Homeಮುಖಪುಟಪ್ರಜಾಪೀಡನೆಗೆ ಕಾನೂನಿನ ಬಳಕೆಯೆ?

ಪ್ರಜಾಪೀಡನೆಗೆ ಕಾನೂನಿನ ಬಳಕೆಯೆ?

ಅಧ್ಯಾಪಕನೂ ತಂದೆಯೂ ಆಗಿರುವ ಪ್ರಜೆಯೊಬ್ಬನ ಕೆಲವು ತಲ್ಲಣ, ಪ್ರಶ್ನೆ

- Advertisement -
- Advertisement -

ಇಂದು ದೇಶವನ್ನು ಆಳುತ್ತಿರುವ ಪ್ರಭುತ್ವಶಕ್ತಿಯು ದೇಶದ್ರೋಹವೆಸಗಿದ್ದಕ್ಕೆ ಶಿಕ್ಷೆ ವಿಧಿಸುವ ಕಾಯಿದೆ, ಯುಎಪಿಎ  ಕಾಯಿದೆ, ಎನ್‍ಎಸ್‍ಎ ಕಾಯಿದೆ ಮುಂತಾದ ಹಲವು ಭಯಂಕರ ಕಾಯಿದೆಗಳನ್ನು ಯಾವುದೇ ವಿವೇಚನೆಯಿಲ್ಲದೆ, ಕ್ಷುಲ್ಲಕ ಕಾರಣಗಳಿಗಾಗಿ, ಬೇಕಾಬಿಟ್ಟಿಯಾಗಿ ಅನ್ವಯಿಸಿ, ಹಲವರನ್ನು ಬಂಧನದಲ್ಲಿಡುತ್ತಿದೆ, ಹಲವರಮೇಲೆ ಮೊಕದ್ದಮೆ ಹೂಡಿದೆ. ಈಚೆಗೆ, ಬೀದರಿನ ಶಾಹೀನ್ ಶಾಲೆಯ ಪ್ರಕರಣ ಮತ್ತು ಉತ್ತರಪ್ರದೇಶದ ಕರ್ತವ್ಯನಿಷ್ಠೆಯ ವೈದ್ಯ ಕಫೀಲ್ ಖಾನ್ ಅವರ ಪ್ರಕರಣದ ಬಳಿಕ, ಹುಬ್ಬಳ್ಳಿಯಲ್ಲಿ ಓದುತ್ತಿರುವ ಮೂವರು ವಿದ್ಯಾರ್ಥಿಗಳು ಹಾಗೂ ಬೆಂಗಳೂರಿನಲ್ಲಿ ಓದುತ್ತಿರುವ ಅಮೂಲ್ಯಾ ಲಿಯೊನಾ ಎಂಬ ಹುಡುಗಿ ಇಂಥ ಒಂದು ಕ್ರಮಕ್ಕೆ ತುತ್ತಾಗಿದ್ದಾರೆ.

ಹುಬ್ಬಳ್ಳಿಯ ಕೆಎಲ್‍ಇ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದುತ್ತಿರುವ ಮೂವರು ಕಾಶ್ಮೀರೀ ವಿದ್ಯಾರ್ಥಿಗಳು ‘ಪಾಕಿಸ್ತಾನ್ ಜ಼ಿಂದಾಬಾದ್’ ಎಂಬ ಘೋಷಣೆಯನ್ನು ಕೂಗಿದರು, ತಾವು ಹಾಗೆ ಕೂಗುತ್ತಿರುವುದರ ವಿಡಿಯೋ ಮುದ್ರಣಮಾಡಿ ವಾಟ್ಸಾಪ್‌ನಲ್ಲಿ ತಮ್ಮ ಸ್ನೇಹಿತರ ಜೊತೆ ಹಂಚಿಕೊಂಡರು ಅನ್ನುವುದು ಅವರ ಮೇಲಿರುವ ಆರೋಪ.

