ಕೊರೊನಾ ಸೋಂಕು ತಡೆಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ರಾತ್ರಿ ಕರ್ಫ್ಯೂ ಆದೇಶವನ್ನು ಹಿಂಪಡೆಯಲಾಗಿದ್ದು, ಶುಕ್ರವಾರದಿಂದ ಕರ್ಫ್ಯೂ ಇರುವುದಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಜಾರಿಯಲ್ಲಿದ್ದ ಕರ್ಪ್ಯೂ ತೆರವಾಗಿದೆ. ಅಕ್ಟೋಬರ್ 25ಕ್ಕೆ ನೈಟ್ ಕರ್ಫ್ಯೂಗೆ ಸಂಬಂಧಿಸಿ ಪರಿಷ್ಕೃತ ಆದೇಶ ಹೊರಡಿಸಿತ್ತು. ಇದೀಗ ನೈಟ್ ಕರ್ಫ್ಯೂವನ್ನು ಸಂಪೂರ್ಣವಾಗಿ ತೆಗೆದು ಹಾಕಿದ್ದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್ ಹೊಸ ಆದೇಶ ಹೊರಡಿಸಿದ್ದಾರೆ.
ಅಕ್ಟೋಬರ್ 25ಕ್ಕೆ ನೈಟ್ ಕರ್ಫ್ಯೂವನ್ನು ಮುಂದುವರಿಸಿರುವ ಆದೇಶವನ್ನು ಪ್ರಕಟಿಸಲಾಗಿತ್ತು. ಇದು ಜನರಲ್ಲಿ ಸಾಕಷ್ಟು ಗೊಂದಲಗಳನ್ನು ಉಂಟುಮಾಡಿತ್ತು. ರಾತ್ರಿ ಕರ್ಫ್ಯೂ ಅಗತ್ಯತೆ ಬಗ್ಗೆಯೂ ಜನರು ಪ್ರಶ್ನಿಸಿದ್ದರು. ಇದು ಕಾಗದ ಮೇಲಿನ ಕರ್ಫ್ಯೂ ಅಷ್ಟೇ ಎಂಬ ಟೀಕೆಗಳು ವ್ಯಕ್ತವಾಗಿದ್ದವು.
ಬೆಳಿಗ್ಗೆಯಿಂದ ಸಂಜೆಯವರೆಗೆ ಜನರು ಹೊರಗಡೆ ತಿರುಗಾಡಿ, ರಾತ್ರಿ ಮನೆಯಲ್ಲಿರುತ್ತಾರೆ. ಹೀಗಿರುವ ರಾತ್ರಿ ವೇಳೆ ಕರ್ಫ್ಯೂ ಜಾರಿ ಯಾಕೆ ಮಾಡಲಾಗುತ್ತದೆ ಎಂಬ ಪ್ರಶ್ನೆಯನ್ನು ಮೊದಲಿನಿಂದಲೂ ಜನರು ಕೇಳುತ್ತಲೇ ಇದ್ದಾರೆ. ಬೆಳಿಗ್ಗೆ ಇದೀಗ ಹೊಸ ಆದೇಶವನ್ನು 10 ದಿನಗಳ ಬಳಿಕ ಸರ್ಕಾರ ತೆಗೆದು ಹಾಕಿದೆ.
ಕರ್ಪ್ಯೂ ತೆಗೆದು ಹಾಕಿರುವ ಬೆನ್ನಲ್ಲೇ ಕುದುರೆ ರೇಸ್ಗೆ ಸರ್ಕಾರ ಅನುಮತಿ ನೀಡಲಾಗಿದೆ. ಕುದುರೆ ರೇಸ್ ನಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೋವಿಡ್ ಲಸಿಕೆಯ ಎರಡು ಡೋಸ್ಗಳನ್ನು ಪಡೆದಿರುವುದು ಕಡ್ಡಾಯ ಎಂದು ಸೂಚಿಸಲಾಗಿದೆ. ಸ್ಥಳಾವಕಾಶಕ್ಕೆ ಅನುಗುಣವಾಗಿ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಲಾಗಿದೆ.
ಗುರುವಾರದ ಮಾಹಿತಿ ಪ್ರಕಾರ ರಾಜ್ಯದಲ್ಲಿ 261 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಐವರು ಕೋವಿಡ್ ಕಾರಣದಿಂದ ಮೃತರಾಗಿದ್ದಾರೆ. ಒಟ್ಟಾರೆ ಇದುವರೆಗೆ 29,89,275 ಮಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಒಟ್ಟು 38,095 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿರಿ: ‘ಆಕ್ಟ್-1978′ ಸೇರಿ ನಾಲ್ಕು ಕನ್ನಡ ಸಿನಿಮಾಗಳು ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