ತಮಿಳುನಾಡು ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿಯೇ, ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಬಿಜೆಪಿ ಹಾಗೂ ಆಡಳಿತರೂಢ ಎಐಎಡಿಎಂಕೆ ನಡುವೆ ಗಲಾಟೆಗಳು ಪ್ರಾರಂಭವಾಗಿದೆ.
ಬಿಜೆಪಿಯು ವಿಧಾನಸಭಾ ಚುನಾವಣೆಯ ನಂತರ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಾಗುವುದು ಎಂದು ಬುಧವಾರ ಸ್ಪಷ್ಟಪಡಿಸಿದೆ. ಆದರೆ ಎಐಎಡಿಎಂಕೆ ಮಾತ್ರ ಪಳನಿಸ್ವಾಮಿ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿದೆ. ತಾನು ಎನ್ಡಿಎ ಮೈತ್ರಿಕೂಟದ ಅತೀ ದೊಡ್ಡ ಪಕ್ಷ ಎಂದು ಅದು ಪ್ರತಿಪಾದಿಸಿದೆ.
ಇದನ್ನೂ ಓದಿ: ಕಳಚಿಕೊಳ್ಳುತ್ತಿದೆ NDA ನ ಒಂದೊಂದೇ ಕೊಂಡಿ – BJP ಗೆ ಆಘಾತ ನೀಡಿದ ತಮಿಳುನಾಡು!
ಮೈತ್ರಿಪಕ್ಷಗಳ ನಡುವಿನ ವಾಕ್ಸಮರದ ಕುರಿತು ಬಿಜೆಪಿ ತಮಿಳುನಾಡು ಉಸ್ತುವಾರಿ ಸಿ.ಟಿ.ರವಿ ಅವರು ಸರಣಿ ಟ್ವೀಟ್ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಚುನಾವಣೆ ಮುಗಿದ ನಂತರ ಎನ್ಡಿಎ ಸಮನ್ವಯ ಸಮಿತಿಯು ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಿಸುತ್ತದೆ” ಎಂದು ಹೇಳಿದ್ದಾರೆ.
“ಚುನಾವಣೆ ದಿನಾಂಕ ಘೋಷಣೆಯಾದ ನಂತರ ಸೀಟುಗಳ ಹಂಚಿಕೆ ಕುರಿತಂತೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಮಿತ್ರ ಪಕ್ಷಗಳೊಂದಿಗೆ ಬಿಜೆಪಿ ಸೌಹಾರ್ದ ಸಂಬಂಧ ಹೊಂದಿದೆ. ಅವರ ಸಲಹೆ–ಸೂಚನೆಗಳನ್ನು ಮುಕ್ತವಾಗಿ ಆಲಿಸುತ್ತದೆ. ಆದರೆ, ಬಿಜೆಪಿ ವರಿಷ್ಠರನ್ನು ಒಳಗೊಂಡ ಸಮಿತಿ ಪರಿಸ್ಥಿತಿಗೆ ತಕ್ಕಂತೆ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ” ಎಂದು ಅವರು ಹೇಳಿದ್ದಾರೆ.
ಆದರೆ ಎಐಎಡಿಎಂಕೆ ನಾಯಕ ಒ.ಪನ್ನೀರ್ಸೆಲ್ವಂ, “ಮುಖ್ಯಮಂತ್ರಿ ಅಭ್ಯರ್ಥಿ ಕುರಿತಂತೆ ನಮ್ಮ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ’’ ಎಂದು ಹೇಳಿದ್ದಾರೆ. ಮತ್ತೊಬ್ಬ ನಾಯಕ ಕೆ.ಪಿ.ಮುನುಸ್ವಾಮಿ “ನಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ ನಡೆಸುವವರಿಗೆ ರಾಜಕೀಯದ ಬಗ್ಗೆ ಏನು ಗೊತ್ತು – ತಮಿಳುನಾಡು ಸಿಎಂ: ತಿರುಗೇಟು ನೀಡಿದ ಕಮಲ್