ಮೊದಲಿಗೆ, ಭಾರತದ ಒಬ್ಬ ಪ್ರಜೆಯಾಗಿ, ನಾಗರಿಕನಾಗಿ ಕೆಲವು ಮಾತು, ಪ್ರಶ್ನೆ ಮುಂದಿಡುತ್ತೇನೆ.

ಜ಼ಿಂದಾಬಾದ್ ಎಂದರೆ ‘ಚಿರಕಾಲ, ಅಥವಾ ನೂರ್ಕಾಲ ಬಾಳಲಿ’ ಎಂದರ್ಥ. ಸದಾಶಯವುಳ್ಳ ಮಾತು ಅದು; ಯಾರಿಗೂ ಕೇಡನ್ನು ಬಯಸುವಂಥದಲ್ಲ. ಪಾಕಿಸ್ತಾನವಾಗಲಿ, ಈಥಿಯೋಪಿಯಾ ಆಗಲಿ, ಹಂಗೆರಿ ಆಗಲಿ, ಬೊಲಿವಿಯಾ ಆಗಲಿ, ಕ್ಯಾಮರೂನ್ ಆಗಲಿ, ಚಿಕ್ಕನಾಯಕನಹಳ್ಳಿಯಾಗಲಿ, ತಿರುನೆಲ್ವೇಲಿಯಾಗಲಿ, ಮಂಗಳಗ್ರಹವೋ, ಶುಕ್ರಗ್ರಹವೋ, ಮತ್ತೊಂದು ಗ್ರಹವೋ ಆಗಲಿ, ಅದು ಚೆನ್ನಾಗಿರಲಿ ಎಂದು ಬಯಸುವುದರಲ್ಲಿ ತಪ್ಪೇನಿದೆ?! ಪಾಕಿಸ್ತಾನವೂ ಸೇರಿದಂತೆ, ಯಾರಿಗೇ ಯಾವುದಕ್ಕೇ ಆಗಲಿ, ಒಳಿತಾಗಲಿ ಎಂದು ಬಯಸಕೂಡದೆಂದು ಭಾರತದ ಸಂವಿಧಾನದಲ್ಲಿಲ್ಲವಲ್ಲ! ಒಟ್ಟು ಭಾರತೀಯ ಪರಂಪರೆಯೇ ‘ಲೋಕಾಸ್ಸಮಸ್ತಾಃ ಸುಖಿನೋ ಭವಂತು/ ಸರ್ವೇ ಸಂತು ನಿರಾಮಯಾಃ/ ಸರ್ವೇ ಭದ್ರಾಣಿ ಪಶ್ಯಂತು/ ಮಾಕಶ್ಚಿತ್ ದುಃಖ ಭಾಗ್ಭವೇತ್’  ಅನ್ನುತ್ತದೆಯಲ್ಲ! ಮೇಲಾಗಿ, ಈ ಹುಡುಗರು ಭಾರತವು ಹಾಳಾಗಲಿ ಎಂದು ಘೋಷಿಸಲಿಲ್ಲವಲ್ಲ! ಭಾರತವನ್ನು ಹಾಳುಮಾಡುವವರಂತೆ ಆ ವಿಡಿಯೋದಲ್ಲಿ ಆ ಹುಡುಗರು ಕಾಣುತ್ತಾರೆಯೇ? ಅವರು ಹಾಗೆ ಮಾಡಬಹುದು ಅನ್ನುವುದಕ್ಕೆ ಪುರಾವೆ ಇದೆಯೇ? ಅಂಥ ಯಾವ ಪುರಾವೆಯಿಲ್ಲವೆಂದು ತಾನೆ, ಅವರನ್ನು ಮೊತ್ತಮೊದಲ ಬಾರಿ ದಸ್ತಗಿರಿಮಾಡಿದ ದಿನ, ಫೆಬ್ರವರಿ 16ರಂದು, ಸಂಜೆಯ ಹೊತ್ತಿಗೇ ಪೊಲೀಸರು ಅವರ ಬಿಡುಗಡೆಮಾಡಿದ್ದು? ಆದರೆ, ಅದೇ ದಿನವೇ ಅವರನ್ನು ಮತ್ತೆ ಬಂಧಿಸಿ, ಅವರ ಮೇಲೆ ದೇಶದ್ರೋಹದಂಥ ಗಂಭೀರ ಆರೋಪ ಹೊರಿಸಿದ್ದಕ್ಕೆ ಕಾರಣ, ಪೊಲೀಸ್ ಸ್ಟೇಷನ್ನಿನ ಹೊರಗೆ ಸಂಘಪರಿವಾರದ ಸಂಘಟನೆಗಳು ದೊಂಬಿ ಸೇರಿ ಗಲಾಟೆಮಾಡಿ, ಒತ್ತಡ ಬೀರಿದ್ದೇ ಹೌದಲ್ಲವೇ? ಈ ನಮ್ಮ ದೇಶದ ಕಾನೂನು ಪಾಲನೆಯ ವ್ಯವಸ್ಥೆಯು ದೊಂಬಿ ಸೇರಿದ ಜನ ಹೇಳಿದಂತೆ ನಡೆದುಕೊಳ್ಳುವಂತಾಯಿತೇ?

