Homeಮುಖಪುಟಪ್ರಜಾಪೀಡನೆಗೆ ಕಾನೂನಿನ ಬಳಕೆಯೆ?

ಪ್ರಜಾಪೀಡನೆಗೆ ಕಾನೂನಿನ ಬಳಕೆಯೆ?

ಅಧ್ಯಾಪಕನೂ ತಂದೆಯೂ ಆಗಿರುವ ಪ್ರಜೆಯೊಬ್ಬನ ಕೆಲವು ತಲ್ಲಣ, ಪ್ರಶ್ನೆ

- Advertisement -
- Advertisement -

ಇಂದು ದೇಶವನ್ನು ಆಳುತ್ತಿರುವ ಪ್ರಭುತ್ವಶಕ್ತಿಯು ದೇಶದ್ರೋಹವೆಸಗಿದ್ದಕ್ಕೆ ಶಿಕ್ಷೆ ವಿಧಿಸುವ ಕಾಯಿದೆ, ಯುಎಪಿಎ  ಕಾಯಿದೆ, ಎನ್‍ಎಸ್‍ಎ ಕಾಯಿದೆ ಮುಂತಾದ ಹಲವು ಭಯಂಕರ ಕಾಯಿದೆಗಳನ್ನು ಯಾವುದೇ ವಿವೇಚನೆಯಿಲ್ಲದೆ, ಕ್ಷುಲ್ಲಕ ಕಾರಣಗಳಿಗಾಗಿ, ಬೇಕಾಬಿಟ್ಟಿಯಾಗಿ ಅನ್ವಯಿಸಿ, ಹಲವರನ್ನು ಬಂಧನದಲ್ಲಿಡುತ್ತಿದೆ, ಹಲವರಮೇಲೆ ಮೊಕದ್ದಮೆ ಹೂಡಿದೆ. ಈಚೆಗೆ, ಬೀದರಿನ ಶಾಹೀನ್ ಶಾಲೆಯ ಪ್ರಕರಣ ಮತ್ತು ಉತ್ತರಪ್ರದೇಶದ ಕರ್ತವ್ಯನಿಷ್ಠೆಯ ವೈದ್ಯ ಕಫೀಲ್ ಖಾನ್ ಅವರ ಪ್ರಕರಣದ ಬಳಿಕ, ಹುಬ್ಬಳ್ಳಿಯಲ್ಲಿ ಓದುತ್ತಿರುವ ಮೂವರು ವಿದ್ಯಾರ್ಥಿಗಳು ಹಾಗೂ ಬೆಂಗಳೂರಿನಲ್ಲಿ ಓದುತ್ತಿರುವ ಅಮೂಲ್ಯಾ ಲಿಯೊನಾ ಎಂಬ ಹುಡುಗಿ ಇಂಥ ಒಂದು ಕ್ರಮಕ್ಕೆ ತುತ್ತಾಗಿದ್ದಾರೆ.

ಹುಬ್ಬಳ್ಳಿಯ ಕೆಎಲ್‍ಇ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದುತ್ತಿರುವ ಮೂವರು ಕಾಶ್ಮೀರೀ ವಿದ್ಯಾರ್ಥಿಗಳು ‘ಪಾಕಿಸ್ತಾನ್ ಜ಼ಿಂದಾಬಾದ್’ ಎಂಬ ಘೋಷಣೆಯನ್ನು ಕೂಗಿದರು, ತಾವು ಹಾಗೆ ಕೂಗುತ್ತಿರುವುದರ ವಿಡಿಯೋ ಮುದ್ರಣಮಾಡಿ ವಾಟ್ಸಾಪ್‌ನಲ್ಲಿ ತಮ್ಮ ಸ್ನೇಹಿತರ ಜೊತೆ ಹಂಚಿಕೊಂಡರು ಅನ್ನುವುದು ಅವರ ಮೇಲಿರುವ ಆರೋಪ.

