ಉತ್ತರ ಪ್ರದೇಶದ ಫಿರೋಝಾಬಾದ್ ಜಿಲ್ಲೆಯ ದಿಹುಲಿ ಗ್ರಾಮದಲ್ಲಿ ಏಳು ಮಹಿಳೆಯರು ಮತ್ತು ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದಂತೆ 24 ದಲಿತರ ಹತ್ಯೆ ನಡೆದು ಸುಮಾರು 44 ವರ್ಷಗಳ ನಂತರ, ವಿಚಾರಣಾ ನ್ಯಾಯಾಲಯವು ಮೂವರು ಆರೋಪಿಗಳನ್ನು ದೋಷಿಗಳು ಎಂದು ಘೋಷಿಸಿದೆ.
ಕಳೆದ ವರ್ಷ ಅಲಹಾಬಾದ್ ಹೈಕೋರ್ಟ್ನ ಆದೇಶದ ಮೇರೆಗೆ ಮೈನ್ಪುರಿ ಜಿಲ್ಲೆಯ ನ್ಯಾಯಾಲಯಕ್ಕೆ ವರ್ಗಾಯಿಸಲಾದ ಈ ಪ್ರಕರಣದ ದೀರ್ಘ ವಿಚಾರಣೆಯ ಅವಧಿಯಲ್ಲಿ, 13 ಆರೋಪಿಗಳು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಇನ್ನೂ ತಲೆಮರೆಸಿಕೊಂಡಿದ್ದಾರೆ.
ಕ್ರಿಮಿನಲ್ ಗ್ಯಾಂಗ್ ಒಂದರ ವಿರುದ್ಧ ದಿಹುಲಿ ಗ್ರಾಮದ ಕೆಲ ಜನರು ಸಾಕ್ಷ್ಯ ನುಡಿದ ನಂತರ 24 ದಲಿತರ ಹತ್ಯಾಕಾಂಡ ನಡೆದಿತ್ತು. ಹತ್ಯೆ ಮಾಡಿದ ಕ್ರಿಮಿನಲ್ ಗ್ಯಾಂಗ್ನ ಸದಸ್ಯರು ಹೆಚ್ಚಾಗಿ ಪ್ರಬಲ ಜಾತಿಗೆ ಸೇರಿದವರಾಗಿದ್ದರು.
“ಸಾಮೂಹಿಕ ಹತ್ಯೆ ಪ್ರಕರಣದಲ್ಲಿ ಮೂವರು ವ್ಯಕ್ತಿಗಳನ್ನು ದೋಷಿಗಳು ಎಂದು ನ್ಯಾಯಾಲಯ ಮಂಗಳವಾರ (ಮಾ.11) ತೀರ್ಪು ನೀಡಿದೆ. ಮೂವರು ಅಪರಾಧಿಗಳ ಪೈಕಿ ಜೈಲಿನಲ್ಲಿರುವ ರಾಮ್ ಸೇವಕ್ ಎಂಬಾತ ಅಲ್ಲಿಂದಲೇ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಜಾಮೀನಿನ ಮೇಲೆ ಹೊರಗಿದ್ದ ಕಪ್ತಾನ್ ಅವರನ್ನು ತಪ್ಪಿತಸ್ಥರೆಂದು ಸಾಬೀತಾದ ನಂತರ ವಶಕ್ಕೆ ಪಡೆಯಲಾಗಿದೆ. ಮೂರನೇ ಅಪರಾಧಿ ರಾಂಪಾಲ್ ನ್ಯಾಯಾಲಯಕ್ಕೆ ಗೈರಾಗಿದ್ದರು. ವಿನಾಯಿತಿ ನೀಡುವಂತೆ ಕೋರಿದ್ದ ಅವರ ಮನವಿಯನ್ನು ತಿರಸ್ಕರಿಸಿದ್ದರೂ ನ್ಯಾಯಾಲಯಕ್ಕೆ ಬಂದಿಲ್ಲ. ಹಾಗಾಗಿ, ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ” ಎಂದು ಸರ್ಕಾರಿ ವಕೀಲ (ಮೈನ್ಪುರಿ) ರೋಹಿತ್ ಶುಕ್ಲಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನ್ಯಾಯಾಲಯವು ಐಪಿಸಿ ಸೆಕ್ಷನ್ 302 (ಕೊಲೆ), 307 (ಕೊಲೆ ಯತ್ನ), 120 ಬಿ (ಕ್ರಿಮಿನಲ್ ಪಿತೂರಿ), 216 (ಕಸ್ಟಡಿಯಿಂದ ತಪ್ಪಿಸಿಕೊಂಡ ಅಥವಾ ಬಂಧನಕ್ಕೆ ಆದೇಶಿಸಲಾದ ಅಪರಾಧಿಗೆ ಆಶ್ರಯ ನೀಡುವುದು), 449 (ಮರಣಶಿಕ್ಷೆಗೆ ಅರ್ಹವಾದ ಅಪರಾಧವನ್ನು ಮಾಡಲು ಮನೆ-ಅತಿಕ್ರಮಣ) ಮತ್ತು 450 (ಜೀವಾವಧಿ ಶಿಕ್ಷೆಗೆ ಅರ್ಹವಾದ ಅಪರಾಧವನ್ನು ಮಾಡಲು ಮನೆ-ಅತಿಕ್ರಮಣ) ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಮೂವರನ್ನು ತಪ್ಪಿತಸ್ಥರೆಂದು ಘೋಷಿಸಿದೆ.
ಶಿಕ್ಷೆಯ ಪ್ರಮಾಣವನ್ನು ಮಾರ್ಚ್ 18 ರಂದು ಪ್ರಕಟಿಸಲಿದೆ ಎಂದು ವಕೀಲ ಶುಕ್ಲಾ ಹೇಳಿದ್ದಾರೆ.
ಪ್ರಾಸಿಕ್ಯೂಷನ್ ಪ್ರಕಾರ, ಈ ಘಟನೆ ನವೆಂಬರ್ 18, 1981ರಂದು ನಡೆದಿದ್ದು, ರಾಧೇ-ಸಂತೋಷ್ ಎಂಬ ಕ್ರಿಮಿನಲ್ ಗ್ಯಾಂಗ್ ದಿಹುಲಿ ಗ್ರಾಮದ ಮೇಲೆ ದಾಳಿ ಮಾಡಿತ್ತು. ಅಲ್ಲಿನ ಮನೆಗಳಿಗೆ ನುಗ್ಗಿ ಜನರನ್ನು ಗುಂಡಿಕ್ಕಿ ಕೊಂದು, ಮನೆಗಳನ್ನು ಲೂಟಿ ಮಾಡಿತ್ತು. ಘಟನಾ ಸ್ಥಳಕ್ಕೆ ಸ್ಥಳೀಯ ಜಸ್ರಾನಾ ಪೊಲೀಸ್ ಠಾಣೆಯ ತಂಡ ತಲುಪುವ ಹೊತ್ತಿಗೆ, ದಾಳಿ ಮಾಡಿದವರು ಪರಾರಿಯಾಗಿದ್ದರು.
ಸಾಮೂಹಿಕ ಹತ್ಯೆಗೆ ಸುಮಾರು ಒಂದೂವರೆ ವರ್ಷಗಳ ಮೊದಲು, ರಾಧೇ-ಸಂತೋಷ್ ಗ್ಯಾಂಗ್ ಮತ್ತು ಪೊಲೀಸರ ನಡುವೆ ಎನ್ಕೌಂಟರ್ ನಡೆದಿತ್ತು. ಇದರ ಪರಿಣಾಮವಾಗಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿತ್ತು.