ಇನ್ನು, ಆಜಾ಼ದೀ ಅರ್ಥಾತ್ ಬಿಡುಗಡೆ ಎಂದು ಆ ಮೂವರು ಹುಡುಗರು ಕೂಗಿದ್ದು ಆ ವಿಡಿಯೋದಲ್ಲಿ ಕಾಣುತ್ತದೆ. ಆ ಮಾತನ್ನು ನಾನೂ ಕೂಗಿದ್ದೇನೆ!  ಸಿಎಎ, ಎನ್‍ಆರ್‌ಸಿ ಮತ್ತು ಎನ್‍ಪಿಆರ್‌ಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತ, ಆ ಕಾನೂನುಗಳಿಂದ ನಮಗೆಲ್ಲ ಬಿಡುಗಡೆಯಾಗಲಿ ಎಂದು ಕೂಗುತ್ತಿರುವ ನಾವೆಲ್ಲರೂ ದೇಶದ್ರೋಹಿಗಳೇ? ಸರಕಾರ ಹಾಗೂ ಸಂಘ ಪರಿವಾರದ ರೀತಿನೀತಿಗಳನ್ನು ಒಪ್ಪದೇ, ಶಾಂತಿಯುತವಾಗಿ ಭಿನ್ನಮತ ತಾಳುವುದು ದೇಶದ್ರೋಹವಾಯಿತೇ?

ಈ ಮುಂದಿನ ಮಾತನ್ನು ತಲ್ಲಣಗೊಂಡ ಅಧ್ಯಾಪಕನೊಬ್ಬನಾಗಿ ಆಡುತ್ತಿದ್ದೇನೆ. ತಮ್ಮ ವಿದ್ಯಾರ್ಥಿಗಳು ಪೊಲೀಸರಿಂದ ಯಾವುದೇ ಬಗೆಯ ಬಂಧನಕ್ಕೆ ಒಳಗಾಗುವುದು, ಅದರಲ್ಲಿಯೂ ದೇಶದ್ರೋಹದ ಆರೋಪವನ್ನು ಅನ್ಯಾಯವಾಗಿ ಎದುರಿಸುವುದು, ಅಧ್ಯಾಪಕರಾದವರಿಗೆ ಯಾವತ್ತಿಗೂ ಕರುಳು ಹಿಂಡುವ ಸಂಗತಿ.