ಮೊದಲಿಗೆ, ಭಾರತದ ಒಬ್ಬ ಪ್ರಜೆಯಾಗಿ, ನಾಗರಿಕನಾಗಿ ಕೆಲವು ಮಾತು, ಪ್ರಶ್ನೆ ಮುಂದಿಡುತ್ತೇನೆ.

ಜ಼ಿಂದಾಬಾದ್ ಎಂದರೆ ‘ಚಿರಕಾಲ, ಅಥವಾ ನೂರ್ಕಾಲ ಬಾಳಲಿ’ ಎಂದರ್ಥ. ಸದಾಶಯವುಳ್ಳ ಮಾತು ಅದು; ಯಾರಿಗೂ ಕೇಡನ್ನು ಬಯಸುವಂಥದಲ್ಲ. ಪಾಕಿಸ್ತಾನವಾಗಲಿ, ಈಥಿಯೋಪಿಯಾ ಆಗಲಿ, ಹಂಗೆರಿ ಆಗಲಿ, ಬೊಲಿವಿಯಾ ಆಗಲಿ, ಕ್ಯಾಮರೂನ್ ಆಗಲಿ, ಚಿಕ್ಕನಾಯಕನಹಳ್ಳಿಯಾಗಲಿ, ತಿರುನೆಲ್ವೇಲಿಯಾಗಲಿ, ಮಂಗಳಗ್ರಹವೋ, ಶುಕ್ರಗ್ರಹವೋ, ಮತ್ತೊಂದು ಗ್ರಹವೋ ಆಗಲಿ, ಅದು ಚೆನ್ನಾಗಿರಲಿ ಎಂದು ಬಯಸುವುದರಲ್ಲಿ ತಪ್ಪೇನಿದೆ?! ಪಾಕಿಸ್ತಾನವೂ ಸೇರಿದಂತೆ, ಯಾರಿಗೇ ಯಾವುದಕ್ಕೇ ಆಗಲಿ, ಒಳಿತಾಗಲಿ ಎಂದು ಬಯಸಕೂಡದೆಂದು ಭಾರತದ ಸಂವಿಧಾನದಲ್ಲಿಲ್ಲವಲ್ಲ! ಒಟ್ಟು ಭಾರತೀಯ ಪರಂಪರೆಯೇ ‘ಲೋಕಾಸ್ಸಮಸ್ತಾಃ ಸುಖಿನೋ ಭವಂತು/ ಸರ್ವೇ ಸಂತು ನಿರಾಮಯಾಃ/ ಸರ್ವೇ ಭದ್ರಾಣಿ ಪಶ್ಯಂತು/ ಮಾಕಶ್ಚಿತ್ ದುಃಖ ಭಾಗ್ಭವೇತ್’  ಅನ್ನುತ್ತದೆಯಲ್ಲ! ಮೇಲಾಗಿ, ಈ ಹುಡುಗರು ಭಾರತವು ಹಾಳಾಗಲಿ ಎಂದು ಘೋಷಿಸಲಿಲ್ಲವಲ್ಲ! ಭಾರತವನ್ನು ಹಾಳುಮಾಡುವವರಂತೆ ಆ ವಿಡಿಯೋದಲ್ಲಿ ಆ ಹುಡುಗರು ಕಾಣುತ್ತಾರೆಯೇ? ಅವರು ಹಾಗೆ ಮಾಡಬಹುದು ಅನ್ನುವುದಕ್ಕೆ ಪುರಾವೆ ಇದೆಯೇ? ಅಂಥ ಯಾವ ಪುರಾವೆಯಿಲ್ಲವೆಂದು ತಾನೆ, ಅವರನ್ನು ಮೊತ್ತಮೊದಲ ಬಾರಿ ದಸ್ತಗಿರಿಮಾಡಿದ ದಿನ, ಫೆಬ್ರವರಿ 16ರಂದು, ಸಂಜೆಯ ಹೊತ್ತಿಗೇ ಪೊಲೀಸರು ಅವರ ಬಿಡುಗಡೆಮಾಡಿದ್ದು? ಆದರೆ, ಅದೇ ದಿನವೇ ಅವರನ್ನು ಮತ್ತೆ ಬಂಧಿಸಿ, ಅವರ ಮೇಲೆ ದೇಶದ್ರೋಹದಂಥ ಗಂಭೀರ ಆರೋಪ ಹೊರಿಸಿದ್ದಕ್ಕೆ ಕಾರಣ, ಪೊಲೀಸ್ ಸ್ಟೇಷನ್ನಿನ ಹೊರಗೆ ಸಂಘಪರಿವಾರದ ಸಂಘಟನೆಗಳು ದೊಂಬಿ ಸೇರಿ ಗಲಾಟೆಮಾಡಿ, ಒತ್ತಡ ಬೀರಿದ್ದೇ ಹೌದಲ್ಲವೇ? ಈ ನಮ್ಮ ದೇಶದ ಕಾನೂನು ಪಾಲನೆಯ ವ್ಯವಸ್ಥೆಯು ದೊಂಬಿ ಸೇರಿದ ಜನ ಹೇಳಿದಂತೆ ನಡೆದುಕೊಳ್ಳುವಂತಾಯಿತೇ?

