Homeಮುಖಪುಟಪ್ರಜಾಪೀಡನೆಗೆ ಕಾನೂನಿನ ಬಳಕೆಯೆ?

ಪ್ರಜಾಪೀಡನೆಗೆ ಕಾನೂನಿನ ಬಳಕೆಯೆ?

ಅಧ್ಯಾಪಕನೂ ತಂದೆಯೂ ಆಗಿರುವ ಪ್ರಜೆಯೊಬ್ಬನ ಕೆಲವು ತಲ್ಲಣ, ಪ್ರಶ್ನೆ

- Advertisement -
- Advertisement -

ಇಂದು ದೇಶವನ್ನು ಆಳುತ್ತಿರುವ ಪ್ರಭುತ್ವಶಕ್ತಿಯು ದೇಶದ್ರೋಹವೆಸಗಿದ್ದಕ್ಕೆ ಶಿಕ್ಷೆ ವಿಧಿಸುವ ಕಾಯಿದೆ, ಯುಎಪಿಎ  ಕಾಯಿದೆ, ಎನ್‍ಎಸ್‍ಎ ಕಾಯಿದೆ ಮುಂತಾದ ಹಲವು ಭಯಂಕರ ಕಾಯಿದೆಗಳನ್ನು ಯಾವುದೇ ವಿವೇಚನೆಯಿಲ್ಲದೆ, ಕ್ಷುಲ್ಲಕ ಕಾರಣಗಳಿಗಾಗಿ, ಬೇಕಾಬಿಟ್ಟಿಯಾಗಿ ಅನ್ವಯಿಸಿ, ಹಲವರನ್ನು ಬಂಧನದಲ್ಲಿಡುತ್ತಿದೆ, ಹಲವರಮೇಲೆ ಮೊಕದ್ದಮೆ ಹೂಡಿದೆ. ಈಚೆಗೆ, ಬೀದರಿನ ಶಾಹೀನ್ ಶಾಲೆಯ ಪ್ರಕರಣ ಮತ್ತು ಉತ್ತರಪ್ರದೇಶದ ಕರ್ತವ್ಯನಿಷ್ಠೆಯ ವೈದ್ಯ ಕಫೀಲ್ ಖಾನ್ ಅವರ ಪ್ರಕರಣದ ಬಳಿಕ, ಹುಬ್ಬಳ್ಳಿಯಲ್ಲಿ ಓದುತ್ತಿರುವ ಮೂವರು ವಿದ್ಯಾರ್ಥಿಗಳು ಹಾಗೂ ಬೆಂಗಳೂರಿನಲ್ಲಿ ಓದುತ್ತಿರುವ ಅಮೂಲ್ಯಾ ಲಿಯೊನಾ ಎಂಬ ಹುಡುಗಿ ಇಂಥ ಒಂದು ಕ್ರಮಕ್ಕೆ ತುತ್ತಾಗಿದ್ದಾರೆ.

ಹುಬ್ಬಳ್ಳಿಯ ಕೆಎಲ್‍ಇ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದುತ್ತಿರುವ ಮೂವರು ಕಾಶ್ಮೀರೀ ವಿದ್ಯಾರ್ಥಿಗಳು ‘ಪಾಕಿಸ್ತಾನ್ ಜ಼ಿಂದಾಬಾದ್’ ಎಂಬ ಘೋಷಣೆಯನ್ನು ಕೂಗಿದರು, ತಾವು ಹಾಗೆ ಕೂಗುತ್ತಿರುವುದರ ವಿಡಿಯೋ ಮುದ್ರಣಮಾಡಿ ವಾಟ್ಸಾಪ್‌ನಲ್ಲಿ ತಮ್ಮ ಸ್ನೇಹಿತರ ಜೊತೆ ಹಂಚಿಕೊಂಡರು ಅನ್ನುವುದು ಅವರ ಮೇಲಿರುವ ಆರೋಪ.