ಯಾರೇ ಆಗಲಿ, ಆ ಹುಡುಗರಂತೆ, ತಮ್ಮ ಕೋಣೆಯಲ್ಲಿ ಕೂತು ಯಾವುದೋ ಪಾಪ್‍ ಹಾಡನ್ನು ಕೇಳುತ್ತ ನಮ್ಮ ನೆರೆಯ ದೇಶಕ್ಕೆ ಒಳ್ಳೆಯದನ್ನು ಬಯಸಿ ಎರಡು ಘೋಷಣೆ ಕೂಗುವುದು, ಅದರ ಒಂದು ಚಿಕ್ಕ ವಿಡಿಯೋವನ್ನು ತಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳುವುದು ದೇಶದ್ರೋಹದ ಕೆಲಸ ಹೇಗಾಗುತ್ತದೆ? ಒಂದು ವೇಳೆ, ಕಾಲೇಜಿನ ಆಡಳಿತವರ್ಗಕ್ಕೆ, ಕಾಲೇಜಿನಲ್ಲಿನ ಬೇರೆ ವಿದ್ಯಾರ್ಥಿಗಳು ಆ ಮೂವರ ಜೊತೆ  ಜಗಳವಾಡಬಹುದೆಂಬ ಆತಂಕವಿತ್ತು ಎಂದಿಟ್ಟುಕೊಳ್ಳೋಣ. ಅದನ್ನು ಆ ಕಾಲೇಜಿನ ಪ್ರಿನ್ಸಿಪಾಲರು ಮತ್ತು ಹಾಸ್ಟೆಲಿನ ವಾರ್ಡೆನ್ ಅವರು ಸುಲಭವಾಗಿ ನಿವಾರಿಸಿಕೊಳ್ಳಬಹುದಿತ್ತು: ಆ ಹುಡುಗರನ್ನು ತಮ್ಮ ಕಚೇರಿಗೆ ಕರೆಸಿ, ಗಟ್ಟಿಯಾದ ಎಚ್ಚರಿಕೆ ನೀಡಿ, ‘ಸುಮ್ಮನೆ ಓದಿಕೊಂಡು, ಚೆನ್ನಾಗಿರಿ’ ಅನ್ನಬಹುದಿತ್ತು. ಹಾಗೆಯೇ, ಉಳಿದ ವಿದ್ಯಾರ್ಥಿಗಳಿಗೂ ‘ನಿಮ್ಮ ಆ ಸಹಪಾಠಿಗಳಮೇಲೆ ಜುಲುಮೆ ಮಾಡಬೇಡಿ, ಹೊಂದಿಕೊಂಡಿರಿ, ಹೋಗಿ’ ಎಂದು ಗದರಿಸಿ, ಬುದ್ಧಿ ಹೇಳಬಹುದಿತ್ತು. ಹೆಚ್ಚಿನ ವೇಳೆ, ಪರಿಸ್ಥಿತಿಯನ್ನು ಸರಿಮಾಡಲು ಅಂಥ ಮಾತೇ ಸಾಕಾಗುತ್ತದೆ. ಕೆಲವು ವರದಿಗಳು ಹೇಳುವಂತೆ, ಆ ಕಾಲೇಜಿನವರು, ಪಾಪ, ಹಾಗೆ ಮಾಡಿದ್ದರು ಕೂಡ.

ಮೇಲೆ ಹೇಳಿದ ಆ ಅದೇ ವರದಿಗಳಲ್ಲಿರುವಂತೆ, ಆ ಮೂವರು ಹುಡುಗರ ಮೇಲೆ ಇಂಥ ಗುರುತರವಾದ ಆರೋಪ ಹೊರಿಸುವುದು ಪೊಲೀಸರಿಗೂ ಇಷ್ಟವಿರುವಂತೆ ತೋರುವುದಿಲ್ಲ.