ಇನ್ನು, ಆಜಾ಼ದೀ ಅರ್ಥಾತ್ ಬಿಡುಗಡೆ ಎಂದು ಆ ಮೂವರು ಹುಡುಗರು ಕೂಗಿದ್ದು ಆ ವಿಡಿಯೋದಲ್ಲಿ ಕಾಣುತ್ತದೆ. ಆ ಮಾತನ್ನು ನಾನೂ ಕೂಗಿದ್ದೇನೆ!  ಸಿಎಎ, ಎನ್‍ಆರ್‌ಸಿ ಮತ್ತು ಎನ್‍ಪಿಆರ್‌ಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತ, ಆ ಕಾನೂನುಗಳಿಂದ ನಮಗೆಲ್ಲ ಬಿಡುಗಡೆಯಾಗಲಿ ಎಂದು ಕೂಗುತ್ತಿರುವ ನಾವೆಲ್ಲರೂ ದೇಶದ್ರೋಹಿಗಳೇ? ಸರಕಾರ ಹಾಗೂ ಸಂಘ ಪರಿವಾರದ ರೀತಿನೀತಿಗಳನ್ನು ಒಪ್ಪದೇ, ಶಾಂತಿಯುತವಾಗಿ ಭಿನ್ನಮತ ತಾಳುವುದು ದೇಶದ್ರೋಹವಾಯಿತೇ?

ಈ ಮುಂದಿನ ಮಾತನ್ನು ತಲ್ಲಣಗೊಂಡ ಅಧ್ಯಾಪಕನೊಬ್ಬನಾಗಿ ಆಡುತ್ತಿದ್ದೇನೆ. ತಮ್ಮ ವಿದ್ಯಾರ್ಥಿಗಳು ಪೊಲೀಸರಿಂದ ಯಾವುದೇ ಬಗೆಯ ಬಂಧನಕ್ಕೆ ಒಳಗಾಗುವುದು, ಅದರಲ್ಲಿಯೂ ದೇಶದ್ರೋಹದ ಆರೋಪವನ್ನು ಅನ್ಯಾಯವಾಗಿ ಎದುರಿಸುವುದು, ಅಧ್ಯಾಪಕರಾದವರಿಗೆ ಯಾವತ್ತಿಗೂ ಕರುಳು ಹಿಂಡುವ ಸಂಗತಿ.