ಮೊದಲಿಗೆ, ಭಾರತದ ಒಬ್ಬ ಪ್ರಜೆಯಾಗಿ, ನಾಗರಿಕನಾಗಿ ಕೆಲವು ಮಾತು, ಪ್ರಶ್ನೆ ಮುಂದಿಡುತ್ತೇನೆ.

ಜ಼ಿಂದಾಬಾದ್ ಎಂದರೆ ‘ಚಿರಕಾಲ, ಅಥವಾ ನೂರ್ಕಾಲ ಬಾಳಲಿ’ ಎಂದರ್ಥ. ಸದಾಶಯವುಳ್ಳ ಮಾತು ಅದು; ಯಾರಿಗೂ ಕೇಡನ್ನು ಬಯಸುವಂಥದಲ್ಲ. ಪಾಕಿಸ್ತಾನವಾಗಲಿ, ಈಥಿಯೋಪಿಯಾ ಆಗಲಿ, ಹಂಗೆರಿ ಆಗಲಿ, ಬೊಲಿವಿಯಾ ಆಗಲಿ, ಕ್ಯಾಮರೂನ್ ಆಗಲಿ, ಚಿಕ್ಕನಾಯಕನಹಳ್ಳಿಯಾಗಲಿ, ತಿರುನೆಲ್ವೇಲಿಯಾಗಲಿ, ಮಂಗಳಗ್ರಹವೋ, ಶುಕ್ರಗ್ರಹವೋ, ಮತ್ತೊಂದು ಗ್ರಹವೋ ಆಗಲಿ, ಅದು ಚೆನ್ನಾಗಿರಲಿ ಎಂದು ಬಯಸುವುದರಲ್ಲಿ ತಪ್ಪೇನಿದೆ?! ಪಾಕಿಸ್ತಾನವೂ ಸೇರಿದಂತೆ, ಯಾರಿಗೇ ಯಾವುದಕ್ಕೇ ಆಗಲಿ, ಒಳಿತಾಗಲಿ ಎಂದು ಬಯಸಕೂಡದೆಂದು ಭಾರತದ ಸಂವಿಧಾನದಲ್ಲಿಲ್ಲವಲ್ಲ! ಒಟ್ಟು ಭಾರತೀಯ ಪರಂಪರೆಯೇ ‘ಲೋಕಾಸ್ಸಮಸ್ತಾಃ ಸುಖಿನೋ ಭವಂತು/ ಸರ್ವೇ ಸಂತು ನಿರಾಮಯಾಃ/ ಸರ್ವೇ ಭದ್ರಾಣಿ ಪಶ್ಯಂತು/ ಮಾಕಶ್ಚಿತ್ ದುಃಖ ಭಾಗ್ಭವೇತ್’  ಅನ್ನುತ್ತದೆಯಲ್ಲ! ಮೇಲಾಗಿ, ಈ ಹುಡುಗರು ಭಾರತವು ಹಾಳಾಗಲಿ ಎಂದು ಘೋಷಿಸಲಿಲ್ಲವಲ್ಲ! ಭಾರತವನ್ನು ಹಾಳುಮಾಡುವವರಂತೆ ಆ ವಿಡಿಯೋದಲ್ಲಿ ಆ ಹುಡುಗರು ಕಾಣುತ್ತಾರೆಯೇ? ಅವರು ಹಾಗೆ ಮಾಡಬಹುದು ಅನ್ನುವುದಕ್ಕೆ ಪುರಾವೆ ಇದೆಯೇ? ಅಂಥ ಯಾವ ಪುರಾವೆಯಿಲ್ಲವೆಂದು ತಾನೆ, ಅವರನ್ನು ಮೊತ್ತಮೊದಲ ಬಾರಿ ದಸ್ತಗಿರಿಮಾಡಿದ ದಿನ, ಫೆಬ್ರವರಿ 16ರಂದು, ಸಂಜೆಯ ಹೊತ್ತಿಗೇ ಪೊಲೀಸರು ಅವರ ಬಿಡುಗಡೆಮಾಡಿದ್ದು? ಆದರೆ, ಅದೇ ದಿನವೇ ಅವರನ್ನು ಮತ್ತೆ ಬಂಧಿಸಿ, ಅವರ ಮೇಲೆ ದೇಶದ್ರೋಹದಂಥ ಗಂಭೀರ ಆರೋಪ ಹೊರಿಸಿದ್ದಕ್ಕೆ ಕಾರಣ, ಪೊಲೀಸ್ ಸ್ಟೇಷನ್ನಿನ ಹೊರಗೆ ಸಂಘಪರಿವಾರದ ಸಂಘಟನೆಗಳು ದೊಂಬಿ ಸೇರಿ ಗಲಾಟೆಮಾಡಿ, ಒತ್ತಡ ಬೀರಿದ್ದೇ ಹೌದಲ್ಲವೇ? ಈ ನಮ್ಮ ದೇಶದ ಕಾನೂನು ಪಾಲನೆಯ ವ್ಯವಸ್ಥೆಯು ದೊಂಬಿ ಸೇರಿದ ಜನ ಹೇಳಿದಂತೆ ನಡೆದುಕೊಳ್ಳುವಂತಾಯಿತೇ?