ಪರಿಸ್ಥಿತಿ ಈಮಟ್ಟಕ್ಕೆ ಹೋಗಿರುವುದು, ಸಂಘ ಪರಿವಾರದ ಕೆಲವು ಸಂಘಟನೆಗಳವರು ಈ ಮೂವರು ವಿದ್ಯಾರ್ಥಿಗಳ ವಿರುದ್ಧ ಮಾಡಿದ ದೊಂಬಿ ಗಲಾಟೆಯಿಂದ. ಅದರ ಒತ್ತಡಕ್ಕೆ ಕಾಲೇಜಿನವರು, ಪೊಲೀಸನವರು, ಇಬ್ಬರೂ ಮಣಿಯಬೇಕಾಯಿತು. ದೊಂಬಿಯನ್ನು ನಿಭಾಯಿಸಿ, ಅದಕ್ಕೆ ಬುದ್ಧಿ ಹೇಳಬೇಕಿದ್ದ ಸರಕಾರದ ಬೇರೆ ಆಡಳಿತಗಾರರು ಕೂಡ ತಮ್ಮ ಕೆಲಸ ಮಾಡಿಲ್ಲ. ಸಂಘ ಪರಿವಾರದ ಮುಖಂಡರಂತೂ ಇಂಥ ಅನ್ಯಾಯಕ್ಕೆ ಕುಮ್ಮಕ್ಕು ಕೊಟ್ಟಂತೆಯೇ ಕಾಣುತ್ತದೆ: ದೊಂಬಿಯು ನ್ಯಾಯಾಲಯದ ಅಂಗಳದಲ್ಲಿಯೇ ಆ ಹುಡುಗರ ಮೇಲೆ ದಾಳಿಮಾಡಿದೆ. ದಾಳಿ ಮಾಡಿದವರ ಮೇಲೆ ಪೊಲೀಸರು ಯಾವುದೇ ಕ್ರಮ ಕೈಗೊಂಡಂತೆ ಕಾಣುವುದಿಲ್ಲ.

ಆ ಮೂವರು ಹುಡುಗರು ನಿರಂತರ ಹಿಂಸೆಯಿಂದ ಕಂಗಾಲಾಗಿರುವ ತಮ್ಮ ನಾಡನ್ನು ಬಿಟ್ಟು ಪ್ರಧಾನ ಮಂತ್ರಿಗಳ ಒಂದು ವಿಶೇಷ ಕೋಟಾದ ಅಡಿಯಲ್ಲಿ ಸಂಪೂರ್ಣ ಉಚಿತವಾದ ವಿದ್ಯಾಭ್ಯಾಸ ಪಡೆದುಕೊಳ್ಳಲು ದೂರದ ಹುಬ್ಬಳ್ಳಿಗೆ ಬಂದವರು. ಅಂಥ ತಮ್ಮ ಮಕ್ಕಳ ವಿಷಯದಲ್ಲಿ ಅವರ ತಂದೆತಾಯಂದಿರಿಗೆ ಎಷ್ಟು ಸಂತೋಷವಾಗಿರಬೇಡ?! ಈಗ ಆ ತಂದೆತಾಯಂದಿರ ಪಾಡೇನು, ಆ ಮಕ್ಕಳ ಪಾಡೇನು? ಆ ಮಕ್ಕಳು ಅಚಾತುರ್ಯದ ಕೆಲಸ ಮಾಡಿದ್ದಾರೆ, ಹಾದಿ ತಪ್ಪಿದ್ದಾರೆ ಅನ್ನಿಸಿದರೆ, ಅಧ್ಯಾಪಕರು ಮತ್ತು ಸುತ್ತಲಿನ ಸಮಾಜದ ಹಿರಿಯರು ಆ ಹುಡುಗರ ತಂದೆತಾಯಂದಿರೊಡಗೂಡಿ ಅನುನಯದ ಮಾತು, ಗದರಿಕೆಯ ಉಗುರಿನಿಂದ ಪರಿಹರಿಸಬಹುದಾದ್ದಕ್ಕೆ ಕರಾಳ ಕಾನೂನಿನ ಕೊಡಲಿ ಹೊಡೆತವೇಕೆ?

