ಕರ್ನಾಟಕದಲ್ಲಿ ವಿವಾದಾತ್ಮಕ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ನಂತರ, ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕೆ ರಾಜ್ಯದಲ್ಲಿ ದಾಖಲಾದ ಮೊದಲ ಪ್ರಕರಣದ ಮೇಲೆ ಹಲವಾರು ಸಂಶಯಗಳೆದ್ದಿವೆ. ಹೊಸ ಕಾಯಿದೆಯ ಅನ್ವಯ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಜಾನುವಾರು ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದೆ. ಅಲ್ಲದೆ ಜಾನುವಾರು ಸಾಗಾಟಗಾರನ ಮೇಲೆ ಶೃಂಗೇರಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಲಾಗಿದೆ.
ದಾವಣೆಗೆರೆಯ ಆಬಿದ್ ಅಲಿ (45) ಹಲವು ವರ್ಷಗಳಿಂದ ಅಧಿಕೃತವಾಗಿ ಜಾನುವಾರು ಸಾಗಾಟ ಮಾಡುವ ವೃತ್ತಿ ಮಾಡುತ್ತಿದ್ದರು. ನೂತನ ಕಾಯ್ದೆಯ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಜನವರಿ 7ರ ಗುರುವಾರದಂದು ರಾಣಿಬೆನ್ನೂರಿನಿಂದ ಮಂಗಳೂರಿಗೆ ಕೆಲವು ಜಾನುವಾರುಗಳನ್ನು ಸಾಗಿಸುತ್ತಿದ್ದರು. ಈ ನಡುವೆ ಶೃಂಗೇರಿಯ ತನಿಕೋಡ್ ಚೆಕ್ಪೋಸ್ಟ್ ಬಳಿ ಲಾರಿಯನ್ನು ತಡೆಗಟ್ಟಿದ ಗುಂಪೊಂದು ಆಬಿದ್ ಅಲಿಯವರಿಗೆ ಕಬ್ಭಿಣದ ರಾಡ್ಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಲಾರಿಯಲ್ಲಿದ್ದ ಮತ್ತೊಬ್ಬ ಹಲ್ಲೆಕೋರರ ಕೈಯಿಂದ ತಪ್ಪಿಸಿಕೊಂಡಿದ್ದಾರೆ. ನಂತರ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ, ಹಲ್ಲೆಗೊಳಗಾದ ಆಬಿದ್ ಅಲಿಯ ಮೇಲೆಯೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಗೋಹತ್ಯೆ ನಿಷೇಧ ಮಸೂದೆ: ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ ರಾಜ್ಯ ಸರ್ಕಾರ
ಹಲ್ಲೆಗೊಳಗಾದ ಆಬಿದ್ ಅಲಿಯನ್ನು ಪ್ರಾಥಮಿಕ ಚಿಕಿತ್ಸೆಗೆ ಶೃಂಗೇರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗೆ ಜಿಲ್ಲಾ ಆಸ್ಪತ್ರೆಗೆ ದಾಖಲಾದ ನಂತರ, ಇನ್ನೂ ಹೆಚ್ಚಿನ ಚಿಕಿತ್ಸೆಗೆ ದಾವಣೆಗೆರೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸರ್ಕಾರದ ಎಲ್ಲಾ ಅನುಮತಿಗಳನ್ನು ಪಡೆದೆ ತಾನು ಜಾನುವಾರು ಸಾಗಾಟ ಮಾಡಿದ್ದೇನೆ ಅಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂ ಜೊತೆ ಮಾಡನಾಡಿದ ಆಬಿದ್ ಅಲಿ, “ನೂತನ ಕಾನೂನಿನ ಪ್ರಕಾರ ಸರ್ಕಾರದ ಪರವಾನಿಗೆ ಮತ್ತು ಪಶುವೈದ್ಯರ ಅನುಮತಿ ಪತ್ರ ಪಡೆದು ನಾನು ಜಾನುವಾರು ಸಾಗಣೆ ಮಾಡುತ್ತಿದ್ದೆ. ಹೀಗಿರುವಾಗ ನನ್ನ ಮೇಲೆಯೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ನನ್ನ ಮೇಲೆ ಹಾಕಿರುವ ಪ್ರಕರಣವವನ್ನು ಹಿಂಪಡೆಯಬೇಕು. ಅಲ್ಲದೆ ನನ್ನ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಗೋಹತ್ಯೆ ನಿಷೇಧ: ವಯಸ್ಸಾದ ದನಗಳನ್ನು ಸರ್ಕಾರವೇ ಖರೀದಿಸಲಿ – ಸಿದ್ದರಾಮಯ್ಯ ಸಲಹೆ
ಆಬಿದ್ ಅಲಿಗೆ ಹಲ್ಲೆ ಮಾಡಿದ್ದಲ್ಲದೆ ಅವರ ಎರಡು ಮೊಬೈಲ್, 22 ಸಾವಿರ ರೂಗಳಷ್ಟು ಹಣವನ್ನು ದೋಚಲಾಗಿದೆ. ಜೊತೆಗೆ ವಾಹನದಲ್ಲಿದ್ದ ಅವರ ಅಣ್ಣನ ಫೋನ್ ನಂಬರ್ಗಳನ್ನು ಪಡೆದು ಅವರಿಗೂ ಜೀವ ಬೆದರಿಕೆ ಹಾಕಲಾಗಿದೆ. ಆಬಿದ್ ಅಲಿಯವರಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ನಾಲ್ಕು ಜನರ ಮೇಲೆ ಪ್ರಕರಣ ದಾಖಲಾಗಿದ್ದರೂ ಪೊಲೀಸರು ಇದುವರೆಗೂ ಅವರನ್ನು ಬಂಧಿಸಿಲ್ಲ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಗೋಹತ್ಯೆ ಕಾನೂನಿನ ಕಾರಣಕ್ಕೆ ಈ ಪ್ರಕರಣವು ಕರ್ನಾಟಕದಾದ್ಯಂತ ಸುದ್ದಿಯಾಗಿತ್ತು. ಹೊಸ ಕಾಯ್ದೆಯಡಿ ರಾಜ್ಯದಲ್ಲಿ ಹತ್ಯೆಗಾಗಿ ಗೋವು ಮಾರಾಟ, ಸಾಗಣೆಯ ಮೇಲೆ ನಿರ್ಬಂಧ ವಿಧಿಸಲಾಗಿದೆ. ಆರೋಪ ಸಾಬೀತಾದರೆ 3 ರಿಂದ 7 ವರ್ಷ ಜೈಲು ಶಿಕ್ಷೆ, ಜೊತೆಗೆ 50 ಸಾವಿರದಿಂದ 5 ಲಕ್ಷದವರೆಗೆ ದಂಡ ವಿಧಿಸಲು ಅವಕಾಶ ಇದೆ. ಆದರೆ ವಯಸ್ಸಾದ ಜಾನುವಾರಗಳನ್ನು ಅಧಿಕೃತ ದಾಖಲೆಯೊಂದಿಗೆ ಮಾಂಸಕ್ಕೆ ಬಳಸಬಹುದಾಗಿದೆ.
ಇದನ್ನೂ ಓದಿ: ಗೋಹತ್ಯೆ ನಿಷೇಧ ಮಸೂದೆ: ಆತಂಕ ವ್ಯಕ್ತಪಡಿಸಿದ ಮೃಗಾಲಯದ ಅಧಿಕಾರಿಗಳು!