ಇನ್ನು, ಆಜಾ಼ದೀ ಅರ್ಥಾತ್ ಬಿಡುಗಡೆ ಎಂದು ಆ ಮೂವರು ಹುಡುಗರು ಕೂಗಿದ್ದು ಆ ವಿಡಿಯೋದಲ್ಲಿ ಕಾಣುತ್ತದೆ. ಆ ಮಾತನ್ನು ನಾನೂ ಕೂಗಿದ್ದೇನೆ!  ಸಿಎಎ, ಎನ್‍ಆರ್‌ಸಿ ಮತ್ತು ಎನ್‍ಪಿಆರ್‌ಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತ, ಆ ಕಾನೂನುಗಳಿಂದ ನಮಗೆಲ್ಲ ಬಿಡುಗಡೆಯಾಗಲಿ ಎಂದು ಕೂಗುತ್ತಿರುವ ನಾವೆಲ್ಲರೂ ದೇಶದ್ರೋಹಿಗಳೇ? ಸರಕಾರ ಹಾಗೂ ಸಂಘ ಪರಿವಾರದ ರೀತಿನೀತಿಗಳನ್ನು ಒಪ್ಪದೇ, ಶಾಂತಿಯುತವಾಗಿ ಭಿನ್ನಮತ ತಾಳುವುದು ದೇಶದ್ರೋಹವಾಯಿತೇ?

ಈ ಮುಂದಿನ ಮಾತನ್ನು ತಲ್ಲಣಗೊಂಡ ಅಧ್ಯಾಪಕನೊಬ್ಬನಾಗಿ ಆಡುತ್ತಿದ್ದೇನೆ. ತಮ್ಮ ವಿದ್ಯಾರ್ಥಿಗಳು ಪೊಲೀಸರಿಂದ ಯಾವುದೇ ಬಗೆಯ ಬಂಧನಕ್ಕೆ ಒಳಗಾಗುವುದು, ಅದರಲ್ಲಿಯೂ ದೇಶದ್ರೋಹದ ಆರೋಪವನ್ನು ಅನ್ಯಾಯವಾಗಿ ಎದುರಿಸುವುದು, ಅಧ್ಯಾಪಕರಾದವರಿಗೆ ಯಾವತ್ತಿಗೂ ಕರುಳು ಹಿಂಡುವ ಸಂಗತಿ.