ವಿವೇಕವಿಲ್ಲದ, ದಮನಕಾರಿಯಾದ ಇಂಥ ಬಂಧನಗಳಿಂದಾಗಿ, ಕಾಶ್ಮೀರ ಕಣಿವೆಯ ಜನರ ನಂಬಿಕೆಯನ್ನು ಸಂಪೂರ್ಣ ಕಳೆದುಕೊಂಡಿರುವ ನಮ್ಮ ಕೇಂದ್ರ ಸರಕಾರವು ಅದನ್ನು ಎಂದಾದರೂ ಮತ್ತೆ ಪಡೆಯುವ ಎಲ್ಲ ದಾರಿಗಳನ್ನು ಮುಚ್ಚಿಹಾಕಿದೆ.

ಮಗುವಿನ ಮೇಲೆ ಬ್ರಹ್ಮಾಸ್ತ್ರದ ಪ್ರಯೋಗ

ಈ ಕೆಳಗಿರುವ ಮಾತನ್ನು ಒಬ್ಬ ತಂದೆಯಾಗಿ ಬರೆಯುತ್ತಿದ್ದೇನೆ.

ಕಾಶ್ಮೀರದ ಆ ಮೂವರು ಹುಡುಗರಮೇಲೆ ಮೊಕದ್ದಮೆ ಹೊರಿಸಲಾಗಿರುವುದರ ಬೆನ್ನಿಗೇ ಬೆಂಗಳೂರಿನ ಅಮೂಲ್ಯಾ ಲಿಯೊನಾ ಪ್ರಕರಣ ನಡೆದಿದೆ. ಅಮೂಲ್ಯಳು, ಮತ್ತೊಬ್ಬರು ಸಂಘಟಿಸಿದ ಸಭೆಯಲ್ಲಿ, ಸಭೆಯ ಸಂಘಟಕರಿಗೆ ಯಾವ ಸೂಚನೆಯನ್ನೂ ನೀಡದೆ, ವೇದಿಕೆಯೇರಿ ಆ ಬಗೆಯ ಘೋಷಣೆ ಕೂಗಿದ್ದು ತಪ್ಪೆನ್ನಬಹುದೇ ಹೊರತು, ಆ ಹುಡುಗಿ ಹೊಂದಿರುವ ಆಶಯಗಳೇ ತಪ್ಪು ಎಂದು ಸಾರಾಸಗಟು ಹೇಳಲು ಬರುವುದಿಲ್ಲ. ಪಾಕಿಸ್ತಾನ್ ಜ಼ಿಂದಾಬಾದ್ ಎಂದು ಕೂಗುವುದರ ಜೊತೆಗೆ, ಹಿಂದೂಸ್ತಾನ್ ಜ಼ಿಂದಾಬಾದ್ ಎಂದು ಕೂಡ ಕೂಗಿದಳು ಅವಳು. ಅರ್ಥಾತ್, ಎರಡೂ ದೇಶಗಳು ಚೆನ್ನಾಗಿರಲಿ, ಪರಸ್ಪರ ಸ್ನೇಹದಿಂದಿರಲಿ ಅನ್ನುವುದೇ ಅವಳ ಆಶಯವಲ್ಲವೇ?

ಅಮೂಲ್ಯಳ  ದುಡುಕಿನ ವರ್ತನೆಯಿಂದ ಗಾಬರಿಗೊಂಡ ಆ ಸಭೆಯ ಸಂಘಟಕರು ಮತ್ತು ಸಭಿಕರು ಪಾಕಿಸ್ತಾನ್ ಮುರ್ದಾಬಾದ್ (ಪಾಕಿಸ್ತಾನ ಸಾಯಲಿ, ನಾಶವಾಗಲಿ) ಎಂದು ಕೂಗಿ, ತಮ್ಮ ಸ್ವದೇಶಪ್ರೇಮ ಸಾರಬೇಕಾಯಿತು. ನಾವು ನಮ್ಮ ನೆರೆಯ, ಸೋದರ ದೇಶವೊಂದು ಹಾಳಾಗಲಿ ಎಂದು ಕೂಗಿ ನಮ್ಮ ಸ್ವದೇಶಪ್ರೇಮವನ್ನು ಸಾಬೀತುಮಾಡಬೇಕಾದ್ದು ಎಂಥ ದುಃಖದ ವಿಷಯವಲ್ಲವೇ?

