ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ದೈಹಿಕ ವಿಕಲಾಂಗ ಮಹಿಳೆಯೊಬ್ಬರು, ಮಗಳನ್ನು ಹುಡುಕಿ ಕೊಡಲು ಪೊಲೀಸರಿಗೆ ಅವರ ವಾಹನಗಳಿಗೆ ಡಿಸೇಲ್ ತುಂಬಿಸಲು 15 ಸಾವಿರ ರೂ. ನೀಡಿರುವುದಾಗಿ ಆರೋಪಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಗುಡಿಯಾ ಎಂಬ ಹೆಸರಿನ ಈ ಮಹಿಳೆ, ‘ತನ್ನ ಅಪ್ರಾಪ್ತ ಮಗಳನ್ನು ಕಳೆದ ತಿಂಗಳು ಸಂಬಂಧಿಯೊಬ್ಬ ಅಪಹರಿಸಿದ್ದಾನೆ. ಪೊಲೀಸರಿಗೆ ಹುಡುಕಿ ಕೊಡಿ ಎಂದರೆ ವಾಹನಗಳಿಗೆ ಡಿಸೇಲ್ ಹಾಕಿಸು, ಹುಡುಕುತ್ತೇವೆ ಎಂದರು. ಅದಕ್ಕೇ ಸಂಬಂಧಿಕರೊಬ್ಬರ ಬಳಿ ಸಾಲ ಮಾಡಿ 15 ಸಾವಿರ ರೂ ನೀಡಿದ್ದೇನೆ’ ಎಂದು ಆರೋಪಿಸಿದ್ದಾರೆ.
ಈ ಕುರಿತು ಸೋಮವಾರ ಕಾನ್ಪುರ ಪೊಲೀಸ್ ಮುಖ್ಯಸ್ಥರನ್ನು ಭೇಟಿ ಮಾಡಿ ಹಣ ಪಡೆದ ಪೊಲೀಸರ ವಿರುದ್ದ ದೂರು ಸಲ್ಲಿಸಿದ್ದಾರೆ. ಆಯುಕ್ತರ ಕಚೇರಿಯ ಹೊರಗೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಗುಡಿಯಾ, ತಾನು ಅಲ್ಪ ಭೂ ಹಿಡುವಳಿ ಹೊಂದಿರುವ ವಿಧವೆ. ಕಳೆದ ತಿಂಗಳು ಕಾಣೆಯಾದ ತನ್ನ ಮಗಳ ಬಗ್ಗೆ ಪ್ರಕರಣ ದಾಖಲಿಸಿದ್ದೇನೆ. ಆದರೆ ಪೊಲೀಸರು ಆಕೆಗೆ ಸಹಾಯ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
“ಪೊಲೀಸರು ‘ನಾವು ನೋಡುತ್ತಿದ್ದೇವೆ’ ಎಂದು ಹೇಳುತ್ತಾರೆ. ಕೆಲವೊಮ್ಮೆ ಅವರು ನನ್ನನ್ನು ದೂರವಿಡುತ್ತಾರೆ, ನನ್ನ ಮಗಳ ಚಾರಿತ್ರ್ಯವನ್ನೇ ಸಂಶಯಿಸುತ್ತಾರೆ. ಪೊಲೀಸರು ‘ನಮ್ಮ ವಾಹನಗಳಲ್ಲಿ ಡೀಸೆಲ್ ತುಂಬಿಸು ಮತ್ತು ನಿಮ್ಮ ಮಗಳನ್ನು ಹುಡುಕುತ್ತೇವೆ’ ಎಂದು ಹೇಳುತ್ತಾರೆ’ ಎಂದು ಗುಡಿಯಾ ಹೇಳಿದ್ದಾರೆ.