ಯಾರೇ ಆಗಲಿ, ಆ ಹುಡುಗರಂತೆ, ತಮ್ಮ ಕೋಣೆಯಲ್ಲಿ ಕೂತು ಯಾವುದೋ ಪಾಪ್‍ ಹಾಡನ್ನು ಕೇಳುತ್ತ ನಮ್ಮ ನೆರೆಯ ದೇಶಕ್ಕೆ ಒಳ್ಳೆಯದನ್ನು ಬಯಸಿ ಎರಡು ಘೋಷಣೆ ಕೂಗುವುದು, ಅದರ ಒಂದು ಚಿಕ್ಕ ವಿಡಿಯೋವನ್ನು ತಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳುವುದು ದೇಶದ್ರೋಹದ ಕೆಲಸ ಹೇಗಾಗುತ್ತದೆ? ಒಂದು ವೇಳೆ, ಕಾಲೇಜಿನ ಆಡಳಿತವರ್ಗಕ್ಕೆ, ಕಾಲೇಜಿನಲ್ಲಿನ ಬೇರೆ ವಿದ್ಯಾರ್ಥಿಗಳು ಆ ಮೂವರ ಜೊತೆ  ಜಗಳವಾಡಬಹುದೆಂಬ ಆತಂಕವಿತ್ತು ಎಂದಿಟ್ಟುಕೊಳ್ಳೋಣ. ಅದನ್ನು ಆ ಕಾಲೇಜಿನ ಪ್ರಿನ್ಸಿಪಾಲರು ಮತ್ತು ಹಾಸ್ಟೆಲಿನ ವಾರ್ಡೆನ್ ಅವರು ಸುಲಭವಾಗಿ ನಿವಾರಿಸಿಕೊಳ್ಳಬಹುದಿತ್ತು: ಆ ಹುಡುಗರನ್ನು ತಮ್ಮ ಕಚೇರಿಗೆ ಕರೆಸಿ, ಗಟ್ಟಿಯಾದ ಎಚ್ಚರಿಕೆ ನೀಡಿ, ‘ಸುಮ್ಮನೆ ಓದಿಕೊಂಡು, ಚೆನ್ನಾಗಿರಿ’ ಅನ್ನಬಹುದಿತ್ತು. ಹಾಗೆಯೇ, ಉಳಿದ ವಿದ್ಯಾರ್ಥಿಗಳಿಗೂ ‘ನಿಮ್ಮ ಆ ಸಹಪಾಠಿಗಳಮೇಲೆ ಜುಲುಮೆ ಮಾಡಬೇಡಿ, ಹೊಂದಿಕೊಂಡಿರಿ, ಹೋಗಿ’ ಎಂದು ಗದರಿಸಿ, ಬುದ್ಧಿ ಹೇಳಬಹುದಿತ್ತು. ಹೆಚ್ಚಿನ ವೇಳೆ, ಪರಿಸ್ಥಿತಿಯನ್ನು ಸರಿಮಾಡಲು ಅಂಥ ಮಾತೇ ಸಾಕಾಗುತ್ತದೆ. ಕೆಲವು ವರದಿಗಳು ಹೇಳುವಂತೆ, ಆ ಕಾಲೇಜಿನವರು, ಪಾಪ, ಹಾಗೆ ಮಾಡಿದ್ದರು ಕೂಡ.

ಮೇಲೆ ಹೇಳಿದ ಆ ಅದೇ ವರದಿಗಳಲ್ಲಿರುವಂತೆ, ಆ ಮೂವರು ಹುಡುಗರ ಮೇಲೆ ಇಂಥ ಗುರುತರವಾದ ಆರೋಪ ಹೊರಿಸುವುದು ಪೊಲೀಸರಿಗೂ ಇಷ್ಟವಿರುವಂತೆ ತೋರುವುದಿಲ್ಲ.