ಆದರೆ, ಪ್ರಭುತ್ವವು ಹತ್ತೊಂಭತ್ತರ ವಯಸ್ಸಿನ ಚಿಕ್ಕವಳು ಅಮೂಲ್ಯಳ ದುಡುಕಿನ ಆ ವರ್ತನೆ ಮತ್ತು ಸಣ್ಣ ಮೂರ್ಖತನಕ್ಕೆ ಪ್ರತಿಯಾಗಿ ಅವಳಮೇಲೆ ಎಂಥೆಂಥ ಭಯಂಕರ ಕಾಯ್ದೆಗಳ ಅನ್ವಯ ಮೊಕದ್ದಮೆ ಹೂಡಿದೆ! ಮಗು ಅದು. ನಾಲ್ಕು ಮಾತು ಬೈದು, ಒಂದಷ್ಟು ಬುದ್ಧಿಮಾತು ಹೇಳಿ, ಕೌನ್ಸೆಲಿಂಗ್ ಮಾಡಿ ಬಿಟ್ಟುಬಿಡಬೇಕಿತ್ತು ಅದನ್ನು. ಬದಲಾಗಿ, ಮಗುವಿನಮೇಲೆ ಬ್ರಹ್ಮಾಸ್ತ್ರದ ಪ್ರಯೋಗಮಾಡುತ್ತಿದ್ದಾರೆ.  ಅದಂತೂ ಅನೃತ, ಅಧರ್ಮ; ಮಹಾಪಾಪದ ಕೆಲಸ.

ಅಮೂಲ್ಯಳ ಬಂಧನವಾದ ದಿನದಂದೇ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿರುವ ಅವಳ ತಂದೆಯ ಮನೆಯಮೇಲೆ ಪುಂಡರ ದಾಳಿ ನಡೆದಿದೆ. ಅವರ ಮನೆಯ ಕಿಟಕಿ ಗಾಜುಗಳು, ಮನೆಯ ಪೌಳಿಯಲ್ಲಿನ ವಸ್ತುಗಳು ಚೂರುಚೂರಾಗಿವೆ. ಬಳಿಕ, ಸಂಘ ಪರಿವಾರದ ಯುವಕರು ಹಲವರು ಅಮೂಲ್ಯಳ ತಂದೆಯನ್ನು ಬೆದರಿಸಿ ಆತ ತನ್ನ ಮಗಳ ವಿರುದ್ಧ ಕಟುವಾದ ಮಾತಾಡುವಂತೆ ಮಾಡಿದ್ದಾರೆ. ಅದೆಲ್ಲವನ್ನೂಒಳಗೊಂಡಿರುವ ವಿಡಿಯೋವನ್ನು ಅವರು ರಾಜಾರೋಷವಾಗಿ ಹಂಚಿಕೊಂಡಿದ್ದಾರೆ. ಅದು ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಟಿವಿ ವಾಹಿನಿಗಳಲ್ಲಿ ಬಿತ್ತರಗೊಂಡಿದೆ. ಅದರಲ್ಲಿ ತನ್ನ ಸುತ್ತ ಯಮದೂತರಂತೆ ನಿಂತು ಒತ್ತಾಯಮಾಡುತ್ತಿರುವ ಆ ಜನರಿಂದ ಆ ತಂದೆ ಭಯಭೀತನಾಗಿ ತನ್ನ ಮಗಳ ವಿರುದ್ಧ ಮಾತನಾಡುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇಷ್ಟಾಗಿಯೂ ಆ ದೌರ್ಜನ್ಯವೆಸಗಿದವರ ಮೇಲೆ ಪ್ರಭುತ್ವ ಮತ್ತು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ಆ ಚಿಕ್ಕಹುಡುಗಿಯಮೇಲೆ ಮಾತ್ರ ರಾಕ್ಷಸೀಯ ಕಾಯಿದೆಯೊಂದರ ಗದಾಪ್ರಹಾರವಾಗಿದೆ.

