ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ಬಿಜೆಪಿಯ ಸ್ಪಷ್ಟ ಅನುಪಸ್ಥಿತಿಯ ಕಾರಣಕ್ಕೆ ಸಾರ್ವಜನಿಕರಲ್ಲಿ ಪಕ್ಷದ ಬಗ್ಗೆ ಆಕ್ರೋಶ ಮತ್ತು ಅಸಮಾಧಾನ ಶುರುವಾಗಿದೆ ಎಂಬುದನ್ನು ಮನಗಂಡಿರುವ ಬಿಜೆಪಿ ಪಕ್ಷ ತನ್ನ ಎಲ್ಲ ಹಂತದ ನಾಯಕರಿಗೂ ಜನರಿಗೆ ನೆರವಾಗಲು ಸೂಚಿಸಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಕಷ್ಟದಲ್ಲಿರುವ ಜನರೊಂದಿಗೆ “ಅನುಭೂತಿ ಮತ್ತು ಸಹಾನುಭೂತಿ”ಯಿಂದ ವರ್ತಿಸಲು ಹೇಳಿದೆ.
ಈ ಕುರಿತು ಎಲ್ಲ ಹಂತಗಳ ನಾಯಕರೊಂದಿಗೆ ವರ್ಚುವಲ್ ಸಭೆಗಳನ್ನು ನಡೆಸುತ್ತಿರುವ ಪಕ್ಷದ ಅಧ್ಯಕ್ಷ ಜೆ.ಪಿ ನಡ್ಡಾ, ಪಕ್ಷದ ಮುಖಂಡರಿಗೆ ಔಷಧಿಗಳ ವಿತರಣೆ, ಆಸ್ಪತ್ರೆ ಹಾಸಿಗೆಗಳ ಲಭ್ಯತೆ ಮತ್ತು ಆರೋಗ್ಯ ಮೂಲಸೌಕರ್ಯಗಳ ಹೆಚ್ಚಳ, ಆಮ್ಲಜನಕ ಲಭ್ಯತೆಗಳನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡಲು ತಿಳಿಸಿದ್ದಾರೆ. ‘ಮನೆಯಿಂದ ಹೊರಬನ್ನಿ ಜನರಿಗೆ ನೆರವಾಗಿ’ ಎಂದು ನೇರವಾಗಿ ತಿಳಿಸಿದ್ದಾರೆ.
ಎರಡನೇ ಅಲೆಯು ಗ್ರಾಮೀಣ ಪ್ರದೇಶಗಳಿಗೆ ಹರಡುತ್ತಿರುವಾಗ ಕೇಂದ್ರ ಸರ್ಕಾರದ ಮೇಲೆ ಆರೋಪಿಸಿ, ನಮ್ಮ ಇಮೇಜ್ ಹಾಳು ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಟೂಲ್ಕಿಟ್ ಹೆಸರಲ್ಲಿ ಬಿಜೆಪಿ ಟ್ವೀಟ್ಗಳನ್ನು ಮಾಡಲಾಗಿತ್ತು. ಕಾಂಗ್ರೆಸ್ನ ನಕಲಿ ಲೆಟರ್ಹೆಡ್ ಬಳಸಿ ಇದನ್ನು ರಚಿಸಲಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದ ಟ್ವೀಟರ್ ಈ ಟ್ವೀಟ್ಗಳನ್ನು ಮ್ಯಾನಿಪುಲೆಟೆಡ್ ಮೀಡಿಯಾ ಎಂದು ಕರೆದಿತ್ತು. ಇದು ಬಿಜೆಪಿಗೆ ಮುಜುಗರ ತಂದಿತ್ತು
“ಪಕ್ಷ ಮತ್ತು ಸರ್ಕಾರದ ವಿರುದ್ಧ ನಕಾರಾತ್ಮಕ ನಿರೂಪಣೆ ಸೃಷ್ಟಿಯಾಗಿದೆ ಎಂಬುದು ನಿಜ” ಎಂದು ಬಿಜೆಪಿಯ ಹಿರಿಯ ಮುಖಂಡರು ಇಂಡಿಯನ್ ಎಕ್ಸ್ಪ್ರೆಸ್ ಎದುರು ಒಪ್ಪಿಕೊಂಡರು.