ಪರಿಸ್ಥಿತಿ ಈಮಟ್ಟಕ್ಕೆ ಹೋಗಿರುವುದು, ಸಂಘ ಪರಿವಾರದ ಕೆಲವು ಸಂಘಟನೆಗಳವರು ಈ ಮೂವರು ವಿದ್ಯಾರ್ಥಿಗಳ ವಿರುದ್ಧ ಮಾಡಿದ ದೊಂಬಿ ಗಲಾಟೆಯಿಂದ. ಅದರ ಒತ್ತಡಕ್ಕೆ ಕಾಲೇಜಿನವರು, ಪೊಲೀಸನವರು, ಇಬ್ಬರೂ ಮಣಿಯಬೇಕಾಯಿತು. ದೊಂಬಿಯನ್ನು ನಿಭಾಯಿಸಿ, ಅದಕ್ಕೆ ಬುದ್ಧಿ ಹೇಳಬೇಕಿದ್ದ ಸರಕಾರದ ಬೇರೆ ಆಡಳಿತಗಾರರು ಕೂಡ ತಮ್ಮ ಕೆಲಸ ಮಾಡಿಲ್ಲ. ಸಂಘ ಪರಿವಾರದ ಮುಖಂಡರಂತೂ ಇಂಥ ಅನ್ಯಾಯಕ್ಕೆ ಕುಮ್ಮಕ್ಕು ಕೊಟ್ಟಂತೆಯೇ ಕಾಣುತ್ತದೆ: ದೊಂಬಿಯು ನ್ಯಾಯಾಲಯದ ಅಂಗಳದಲ್ಲಿಯೇ ಆ ಹುಡುಗರ ಮೇಲೆ ದಾಳಿಮಾಡಿದೆ. ದಾಳಿ ಮಾಡಿದವರ ಮೇಲೆ ಪೊಲೀಸರು ಯಾವುದೇ ಕ್ರಮ ಕೈಗೊಂಡಂತೆ ಕಾಣುವುದಿಲ್ಲ.

ಆ ಮೂವರು ಹುಡುಗರು ನಿರಂತರ ಹಿಂಸೆಯಿಂದ ಕಂಗಾಲಾಗಿರುವ ತಮ್ಮ ನಾಡನ್ನು ಬಿಟ್ಟು ಪ್ರಧಾನ ಮಂತ್ರಿಗಳ ಒಂದು ವಿಶೇಷ ಕೋಟಾದ ಅಡಿಯಲ್ಲಿ ಸಂಪೂರ್ಣ ಉಚಿತವಾದ ವಿದ್ಯಾಭ್ಯಾಸ ಪಡೆದುಕೊಳ್ಳಲು ದೂರದ ಹುಬ್ಬಳ್ಳಿಗೆ ಬಂದವರು. ಅಂಥ ತಮ್ಮ ಮಕ್ಕಳ ವಿಷಯದಲ್ಲಿ ಅವರ ತಂದೆತಾಯಂದಿರಿಗೆ ಎಷ್ಟು ಸಂತೋಷವಾಗಿರಬೇಡ?! ಈಗ ಆ ತಂದೆತಾಯಂದಿರ ಪಾಡೇನು, ಆ ಮಕ್ಕಳ ಪಾಡೇನು? ಆ ಮಕ್ಕಳು ಅಚಾತುರ್ಯದ ಕೆಲಸ ಮಾಡಿದ್ದಾರೆ, ಹಾದಿ ತಪ್ಪಿದ್ದಾರೆ ಅನ್ನಿಸಿದರೆ, ಅಧ್ಯಾಪಕರು ಮತ್ತು ಸುತ್ತಲಿನ ಸಮಾಜದ ಹಿರಿಯರು ಆ ಹುಡುಗರ ತಂದೆತಾಯಂದಿರೊಡಗೂಡಿ ಅನುನಯದ ಮಾತು, ಗದರಿಕೆಯ ಉಗುರಿನಿಂದ ಪರಿಹರಿಸಬಹುದಾದ್ದಕ್ಕೆ ಕರಾಳ ಕಾನೂನಿನ ಕೊಡಲಿ ಹೊಡೆತವೇಕೆ?