ಎನ್ಕೌಂಟರ್ಗೆ ಸಾಕ್ಷಿಯಾಗಿದ್ದ ನಾಲ್ವರು ದಿಹುಲಿ ಗ್ರಾಮದ ನಿವಾಸಿಗಳಾಗಿದ್ದರು. ಹಾಗಾಗಿ, ಗ್ರಾಮಸ್ಥರನ್ನು ಬೆದರಿಸುವ ಉದ್ದೇಶದಿಂದ ಗ್ಯಾಂಗ್ ಸಾಮೂಹಿಕ ಹತ್ಯೆಗಳನ್ನು ಮಾಡಿತ್ತು. ರಾಧೇ-ಸಂತೋಷ್ ಗ್ಯಾಂಗ್ನ ಹೆಚ್ಚಿನ ಸದಸ್ಯರು ಪ್ರಬಲ ಜಾತಿಗೆ ಸೇರಿದವರು ಎಂದು ಪ್ರಾಸಿಕ್ಯೂಷನ್ ಹೇಳಿದೆ.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಡಕಾಯಿತರ ತಂಡದ ಮುಖಂಡ ಸಂತೋಷ್ ಮತ್ತು ರಾಧೇ ಒಳಗೊಂಡು 17 ಜನರ ವಿರುದ್ಧ ದೋಷಾರೋಪ ಸಲ್ಲಿಸಿದ್ದರು. ವಿಚಾರಣೆ ಹಂತದಲ್ಲಿ 17 ಆರೋಪಿಗಳಲ್ಲಿ ಸಂತೋಷ್ ಮತ್ತು ರಾಧೇ ಸೇರಿ 13 ಜನ ಮೃತಪಟ್ಟಿದ್ದಾರೆ. ಬದುಕುಳಿದಿರುವ ನಾಲ್ವರಲ್ಲಿ 40 ವರ್ಷಗಳ ಬಳಿಕವೂ ಒಬ್ಬ ನಾಪತ್ತೆಯಾಗಿದ್ದಾನೆ. ಉಳಿದ ಮೂವರು ವಿಚಾರಣೆ ಎದುರಿಸಿದ್ದರು.
ಈ ಘಟನೆ ನಡೆದ ನಂತರ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಹತ್ಯಾಕಾಂಡ ಖಂಡಿಸಿ ದಿಹುಲಿಯಿಂದ ಫಿರೋಝಾಬಾದ್ನ ಸಾದುಪುರ್ವರೆಗೆ ಪಾದಯಾತ್ರೆ ಕೈಗೊಂಡಿದ್ದರು.
ದಿಹುಲಿ ಗ್ರಾಮವು 1981ರಲ್ಲಿ ಮೈನ್ಪುರಿ ಜಿಲ್ಲೆಯ ಭಾಗವಾಗಿತ್ತು. 1989ರಲ್ಲಿ ಫಿರೋಝಾಬಾದ್ ಜಿಲ್ಲೆಯನ್ನು ರಚಿಸಿದ ನಂತರ, ಈ ಗ್ರಾಮವು ಅದರ ವ್ಯಾಪ್ತಿಗೆ ಒಳಪಟ್ಟಿತು.
ದಿಹುಲಿ ಸಾಮೂಹಿಕ ಹತ್ಯೆ ಘಟನೆಯ ನಂತರ ಡಿಸೆಂಬರ್ 30, 1981 ರಂದು ಹತ್ತಿರದ ಸಾಧುಪುರ ಗ್ರಾಮದಲ್ಲಿ ದಲಿತರ ಮೇಲೆ ಮತ್ತೊಂದು ದಾಳಿ ನಡೆದಿತ್ತು. ಡಕಾಯಿತ ಅನಾರ್ ಸಿಂಗ್ ಯಾದವ್ ನೇತೃತ್ವದ ಗ್ಯಾಂಗ್ಗೆ ಸೇರಿದ ಪುರುಷರು ಪರಿಶಿಷ್ಟ ಜಾತಿಗೆ ಸೇರಿದ ಆರು ಮಹಿಳೆಯರು ಸೇರಿದಂತೆ ಹತ್ತು ಜನರನ್ನು ಹತ್ಯೆ ಮಾಡಿದ್ದರು.
ತಮಿಳುನಾಡು : ಪರೀಕ್ಷೆ ಬರೆಯಲು ಹೋಗುತ್ತಿದ್ದ ದಲಿತ ವಿದ್ಯಾರ್ಥಿಯ ಕೈ ಬೆರಳು ಕತ್ತರಿಸಿದ ದುಷ್ಕರ್ಮಿಗಳು


