ರೈತರ ಚಳವಳಿಯ ವಿರುದ್ಧ ಪೊಲೀಸರು ಮತ್ತು ಆಡಳಿತವು ನೀಡುತ್ತಿರುವ ವಿವಿಧ ರೀತಿಯ ಕಿರುಕುಳಗಳನ್ನು ನಿಲ್ಲಿಸುವವರೆಗೆ ಸರ್ಕಾರದೊಂದಿಗೆ ಯಾವುದೇ ಔಪಚಾರಿಕ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಸಂಯುಕ್ತ್ ಕಿಸಾನ್ ಮೋರ್ಚಾ ಸ್ಪಷ್ಟಪಡಿಸಿದೆ.
ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರು ಧರಣಿ ಮುಂದುವರಿಸಿದ್ದರಿಂದ, ಹರಿಯಾಣ ಮತ್ತು ಉತ್ತರ ಪ್ರದೇಶದ ಗಡಿಯ ಸಮೀಪವಿರುವ ಪ್ರತಿಭಟನಾ ಸ್ಥಳಗಳಲ್ಲಿ ಅನೇಕ ಬ್ಯಾರಿಕೇಡ್ಗಳು ಮತ್ತು ಮುಳ್ಳುತಂತಿ ಬೇಲಿಗಳನ್ನು ಹಾಕಲಾಗಿದೆ. ರಸ್ತೆಗಳಲ್ಲಿ ಕಂದಕ ಅಗೆಯಲಾಗಿದ್ದು, ಮೊಳೆಗಳನ್ನು ನೆಡಲಾಗಿದೆ ಮತ್ತು ತಾತ್ಕಾಲಿಕವಾಗಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ- ಇವೆಲ್ಲ ಸರ್ಕಾರವು ಆಯೋಜಿಸುತ್ತಿರುವ “ದಾಳಿಯ” ಭಾಗವಾಗಿವೆ ಎಂದು ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ್ ಕಿಸಾನ್ ಮೋರ್ಚಾ ಹೇಳಿಕೆ ನೀಡಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
“ರೈತರ ಚಳವಳಿಯ ವಿರುದ್ಧ ಪೊಲೀಸರು ಮತ್ತು ಆಡಳಿತವು ವಿವಿಧ ರೀತಿಯ ಕಿರುಕುಳಗಳನ್ನು ನಿಲ್ಲಿಸುವವರೆಗೆ ಸರ್ಕಾರದೊಂದಿಗೆ ಯಾವುದೇ ಔಪಚಾರಿಕ ಮಾತುಕತೆ ನಡೆಸಲು ಸಾಧ್ಯವಿಲ್ಲ. ಪ್ರತಿಭಟನಾ ರೈತರು ಮೂರು ಕಾನೂನುಗಳನ್ನು ರದ್ದುಪಡಿಸುವುದಕ್ಕಿಂತ ಕಡಿಮೆ ಏನನ್ನೂ ಬಯಸುವುದಿಲ್ಲ” ಎಂದು ಮೋರ್ಚಾ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಮಗಳನ್ನು ಹುಡುಕಿ ಕೊಡಲು ಡಿಸೇಲ್ಗೆಂದು 15 ಸಾವಿರ ಪಡೆದ ಯುಪಿ ಪೊಲೀಸರು: ಮಹಿಳೆಯ ಆರೋಪ
ಗಣರಾಜ್ಯೋತ್ಸವದಂದು ರೈತರು ಬೃಹತ್ ಟ್ರ್ಯಾಕ್ಟರ್ ರ್ಯಾಲಿ ಕೈಗೊಂಡ ಸಂದರ್ಭದಲ್ಲಿ ಕೆಂಪುಕೋಟೆಯಲ್ಲಿ ಅಹಿತಕರ ಘಟನೆ ನೆಡೆದ ನಂತರ, ಮೂರು ಪ್ರತಿಭಟನಾ ಕೇಂದ್ರಗಳಾದ ಸಿಂಘು, ಗಾಜಿಪುರ ಮತ್ತು ಟಿಕ್ರಿಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ದೆಹಲಿ-ಹರಿಯಾಣ ಗಡಿಯ ಬಳಿಯ ಸಿಂಘುವಿನಲ್ಲಿ ಹೆಚ್ಚಿನ ಭದ್ರತೆಯ ಕಾರಣದಿಂದ ನೀರಿನ ಕೊರತೆ ಉಂಟಾಗುತ್ತಿದೆ. ಹಾಗಾಗಿ ಸರ್ಕಾರದ ಈ ತೀವ್ರ ಜನವಿರೋಧಿ ಕ್ರಮಗಳನ್ನು ರೈತರು ಖಂಡಿಸಿದ್ದಾರೆ.