“ಕೆಲವೊಮ್ಮೆ ಅವರು, ಇಲ್ಲಿಂದ ಹೊರಟು ಹೋಗು ಎಂದು ಜೋರು ಮಾಡುತ್ತಾರೆ. ನಾನು ಪೊಲೀಸರಿಗೆ ಲಂಚ ನೀಡಿಲ್ಲ, ನಾನು ಸುಳ್ಳು ಹೇಳುವುದಿಲ್ಲ. ಆದರೆ ನಾನು ಅವರ ವಾಹನಗಳಲ್ಲಿ ಡೀಸೆಲ್ ತುಂಬಿಸಿದ್ದೇನೆ. ನಾನು 3-4 ಟ್ರಿಪ್ಗಳಿಗೆ ಪಾವತಿಸಿದ್ದೇನೆ. ಅಲ್ಲಿ ಸಂಬಂಧಪಟ್ಟ ಪೊಲೀಸ್ ಚೌಕಿಯಲ್ಲಿ ಇಬ್ಬರು ಸಿಬ್ಬಂದಿ ಇದ್ದಾರೆ, ಅವರಲ್ಲಿ ಒಬ್ಬರು ನನಗೆ ಸಹಾಯ ಮಾಡುತ್ತಿದ್ದಾರೆ, ಇನ್ನೊಬ್ಬರು ಇಲ್ಲ” ಎಂದು ಗುಡಿಯಾ ಹೇಳಿದ್ದಾರೆ.
ಡಿಸೇಲ್ಗಾಗಿ ಹಣವನ್ನು ವ್ಯವಸ್ಥೆ ಮಾಡಲು ಸಂಬಂಧಿಕರಿಂದ ಸಾಲ ಪಡೆದಿದ್ದೇನೆ ಎಂದು ಅವರು ಹೇಳಿದರು. “ನಾನು 10-15 ಸಾವಿರ ಮೌಲ್ಯದ ಡೀಸೆಲ್ ವ್ಯವಸ್ಥೆ ಮಾಡಿದ್ದೇನೆ ಎಂದು ಪೊಲೀಸ್ ಮುಖ್ಯಸ್ಥರಿಗೆ ತಿಳಿಸಿದೆ. ಇದೇ ರೀತಿ ಮುಂದುವರಿಯುವುದರೆ ಹೇಗೆ?” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
ಗುಡಿಯಾ ಮಾಧ್ಯಮಗಳ ಜೊತೆ ಮಾತನಾಡಿದ ವಿಡಿಯೋ ತುಣುಕುಗಳು ವೈರಲ್ ಆದ ನಂತರ, ಕಾನ್ಪುರ ಪೊಲೀಸರು ಸಂಬಂಧಿಸಿದ ಠಾಣಾ ಅಧಿಕಾರಿಯನ್ನು ಅಮಾನತ್ತು ಮಾಡಿ, ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.
ಆಯುಕ್ತರ ಕಚೇರಿಯಿಂದ ಸಂಬಂಧಪಟ್ಟ ಪೊಲೀಸ್ ಠಾಣೆಗೆ ವಯಸ್ಸಾದ ಗುಡಿಯಾರನ್ನು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗುವ ವಿಡಿಯೋವನ್ನು ಪೊಲೀಸ್ ಹ್ಯಾಂಡಲ್ ಟ್ವೀಟ್ ಮಾಡಿದೆ. ಮಗಳನ್ನು ಹುಡುಕಲು ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ.
“ಈ ಪ್ರಕರಣದ ಬಗ್ಗೆ ತಕ್ಷಣ ಕ್ರಮಕೈಗೊಳ್ಳುವಂತೆ ನಾವು ಪೊಲೀಸ್ ಠಾಣೆಯ ಉಸ್ತುವಾರಿಗೆ ಆದೇಶಿಸಿದ್ದೇವೆ. ಗುಡಿಯಾ ಅವರ ಮಗಳನ್ನು ಶೀಘ್ರದಲ್ಲೆ ಹುಡುಕಿ ಕೊಡಲು ಪೊಲೀಸ್ ತಂಡಕ್ಕೆ ನೆರವು ನಿಡಲು ಸೂಚಿಸಿದ್ದೇವೆ. ಗುಡಿಯಾ ಅವರ ಎಲ್ಲಾ ಆರೋಪಗಳನ್ನು ಪರಿಶೀಲಿಸಲಾಗುವುದು ಮತ್ತು ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದಲ್ಲಿ ನಾವು ಕ್ರಮ ಕೈಗೊಳ್ಳುತ್ತೇವೆ” ಎಂದು ಕಾನ್ಪುರದ ಹಿರಿಯ ಪೊಲೀಸ್ ಅಧಿಕಾರಿ ಬ್ರಜೇಶ್ ಕುಮಾರ್ ಶ್ರೀವಾಸ್ತವ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಲೋಹದ ಲಾಠಿ ಪೋಟೊ ವೈರಲ್: ಇದರ ಬಗ್ಗೆ ದೆಹಲಿ ಪೊಲೀಸರು ಹೇಳಿದ್ದೇನು ಗೊತ್ತೆ?