ವಿವೇಕ, ಹೃದಯವಂತಿಕೆ ಬೇಕಿದೆ

ಕರ್ನಾಟಕ ಸರಕಾರವು ಆ ಮೂವರು ಹುಡುಗರಮೇಲೆ, ಅಮೂಲ್ಯಳಮೇಲೆ, ಮೈಸೂರಿನಲ್ಲಿ ಪ್ರತಿಭಟಿಸಿದ ನಳಿನಿ ಬಾಲಕುಮಾರ್ ಮೇಲೆ ಹಾಗೂ ಬೀದರಿನ ಶಾಹೀನ್ ಶಾಲೆಯ ಪ್ರಕರಣದ ಆ ಮಗುವಿನ ತಾಯಿ ಹಾಗೂ ಅಲ್ಲಿನ ಉಳಿದ ಆರೋಪಿಗಳ ಮೇಲೆ ಹೂಡಿರುವ ಮೊಕದ್ದಮೆಗಳನ್ನು ವಾಪಸು ತೆಗೆದುಕೊಳ್ಳುವ ವಿವೇಕ ಮತ್ತು ಹೃದಯವಂತಿಕೆ ತೋರಲಿ.

ಜೊತೆಗೆ, ‘ದೇಶದ್ರೋಹಿಗಳು, ಭಯೋತ್ಪಾದಕರು, ಶಾಂತಿಭಂಗ ಉಂಟುಮಾಡುವವರು, ದೇಶದ ಸುರಕ್ಷೆತೆಗೆ ಧಕ್ಕೆ ತರುವವರು, ಅರ್ಬನ್ ನಕ್ಸಲ್‍ಗಳು, ಟುಕ್‍ಡೇ ಟುಕ್‍ಡೇ ಗ್ಯಾಂಗಿನವರು’ ಮುಂತಾಗಿ, ಘನಘೋರವಾದ ಆಪಾದನೆಗಳನ್ನು ಬೇಕಾಬಿಟ್ಟಿಯಾಗಿ ಹೊರಿಸಿ, ಕಾನೂನನ್ನು ಪ್ರಜಾಪೀಡನೆಗೆ ಬಳಸುತ್ತಿರುವ ಕೇಂದ್ರ ಸರಕಾರವನ್ನು ಹಾಗೂ ಅದರ ಹಾದಿಯನ್ನೇ ತುಳಿಯುತ್ತಿರುವ ರಾಜ್ಯ ಸರಕಾರಗಳನ್ನು, ವಿವಿಧ ರಾಜ್ಯಗಳ ಉಚ್ಚ ನ್ಯಾಯಾಲಯಗಳು, ಹಾಗೂ ದೇಶದ ಸರ್ವೋಚ್ಚ ನ್ಯಾಯಾಲಯವು, ಕಟುವಾಗಿ ಪ್ರಶ್ನಿಸಿ, ಕಾನೂನಿನ ದುರುಪಯೋಗವನ್ನು ತಡೆಯಲಿ; ಜನರನ್ನು, ದೇಶವನ್ನು, ಸದ್ಧರ್ಮವನ್ನು ಕಾಯಲಿ.

********

(ಲೇಖಕರು ಕನ್ನಡದ ಕವಿ, ನಾಟಕಕಾರ ಮತ್ತು ಖ್ಯಾತ ರಂಗನಿರ್ದೇಶಕರು. ಅಭಿಪ್ರಾಯಗಳು ವೈಯಕ್ತಿಕವಾದವು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...