ತಮಿಳುನಾಡಿನ ಸಾಥನ್ಕುಲಂ ಎಂಬಲ್ಲಿ ಮೊಬೈಲ್ ಫೋನ್ ಅಂಗಡಿಯೊಂದನ್ನು ನಡೆಸುತ್ತಿದ್ದ ತಂದೆ ಮತ್ತು ಮಗ ಜಯರಾಜ್ ಮತ್ತು ಬೆನ್ನಿಕ್ಸ್ ಅವರ ಲಾಕಪ್ ಡೆತ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಆರೋಪಿ ಪೊಲೀಸ್ ಇನ್ಸ್ಪೆಕ್ಟರ್ ಪಾಲ್ದೊರೈ(56) ಕೊರೊನಾದಿಂದ ನಿಧನರಾಗಿದ್ದಾರೆ.
ಪ್ರಕರಣದಲ್ಲಿ ಬಂಧಕ್ಕೊಳಗಾಗಿರುವ ಹತ್ತು ಪೊಲೀಸರಲ್ಲಿ ಪಾಲ್ದೊರೈ ಒಬ್ಬರಾಗಿದ್ದರು. ಅವರ ಮೇಲೆ ಇಬ್ಬರಿಗೂ ಥಳಿಸಿದ ಆರೋಪಗಳಿದ್ದವು. ಮಧುರೈನ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದ ಪಾಲ್ದೊರೈಗೆ ಮಧುಮೇಹ ಇದ್ದು ಇದು ಸಾವಿಗೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅವರ ಕುಟುಂಬ ಅವರಿಗೆ ಉತ್ತಮ ಚಿಕಿತ್ಸೆ ನೀಡಿಲ್ಲ ಎಂದು ಆರೋಪಿಸಿದೆ.
ಓದಿ: ಸಾಥನ್ಕುಳಂ ಲಾಕಪ್ ಸಾವಿನಿಂದ ಕಲಿಯಬೇಕಾಗಿರುವ ಪಾಠಗಳು
ಮಧುರೈನ ಕೇಂದ್ರ ಕಾರಾಗೃಹದಲ್ಲಿದ್ದ ಅವರನ್ನು ಕಳೆದ ತಿಂಗಳು ಕೊರೊನಾ ವೈರಸ್ ಪಾಸಿಟಿವ್ ಎಂದು ತಿಳಿದ ನಂತರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಉತ್ತಮ ಚಿಕಿತ್ಸೆಗಾಗಿ ಅವರನ್ನು ಕನ್ಯಾಕುಮಾರಿಗೆ ಸ್ಥಳಾಂತರಿಸಲು ಅವರ ಪತ್ನಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಜಯರಾಜ್ (59) ಮತ್ತು ಅವರ ಮಗ ಬೆನಿಕ್ಸ್ (31) ಎಂಬವರನ್ನು ಜೂನ್ 19 ರಂದು ತಮ್ಮ ಮೊಬೈಲ್ ಫೋನ್ ಅಂಗಡಿಯನ್ನು ಲಾಕ್ಡೌನ್ ಸಮಯದಲ್ಲಿ ಅನುಮತಿಸಿದ ಸಮಯಕ್ಕಿಂತ 15 ನಿಮಿಷ ಹೆಚ್ಚು ಕಾಲ ತೆರೆದಿಟ್ಟಿದ್ದಕ್ಕಾಗಿ ಬಂಧಿಸಲಾಯಿತು. ನಂತರ ಅವರಿಬ್ಬರನ್ನು ಪೊಲೀಸ್ ಕಸ್ಟಡಿಯಲ್ಲಿ ಕ್ರೂರ ಚಿತ್ರಹಿಂಸೆಗೊಳಪಡಿಸಿ ಕೊಲ್ಲಲಾಗಿತ್ತು ಎಂದು ಅವರ ಕುಟುಂಬ ಆರೋಪಿಸಿದೆ.
ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ನಡೆಸುತ್ತಿದೆ.
ಓದಿ: ತಮಿಳುನಾಡು ಲಾಕಪ್ ಡೆತ್: ಪೊಲೀಸ್ ಹಾಗೂ ಮ್ಯಾಜಿಸ್ಟ್ರೇಟ್ ವಿರುದ್ದ ಹಲವಾರು ಆರೋಪ