್ಲಿ ಧಾರಾವಾಡದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರು ಶೂಟಿಂಗ್‌ನಲ್ಲಿ ಇದ್ದರು. ಅಶೋಕ್ ಬಸ್ತಿ ಅವರ ಸಾಂಸ್ಕೃತಿಕ ಭವನದ ಕುರಿತು ಪುನೀತ್‌ ಅವರಿಗೆ ತಿಳಿಸಿದೆ. ಸಾಂಸ್ಕೃತಿಕ ಭವನದ ಶಂಕು ಸ್ಥಾಪನೆಗೆ ಹೋಗಿಬಂದಿದ್ದರು. ಇನ್ನೊಬ್ಬರು ಜೂನಿಯರ್‌ ರಾಜ್‌ಕುಮಾರ್‌ ಕುಂಬಳಗೋಡು ಬಳಿಯ ಮುನಿಕುಮಾರ್‌. ಪುನೀತ್‌ ರಾಜ್‌ಕುಮಾರ್‌ ಅವರನ್ನು ಭೇಟಿ ಮಾಡಬೇಕು ಎಂಬ ಆಕಾಂಕ್ಷೆಯನ್ನು ತೋಡಿಕೊಂಡಿದ್ದರು. ಇದನ್ನು ತಿಳಿಸಲು ಹದಿನೈದು ದಿನಗಳ ಹಿಂದೆ ಪುನೀತ್ ಅವರಿಗೆ ಕರೆ ಮಾಡಿದ್ದೆ. “ಚೂರು ಕೆಲಸಗಳಿವೆ. ಖಂಡಿತ ಭೇಟಿ ಮಾಡೋಣ” ಎಂದಿದ್ದರು.

ಮೊದಲೆಲ್ಲ ಕರೆ ಮಾಡಿದಾಗ ‘ಸಾರ್‌’ ಎನ್ನುತ್ತಿದ್ದರು. ಇತ್ತೀಚೆಗೆ ನನ್ನನ್ನು ‘ಅಣ್ಣ’ ಎನ್ನುತ್ತಿದ್ದರು. ಮೊನ್ನೆಯೂ ‘ಆಯ್ತು ಅಣ್ಣ, ಮುನಿಕುಮಾರ್‌ ಅವರನ್ನು ಭೇಟಿಯಾಗೋಣ’ ಎಂದಿದ್ದರು. ಅಷ್ಟು ಆತ್ಮೀಯತೆ ಇತ್ತು. ಯಾವುದಾದರೂ ಆಡಿಯೋ ರಿಲೀಸ್‌ಗೆ ಕರೆದರೆ ತಕ್ಷಣ ಬಂದು ಬಿಡುತ್ತಿದ್ದರು. ಒಂದು ಸಿನಿಮಾವನ್ನು ನೀವು ನೋಡಬೇಕು ಎಂದರೆ ಬಂದು ನೋಡುತ್ತಿದ್ದರು. ಅವರ ವಿನಯವಂತಿಗೆ ಅಪಾರ.

ಅವರನ್ನು ಚಿಕ್ಕವರಿದ್ದಾಗಿನಿಂದಲೂ ನೋಡಿದ್ದೇನೆ. ಅವರ ಅಭಿನಯ, ಅವರು ನಡೆದುಕೊಳ್ಳುತ್ತಿದ್ದ ರೀತಿ… ಇಷ್ಟು ಚಿಕ್ಕ ವಯಸ್ಸಿಗೆ ಹೋಗಿದ್ದನ್ನು ಊಹಿಸಿಕೊಳ್ಳಲೂ ಆಗುತ್ತಿಲ್ಲ.

-ಡಾ.ಬರಗೂರು ರಾಮಚಂದ್ರಪ್ಪ

ನಿರೂಪಣೆ: ಯತಿರಾಜ್‌ ಬ್ಯಾಲಹಳ್ಳಿ


ಇದನ್ನೂ ಓದಿರಿ: ಕಂಠೀರವ ಸ್ಟುಡಿಯೊದಲ್ಲಿ ಪುನೀತ್‌ ರಾಜ್‌ಕುಮಾರ್‌ ಅಂತ್ಯ ಸಂಸ್ಕಾರ; ಬಿಗಿ ಬಂದೋಬಸ್ತ್‌‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....