ಯಾರೇ ಆಗಲಿ, ಆ ಹುಡುಗರಂತೆ, ತಮ್ಮ ಕೋಣೆಯಲ್ಲಿ ಕೂತು ಯಾವುದೋ ಪಾಪ್‍ ಹಾಡನ್ನು ಕೇಳುತ್ತ ನಮ್ಮ ನೆರೆಯ ದೇಶಕ್ಕೆ ಒಳ್ಳೆಯದನ್ನು ಬಯಸಿ ಎರಡು ಘೋಷಣೆ ಕೂಗುವುದು, ಅದರ ಒಂದು ಚಿಕ್ಕ ವಿಡಿಯೋವನ್ನು ತಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳುವುದು ದೇಶದ್ರೋಹದ ಕೆಲಸ ಹೇಗಾಗುತ್ತದೆ? ಒಂದು ವೇಳೆ, ಕಾಲೇಜಿನ ಆಡಳಿತವರ್ಗಕ್ಕೆ, ಕಾಲೇಜಿನಲ್ಲಿನ ಬೇರೆ ವಿದ್ಯಾರ್ಥಿಗಳು ಆ ಮೂವರ ಜೊತೆ  ಜಗಳವಾಡಬಹುದೆಂಬ ಆತಂಕವಿತ್ತು ಎಂದಿಟ್ಟುಕೊಳ್ಳೋಣ. ಅದನ್ನು ಆ ಕಾಲೇಜಿನ ಪ್ರಿನ್ಸಿಪಾಲರು ಮತ್ತು ಹಾಸ್ಟೆಲಿನ ವಾರ್ಡೆನ್ ಅವರು ಸುಲಭವಾಗಿ ನಿವಾರಿಸಿಕೊಳ್ಳಬಹುದಿತ್ತು: ಆ ಹುಡುಗರನ್ನು ತಮ್ಮ ಕಚೇರಿಗೆ ಕರೆಸಿ, ಗಟ್ಟಿಯಾದ ಎಚ್ಚರಿಕೆ ನೀಡಿ, ‘ಸುಮ್ಮನೆ ಓದಿಕೊಂಡು, ಚೆನ್ನಾಗಿರಿ’ ಅನ್ನಬಹುದಿತ್ತು. ಹಾಗೆಯೇ, ಉಳಿದ ವಿದ್ಯಾರ್ಥಿಗಳಿಗೂ ‘ನಿಮ್ಮ ಆ ಸಹಪಾಠಿಗಳಮೇಲೆ ಜುಲುಮೆ ಮಾಡಬೇಡಿ, ಹೊಂದಿಕೊಂಡಿರಿ, ಹೋಗಿ’ ಎಂದು ಗದರಿಸಿ, ಬುದ್ಧಿ ಹೇಳಬಹುದಿತ್ತು. ಹೆಚ್ಚಿನ ವೇಳೆ, ಪರಿಸ್ಥಿತಿಯನ್ನು ಸರಿಮಾಡಲು ಅಂಥ ಮಾತೇ ಸಾಕಾಗುತ್ತದೆ. ಕೆಲವು ವರದಿಗಳು ಹೇಳುವಂತೆ, ಆ ಕಾಲೇಜಿನವರು, ಪಾಪ, ಹಾಗೆ ಮಾಡಿದ್ದರು ಕೂಡ.

ಮೇಲೆ ಹೇಳಿದ ಆ ಅದೇ ವರದಿಗಳಲ್ಲಿರುವಂತೆ, ಆ ಮೂವರು ಹುಡುಗರ ಮೇಲೆ ಇಂಥ ಗುರುತರವಾದ ಆರೋಪ ಹೊರಿಸುವುದು ಪೊಲೀಸರಿಗೂ ಇಷ್ಟವಿರುವಂತೆ ತೋರುವುದಿಲ್ಲ.