ವಿವೇಕವಿಲ್ಲದ, ದಮನಕಾರಿಯಾದ ಇಂಥ ಬಂಧನಗಳಿಂದಾಗಿ, ಕಾಶ್ಮೀರ ಕಣಿವೆಯ ಜನರ ನಂಬಿಕೆಯನ್ನು ಸಂಪೂರ್ಣ ಕಳೆದುಕೊಂಡಿರುವ ನಮ್ಮ ಕೇಂದ್ರ ಸರಕಾರವು ಅದನ್ನು ಎಂದಾದರೂ ಮತ್ತೆ ಪಡೆಯುವ ಎಲ್ಲ ದಾರಿಗಳನ್ನು ಮುಚ್ಚಿಹಾಕಿದೆ.

ಮಗುವಿನ ಮೇಲೆ ಬ್ರಹ್ಮಾಸ್ತ್ರದ ಪ್ರಯೋಗ

ಈ ಕೆಳಗಿರುವ ಮಾತನ್ನು ಒಬ್ಬ ತಂದೆಯಾಗಿ ಬರೆಯುತ್ತಿದ್ದೇನೆ.

ಕಾಶ್ಮೀರದ ಆ ಮೂವರು ಹುಡುಗರಮೇಲೆ ಮೊಕದ್ದಮೆ ಹೊರಿಸಲಾಗಿರುವುದರ ಬೆನ್ನಿಗೇ ಬೆಂಗಳೂರಿನ ಅಮೂಲ್ಯಾ ಲಿಯೊನಾ ಪ್ರಕರಣ ನಡೆದಿದೆ. ಅಮೂಲ್ಯಳು, ಮತ್ತೊಬ್ಬರು ಸಂಘಟಿಸಿದ ಸಭೆಯಲ್ಲಿ, ಸಭೆಯ ಸಂಘಟಕರಿಗೆ ಯಾವ ಸೂಚನೆಯನ್ನೂ ನೀಡದೆ, ವೇದಿಕೆಯೇರಿ ಆ ಬಗೆಯ ಘೋಷಣೆ ಕೂಗಿದ್ದು ತಪ್ಪೆನ್ನಬಹುದೇ ಹೊರತು, ಆ ಹುಡುಗಿ ಹೊಂದಿರುವ ಆಶಯಗಳೇ ತಪ್ಪು ಎಂದು ಸಾರಾಸಗಟು ಹೇಳಲು ಬರುವುದಿಲ್ಲ. ಪಾಕಿಸ್ತಾನ್ ಜ಼ಿಂದಾಬಾದ್ ಎಂದು ಕೂಗುವುದರ ಜೊತೆಗೆ, ಹಿಂದೂಸ್ತಾನ್ ಜ಼ಿಂದಾಬಾದ್ ಎಂದು ಕೂಡ ಕೂಗಿದಳು ಅವಳು. ಅರ್ಥಾತ್, ಎರಡೂ ದೇಶಗಳು ಚೆನ್ನಾಗಿರಲಿ, ಪರಸ್ಪರ ಸ್ನೇಹದಿಂದಿರಲಿ ಅನ್ನುವುದೇ ಅವಳ ಆಶಯವಲ್ಲವೇ?

ಅಮೂಲ್ಯಳ  ದುಡುಕಿನ ವರ್ತನೆಯಿಂದ ಗಾಬರಿಗೊಂಡ ಆ ಸಭೆಯ ಸಂಘಟಕರು ಮತ್ತು ಸಭಿಕರು ಪಾಕಿಸ್ತಾನ್ ಮುರ್ದಾಬಾದ್ (ಪಾಕಿಸ್ತಾನ ಸಾಯಲಿ, ನಾಶವಾಗಲಿ) ಎಂದು ಕೂಗಿ, ತಮ್ಮ ಸ್ವದೇಶಪ್ರೇಮ ಸಾರಬೇಕಾಯಿತು. ನಾವು ನಮ್ಮ ನೆರೆಯ, ಸೋದರ ದೇಶವೊಂದು ಹಾಳಾಗಲಿ ಎಂದು ಕೂಗಿ ನಮ್ಮ ಸ್ವದೇಶಪ್ರೇಮವನ್ನು ಸಾಬೀತುಮಾಡಬೇಕಾದ್ದು ಎಂಥ ದುಃಖದ ವಿಷಯವಲ್ಲವೇ?

