ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಮಂಗಳವಾರ ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮತ ಹಾಕದಂತೆ ಕರೆ ನೀಡಿದ್ದಾರೆ. “ಬಿಜೆಪಿಯನ್ನು ಬಂಗಾಳ ಕೊಲ್ಲಿಗೆ ಎಸೆಯುವ ಅಗತ್ಯವಿದೆ” ಎಂದು ಅವರು ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಇದನ್ನು ಮಾಡದ ಹೊರತು ಈ ದೇಶವು ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದು ರಾವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಬಿಜೆಪಿಯು ಧಾರ್ಮಿಕ ನೆಲೆಯಲ್ಲಿ ದ್ವೇಷವನ್ನು ಹರಡುತ್ತಿದೆ. ರಾಜಕೀಯ ಲಾಭಕ್ಕಾಗಿ ದೇಶವನ್ನು ಬಿಜೆಪಿ ವಿಭಜಿಸುತ್ತಿದೆ ಎಂದಿರುವ ಕೆ.ಚಂದ್ರಶೇಖರ್ ರಾವ್, ಬಿಜೆಪಿ ಈ ದೇಶದ ದೌರ್ಭಾಗ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಟೀಕಿಸಿರುವ ಅವರು, “ಪ್ರಜ್ಞಾಶೂನ್ಯ ಪಕ್ಷಗಳು ಮತ್ತು ನಾಯಕರಿಂದ ವಿಮೋಚನೆ ಅಗತ್ಯವಿದೆ. ದೇಶಕ್ಕೆ ಬದಲಾವಣೆಗೆ ಬೇಕಿದೆ. ದೇಶದ ನಾಗರಿಕರ ನಿರೀಕ್ಷೆಗಳನ್ನು ಈಡೇರಿಸಲು ಭಾರತದ ಸಂವಿಧಾನವನ್ನು ಪುನಃ ಬರೆಯುವ ಅಗತ್ಯವಿದೆ” ಎಂದು ಹೇಳಿರುವುದಾಗಿ ಸ್ಕ್ರಾಲ್.ಇನ್ ವರದಿ ಮಾಡಿದೆ.
ಸ್ವಾತಂತ್ರ್ಯಾ ನಂತರದ 75 ವರ್ಷಗಳಲ್ಲಿ ಜನರ ಮೂಲಭೂತ ಅಗತ್ಯಗಳನ್ನು ಪೂರೈಸುವಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ವಿಫಲವಾಗಿವೆ ಎಂದು ರಾವ್ ದೂರಿದ್ದಾರೆ.
“ನಾವು ಭಾರತಕ್ಕೆ ಹೊಸ ಸಂವಿಧಾನವನ್ನು ರಚಿಸಬೇಕಾಗಿದೆ. ಎಷ್ಟೋ ರಾಷ್ಟ್ರಗಳು ತಮಗೆ ಬೇಕು ಅನ್ನಿಸಿದಾಗಲೆಲ್ಲ ತಮ್ಮ ಹೊಸ ಸಂವಿಧಾನಗಳನ್ನು ಬರೆದುಕೊಂಡಿದ್ದಾರೆ. ಹೊಸ ಸಂವಿಧಾನ, ಹೊಸ ಚಿಂತನೆ, ಹೊಸ ದಿಕ್ಕು…. ಇದು ನಮ್ಮ ಘೋಷಣೆಯಾಗಲಿದೆ. ನೀವು ಕಾದು ನೋಡಿ” ಎಂದಿದ್ದಾರೆ.
ರಾವ್ ಅವರು 2018 ರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಹೊರತುಪಡಿಸಿ ಇತರ ಪಕ್ಷಗಳ ಮೈತ್ರಿಯನ್ನು ಒಟ್ಟುಗೂಡಿಸಲು ಪ್ರಯತ್ನಿಸುತ್ತಿದ್ದಾರೆ.
2019ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ, ರಾವ್ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮತ್ತು ಡಿಎಂಕೆ ಮುಖ್ಯಸ್ಥ ಎಂ.ಕೆ ಸ್ಟಾಲಿನ್ ಸೇರಿದಂತೆ ಹಲವಾರು ರಾಜಕೀಯ ನಾಯಕರನ್ನು ಭೇಟಿಯಾಗಿದ್ದರು.
“ನಾನು ದೇಶದ ಅನೇಕ ಜನರೊಂದಿಗೆ ಮಾತನಾಡುತ್ತಿದ್ದೇನೆ. ಕೆಲವೇ ದಿನಗಳಲ್ಲಿ ನಾವು ನೀತಿಯನ್ನು ಘೋಷಿಸುತ್ತೇವೆ. 75 ವರ್ಷಗಳ ನಂತರ ಭಾರತಕ್ಕೆ ಹೊಸ ಕಾರ್ಯಸೂಚಿಯನ್ನು ಹೊಂದಿಸಬೇಕಾಗಿದೆ” ಎಂದಿದ್ದಾರೆ.
ಐಎಎಸ್ ನಿಯಮಗಳನ್ನು ತಿದ್ದುಪಡಿ ಮಾಡುವ ಕೇಂದ್ರದ ಪ್ರಸ್ತಾವನೆಯು ರಾಜ್ಯ ಸರ್ಕಾರಗಳ ವಿರುದ್ಧದ “ಪಿತೂರಿ” ಎಂದು ಅವರು ಆರೋಪಿಸಿದ್ದಾರೆ.
ಬದಲಾವಣೆಯನ್ನು ತರಲು ಇತರ ರಾಜಕೀಯ ನಾಯಕರೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ. ಈಗಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಶೀಘ್ರದಲ್ಲೇ ಅವರನ್ನು ಭೇಟಿ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.
ಈ ದೇಶದ ಒಳಿತಿಗಾಗಿ ನಾವು ಸೈನಿಕರಂತೆ ಹೋರಾಡುತ್ತಲೇ ಇರುತ್ತೇವೆ. ನಾನು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧನಿದ್ದೇನೆ. ಹಗಲು ರಾತ್ರಿ ಬೊಗಳುತ್ತಲೇ ಇರುವ ಹುಚ್ಚು ನಾಯಿಗಳಿಗೆ ನಾವು ಹೆದರುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿರಿ: BJP ಸದಸ್ಯರನ್ನೆ ‘ಬಿಜೆಪಿ ಬೆಂಬಲಿಸುವ ಸಾಮಾನ್ಯ ಮುಸ್ಲಿಮರು’ ಎಂದು ಚಿತ್ರಿಸಿದ ‘ಟಿವಿ9 ಭಾರತವರ್ಷ’
ನಮ್ಮ ಸಂವಿಧಾನವನ್ನು ಬದಲಾಯಿಸಬೇಕು ಎನ್ನುವವರನ್ನು, ಈ ದೇಶದ ಅಹಿಂದ ವರ್ಗ ಯಾವ ಕಾರಣಕ್ಕೂ ನಂಬಬಾರದು. ಏಕೆಂದರೆ ಇವರು ಗೋಮುಕ ವ್ಯಾಗ್ರಗಳು.