ಪರಿಸ್ಥಿತಿ ಈಮಟ್ಟಕ್ಕೆ ಹೋಗಿರುವುದು, ಸಂಘ ಪರಿವಾರದ ಕೆಲವು ಸಂಘಟನೆಗಳವರು ಈ ಮೂವರು ವಿದ್ಯಾರ್ಥಿಗಳ ವಿರುದ್ಧ ಮಾಡಿದ ದೊಂಬಿ ಗಲಾಟೆಯಿಂದ. ಅದರ ಒತ್ತಡಕ್ಕೆ ಕಾಲೇಜಿನವರು, ಪೊಲೀಸನವರು, ಇಬ್ಬರೂ ಮಣಿಯಬೇಕಾಯಿತು. ದೊಂಬಿಯನ್ನು ನಿಭಾಯಿಸಿ, ಅದಕ್ಕೆ ಬುದ್ಧಿ ಹೇಳಬೇಕಿದ್ದ ಸರಕಾರದ ಬೇರೆ ಆಡಳಿತಗಾರರು ಕೂಡ ತಮ್ಮ ಕೆಲಸ ಮಾಡಿಲ್ಲ. ಸಂಘ ಪರಿವಾರದ ಮುಖಂಡರಂತೂ ಇಂಥ ಅನ್ಯಾಯಕ್ಕೆ ಕುಮ್ಮಕ್ಕು ಕೊಟ್ಟಂತೆಯೇ ಕಾಣುತ್ತದೆ: ದೊಂಬಿಯು ನ್ಯಾಯಾಲಯದ ಅಂಗಳದಲ್ಲಿಯೇ ಆ ಹುಡುಗರ ಮೇಲೆ ದಾಳಿಮಾಡಿದೆ. ದಾಳಿ ಮಾಡಿದವರ ಮೇಲೆ ಪೊಲೀಸರು ಯಾವುದೇ ಕ್ರಮ ಕೈಗೊಂಡಂತೆ ಕಾಣುವುದಿಲ್ಲ.

ಆ ಮೂವರು ಹುಡುಗರು ನಿರಂತರ ಹಿಂಸೆಯಿಂದ ಕಂಗಾಲಾಗಿರುವ ತಮ್ಮ ನಾಡನ್ನು ಬಿಟ್ಟು ಪ್ರಧಾನ ಮಂತ್ರಿಗಳ ಒಂದು ವಿಶೇಷ ಕೋಟಾದ ಅಡಿಯಲ್ಲಿ ಸಂಪೂರ್ಣ ಉಚಿತವಾದ ವಿದ್ಯಾಭ್ಯಾಸ ಪಡೆದುಕೊಳ್ಳಲು ದೂರದ ಹುಬ್ಬಳ್ಳಿಗೆ ಬಂದವರು. ಅಂಥ ತಮ್ಮ ಮಕ್ಕಳ ವಿಷಯದಲ್ಲಿ ಅವರ ತಂದೆತಾಯಂದಿರಿಗೆ ಎಷ್ಟು ಸಂತೋಷವಾಗಿರಬೇಡ?! ಈಗ ಆ ತಂದೆತಾಯಂದಿರ ಪಾಡೇನು, ಆ ಮಕ್ಕಳ ಪಾಡೇನು? ಆ ಮಕ್ಕಳು ಅಚಾತುರ್ಯದ ಕೆಲಸ ಮಾಡಿದ್ದಾರೆ, ಹಾದಿ ತಪ್ಪಿದ್ದಾರೆ ಅನ್ನಿಸಿದರೆ, ಅಧ್ಯಾಪಕರು ಮತ್ತು ಸುತ್ತಲಿನ ಸಮಾಜದ ಹಿರಿಯರು ಆ ಹುಡುಗರ ತಂದೆತಾಯಂದಿರೊಡಗೂಡಿ ಅನುನಯದ ಮಾತು, ಗದರಿಕೆಯ ಉಗುರಿನಿಂದ ಪರಿಹರಿಸಬಹುದಾದ್ದಕ್ಕೆ ಕರಾಳ ಕಾನೂನಿನ ಕೊಡಲಿ ಹೊಡೆತವೇಕೆ?