ಆದರೆ, ಪ್ರಭುತ್ವವು ಹತ್ತೊಂಭತ್ತರ ವಯಸ್ಸಿನ ಚಿಕ್ಕವಳು ಅಮೂಲ್ಯಳ ದುಡುಕಿನ ಆ ವರ್ತನೆ ಮತ್ತು ಸಣ್ಣ ಮೂರ್ಖತನಕ್ಕೆ ಪ್ರತಿಯಾಗಿ ಅವಳಮೇಲೆ ಎಂಥೆಂಥ ಭಯಂಕರ ಕಾಯ್ದೆಗಳ ಅನ್ವಯ ಮೊಕದ್ದಮೆ ಹೂಡಿದೆ! ಮಗು ಅದು. ನಾಲ್ಕು ಮಾತು ಬೈದು, ಒಂದಷ್ಟು ಬುದ್ಧಿಮಾತು ಹೇಳಿ, ಕೌನ್ಸೆಲಿಂಗ್ ಮಾಡಿ ಬಿಟ್ಟುಬಿಡಬೇಕಿತ್ತು ಅದನ್ನು. ಬದಲಾಗಿ, ಮಗುವಿನಮೇಲೆ ಬ್ರಹ್ಮಾಸ್ತ್ರದ ಪ್ರಯೋಗಮಾಡುತ್ತಿದ್ದಾರೆ.  ಅದಂತೂ ಅನೃತ, ಅಧರ್ಮ; ಮಹಾಪಾಪದ ಕೆಲಸ.

ಅಮೂಲ್ಯಳ ಬಂಧನವಾದ ದಿನದಂದೇ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಅವಳ ತಂದೆಯ ಮನೆಯಮೇಲೆ ಪುಂಡರ ದಾಳಿ ನಡೆದಿದೆ. ಅವರ ಮನೆಯ ಕಿಟಕಿ ಗಾಜುಗಳು, ಮನೆಯ ಪೌಳಿಯಲ್ಲಿನ ವಸ್ತುಗಳು ಚೂರುಚೂರಾಗಿವೆ. ಬಳಿಕ, ಸಂಘ ಪರಿವಾರದ ಯುವಕರು ಹಲವರು ಅಮೂಲ್ಯಳ ತಂದೆಯನ್ನು ಬೆದರಿಸಿ ಆತ ತನ್ನ ಮಗಳ ವಿರುದ್ಧ ಕಟುವಾದ ಮಾತಾಡುವಂತೆ ಮಾಡಿದ್ದಾರೆ. ಅದೆಲ್ಲವನ್ನೂಒಳಗೊಂಡಿರುವ ವಿಡಿಯೋವನ್ನು ಅವರು ರಾಜಾರೋಷವಾಗಿ ಹಂಚಿಕೊಂಡಿದ್ದಾರೆ. ಅದು ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಟಿವಿ ವಾಹಿನಿಗಳಲ್ಲಿ ಬಿತ್ತರಗೊಂಡಿದೆ. ಅದರಲ್ಲಿ ತನ್ನ ಸುತ್ತ ಯಮದೂತರಂತೆ ನಿಂತು ಒತ್ತಾಯಮಾಡುತ್ತಿರುವ ಆ ಜನರಿಂದ ಆ ತಂದೆ ಭಯಭೀತನಾಗಿ ತನ್ನ ಮಗಳ ವಿರುದ್ಧ ಮಾತನಾಡುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇಷ್ಟಾಗಿಯೂ ಆ ದೌರ್ಜನ್ಯವೆಸಗಿದವರ ಮೇಲೆ ಪ್ರಭುತ್ವ ಮತ್ತು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ಆ ಚಿಕ್ಕಹುಡುಗಿಯಮೇಲೆ ಮಾತ್ರ ರಾಕ್ಷಸೀಯ ಕಾಯಿದೆಯೊಂದರ ಗದಾಪ್ರಹಾರವಾಗಿದೆ.