“ವಿಷಯಗಳನ್ನು ಸಾಮಾನ್ಯ ಸ್ಥಿತಿಗೆ ತಂದ ನಂತರವೇ ನಾವು ಅದರ ವಿರುದ್ಧ ಕೆಲಸ ಮಾಡಬಹುದು. ಅನೇಕರು ತಮ್ಮ ಕುಟುಂಬ ಸದಸ್ಯರನ್ನು ಮತ್ತು ಹತ್ತಿರದವರನ್ನು ಕಳೆದುಕೊಂಡಿರುವ ಸಮಯ ಇದು. ನಾವು ಅವರ ನೋವನ್ನು ಶಮನಗೊಳಿಸುವ, ಅವರ ತೊಂದರೆಗಳನ್ನು ಸರಾಗಗೊಳಿಸುವ ಮತ್ತು ಅವರೊಂದಿಗೆ ನಿಲ್ಲುವ ಸಮಯ. ಪಕ್ಷದ ಮುಖಂಡರು ಮತ್ತು ರಾಜ್ಯದಾದ್ಯಂತದ ಕಾರ್ಯಕರ್ತರು ಜನರ ಬಗ್ಗೆ ಸಹಾನುಭೂತಿ ಹೊಂದಲು ಕೇಳಿಕೊಳ್ಳಲಾಗಿದೆ’ ಎಂದರು.
ಕೋವಿಡ್ ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಕಾರ್ಯತಂತ್ರದ ಭಾಗವಾಗಲಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕದಿಂದ ಅನಾಥವಾಗಿರುವ ಮಕ್ಕಳ ಕಲ್ಯಾಣಕ್ಕಾಗಿ ಕಾರ್ಯಕ್ರಮವನ್ನು ಸಿದ್ಧಪಡಿಸುವಂತೆ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಶನಿವಾರ ಪಕ್ಷದ ಆಡಳಿತದ ರಾಜ್ಯಗಳನ್ನು ಕೇಳಿದರು. ಮೋದಿ ಸರ್ಕಾರ ಏಳು ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಿದಾಗ ಅದನ್ನು ಮೇ 30 ರಂದು ಪ್ರಾರಂಭಿಸಬೇಕು ಎಂದು ಹೇಳಿದರು.
ಬಿಜೆಪಿ ಆಡಳಿತದ ರಾಜ್ಯಗಳ ಸಿಎಂಗಳಿಗೆ ಬರೆದ ಪತ್ರದಲ್ಲಿ, ಎನ್ಡಿಎ ಸರ್ಕಾರದ ವಾರ್ಷಿಕೋತ್ಸವದಂದು ಯಾವುದೇ ಕಾರ್ಯಕ್ರಮ ನಡೆಯುವುದಿಲ್ಲ ಎಂದು ನಡ್ಡಾ ಒತ್ತಿ ಹೇಳಿದ್ದಾರೆ. ಬದಲಾಗಿ, ಜನರಿಗೆ ಪಕ್ಷದ ಕೃತಜ್ಞತೆಯನ್ನು ವ್ಯಕ್ತಪಡಿಸಲು ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಾರಂಭಿಸಬೇಕು ಎಂದಿದ್ದಾರೆ.
“ಸಂಸದರು ಮತ್ತು ಶಾಸಕರು ಆಯಾ ಪ್ರದೇಶಗಳಲ್ಲಿನ ಆಸ್ಪತ್ರೆಗಳಲ್ಲಿ ಆಮ್ಲಜನಕ ಸ್ಥಾವರ ಅಳವಡಿಸಲಾಗಿದೆಯೇ ಎಂದು ನೋಡಬೇಕು, ಹಾಸಿಗೆಗಳ ಲಭ್ಯತೆಗಾಗಿ ಖಾಸಗಿ ಆಸ್ಪತ್ರೆಗಳ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಬೇಕು, ಔಷಧಿಗಳನ್ನು ವಿತರಿಸಬೇಕು ಮತ್ತು ಕಷ್ಟದ ಸಮಯದಲ್ಲಿ ಸಂತ್ರಸ್ತರಿಗೆ ನೈತಿಕ ಬೆಂಬಲವಾಗಿರಬೇಕು” ಎಂದು ಬಿಜೆಪಿ ನಾಯಕ ಸೂಚಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಮಿಲಿಟರಿ ಕೇಂದ್ರಕ್ಕೆೆ ಸೋನು ಸೂದ್ ಸಹಾಯ ಕೋರಿದ ಕಮಾಂಡರ್, ಕೋಪಗೊಂಡ ಹಿರಿಯ ಸೇನಾ ಅಧಿಕಾರಿಗಳು