ವಿವೇಕವಿಲ್ಲದ, ದಮನಕಾರಿಯಾದ ಇಂಥ ಬಂಧನಗಳಿಂದಾಗಿ, ಕಾಶ್ಮೀರ ಕಣಿವೆಯ ಜನರ ನಂಬಿಕೆಯನ್ನು ಸಂಪೂರ್ಣ ಕಳೆದುಕೊಂಡಿರುವ ನಮ್ಮ ಕೇಂದ್ರ ಸರಕಾರವು ಅದನ್ನು ಎಂದಾದರೂ ಮತ್ತೆ ಪಡೆಯುವ ಎಲ್ಲ ದಾರಿಗಳನ್ನು ಮುಚ್ಚಿಹಾಕಿದೆ.

ಮಗುವಿನ ಮೇಲೆ ಬ್ರಹ್ಮಾಸ್ತ್ರದ ಪ್ರಯೋಗ

ಈ ಕೆಳಗಿರುವ ಮಾತನ್ನು ಒಬ್ಬ ತಂದೆಯಾಗಿ ಬರೆಯುತ್ತಿದ್ದೇನೆ.

ಕಾಶ್ಮೀರದ ಆ ಮೂವರು ಹುಡುಗರಮೇಲೆ ಮೊಕದ್ದಮೆ ಹೊರಿಸಲಾಗಿರುವುದರ ಬೆನ್ನಿಗೇ ಬೆಂಗಳೂರಿನ ಅಮೂಲ್ಯಾ ಲಿಯೊನಾ ಪ್ರಕರಣ ನಡೆದಿದೆ. ಅಮೂಲ್ಯಳು, ಮತ್ತೊಬ್ಬರು ಸಂಘಟಿಸಿದ ಸಭೆಯಲ್ಲಿ, ಸಭೆಯ ಸಂಘಟಕರಿಗೆ ಯಾವ ಸೂಚನೆಯನ್ನೂ ನೀಡದೆ, ವೇದಿಕೆಯೇರಿ ಆ ಬಗೆಯ ಘೋಷಣೆ ಕೂಗಿದ್ದು ತಪ್ಪೆನ್ನಬಹುದೇ ಹೊರತು, ಆ ಹುಡುಗಿ ಹೊಂದಿರುವ ಆಶಯಗಳೇ ತಪ್ಪು ಎಂದು ಸಾರಾಸಗಟು ಹೇಳಲು ಬರುವುದಿಲ್ಲ. ಪಾಕಿಸ್ತಾನ್ ಜ಼ಿಂದಾಬಾದ್ ಎಂದು ಕೂಗುವುದರ ಜೊತೆಗೆ, ಹಿಂದೂಸ್ತಾನ್ ಜ಼ಿಂದಾಬಾದ್ ಎಂದು ಕೂಡ ಕೂಗಿದಳು ಅವಳು. ಅರ್ಥಾತ್, ಎರಡೂ ದೇಶಗಳು ಚೆನ್ನಾಗಿರಲಿ, ಪರಸ್ಪರ ಸ್ನೇಹದಿಂದಿರಲಿ ಅನ್ನುವುದೇ ಅವಳ ಆಶಯವಲ್ಲವೇ?

ಅಮೂಲ್ಯಳ  ದುಡುಕಿನ ವರ್ತನೆಯಿಂದ ಗಾಬರಿಗೊಂಡ ಆ ಸಭೆಯ ಸಂಘಟಕರು ಮತ್ತು ಸಭಿಕರು ಪಾಕಿಸ್ತಾನ್ ಮುರ್ದಾಬಾದ್ (ಪಾಕಿಸ್ತಾನ ಸಾಯಲಿ, ನಾಶವಾಗಲಿ) ಎಂದು ಕೂಗಿ, ತಮ್ಮ ಸ್ವದೇಶಪ್ರೇಮ ಸಾರಬೇಕಾಯಿತು. ನಾವು ನಮ್ಮ ನೆರೆಯ, ಸೋದರ ದೇಶವೊಂದು ಹಾಳಾಗಲಿ ಎಂದು ಕೂಗಿ ನಮ್ಮ ಸ್ವದೇಶಪ್ರೇಮವನ್ನು ಸಾಬೀತುಮಾಡಬೇಕಾದ್ದು ಎಂಥ ದುಃಖದ ವಿಷಯವಲ್ಲವೇ?