ವಿವೇಕ, ಹೃದಯವಂತಿಕೆ ಬೇಕಿದೆ

ಕರ್ನಾಟಕ ಸರಕಾರವು ಆ ಮೂವರು ಹುಡುಗರಮೇಲೆ, ಅಮೂಲ್ಯಳಮೇಲೆ, ಮೈಸೂರಿನಲ್ಲಿ ಪ್ರತಿಭಟಿಸಿದ ನಳಿನಿ ಬಾಲಕುಮಾರ್ ಮೇಲೆ ಹಾಗೂ ಬೀದರಿನ ಶಾಹೀನ್ ಶಾಲೆಯ ಪ್ರಕರಣದ ಆ ಮಗುವಿನ ತಾಯಿ ಹಾಗೂ ಅಲ್ಲಿನ ಉಳಿದ ಆರೋಪಿಗಳ ಮೇಲೆ ಹೂಡಿರುವ ಮೊಕದ್ದಮೆಗಳನ್ನು ವಾಪಸು ತೆಗೆದುಕೊಳ್ಳುವ ವಿವೇಕ ಮತ್ತು ಹೃದಯವಂತಿಕೆ ತೋರಲಿ.

ಜೊತೆಗೆ, ‘ದೇಶದ್ರೋಹಿಗಳು, ಭಯೋತ್ಪಾದಕರು, ಶಾಂತಿಭಂಗ ಉಂಟುಮಾಡುವವರು, ದೇಶದ ಸುರಕ್ಷೆತೆಗೆ ಧಕ್ಕೆ ತರುವವರು, ಅರ್ಬನ್ ನಕ್ಸಲ್‍ಗಳು, ಟುಕ್‍ಡೇ ಟುಕ್‍ಡೇ ಗ್ಯಾಂಗಿನವರು’ ಮುಂತಾಗಿ, ಘನಘೋರವಾದ ಆಪಾದನೆಗಳನ್ನು ಬೇಕಾಬಿಟ್ಟಿಯಾಗಿ ಹೊರಿಸಿ, ಕಾನೂನನ್ನು ಪ್ರಜಾಪೀಡನೆಗೆ ಬಳಸುತ್ತಿರುವ ಕೇಂದ್ರ ಸರಕಾರವನ್ನು ಹಾಗೂ ಅದರ ಹಾದಿಯನ್ನೇ ತುಳಿಯುತ್ತಿರುವ ರಾಜ್ಯ ಸರಕಾರಗಳನ್ನು, ವಿವಿಧ ರಾಜ್ಯಗಳ ಉಚ್ಚ ನ್ಯಾಯಾಲಯಗಳು, ಹಾಗೂ ದೇಶದ ಸರ್ವೋಚ್ಚ ನ್ಯಾಯಾಲಯವು, ಕಟುವಾಗಿ ಪ್ರಶ್ನಿಸಿ, ಕಾನೂನಿನ ದುರುಪಯೋಗವನ್ನು ತಡೆಯಲಿ; ಜನರನ್ನು, ದೇಶವನ್ನು, ಸದ್ಧರ್ಮವನ್ನು ಕಾಯಲಿ.

********

(ಲೇಖಕರು ಕನ್ನಡದ ಕವಿ, ನಾಟಕಕಾರ ಮತ್ತು ಖ್ಯಾತ ರಂಗನಿರ್ದೇಶಕರು. ಅಭಿಪ್ರಾಯಗಳು ವೈಯಕ್ತಿಕವಾದವು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...