ಆಂದೋಲನ ನಡೆಯುತ್ತಿರುವ ಪ್ರದೇಶವನ್ನು ಐದು ವಲಯಗಳಾಗಿ ವಿಂಗಡಿಸಿ, ಅಲ್ಲಿ ವಾಹನ ಸಂಚಾರ ನಿಬಂಧಿಸಲಾಗಿದೆ. ಹಾಗಾಗಿ ನೀರಿನ ಟ್ಯಾಂಕರ್ಗಳು ಪ್ರತಿಭಟನೆಯ ಸ್ಥಳಗಳನ್ನು ತಲುಪಲು ಸಾಧ್ಯವಿಲ್ಲ ಎಂದು ರೈತರು ಹೇಳಿದ್ದಾರೆ.
ಇದನ್ನೂ ಓದಿ: ಟಿಆರ್ಎಸ್ ಶಾಸಕನ ಮನೆಗೆ ದಾಳಿ: 39 ಬಿಜೆಪಿ ಕಾರ್ಯಕರ್ತರ ಬಂಧನ
ನವೆಂಬರ್ ಅಂತ್ಯದಿಂದ ರಾಷ್ಟ್ರ ರಾಜಧಾನಿಯ ಹೊರವಲಯದಲ್ಲಿ ಪ್ರತಿಭಟನೆ ಮಾಡುತ್ತಿರುವ ಪ್ರತಿಭಟನಾಕಾರರು, ಲಂಗರ್ಗಳನ್ನು ನಡೆಸಲು ತಮ್ಮ ಬಳಿ ನೀರಿಲ್ಲ, ಸ್ನಾನ ಮತ್ತು ದೈನಂದಿನ ಕೆಲಸಗಳಿಗೂ ನೀರಿನ ಕೊರತೆಯಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗಾಗ್ಗೆ ವಿದ್ಯುತ್ ಕಡಿತಗೊಳಿಸುತ್ತಿರುವುದು ನಮ್ಮ ತೊಂದರೆಗಳನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಪೊಲೀಸರೊಂದಿಗೆ, ಗಾಜಿಪುರದ ದೆಹಲಿ-ಯುಪಿ ಗಡಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಎಎನ್ಐ ಜೊತೆ ಮಾತನಾಡಿ, “ನಮ್ಮನ್ನು ಬೆಂಬಲಿಸಲು ಪ್ರತಿಪಕ್ಷಗಳು ಬಂದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಅದನ್ನು ರಾಜಕೀಯಗೊಳಿಸಬಾರದು. ನಾಯಕರು ಬಂದರೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಸಂಚಾರವನ್ನು ರೈತರು ನಿರ್ಬಂಧಿಸಿಲ್ಲ. ಈ ನಿರ್ಬಂಧಕ್ಕೆ ಕಾರಣ ಪೊಲೀಸ್ ಬ್ಯಾರಿಕೇಡಿಂಗ್” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ: ಅಡ್ವಾಣಿ ನೇತೃತ್ವದಲ್ಲಿ ಸಂಗ್ರಹವಾಗಿದ್ದ ಕೋಟ್ಯಂತರ ರೂ ಏನಾಯ್ತು?