ಆದರೆ, ಪ್ರಭುತ್ವವು ಹತ್ತೊಂಭತ್ತರ ವಯಸ್ಸಿನ ಚಿಕ್ಕವಳು ಅಮೂಲ್ಯಳ ದುಡುಕಿನ ಆ ವರ್ತನೆ ಮತ್ತು ಸಣ್ಣ ಮೂರ್ಖತನಕ್ಕೆ ಪ್ರತಿಯಾಗಿ ಅವಳಮೇಲೆ ಎಂಥೆಂಥ ಭಯಂಕರ ಕಾಯ್ದೆಗಳ ಅನ್ವಯ ಮೊಕದ್ದಮೆ ಹೂಡಿದೆ! ಮಗು ಅದು. ನಾಲ್ಕು ಮಾತು ಬೈದು, ಒಂದಷ್ಟು ಬುದ್ಧಿಮಾತು ಹೇಳಿ, ಕೌನ್ಸೆಲಿಂಗ್ ಮಾಡಿ ಬಿಟ್ಟುಬಿಡಬೇಕಿತ್ತು ಅದನ್ನು. ಬದಲಾಗಿ, ಮಗುವಿನಮೇಲೆ ಬ್ರಹ್ಮಾಸ್ತ್ರದ ಪ್ರಯೋಗಮಾಡುತ್ತಿದ್ದಾರೆ.  ಅದಂತೂ ಅನೃತ, ಅಧರ್ಮ; ಮಹಾಪಾಪದ ಕೆಲಸ.

ಅಮೂಲ್ಯಳ ಬಂಧನವಾದ ದಿನದಂದೇ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಅವಳ ತಂದೆಯ ಮನೆಯಮೇಲೆ ಪುಂಡರ ದಾಳಿ ನಡೆದಿದೆ. ಅವರ ಮನೆಯ ಕಿಟಕಿ ಗಾಜುಗಳು, ಮನೆಯ ಪೌಳಿಯಲ್ಲಿನ ವಸ್ತುಗಳು ಚೂರುಚೂರಾಗಿವೆ. ಬಳಿಕ, ಸಂಘ ಪರಿವಾರದ ಯುವಕರು ಹಲವರು ಅಮೂಲ್ಯಳ ತಂದೆಯನ್ನು ಬೆದರಿಸಿ ಆತ ತನ್ನ ಮಗಳ ವಿರುದ್ಧ ಕಟುವಾದ ಮಾತಾಡುವಂತೆ ಮಾಡಿದ್ದಾರೆ. ಅದೆಲ್ಲವನ್ನೂಒಳಗೊಂಡಿರುವ ವಿಡಿಯೋವನ್ನು ಅವರು ರಾಜಾರೋಷವಾಗಿ ಹಂಚಿಕೊಂಡಿದ್ದಾರೆ. ಅದು ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಟಿವಿ ವಾಹಿನಿಗಳಲ್ಲಿ ಬಿತ್ತರಗೊಂಡಿದೆ. ಅದರಲ್ಲಿ ತನ್ನ ಸುತ್ತ ಯಮದೂತರಂತೆ ನಿಂತು ಒತ್ತಾಯಮಾಡುತ್ತಿರುವ ಆ ಜನರಿಂದ ಆ ತಂದೆ ಭಯಭೀತನಾಗಿ ತನ್ನ ಮಗಳ ವಿರುದ್ಧ ಮಾತನಾಡುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇಷ್ಟಾಗಿಯೂ ಆ ದೌರ್ಜನ್ಯವೆಸಗಿದವರ ಮೇಲೆ ಪ್ರಭುತ್ವ ಮತ್ತು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ಆ ಚಿಕ್ಕಹುಡುಗಿಯಮೇಲೆ ಮಾತ್ರ ರಾಕ್ಷಸೀಯ ಕಾಯಿದೆಯೊಂದರ ಗದಾಪ್ರಹಾರವಾಗಿದೆ.

ವಿವೇಕ, ಹೃದಯವಂತಿಕೆ ಬೇಕಿದೆ

ಕರ್ನಾಟಕ ಸರಕಾರವು ಆ ಮೂವರು ಹುಡುಗರಮೇಲೆ, ಅಮೂಲ್ಯಳಮೇಲೆ, ಮೈಸೂರಿನಲ್ಲಿ ಪ್ರತಿಭಟಿಸಿದ ನಳಿನಿ ಬಾಲಕುಮಾರ್ ಮೇಲೆ ಹಾಗೂ ಬೀದರಿನ ಶಾಹೀನ್ ಶಾಲೆಯ ಪ್ರಕರಣದ ಆ ಮಗುವಿನ ತಾಯಿ ಹಾಗೂ ಅಲ್ಲಿನ ಉಳಿದ ಆರೋಪಿಗಳ ಮೇಲೆ ಹೂಡಿರುವ ಮೊಕದ್ದಮೆಗಳನ್ನು ವಾಪಸು ತೆಗೆದುಕೊಳ್ಳುವ ವಿವೇಕ ಮತ್ತು ಹೃದಯವಂತಿಕೆ ತೋರಲಿ.

ಜೊತೆಗೆ, ‘ದೇಶದ್ರೋಹಿಗಳು, ಭಯೋತ್ಪಾದಕರು, ಶಾಂತಿಭಂಗ ಉಂಟುಮಾಡುವವರು, ದೇಶದ ಸುರಕ್ಷೆತೆಗೆ ಧಕ್ಕೆ ತರುವವರು, ಅರ್ಬನ್ ನಕ್ಸಲ್‍ಗಳು, ಟುಕ್‍ಡೇ ಟುಕ್‍ಡೇ ಗ್ಯಾಂಗಿನವರು’ ಮುಂತಾಗಿ, ಘನಘೋರವಾದ ಆಪಾದನೆಗಳನ್ನು ಬೇಕಾಬಿಟ್ಟಿಯಾಗಿ ಹೊರಿಸಿ, ಕಾನೂನನ್ನು ಪ್ರಜಾಪೀಡನೆಗೆ ಬಳಸುತ್ತಿರುವ ಕೇಂದ್ರ ಸರಕಾರವನ್ನು ಹಾಗೂ ಅದರ ಹಾದಿಯನ್ನೇ ತುಳಿಯುತ್ತಿರುವ ರಾಜ್ಯ ಸರಕಾರಗಳನ್ನು, ವಿವಿಧ ರಾಜ್ಯಗಳ ಉಚ್ಚ ನ್ಯಾಯಾಲಯಗಳು, ಹಾಗೂ ದೇಶದ ಸರ್ವೋಚ್ಚ ನ್ಯಾಯಾಲಯವು, ಕಟುವಾಗಿ ಪ್ರಶ್ನಿಸಿ, ಕಾನೂನಿನ ದುರುಪಯೋಗವನ್ನು ತಡೆಯಲಿ; ಜನರನ್ನು, ದೇಶವನ್ನು, ಸದ್ಧರ್ಮವನ್ನು ಕಾಯಲಿ.

********

(ಲೇಖಕರು ಕನ್ನಡದ ಕವಿ, ನಾಟಕಕಾರ ಮತ್ತು ಖ್ಯಾತ ರಂಗನಿರ್ದೇಶಕರು. ಅಭಿಪ್ರಾಯಗಳು ವೈಯಕ್ತಿಕವಾದವು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...